ಕೋಲ್ಕತಾ; ಪಶ್ಚಿಮಬಂಗಾಳದ ಮಿಡ್ನಾಪುರ್ ನಲ್ಲಿ ನಡೆದ ಭಾರತೀಯ ಜನತಾ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಟಿಎಂಸಿ ಮಾಜಿ ಪ್ರಭಾವಿ ಮುಖಂಡ ಸುವೇಂದು ಅಧಿಕಾರಿ ಬಿಜೆಪಿಗೆ ಶನಿವಾರ(ಡಿಸೆಂಬರ್ 19, 2020) ಸೇರ್ಪಡೆಗೊಂಡರು.
ಮುಂಬರುವ ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಯಲಿರುವ ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನಗಳ ಭೇಟಿಗಾಗಿ ಶನಿವಾರ ಪಶ್ಚಿಮಬಂಗಾಳಕ್ಕೆ ಆಗಮಿಸಿದ್ದು, ಮಿಡ್ನಾಪುರದಲ್ಲಿನ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು.
ಟಿಎಂಸಿ ಪ್ರಭಾವಿ ಮುಖಂಡ ಸುವೇಂದು ಅಧಿಕಾರಿ ಇತ್ತೀಚೆಗಷ್ಟೇ ಪಕ್ಷವನ್ನು ತ್ಯಜಿಸಿದ್ದರು. ಏತನ್ಮಧ್ಯೆ ಪಶ್ಚಿಮಬಂಗಾಳ ಸ್ಪೀಕರ್ ಸುವೇಂದು ರಾಜೀನಾಮೆ ಪತ್ರ ಸಮರ್ಪಕವಾಗಿಲ್ಲದ ಕಾರಣ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದರು. ಅಲ್ಲದೇ ಡಿಸೆಂಬರ್ 21ರಂದು ಮಧ್ಯಾಹ್ನ ಸ್ಪೀಕರ್ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದರು.
ಸ್ಪೀಕರ್ ಆದೇಶದ ನಡುವೆಯೇ ಸುವೇಂದು ಅಧಿಕಾರಿ ಇಂದು ಅಧಿಕೃತವಾಗಿ ಅಮತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿದ್ದ ಅಮಿತ್ ಮೊದಲು ಮಿಡ್ನಾಪುರದ ರಾಮಕೃಷ್ಣ ಮಿಷನ್ ಗೆ ಭೇಟಿ ನೀಡಿದ್ದರು. ಸಿದ್ದೇಶ್ವರಿ ಕಾಳಿ ದೇಗುಲಕ್ಕೆ ಭೇಟಿ ನೀಡಿದ್ದ ಶಾ ಅವರು ಬಂಗಾಳದ ಮಿಡ್ನಾಪುರ್ ಜಿಲ್ಲೆಯ ಬೇಲಿಜುರಿ ಗ್ರಾಮದ ರೈತರ ಮನೆಯೊಂದರಲ್ಲಿ ಭೋಜನ ಸ್ವೀಕರಿಸಿದ್ದರು.
ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.