Advertisement

ಕಡಲತೀರದೊಂದಿಗೆ ಅಂಬಿ ನಂಟು

03:43 PM Nov 26, 2018 | Team Udayavani |

ಕಾರವಾರ: ನಟ ಅಂಬರೀಷ್‌ ಕಾರವಾರದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಕಾರವಾರ, ಚೆಂಡಿಯಾ, ಅರ್ಗಾ ಕಡಲತೀರಗಳಲ್ಲಿ ಚಿತ್ರೀಕರಿಸಲಾದ ಶುಭಮಂಗಳ ಚಿತ್ರದಲ್ಲಿ ಅಂಬರೀಷ್‌ ನಟಿಸಿದ ಮೂಕನ ಪಾತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.

Advertisement

ಶನಿವಾರ ಬದುಕಿನ ಪಯಣ ಮುಗಿಸಿದ ಅಂಬರೀಷ್‌ ನೆನಪುಗಳನ್ನು ಕಾರವಾರದ ಜನ ಸಹ ಮೆಲುಕು ಹಾಕುತ್ತಿದ್ದಾರೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಗರಡಿಯಲ್ಲಿ ಬೆಳೆದ ಅಂಬರೀಷ್‌ ಶುಭಮಂಗಳ ಚಿತ್ರದಲ್ಲಿ ಮೂಗನ ಪಾತ್ರದಲ್ಲಿ ನಟಿಸಿ ಬಳಿಕ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಬೆಳೆದರು. ಕಾರವಾರಕ್ಕೆ  ಚಿತ್ರೀಕರಣ ಸಂಬಂಧ ಅನೇಕ ಬಾರಿ ಭೇಟಿ ನೀಡಿದ್ದರು. ಅವರು ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ಸೊಬಗಿಗೆ ಮನ ಸೋತಿದ್ದರು. ಅಂಬರೀಷ್‌ ಅಭಿನಯದ ಗಂಡಭೇರುಂಡ, ಟೋನಿ, ಗಿರಿಬಾಲೆ, ಮಸಣದ ಹೂವು, ಅಜಿತ್‌, ಶಂಕರ್‌-ಸುಂದರ್‌ ಮುಂತಾದ ಚಿತ್ರಗಳು ಇಲ್ಲಿಯೇ ಚಿತ್ರೀಕರಣಗೊಂಡಿರುವುದು ವಿಶೇಷ.

70-80 ರ ದಶಕದಲ್ಲಿ ಹೆಸರು ಮಾಡಿದ್ದ ಶ್ರೀನಾಥ್‌, ಶಂಕರ್‌ನಾಗ್‌, ಟೈಗರ್‌ ಪ್ರಭಾಕರ ಮುಂತಾದ ನಟರೊಂದಿಗೆ ಅಭಿನಯಿಸಿದ, ಬಹು ತಾರಾಗಣದ ಗಂಡಭೇರುಂಡ ಚಲನಚಿತ್ರ ಸೂಪರ್‌ ಹಿಟ್‌ ಆಗಿತ್ತು. 1984ರಲ್ಲಿ ತೆರೆ ಕಂಡ ಈ ಚಿತ್ರವನ್ನು ಕೂಡ ಸಂಪೂರ್ಣವಾಗಿ ಕಾರವಾರದಲ್ಲಿಯೇ ಚಿತ್ರೀಕರಿಸಲಾಗಿತ್ತು. ಆ ಬಳಿಕ ಅಂತಹುದೇ ಚಿತ್ರಕಥೆಯ ಅನೇಕ ಚಿತ್ರಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಿಸಲು ನಿರ್ದೇಶಕರಿಗೆ ಪ್ರೇರಣೆಯಾಯಿತು. 1982ರಲ್ಲಿ ತೆರೆಕಂಡ ಟೋನಿ ಚಿತ್ರದ ಚಿತ್ರೀಕರಣವೂ ಕಾರವಾದಲ್ಲಿ ನಡೆದಿತ್ತು. ಆನಂದವೇ ಮೈತುಂಬಿದೆ. ಆಕಾಶಕ್ಕೆ ಕೈ ಚಾಚಿದೆ. ಸನಿಹದಲಿ ನೀನಿರಲು ಏನೊಂದು ಕಾಣದೇ…. ಹಾಡಿಗೆ ಅಂಬರೀಷ್‌ ಅವರು ಲಕ್ಷ್ಮಿಯೊಂದಿಗೆ ಬೈಕ್‌ ಮೇಲೆ ಸುತ್ತುತ್ತಾ ಹಾಗೂ ಕಡಲತೀರದಲ್ಲಿ ಹೆಜ್ಜೆ ಹಾಕಿದ್ದರು ಎಂದು ಅರುಣ್‌ ಚಂದ್ರ ಕೇರರ್ಲೇಕರ್‌ ನೆನಪಿಸಿಕೊಂಡರು.

ಗಂಡಭೇರುಂಡ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕಾಳಿ ಸೇತುವೆ ಕಂಬಗಳಿಗೆ ಅಡಿಪಾಯ ಹಾಕಲಾಗುತ್ತಿತ್ತು. ಅಲ್ಲಿ ಪೆಟ್ಟಿಗೆಯಲ್ಲಿ ಸಿಗುವ ನಿಧಿ ಬಗೆಗಿನ ಮಾಹಿತಿ ಆಧಾರದಲ್ಲಿ ಚಿತ್ರಕತೆ ಮುಂದುವರಿಯುತ್ತದೆ. ಆನಂತರ ಅರಬ್ಬೀ ಸಮುದ್ರದ ನಡುಗಡ್ಡೆ ಅಂಜುದೀವ್‌ ಮೇಲೆ ನಿಧಿ ಹುಡುಕಿಕೊಂಡು ದೊಡ್ಡ ದೋಣಿಯಲ್ಲಿ ಕುದುರೆ ಹಾಗೂ ಸರಂಜಾಮುಗಳನ್ನು ಸಾಗಿಸಲಾಗುತ್ತದೆ. ಅಂಜುದ್ವೀಪಕ್ಕೆ ಹೊರಡುವ ಮುನ್ನ ಕಾರವಾರದ ಹೆಡ್‌ಪೋಸ್ಟ್‌ ಆಫೀಸು ಎದುರಿನ ಬೀಚ್‌ ಮೇಲೆ ಸ್ವಲ್ಪ ಹೊತ್ತು ಚಿತ್ರ ತಂಡ ಬೀಡು ಬಿಟ್ಟಿತ್ತು. ಅಂಬರೀಷ್‌ ನೇತೃತ್ವದ ಚಿತ್ರತಂಡ ಇಲ್ಲಿನ ಸ್ಥಳೀಯ ಮೀನುಗಾರ ಯುವಕರೊಂದಿಗೆ ಕ್ರಿಕೇಟ್‌ ಆಡಿತ್ತು.

ಚಿತ್ರದಲ್ಲಿ ಬರುವ ದೃಶ್ಯವೊಂದರಲ್ಲಿ ಮೀನುಗಾರ ಯುವಕನೊಬ್ಬನಿಗೆ ಅಂಬರೀಷ್‌ ಅವರ ಡ್ನೂಪ್‌ ಹಾಕಿ ಆಳ ಸಮುದ್ರ ಈಜಲು ಅವಕಾಶ ನೀಡಲಾಗಿತ್ತು. ಅಂಬರೀಷ್‌ ಅವರು ಚಿತ್ರೀಕರಣ ವೀಕ್ಷಿಸಲು ಬಂದ ಜನರೊಂದಿಗೆ ಬಹಳ ಆತ್ಮೀಯವಾಗಿ, ಸ್ನೇಹದಿಂದ ಮಾತನಾಡುತ್ತಿದ್ದರು. ಅವರೊಂದಿಗೆ ಇಲ್ಲಿನ ಅನೇಕ ಜನರು ಒಡನಾಟ ಹೊಂದಿದ್ದರು. ಅಂಬರೀಷ್‌ ಚಿತ್ರೀಕರಣಕ್ಕೆ ಬರುತ್ತಾರೆ ಎಂದು ಗೊತ್ತಾದರೆ, ಅವರು ಉಳಿಯುತ್ತಿದ್ದ ಅಶೋಕಾ ಲಾಡ್ಜ್ ಮುಂದೆ ಜನಸಂದಣಿಯೇ ನೆರೆಯುತ್ತಿತ್ತು ಎಂದು ಸ್ಥಳೀಯರು ವಿವರಗಳನ್ನು ಬಿಡಿಸಿಟ್ಟರು.

Advertisement

ರಾಜಕೀಯ ವ್ಯಕ್ತಿಯಾದ ಬಳಿಕ ಜಿಲ್ಲೆಗೆ ಅಪರೂಪ: ಅಂಬರೀಷ್‌ ಅವರು ಚಿತ್ರರಂಗದಲ್ಲಿದ್ದಾಗ ಇಟ್ಟುಕೊಂಡ ಜಿಲ್ಲೆಯೊಂದಿಗಿನ ಸಂಬಂಧವನ್ನು ರಾಜಕೀಯಕ್ಕೆ ಬಂದಾಗ ಮುಂದುವರಿಸಲಿಲ್ಲ. ಅವರು ಕೇಂದ್ರ ಸಚಿವರಾದಾಗ ಮತ್ತು ರಾಜ್ಯ ಸರಕಾರದ ವಸತಿ ಸಚಿವರಾದಾಗಲೂ ಜಿಲ್ಲೆಗೆ ಭೇಟಿ ನೀಡಿದ್ದು ಅಪರೂಪ. 1999ರಲ್ಲಿ ಮಾರ್ಗರೇಟ್‌ ಆಳ್ವ ಲೋಕಸಭೆ ಸದಸ್ಯರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಸಭೆಯಲ್ಲಿ ಭಾಗವಹಿಸಲು ಒಮ್ಮೆ ಜಿಲ್ಲೆಯ ಮುರ್ಡೇಶ್ವರಕ್ಕೆ ಆಗಮಿಸಿದ್ದರು. ಆ ಬಳಿಕ ಕೇಂದ್ರ ಸಚಿವರಾಗಿದ್ದ ಸಮಯದಲ್ಲಿ 2001 ರಲ್ಲಿ ನಡೆದ ಕರಾವಳಿ ಉತ್ಸವಕ್ಕೆ ಅತಿಥಿಯಾಗಿ ಆಗಮಿಸಿದ್ದರು.

ಕ್ರಿಕೆಟ್‌ ಪಂದ್ಯಾವಳಿ ನಿಮಿತ್ತ ಒಮ್ಮೆ ಕಾರವಾರಕ್ಕೆ: ಕಾರವಾರ ಮೂಲದ ಮಾಜಿ ಐಜಿಪಿ ಬಿ. ಬೋರ್ಕರ್‌ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಬೋರ್ಕರ್‌ ಕುಟುಂಬ 1994 ರಲ್ಲಿ ಆಯೋಜಿಸಿದ ಕ್ರಿಕೆಟ್‌ ಪಂದ್ಯಾವಳಿಯ ಅಂತಿಮ ದಿನಕ್ಕೆ ಮುಖ್ಯ ಅತಿಥಿಯಾಗಿ ಅಂಬರೀಷ ಆಗಮಿಸಿದ್ದರು. ಅಂದು ಅವರು ಕಾರವಾರದ ಬಗ್ಗೆ ಇರುವ ಪ್ರೀತಿಯನ್ನು ಬಿಚ್ಚಿಟ್ಟಿದ್ದರು. ಇಲ್ಲಿಗೆ ಶುಭಮಂಗಳ ಚಿತ್ರದ ಚಿತ್ರೀಕರಣಕ್ಕೆ ಬಂದ ಬಳಿಕ, ಚಿತ್ರರಂಗದಲ್ಲಿ ಶಾಶ್ವತ ನಾಯಕ ನಟ ಪಟ್ಟ ಸಿಕ್ಕಿತು ಎಂದು ಅವರು ಅಂದು ಹೇಳಿಕೊಂಡಿದ್ದರು. ಚಿತ್ರರಂಗದ ವೃತ್ತಿ ಬದುಕಿಗೆ ತಿರುವು ನೀಡಿದ ಕಾರವಾರದ ಬಗ್ಗೆ ಭಾವನಾತ್ಮಕ ಸಂಬಂಧ ಇರುವ ಬಗ್ಗೆ ನೆರೆದ ಸಾರ್ವಜನಿಕರೊಂದಿಗೆ ಸಂತಸ ಹಂಚಿಕೊಂಡಿದ್ದರು ಎಂದು ಬೋರ್ಕರ್‌ ಕುಟುಂಬ ಇಂದಿಗೂ ನೆನೆಯುತ್ತದೆ.

ನಾಗರಾಜ್‌ ಹರಪನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next