Advertisement

ಅಮರ ಗಂಧರ್ವನ ಅಮೃತಪರ್ವದಲ್ಲಿ ಮಯ್ಯರಿಗೆ ಸಮ್ಮಾನಯೋಗ

03:45 AM Apr 28, 2017 | |

ಯಕ್ಷಗಾನ ಭಾಗವತಿಕೆಯ ಯುಗಪ್ರವರ್ತಕ ಪ್ರತಿಭೆ ಕಾಳಿಂಗ ನಾವಡರು ನಮ್ಮೊಡನಿರುತ್ತಿದ್ದರೆ ಅವರಿಗೀಗ ಅಮೃತವರ್ಷದ ಸಂಭ್ರಮದ ಸಮಯ. ಆದರೆ ತನ್ನ 32ರ ಹರೆಯದಲ್ಲೇ ಅಕಾಲಕ್ಕೆ ಅಗಲಿ ಇದೀಗ ವರ್ಷಗಳು 27 ಸಂದರೂ ಅವರು ಜನಮಾನಸ ದಲ್ಲಿ ಇನ್ನೂ ಚಿರಂಜೀವಿಯಾಗಿ, ನಿತ್ಯ ಮೆಲುಕಾಗುತ್ತಿರು ವುದು ರಂಗಲೋಕದ ವಿಸ್ಮಯ. ಯಕ್ಷಗಾಯನದಲ್ಲಿ ಅಳಿಸಲಾಗದ ಛಾಪೊತ್ತಿದ ಅವರು ಅಮರ ಗಂಧರ್ವ ಭಾಗವತ. 

Advertisement

ನಾವಡರ ಬದುಕಿನ 60ರ ಸ್ಮತಿಯೊಂದಿಗೆ ಎ.29ರಂದು ಕುಂದಾಪುರದಲ್ಲಿ ‘ಅಮರಗಂಧರ್ವನ ಅಮೃತಪರ್ವ’ ಸಮಾರಂಭ ನಡೆಯಲಿದೆ. ನಾವಡರ ಬದುಕಿನ ನಾವೆಯನ್ನು ಮತ್ತೆ ಸ್ಮರಿಸುವ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ನಾವಡರು ವಿರಚಿಸಿದ, ಅವರ ಅಗಲಿಕೆಯ ಬಳಿಕ ಮತ್ತೆಲ್ಲೂ ಪ್ರದರ್ಶನಗೊಳ್ಳದ  “ರೂಪಶ್ರೀ-ವಿಜಯಶ್ರೀ-ಕಾಂಚನಶ್ರೀ’ ಪ್ರಸಂಗಗಳ ಪ್ರದರ್ಶನದೊಂದಿಗೆ ನಡೆಯುವ ಅಮೃತಪರ್ವದಲ್ಲಿ ಕಾಳಿಂಗ ನಾವಡರ ಸ್ಫೂರ್ತಿಯಿಂದಲೇ ಭಾಗವತನಾದ ರಾಘವೇಂದ್ರ ಮಯ್ಯ ಹಾಲಾಡಿ ಅವರಿಗೆ ಅಭಿಮಾನಿಗಳಿಂದ ಅದ್ದೂರಿ, ಆತ್ಮೀಯ ಸಮ್ಮಾನ ನಡೆಯಲಿದೆ. ಬದುಕಿನ ಸ್ವರ್ಣ ಸಂಭ್ರಮದತ್ತ ಹೆಜ್ಜೆಯನ್ನಿಡುತ್ತಿರುವ ರಾಘವೇಂದ್ರ ಮಯ್ಯರ ಪಾಲಿಗೆ ಈ ಸಮ್ಮಾನ ಕಲಾಜೀವನದ ಮೈಲುಗಲ್ಲು.

ಕಾಳಿಂಗ ನಾವಡರು ಮಯ್ಯರ ಪಾಲಿಗೆ ಹತ್ತಿರದ ಸಂಬಂಧಿ. ಅದು ನಾವಡರು ಭಾಗವತಿಕೆಯಲ್ಲಿ ಮೆರೆಯುತ್ತಿದ್ದ ಉತ್ತುಂಗ ಕಾಲ. ಕಿರಿಮಂಜೇಶ್ವರದ ಅಜ್ಜನ ಮನೆಯಿಂದ ಹಗಲು ಶಾಲೆಗೆ ಹೋಗುತ್ತಿದ್ದ ಮಯ್ಯರು ರಾತ್ರಿ ಅಜ್ಜಿಯ ಜತೆಗೆ ಊರಿನ ಯಾವುದೇ ಆಟ ತಪ್ಪಿಸುತ್ತಿರಲಿಲ್ಲ. ಶಾಲೆಯ ಪಾಠಕ್ಕಿಂತ ನಾವಡರ ಪದ್ಯವನ್ನೇ ತಲೆಗೆ ಹಚ್ಚಿಕೊಂಡ ಮಯ್ಯರು ಕಾಳಿಂಗ ನಾವಡರ ಅನನ್ಯ ಅಭಿಮಾನಿಯಾದರು. ಒಂದಲ್ಲ ಒಂದು ದಿನ ನಾವಡರು ಕುಳಿತ ಜಾಗದಲ್ಲಿ ತಾನೂ ಕುಳಿತು ಹಾಡಬೇಕೆಂದು ಕನಸು ಕಂಡರು. ಪ್ರೌಢಶಾಲೆಯಲ್ಲಿದ್ದ ದಿನಗಳಲ್ಲೊಮ್ಮೆ ಒಂದು ರಜಾದಿನ ಮನೆಯಲ್ಲಿದ್ದ ಮಯ್ಯರು ತನ್ನಷ್ಟಕ್ಕೆ ತಾನೇ ಚೆಂಡೆ ಬಾರಿಸುತ್ತಾ, ಭಾಗವತಿಕೆ ಮಾಡುತ್ತಾ ಸ್ವಪ್ನಲೋಕದಲ್ಲಿ ವಿಹರಿಸುತ್ತಿದ್ದರು. ಅದೇ ಹೊತ್ತಿಗೆ ಮನೆಗೆ ಭಾಗವತ ನಾರಣಪ್ಪ ಉಪ್ಪೂರರು ಬಂದರು. ಹುಡುಗನ ತನ್ಮಯತೆ ಕಂಡು ಮುದಗೊಂಡರು. ಮಯ್ಯರ ತಂದೆ ಯವರನ್ನೊಪ್ಪಿಸಿ ಶಿಷ್ಯನಾಗಿ ಜತೆ ಸೇರಿಸಿಕೊಂಡರು. ಹಂಗಾರಕಟ್ಟೆ ಕೇಂದ್ರಕ್ಕೂ ಕರೆದೊಯ್ದರು. ಮಯ್ಯರ ಕುಟುಂಬದ ಜತೆಗೆ ಉಪ್ಪೂರರ ಕುಟುಂಬಕ್ಕೆ ನಿಕಟ ಸಂಪರ್ಕ, ಸಂಬಂಧಗಳಿರುವುದರಿಂದ ಮಯ್ಯರು ಕೇವಲ ಕೇಂದ್ರದ ವಿದ್ಯಾರ್ಥಿಯಾಗಲಿಲ್ಲ. ಉಪ್ಪೂರರ ಮನೆಪಾಠವೂ ಸಿಕ್ಕಿತು. 

ಹೀಗೆ ಉಪ್ಪೂರರ ಶಿಷ್ಯ ಪರಂಪರೆಯಲ್ಲಿ ಅತ್ಯಂತ ಕಿರಿಯನಾದ ರಾಘವೇಂದ್ರ ಮಯ್ಯರನ್ನು ಸ್ವತಃ ಉಪ್ಪೂರರೇ ಅವರಿದ್ದ ಅಮೃತೇಶ್ವರಿ ಮೇಳಕ್ಕೆ ಸಂಗೀತಗಾರಿಕೆಗೆ ಕರೆದೊಯ್ದರು. ಅದು ಆ ಕಾಲದ ಬಡಗಿನ ಗಜಮೇಳ. ಪ್ರಸಿದ್ಧರೆಲ್ಲರೂ ಒಂದೆಡೆಯೇ ಇದ್ದುದರಿಂದ ಅಮೃತೇಶ್ವರಿ ಮೇಳದಲ್ಲಿ ಕಲಾವಿದನಾಗುವುದೆಂದರೆ ಹೆಮ್ಮೆಯ ವಿಷಯವಾಗಿತ್ತು. ಹೀಗೆ ಉಪ್ಪೂರರು ಕೈ ಹಿಡಿದು ಆಶೀರ್ವದಿಸಿ ಕಲಿಸಿದ ಹುಡುಗ ರಾಘವೇಂದ್ರ ಮಯ್ಯ, ಅಮೃತೇಶ್ವರಿ ಮೇಳದಲ್ಲಿ ಎರಡು ವರ್ಷವಿದ್ದು ಬಳಿಕ ಸೌಕೂರು, ಪೆರ್ಡೂರು, ಹಾಲಾಡಿ ಮೊದಲಾದ ಮೇಳಗಳಲ್ಲಿ ತಿರುಗಾಟ ಗೈದು ಕಳೆದ ಎರಡು ದಶಕಗಳಿಗೂ ಅಧಿಕ ಕಾಲದಿಂದ ತನ್ನ ಕನಸಿನ ಸ್ಥಾನವಾದ ಸಾಲಿಗ್ರಾಮ ಮೇಳದಲ್ಲಿ, ಕಾಳಿಂಗ ನಾವಡರು ಕುಳಿತ ಜಾಗದಲ್ಲಿ ಮುಖ್ಯ ಭಾಗವತರಾಗಿ ಮೆರೆಯುತ್ತಿದ್ದಾರೆ.

ಸಾಲಿಗ್ರಾಮ ಮೇಳದಲ್ಲಿ ನಾವಡರು ಜಯಭೇರಿ ಬಾರಿಸಿದ ಪ್ರಸಂಗಗಳ ಪ್ರದರ್ಶನಗಳನ್ನೆಲ್ಲ ಬಾಲ್ಯದಲ್ಲೇ ನೋಡಿ ಬೆಳೆದ ಹಿನ್ನೆಲೆ ಮಯ್ಯರದ್ದು. ಹೀಗಾಗಿ ನಾವಡರ ರಂಗತಂತ್ರ, ನಡೆಯ ಗುಟ್ಟು ಇವರೂ ಬಲ್ಲವರು. ಹೀಗಾಗಿ ನಾವಡರದ್ದೇ ಮಾರ್ಗದಲ್ಲಿ ಪ್ರಸಂಗ ಮುನ್ನಡೆಸುವ ಮಯ್ಯರು ಯಕ್ಷಗಾನ ಅಂದರೆ ಸಾಂ ಕ ಪ್ರಕ್ರಿಯೆ ಎಂದು ಬಲವಾಗಿ ನಂಬುವವರು. ಅಭಿಮಾನಿಗಳ ಒತ್ತಾಯಕ್ಕೆ, ಕರತಾಡನಕ್ಕೆ ಪದ್ಯ ಹೇಳದೇ, ಅನಗತ್ಯ ಪದ್ಯ ಲಂಬಿಸದೇ ಪ್ರಸಂಗದ ಸೊಗಸಿಗಾಗಿ ಪದ್ಯ ಹೇಳುತ್ತಾ, ಒಂದು ಚೌಕಟ್ಟಿನೊಳಗೆ ಪ್ರದರ್ಶನವನ್ನು ಗೆಲ್ಲಿಸಿಕೊಡುತ್ತಾ ಮತ್ತೆ ಮತ್ತೆ ನಾವಡರನ್ನು ನೆನಪಿಸುವಂತೆ ಮಾಡುತ್ತಾ ರಂಗವನ್ನಾಳುವ ರಾಘವೇಂದ್ರ ಮಯ್ಯರು ಸ್ನೇಹಜೀವಿಯೆಂದೇ ಪ್ರಸಿದ್ಧರು. ಅಭಿಮಾನಿಗಳ ಅತಿರೇಕಕ್ಕೆ ಮರುಳಾಗದೆ, ಅಭಿಮಾನದಿಂದ ಕಲೆಯನ್ನು ಕಾಪಾಡಬೇಕೆಂದು ಪ್ರಾಂಜಲ ಮನಸ್ಸಿಂದ ನುಡಿಯುವ ಅವರು, ಯಕ್ಷಗಾನದಲ್ಲಿ ಭಾಗವತನಾಗಲೀ ಕಲಾವಿದನಾಗಲೀ ಮೇಲೂ ಅಲ್ಲ, ಕೀಳೂ ಅಲ್ಲ. ಎಲ್ಲರ ಶಕ್ತಿಮೀರಿದ ಪ್ರಾಮಾಣಿಕ ಕೊಡುಗೆ ಸಂದರೆ ಮಾತ್ರ ಒಂದು ಪ್ರದರ್ಶನ ಯಶಸ್ಸು ಪಡೆಯುತ್ತದೆ ಎಂದು ಬಲವಾಗಿ ನಂಬಿ ಅದೇ ಮಾರ್ಗದಲ್ಲಿ ಮುನ್ನಡೆಯುವವರು.

Advertisement

“ನಾನೆಂದೂ ಸ್ಪರ್ಧೆಗೆ ಬಿದ್ದು, ಜಿದ್ದಿಗೆ ಬಿದ್ದು ಹಾಡುವುದಿಲ್ಲ, ಹಾಡಲಾರೆ’ ಎನ್ನುವ ಅವರು ಗಾಯನದ ಹೊಸ ಕ್ರಮಗಳತ್ತ ತಾನು ಆಕರ್ಷಿತನಲ್ಲ ಎನ್ನುತ್ತಾರೆ. ತನ್ನನ್ನು ಕಾಣಿಸಿಕೊಳ್ಳಬೇಕೆಂಬ ಚಟವಾಗಲಿ, ತನ್ನ ಪದ್ಯವೇ ಮೆರೆಯಬೇಕೆಂಬ ಅಂತರಂಗದ ಆಸೆಯಾಗಲೀ ಇಲ್ಲದೇ ತಾನು ಹಾಡುವುದು ತನ್ನ ಸಂತೋಷಕ್ಕೆಂಬ ತೃಪ್ತ ಭಾವದಿಂದ ಯಕ್ಷಗಾನದಲ್ಲಿ ಭಾಗವತನ ಸ್ಥಾನವನ್ನು ಸಮರ್ಥವಾಗಿ ತುಂಬಿದ ಅಪೂರ್ವ ಭಾಗವತರಲ್ಲೊಬ್ಬರು ಮಯ್ಯರು. ಕಾಳಿಂಗ ನಾವಡರನ್ನೇ ಅನುಸರಿಸಿ, ಅವರನ್ನೇ ಸ್ಫೂರ್ತಿಯಾಗಿಸಿ ಭಾಗವತಿಕೆ ಕಲಿತು, ಅವರು ಕುಳಿತ ಜಾಗದಲ್ಲೇ ಭಾಗವತನಾಗಿ ಕುಳಿತು ಕನಸು ನನಸಾಗಿಸಿಕೊಂಡ ಮಯ್ಯರಿಗೆ ಅಮರ ಗಂಧರ್ವನ ಅಮೃತಪರ್ವದ ಸಮ್ಮಾನ ಸಲ್ಲುತ್ತಿರುವುದು ಕಾಕತಾಳೀಯ. ಉಪ್ಪೂರರ ಪ್ರೀತಿ ಮತ್ತು ನಾವಡರ ಸ್ಫೂರ್ತಿಯಿಂದ ಭಾಗವತನಾದ ಮಯ್ಯರ ಕಲಾಜೀವನದ ಸಾಧನಾಪಥಕ್ಕೆ ಈ ಸಮ್ಮಾನ ಮತ್ತೂಂದು ಮೈಲುಗಲ್ಲು.

ಎಂ. ನಾ. ಚಂಬಲ್ತಿಮಾರ್‌

Advertisement

Udayavani is now on Telegram. Click here to join our channel and stay updated with the latest news.

Next