Advertisement

ಪಶುಗಳ ಪರ್ಯಾಯ ಆಹಾರ ಅಜೋಲ್ಲಾ ಪರ್ನ್

04:29 PM May 26, 2022 | Team Udayavani |

ರಾಣಿಬೆನ್ನೂರ: ಪಶುಗಳಿಗೆ ಪರ್ಯಾಯ ಆಹಾರವೆಂದರೆ ಅಜೋಲ್ಲಾ ಪರ್ನ್ ಜಾತಿಗೆ ಸೇರಿದ ಚಿಕ್ಕ ಸಸ್ಯ. ನೀರಿನ ಮೇಲೆ ಚೌಕಾಕಾರದ ಚಿಕ್ಕ ಎಲೆಗಳು ಹರಡಿದ್ದರೆ, ಗೊಂಚಲಾದ ಇದರ ಬೇರುಗಳು ನೀರಿನಲ್ಲಿ ಇಳಿಬಿದ್ದಿರುತ್ತವೆ. ಅಸಂಖ್ಯಾತ ಅಜೋಲ್ಲಾ ಸಸ್ಯಗಳು ಒಂದಕ್ಕೊಂದು ಹೆಣೆದುಕೊಂಡು, ನೀರಿನ ಮೇಲೆ ತೇಲಾಡುವ ಒಂದು ಚಾಪೆಯ ರೂಪ ಪಡೆದಿರುತ್ತದೆ ಎಂದು ಹಿರಿಯ ವಿಜ್ಞಾನಿ ಡಾ| ಅಶೋಕ ಪಿ. ಹೇಳಿದರು.

Advertisement

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಜೋಲ್ಲಾ ಬಳಕೆಯ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಜೋಲ್ಲಾ ಸಹ ಜೀವಿಯಾಗಿರುವುದರಿಂದ ಇದರ ಸಂಗಾತಿ ಅನಬೇನಾ ಅಜೋಲ್ಲಾ ಒಂದು ನೀಲಿ ಹಸಿರು ಪಾಚಿ. ಅನಬೇನಾಗೆ ಪೌಷ್ಟಿಕಾಂಶಗಳನ್ನು ಒದಗಿಸಿ ತನ್ನ ಎಲೆಯ ಪದರುಗಳಲ್ಲಿರುವ ಈ ಪಾಚಿಗೆ ವಾಸಿಸಲು ಸ್ಥಳ ದೊರಕಿಸುತ್ತದೆ. ಜಾನುವಾರುಗಳಿಗೆ ಆಹಾರವಾಗಿ ಅಜೋಲ್ಲಾ ಪಾತ್ರ ಒಳ್ಳೆಯ ಪೋಷಕಾಂಶಗಳಿಂದ ಕೂಡಿರುತ್ತದೆ ಎಂದರು.

ಅಜೋಲ ಹೆಚ್ಚಿನ ಪ್ರೊಟೀನ್‌ (ಶೇ.25 ರಿಂದ ಶೇ.35), ಕಡಿಮೆ ಲಿಗ್ನಿಂಗ್‌ ಹೊಂದಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಹೈನು ರಾಸುಗಳಿಗೆ ಅಗತ್ಯವಾದ ಕಚ್ಚಾ ನಾರು (ಶೇ.9), ಪಿಷ್ಟ (ಶೇ.5 ರಿಂದ ಶೇ.6) ಕೊಬ್ಬು (ಶೇ.5), ಇದಲ್ಲದೇ ಮ್ಯಾಂಗನೀಸ್‌ ಮತ್ತು ಮೆಗ್ನಿàಷಿಯಂ, ವಿಟಮಿನ್‌ 3, ವಿಟಮಿನ್‌ ಬಿ ಇತ್ಯಾದಿ ಪೌಷ್ಟಿಕಾಂಶಗಳು ಅಜೋಲದಲ್ಲಿ ಅಡಕವಾಗಿವೆ. ಪ್ರತ್ಯೇಕವಾಗಿ ನೀರಿನಲ್ಲಿ ಬೆಳೆಸಬಹುದು. ಇತರ ಮೇವಿನ ಹಾಗೆ ಒಕ್ಕಲು ಮಾಡಿ ಕತ್ತರಿಸುವ ಅಗತ್ಯವಿಲ್ಲ. ರಾಸುಗಳಿಗೆ ಪಶು ಆಹಾರದೊಂದಿಗೆ 1.5 ರಿಂದ 2 ಕೆಜಿ ಅಜೋಲಾ ಕೊಡುವುದರಿಂದ ಶೇ.10 ರಿಂದ ಶೇ.15 ರಷ್ಟು ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ. ಜೊತೆಗೆ ಶೇ.15 ರಿಂದ ಶೇ.25 ರಷ್ಟು ಪಶು ಆಹಾರ ಬಳಕೆಯಲ್ಲಿ ಕಡಿಮೆ ಮಾಡುತ್ತದೆ ಎಂದರು.

ಅಜೋಲ್ಲಾ ಬೆಳೆಸುವ ವಿಧಾನವೆಂದರೆ, ಪ್ರಥಮವಾಗಿ ನೆರಳಿರುವ ಜಾಗವನ್ನು ಆಯ್ಕೆ ಮಾಡಿ, ನೆರಳಿಲ್ಲದಿದ್ದಲ್ಲಿ ಚಪ್ಪರ ಹಾಕಿ ಅಥವಾ ಶೇಡ್‌ ನೆಟ್‌ ಬಳಸಿ ಅಜೋಲ್ಲಾಕ್ಕೆ ನೆರಳು ಒದಗಿಸಬೇಕು. ಹೊಂಡ ತಯಾರಿಸಿ (ಎರಡು ಮೀಟರ್‌ ಉದ್ದ, 1 ಮೀ. ಅಗಲ ಹಾಗೂ 20 ಸೆಂ.ಮೀ. ಆಳ) ಸಮತಟ್ಟು ಮಾಡಿ ಹಳೆಯ ಪ್ಲಾಸ್ಟಿಕ್‌ ಚೀಲ ಹಾಸಿ ಅಥವಾ 4ಮೀ. ವೃತ್ತಾಕಾರ-ಚೌಕಾಕಾರದ ಸಿಮೆಂಟ್‌ ತೊಟ್ಟಿ ಮಾಡಿ ಅಥವಾ ಸಿದ್ಧವಾದ ಅಜೋಲ್ಲಾ ತೊಟ್ಟಿಗಳನ್ನು ಬಳಸಬಹುದು. 8 ರಿಂದ 10 ಕೆಜಿ ಪುಡಿ ಮಾಡಿ ಜರಡಿ ಮಾಡಿದ ಫಲವತ್ತಾದ ಮಣ್ಣನ್ನು ಪ್ಲಾಸ್ಟಿಕ್‌ ಹಾಳೆಯ ಮೇಲೆ ಸಮನಾಗಿ ಹರಡಿ ಒಂದರಿಂದ ಎರಡು ಕೆಜಿ ಸಗಣಿಯನ್ನು 10 ಲೀಟರ್‌ ನೀರಿನೊಡನೆ ಬೆರೆಸಿ ಹೊಂಡಕ್ಕೆ ಸುರಿಯಬೇಕು. ಸಗಣಿ ಬಗ್ಗಡಕ್ಕೆ 10 ಗ್ರಾಂ ಸೂಪರ್‌ ಫಾಸ್ಪೇಟ್ ಅಥವಾ ರಾಕ್‌ ಫಾಸ್ಪೇಟ್ ಅನ್ನು ಬೆರೆಸಬೇಕು. ನೀರಿನ ಮಟ್ಟ ಕನಿಷ್ಟ 10 ಸೆಂ. ಮೀ. ವರೆಗೆ ಬರುವಂತೆ ನೋಡಿಕೊಳ್ಳಬೇಕು. ಈ ಮಿಶ್ರಣಕ್ಕೆ 0.5 ರಿಂದ 1 ಕೆಜಿ ತಾಜಾ ಅಜೋಲಾವನ್ನು ಹೊಂಡದಲ್ಲಿ ಬಿಡಬೇಕು ಎಂದರು.

ಅಜೋಲ್ಲಾ ಬೆಳೆಯಲು ಬೇಕಾದ ಅವಶ್ಯಕ ಅಂಶಗಳೆಂದರೆ, ಸ್ವತ್ಛವಾದ ನೀರಿನಲ್ಲಿ ಹುಲುಸಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ನೀರು ಹೆಚ್ಚಾದರೆ ತೇಲಿ ಹೋಗುವ ಸಾಧ್ಯತೆ ಇರುತ್ತದೆ. ಅಜೋಲ್ಲಾ ನಿರ್ವಹಣೆಗಾಗಿ ನೇರ ಸೂರ್ಯನ ಕಿರಣಗಳು ಬಿದ್ದು, ಅಜೋಲ ಕೆಂಪು ಬಣ್ಣಕ್ಕೆ ತಿರುಗಿ ಸರಿಯಾಗಿ ಬೆಳೆಯದೆ ಇರಬಹುದು. ಅದಕ್ಕೆ ನೆರಳು ಮಾಡುವ ಬಲೆಯನ್ನು ಉಪಯೋಗಿಸಿ ನೆರಳು ಮಾಡಿ. ಹೀಗೆ ಬೆಳೆದ ಅಜೋಲ್ಲಾ ಸಗಣಿ ವಾಸನೆ ಹೊಂದಿರುವುದರಿಂದ ಅದನ್ನು ಚೆನ್ನಾಗಿ ತೊಳೆದು ಜರಡಿ ಬಳಸಿ ನೀರನ್ನು ಬಸಿದು ಅಜೋಲ್ಲಾ ಮತ್ತು ಪಶು ಆಹಾರವನ್ನು ಮಿಶ್ರಣ ಮಾಡಿ ರಾಸುಗಳಿಗೆ ಕೊಡಬೇಕು. ವಾರಕ್ಕೊಮ್ಮೆ ಅರ್ಧ ಭಾಗ ನೀರನ್ನು ಬದಲಾಯಿಸಿ ಹೊಸದಾಗಿ ನೀರು ತುಂಬಿಸಿ ಯಾವಾಗಲೂ 10 ಸೆಂ.ಮೀ. ಇರುವ ಹಾಗೆ ನೋಡಿಕೊಳ್ಳಿ ಮತ್ತು ತಿಂಗಳಿಗೊಮ್ಮೆ 4ನೇ ಭಾಗ ಮಣ್ಣನ್ನು ತೆಗೆದು ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವುದರ ಜೊತೆಗೆ ರಾಸಾಯನಿಕ ಗೊಬ್ಬರ ಉಳಿತಾಯವಾಗುತ್ತದೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಸುಮಾರು 20 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next