Advertisement

ಆಳ್ವಾಸ್‌ ನುಡಿಸಿರಿ  ಭಾವ ಬುದ್ಧಿಗಳ ಮಧುರಾಲಿಂಗನ

02:13 PM Dec 22, 2017 | Team Udayavani |

ಬೀಜ ಬಿತ್ತುವುದು ಸುಲಭ. ಬಳಿಕ ನೀರೆರೆದು, ಕಾಲಕಾಲಕ್ಕೆ ಬೇಕಾದ ಪೌಷ್ಠಿಕತೆಯನ್ನು ತುಂಬಿ, ಕಾಲದ ಆಘಾತಕ್ಕೆ ತುತ್ತಾಗದಂತೆ ರಕ್ಷಿಸಿ ಅದು ತನ್ನ ಬೇರಿನ ಬಲದಲ್ಲೇ ನಿಲ್ಲುವಂತೆ ಮಾಡುವುದು ಪ್ರೀತಿ, ಶ್ರದ್ಧೆ ಮತ್ತು ಕಾಳಜಿ ಇರುವಲ್ಲಿ ಮಾತ್ರ ಸಾಧ್ಯ. 14 ವರ್ಷಗಳ ಹಿಂದೆ ವಿದ್ಯಾಗಿರಿಯ ಬರಿಗುಡ್ಡದ ಮೇಲೆ ನೆಟ್ಟ ನುಡಿಸಿರಿಯ ಬೀಜ ಇಂದು ಭಾವ ಬುದ್ಧಿಗಳ ಮಧುರಾಲಿಂಗನದ ಫಲವಂತಿಕೆಯ ಮರವಾಗಿ ಬೆಳೆದು ನಿಂತಿದೆ. ಡಾ| ಎಂ. ಮೋಹನ ಆಳ್ವರು ಮತ್ತು ಅವರೊಂದಿಗೆ ಕೈಜೋಡಿಸಿದ ಸುಮನಸರ ತಂಡದ ಕ್ರಿಯಾಶೀಲತೆ, ಬದ್ಧತೆಯಿಂದ ಇದು ಸಾಧ್ಯವಾಗಿದೆ. 

Advertisement

2004ರಲ್ಲಿ ಆಳ್ವಾಸ್‌ ನುಡಿಸಿರಿ ಚಿಗುರೊಡೆದಾಗ ಅದಕ್ಕಿದ್ದ ಉದ್ದೇಶ ಸಾಹಿತ್ಯಕ ನೆಲೆಯದ್ದು. ಆದರೆ ಬರಬರುತ್ತಾ ಈ ಚಿಗುರು ಟಿಸಿಲೊಡೆದು ಚಿತ್ರಸಿರಿ, ಶಿಲ್ಪಸಿರಿ, ವಿದ್ಯಾರ್ಥಿಸಿರಿ, ಜಾನಪದ ಸಿರಿ, ರಂಗ ಸಿರಿ, ಸಿನಿ ಸಿರಿ, ಕೃಷಿ ಸಿರಿ, ತುಳು ಸಿರಿ, ವಿಜ್ಞಾನ ಸಿರಿ, ಉದ್ಯೋಗ ಸಿರಿ ಹೀಗೆ ವರ್ಷ ವರ್ಷ ಹೊಸ ಹೊಸ ಸಿರಿವಂತಿಕೆ ಜೋಡಣೆಗೊಂಡು ಬಹುತ್ವವನ್ನು ಒಳಗೊಳ್ಳುತ್ತಾ, ವಿಸ್ತರಣೆಗೊಳ್ಳುತ್ತಾ ಬೆಳೆದಿದೆ. ಡಿ. 1 ರಿಂದ 3ರವರೆಗೆ ನಡೆದ ನುಡಿಸಿರಿಯ 14ನೇ ಆವೃತ್ತಿ ಕನ್ನಡ ನಾಡು ನುಡಿ ಸಂಸ್ಕೃತಿಯ ಇಂತಹ ಹಲವು ಆಯಾಮಗಳನ್ನು ಒಳಗೊಂಡು ಸುಸಂಪನ್ನಗೊಂಡಿತು.

ಕರ್ನಾಟಕ ಬಹುತ್ವದ ನೆಲೆಗಳು ಎಂಬ ಪ್ರಧಾನ ಪರಿಕಲ್ಪನೆಯಡಿ ನಡೆದ ಈ ರಾಷ್ಟ್ರೀಯ ಸಮ್ಮೇಳನ ಬಹು ಧರ್ಮೀಯ, ಬಹು ಸಾಂಸ್ಕೃತಿಕ, ಬಹು ಭಾಷಿಕ ವ್ಯವಸ್ಥೆಯಲ್ಲಿ ಎಲ್ಲರೂ ಸಹಬಾಳ್ವೆ ನಡೆಸಬೇಕಾದ ಅಗತ್ಯವನ್ನು ಒತ್ತಿ ಹೇಳಿತು. 

ಉದ್ಘಾಟಿಸಿದ ಸಿ.ಎನ್‌ ರಾಮಚಂದ್ರನ್‌,ಇಂತಹ ಸಹಬಾಳ್ವೆ ಸಾಧ್ಯವಾಗಬೇಕಾದ “ಕೂಡುಗೆರೆ ಸ್ಥಳ’ವನ್ನು ಕುರಿತು ಚರ್ಚಿಸಿದರು. ಅಧ್ಯಕ್ಷತೆ ವಹಿಸಿದ್ದ ನಾಗತಿಹಳ್ಳಿಯವರು ಬಹುತ್ವವನ್ನು ನಿರಾಕರಿಸುವುದೆಂದರೆ ಬದುಕನ್ನೇ ನಿರಾಕರಿಸಿದಂತೆ ಎಂದು ಹೇಳುತ್ತಾ ಕನ್ನಡ ಮನಸ್ಸು ಬಹುತ್ವವನ್ನು ಜೀವನಮೌಲ್ಯದ ಪ್ರಶ್ನೆಯಾಗಿ ಬಹುಕಾಲದಿಂದ ಪ್ರಕಟಿಸುತ್ತಾ, ಆರಾಧಿಸುತ್ತಾ, ಆಚರಿಸುತ್ತಾ, ಸ್ಪಷ್ಟಗೊಳಿಸುತ್ತಾ ಬಂದಿದೆ’ ಎಂದರು.

ಧರ್ಮ, ರಾಜಕೀಯ ಮತ್ತು ಮಾಧ್ಯಮ ಬಹುತ್ವವನ್ನು ಕಾಪಾಡಬೇಕಾದ ಶಕ್ತಿಗಳು. ಆದರೆ ಅವು ಇಂದು ಬಹುತ್ವವನ್ನು ಅಪಾಯವೆಂಬಂತೆ ಬಿಂಬಿಸುವಲ್ಲಿಗೆ ತಂದು ನಿಲ್ಲಿಸಿವೆ. ಸಮ್ಮೇಳನ ಎಬ್ಬಿಸಿದ ಬಹುಮುಖ್ಯ ಚರ್ಚೆಗಳು ಈ ದಾರಿಯಲ್ಲಿ ಸಾಗಿತು. ಸ್ವಾಗತ ಭಾಷಣದಲ್ಲಿಯೇ ಡಾ|ಆಳ್ವರು ಧರ್ಮ ಮತ್ತು ರಾಜಕೀಯ ಸಮಾಜವನ್ನು ಕಟ್ಟುವಲ್ಲಿ ಸೋಲುತ್ತಿದೆ. ಮಾಧ್ಯಮಗಳು ನ್ಯಾಯಾಧೀಶನ ಸ್ಥಾನದಲ್ಲಿ ನಿಂತಿವೆ ಎಂದು ಈ ಚರ್ಚೆಗೆ ಚಾಲನೆ ಒದಗಿಸಿದರು. ಮುಂದಿನ ಗೋಷ್ಠಿಗಳಲ್ಲಿ ಇದರ ಅನುರಣನ ಕಾಣಿಸಿತು. ಸಾಹಿತ್ಯ ಕುರಿತ ಗೋಷ್ಠಿಯಲ್ಲಿ ಕೃಷ್ಣಮೂರ್ತಿ ಹನೂರು ಇವರು ಸಾಹಿತ್ಯ ಮತ್ತು ಜಾನಪದ ಬಹುತ್ವ ಪರವಾದ ಲೋಕದೃಷ್ಟಿಯನ್ನು ಹೊಂದಿದ್ದು ಆಯಾ ಕಾಲದ ಧರ್ಮ ಮತ್ತು ಪ್ರಭುತ್ವವನ್ನು ವಿಮರ್ಶಿಸಿದೆ ಎಂದು ಹೇಳಿದರು.

Advertisement

ಸಮ್ಮೇಳನದಲ್ಲಿ ಬಹುಚರ್ಚಿತವಾದ ಗೋಷ್ಠಿ ಮಾಧ್ಯಮಕ್ಕೆ ಸಂಬಂಧಿಸಿದ್ದು. ಮಾಧ್ಯಮಗಳ ಹದ್ದುಮೀರಿದ ನಿರ್ವಹಣೆ ಗೋಷ್ಠಿಯಲ್ಲಿ ವ್ಯಾಪಕ ಟೀಕೆಗೆ ಒಳಗಾಯಿತು. ನಿರಂಜನ ವಾನಳ್ಳಿಯವರು ಮಾಧ್ಯಮಗಳು ತಮ್ಮ ಸಂಯಮವನ್ನೂ, ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ ಮರಳಿ ಪಡೆಯುವುದು ಸಾಧ್ಯವಿಲ್ಲ ಎಂದರು. 

ನಿತ್ಯಾನಂದ ಬಿ. ಶೆಟ್ಟಿಯವರು ಯಾವುದೇ ಮುಲಾಜಿಲ್ಲದೆ ಮಾಧ್ಯಮಗಳು ಪೂರ್ವಾಗ್ರಹಪೀಡಿತವಾಗಿ, ರಾಜಕೀಯ ಕೈಗೊಂಬೆಯಾಗಿ, ಹಣದ ಮೋಹಕ್ಕಾಗಿ, ಸುದ್ಧಿಗಳನ್ನು ವೈಭವೀಕರಿಸುವ, ಸುಳ್ಳನ್ನು ಸತ್ಯವಾಗಿಸುವ ದಾರಿಯಲ್ಲಿವೆ ಎಂದು ಆರೋಪಿಸಿದರು. ‘ನೇಷನ್‌ ವಾಂಟ್ಸ್‌ ಟು ನೋ’ ಎನ್ನುತ್ತಾ ಮಾಧ್ಯಮಗಳಿಗೆ ಸರಣಿ ಪ್ರಶ್ನೆಗಳನ್ನೆಸೆದಾಗ ಪ್ರೇಕ್ಷಕರಿಂದ ಕರತಾಡನದ ಅನುಮೋದನೆ. 

ಸಮ್ಮೇಳನದಲ್ಲಿ ಬಹುಜನರ ಪ್ರಶಂಸೆಗೆ ಪಾತ್ರವಾದ ಮತ್ತೂಂದು ಉಪನ್ಯಾಸ ವೀಣಾ ಬನ್ನಂಜೆಯವರದ್ದು. ಭಾರತೀಯ ಅನುಭಾವ ಪರಂಪರೆಯ ಹರಿವನ್ನು ಅದರೆಲ್ಲಾ ಸೂಕ್ಷ್ಮಗಳೊಂದಿಗೆ ತೆರೆದಿಟ್ಟ ಅವರು ವರ್ತಮಾನದ ಧಾರ್ಮಿಕತೆಯ ಹೆಸರಲ್ಲಿ ನಡೆಯುವ ಡೊಂಬರಾಟ ನಾಲ್ಕು ದಿವಸದ್ದು. ಇದು ತಿರುಳು ರಹಿತವಾದುದು ಎಂದರು. ಎಲ್ಲ ಎಲ್ಲೆಗಳನ್ನು ಮೀರಿದ ಜಂಗಮ ಬಸವಣ್ಣನ ಹೆಸರಲ್ಲಿ ಪ್ರತ್ಯೇಕ ಧರ್ಮದ ಹೋರಾಟ ನೋಡಿದರೆ ನಗು ಬರುತ್ತದೆ ಎಂದರು.

ಸಮ್ಮೇಳನದ ನಡು ನಡುವೆ ಇದ್ದ ವಿಶೇಷೋಪನ್ಯಾಸಗಳಲ್ಲಿ ಜಿ.ಬಿ. ಹರೀಶ್‌, ಎಸ್‌.ಆರ್‌ . ವಿಜಯಶಂಕರ್‌, ಡಿ .ಎಸ್‌. ಚೌಗಲೆ, ಈಶ್ವರಯ್ಯ, ಗಣೇಶ್‌ ಅಮೀನ್‌ಗಡ, ನಿರಂಜನಾರಾಧ್ಯ, ರಂಜಾನ್‌ ದರ್ಗಾ, ರವೀಂದ್ರ ರೇಷ್ಮೆ ಮೊದಲಾದವರು ತಂತಮ್ಮ ವಿಷಯಕ್ಕೆ ನ್ಯಾಯ ಒದಗಿಸಿದರು. ನನ್ನ ಕತೆ ನಿಮ್ಮ ಜೊತೆ ಎಂಬ ಸಾಧಕರ ಸ್ವಗತ ಮಾತುಗಾರಿಕೆಯ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ವಿರುದ್ಧದ ತನ್ನ ಹೋರಾಟದ ಅನುಭವವನ್ನು ನಿರ್ಭೀತಿಯಿಂದ ಮುಂದಿಟ್ಟ ಸಂತೋಷ್‌ ಹೆಗ್ಡೆ ಹಾಗೂ ಕಾರ್ಗಿಲ್‌ ಕದನದ ಹದಯಾದ್ರì ನೆನಪುಗಳನ್ನು ತೆರೆದಿಟ್ಟ ಕ್ಯಾಪ್ಟನ್‌ ನವೀನ್‌ ನಾಗಪ್ಪ ಹುಬ್ಬಳ್ಳಿ ಇವರುಗಳು ಮಾಡಿದ ಭಾಷಣ ಬಹುಕಾಲ ನೆನಪಲ್ಲಿ ಉಳಿಯುವಂತದ್ದು.

ಕವಿ ಸಮಯ ಕವಿ ನಮನ 
ಕವಿ ಸಮಯ ಕವಿ ನಮನ ಎಂಬ ಕಾರ್ಯಕ್ರಮದಲ್ಲಿ ತಮ್ಮ ಮಾತು ಮತ್ತು ಮೌಲಿಕತೆಗಳೊಂದಿಗೆ ಕನ್ನಡದ ಹಿರಿಯ ಹಾಗೂ ಪ್ರತಿಭಾನ್ವಿತ ಕವಿಗಳಾದ ಲತಾ ಗುತ್ತಿ, ಮಹ್ಮದ್‌ ಭಾಷಾ ಗೂಳ್ಯಂ, ಪಿ. ಚಂದ್ರಿಕ, ಆನಂದ್‌ ಋಗ್ವೇದಿ, ಎ.ಎಸ್‌ . ಶ್ಯಾನ್‌ಭೋಗ್‌, ಅಪ್ಪಾ ಸಾಹೇಬ್‌, ರಮೇಶ್‌ ಕೆದಿಲಾಯ ಮೊದಲಾದವರು ಭಾಗವಹಿಸಿದರು. ಬಾಗೂರು ಮಾರ್ಕಂಡೇಯರ ಕುಂಚ ಹಾಗೂ ಎಂ. ಎಸ್‌. ಗಿರಿಧರ ಅವರ ಗಾಯಕ ತಂಡ ಕವಿ ಸಮಯಕ್ಕೆ ವಿಶೇಷ ಮೆರುಗು ನೀಡಿತು.

ಮುಖ್ಯ ಪರಿಕಲ್ಪನೆಗೆ ಅನುಗುಣವಾಗುವಂತೆ ಧರ್ಮ, ಸಾಹಿತ್ಯ, ಇತಿಹಾಸ, ಕಲೆ, ಮಾಧ್ಯಮ, ಗಾಯನ, ಸಂಘಟನೆ, ತೂಗು ಸೇತುವೆ, ರಥಶಿಲ್ಪ ಮೊದಲಾದ ಕ್ಷೇತ್ರಗಳ ಅನನ್ಯ ಸಾಧಕರನ್ನು ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ನೀಡಿ ಆಳ್ವರು ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಿ ಕೆ.ಬಿ. ಸಿದ್ಧಯ್ಯರು ಈ ಪ್ರಶಸ್ತಿಯ ಹಿಂದಿರುವ ಮನಸು ,ಪ್ರೀತಿ ದೊಡ್ಡದು. ಈ ಗೌರವ ಇಡೀ ದಲಿತ ಚಳವಳಿ, ರೈತ ಚಳವಳಿಗೆ ಸಮರ್ಪಿತ ಎಂದರು.

ಆಳ್ವಾಸ್‌ ವಿದ್ಯಾರ್ಥಿಸಿರಿ 
ನುಡಿಸಿರಿಗೆ ಮುನ್ನುಡಿ ರೂಪದಲ್ಲಿ ನ.30 ರಂದು ಆಳ್ವಾಸ್‌ ವಿದ್ಯಾರ್ಥಿಸಿರಿ ಕಾರ್ಯಕ್ರಮ 6000ಕ್ಕೂ ಅಧಿಕ ವಿದ್ಯಾರ್ಥಿಗಳ ಸಮಾವೇಶದೊಂದಿಗೆ ನಡೆಯಿತು. ಉಜಿರೆ ಎಸ್‌ಡಿಎಂ ವಿದ್ಯಾರ್ಥಿ ಅರ್ಜುನ್‌ ಶೆಣೆ„ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಕಾಸರಗೋಡು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವಿದ್ಯಾರ್ಥಿಗಳು ವಿವಿಧ ಪ್ರತಿಭಾ ಪ್ರದರ್ಶನದಿಂದ ಗಮನ ಸೆಳೆದರು.

ಕಾಸರಗೋಡಿಗೆ ವಿಶೇಷ ಗೌರವ
ಗಡಿನಾಡು ಕಾಸರಗೋಡಿನಲ್ಲಿ ಇತ್ತೀಚೆಗೆ ಕನ್ನಡ ಎದುರಿಸುತ್ತಿರುವ ಸವಾಲುಗಳನ್ನು ಅನುಲಕ್ಷಿಸಿ ಡಾ| ಆಳ್ವರು ಈ ಬಾರಿಯ ನುಡಿಸಿರಿಯಲ್ಲಿ ವಿಶೇಷ ಪ್ರಾತಿನಿಧ್ಯವನ್ನು ಒದಗಿಸಿದ್ದಾರೆ. ವಿದ್ಯಾರ್ಥಿಸಿರಿಯಲ್ಲಿ ನಾಲ್ಕು ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪುರಸ್ಕರಿಸಲಾಯಿತು. ಕಾಸರಗೋಡಿನ ಕನ್ನಡದ ಸ್ಥಿತಿಗತಿ ಕುರಿತು ಪುಸ್ತಕವೊಂದನ್ನು ಪ್ರಕಟಿಸಿ ಡುಗಡೆಗೊಳಿಸಲಾಯಿತು. ಅಲ್ಲದೇ ಮುರಳೀಧರ ಬಳ್ಳಕ್ಕುರಾಯರು ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಎಂಟನೇ ತರಗತಿಯ ಸನ್ನಿಧಿ ಟಿ. ರೈ ಪೆರ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ “ಕಾಸರಗೋಡು ಎಂದಿದ್ದರೂ ಕನ್ನಡದ ನಾಡು’ ಎಂದು ಘೋಷಿಸಿದ್ದು ಗಮನ ಸೆಳೆಯಿತು. ನುಡಿಸಿರಿಯ ಈ ಬೆಂಬಲ ಕಾಸರಗೋಡಿನ ನಮಗೆ ಆನೆ ಬಲ ತಂದುಕೊಟ್ಟಿದೆ ಎನ್ನುತ್ತಾರೆ ಕಾಸರಗೋಡು ಕಸಾಪ ಅಧ್ಯಕ್ಷ ಎಸ್‌ .ವಿ. ಭಟ್‌.

ಉದ್ಯೋಗ ಸಿರಿ ನೂತನ ಕಾರ್ಯಕ್ರಮ 
ಈ ವರ್ಷ ನುಡಿಸಿರಿಯ ಭಾಗವಾಗಿ ಉದ್ಯೋಗ ಸಿರಿಯೂ ನಡೆಯಿತು. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಒದಗಿಸುವ ಉದ್ದೇಶದಿಂದ ಈ ಆಳ್ವಾಸ್‌ ಉದ್ಯೋಗ ಸಿರಿ ಆರಂಭಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲಾಗುವುದು ಎನ್ನುತ್ತಾರೆ ಆಳ್ವರು. ಇಂಥ ಒಂದು ಗಂಭೀರ ಪ್ರಯತ್ನ ಸಾಹಿತ್ಯ ಸಂದರ್ಭ ಸೇರಿದಂತೆ ಯಾವುದೇ ಸಮ್ಮೇಳನಗಳಲ್ಲಿ ನಡೆದದ್ದೇ ಇಲ್ಲ ಎನ್ನಬಹುದು. 

12 ವೇದಿಕೆಗಳಲ್ಲಿ ಸಾಂಸ್ಕೃತಿಕ ರಸದೌತಣ 
ನುಡಿಸಿರಿಯ ಉದ್ಘಾಟನಾ ಮೆರವಣಿಗೆ ಕನ್ನಡ ನಾಡಿನ ಜನಪ್ರಿಯ ಮತ್ತು ಅಪರೂಪದ ಜನಪದ ಕಲಾಪ್ರಕಾರಗಳ ಕೂಡಿಕೆಯಿಂದ ವಿಶಿಷ್ಟ ಅನುಭವವನ್ನು ನೀಡಿತು. ಜಾನಪದ ಆಸಕ್ತರಿಗೆ ಮತ್ತು ಅಧ್ಯಯನಕಾರರಿಗೆ ಬೆರಗು ಹುಟ್ಟಿಸುವ ವೈವಿಧ್ಯದೊಂದಿಗೆ ಜಂಗಮ ಮ್ಯೂಸಿಯಂನಂತೆ ಕಂಗೊಳಿಸಿತು. ಅದಲ್ಲದೇ ಮೂರು ದಿನಗಳ ಸಮ್ಮೇಳನದಲ್ಲಿ 12 ವೇದಿಕೆಗಳಲ್ಲಿ ಸಂಗೀತ, ಭರತನಾಟ್ಯ, ನƒತ್ಯರೂಪಕ, ಗಾನಾಂಜಲಿ, ಹರಿಕಥೆ, ನಾಟಕ, ಸಿನೆಮಾ ಹೀಗೆ ಬಹುವಿಧ ಕಲಾಪ್ರಕಾರಗಳ ರಸದೌತಣ ಪ್ರೇಕ್ಷಕರಿಗೆ ಸಿಕ್ಕಿತು. ಚಿತ್ರಸಿರಿಯ ಚಿತ್ರಗಳು, ಛಾಯಾಚಿತ್ರ ಸಿರಿಯ ಕಲಾತ್ಮಕ ´ೋಟೋಗಳು, ಗೂಡುದೀಪ ಸಿರಿಯ ಆಕರ್ಷಕ ಗೂಡುದೀಪಗಳು, ಬಹತಾಕಾರದ ಗಾಳಿಪಟಗಳು ಮೀಸೆಯಲ್ಲಿ ಗುಂಡು ಕಲ್ಲೆತ್ತುವ ಸಾಹಸಿ, ವಿದ್ಯುಚ್ಚಾಲಿತ ಪ್ರಾಣಿಗಳ ಮಾದರಿಗಳು, ಆವರಣದ ತುಂಬ ವರ್ಣರಂಜಿತ ಬೆಳಕಿನ ವಿನ್ಯಾಸಗಳು ನುಡಿಸಿರಿಗೆ ಬಂದ ಎಲ್ಲರ ಮೊಬೆ„ಲ್‌ಗ‌ಳಲ್ಲಿಯೂ ತುಂಬಿತುಳುಕಿವೆ.

 ಪಾದರಸದಂತೆ ಓಡಾಡುತ್ತಿದ್ದ ಆಳ್ವರು ಸಮಾರೋಪದಲ್ಲಿ ಹೇಳಿದ್ದಿಷ್ಟು ” ಪ್ರತಿ ನುಡಿಸಿರಿ ಮುಗಿದಾಗಲೂ ಈ ವರ್ಷದ ನುಡಿಸಿರಿ ಅತ್ಯುತ್ತಮ ಎಂಬ ಭಾವ ನಮ್ಮಲ್ಲಿ ಮೂಡುತ್ತದೆ. ಈ ವರ್ಷವೂ ಆ ಆನಂದ ನಮ್ಮದಾಗಿದೆ. ಕನ್ನಡವನ್ನು ನೂರ್ಕಾಲ ಮುಂದೆ ಕೊಂಡೊಯ್ಯುವ ವಿದ್ಯಾರ್ಥಿಗಳಿಂದ ತೊಡಗಿ ಯಾವ್ಯಾವುದೋ ಊರುಗಳಿಂದ ಬಂದು ಕನ್ನಡದ ಈ ಸಮ್ಮೇಳನದಲ್ಲಿ ನಮ್ಮೊಂದಿಗಿದ್ದು ಹರಸಿದ್ದೀರಿ. ಇದು ನಮಗೆ ವಿಶೇಷ ಉತ್ತೇಜನ ನೀಡಿದೆ’ 

ಕಣ್ಮನ ಸೆಳೆದ ಕೃಷಿಸಿರಿ 
ಸುಮಾರು ಒಂದು ಎಕ್ರೆ ಜಾಗದಲ್ಲಿ ಕಣ್ಮನಕ್ಕೆ ಮುದ ನೀಡಿದ ನಾನಾ ತರಕಾರಿಗಳ ತೋಟ ಆಳ್ವಾಸ್‌ ನುಡಿಸಿರಿಗೆ ಬಂದ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಬಳ್ಳಿಯಲ್ಲಿ ನೇತಾಡುತ್ತಿದ್ದ ಪಡುವಲಕಾಯಿ, ಹೀರೆಕಾುಗಳು, ಹಾಗಲಕಾಯಿ ಸಹಿತ ನಾನಾ ತರಕಾರಿಗಳು, ಅಲ್ಲಲ್ಲಿ ನಿಲ್ಲಿಸಿದ ವರ್ಣರಂಜಿತ ಬೆರ್ಚಪ್ಪಗಳು, ತರಕಾರಿಗಳ ಬೃಹತ್‌ ಮಾದರಿಗಳ ಎದುರು ಮಕ್ಕಳು, ಯುವಕರು, ಮುದುಕರೆನ್ನದೇ ಎಲ್ಲರೂ ಸೆಲ್ಫಿಯಲ್ಲಿ ಮುಳುಗಿದ್ದುದು ವಿಶೇಷವಾಗಿತ್ತು. ಕೃಷಿಸಿರಿಯ ಆವರಣದಲ್ಲಿ ಗಿಜಿಗುಡುತ್ತಿದ್ದ ಜನಸಮೂಹದ ನಡುವೆ ಕೃಷಿ ಚಿಂತನ ಮಂಥನ, ಕಂಬಳ ಓಟ, ಕೋಣಗಳ ಸೌಂದರ್ಯ ಸ್ಪರ್ಧೆ, ಜಾನುವಾರು ಪ್ರದರ್ಶನ, ಪಕ್ಷಿ, ಮೀನು, ಚಿಪ್ಪುಗಳ ಪ್ರದರ್ಶನ, ವಿವಿಧ ಮಾರಾಟ ಮಳಿಗೆಗಳು ಇದ್ದವು.

ಡಾ| ಧನಂಜಯ ಕುಂಬ್ಳೆ

Advertisement

Udayavani is now on Telegram. Click here to join our channel and stay updated with the latest news.

Next