Advertisement

ಸೀಮಂತ ಕಾರ್ಯದಲ್ಲೂ ಮತ ಜಾಗೃತಿಗೆ ಮೆಚ್ಚುಗೆ

12:29 PM Apr 20, 2019 | Team Udayavani |

ಮುಧೋಳ: ತಾಪಂನಲ್ಲಿ ನೌಕರರಾಗಿರುವ ಕಿರಣ ಜೋಗಿ ಅವರು ತಮ್ಮ ಕುಬುಸದ ಕಾರ್ಯದ ಜೊತೆಗೆ ಮತದಾನ ಜಾಗೃತಿ ಮೂಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗ ಎಲ್ಲರ ಚಿತ್ತವೂ ಚುನಾವಣೆ ಮೇಲೆಯೇ ಇದೆ. ಈ ಹಿನ್ನೆಲೆಯಲ್ಲಿ ಅನೇಕ ಸಿಲೆಬ್ರಿಟಿಗಳು ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸೀಮಂತ ಕಾರ್ಯಕ್ರಮದಲ್ಲೂ ಮತದಾನ ಜಾಗೃತಿ ಮೂಡಿಸುವ ಮೂಲಕ ನಗರದ ತಾಪಂ ಉದ್ಯೋಗಿ ಎಲ್ಲರ ಗಮನ ಸೆಳೆದಿದ್ದಾರೆ.

Advertisement

ಕಿರಣ ಜೋಗಿ ಮತ್ತು ಸುಧಾ ದಂಪತಿ ತಮ್ಮ ಕುಬುಸದ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲು ಬಂದವರಿಗೆ ಮತದಾನ ಮಾಡುವಂತೆ ಹೇಳಿ, ಊಟ ಮುಗಿಸಿಕೊಂಡು ಹೋಗುವಂತೆ ವಿನಂತಿಸಿದರು. ಕುಬುಸದ ಕಾರ್ಯಕ್ರಮದ ಅಂಗವಾಗಿ ಬ್ಯಾನರ್‌ ಮಾಡಿಸಲಾಗಿದ್ದು, ಅದರಲ್ಲಿ ದಂಪತಿ ಹೆಸರಿನ ಬದಲಾಗಿ ಮತದಾನ ಜಾಗೃತಿ ಮೂಡಿಸುವ ಬ್ಯಾನರ್‌ ಹಾಕಿದ್ದು ವಿಶೇಷವಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಮಾತ್ರ ಇದೇನಪ್ಪ ಇದು ಕುಬುಸವೋ ಅಥವಾ ಮತದಾನ ಜಾಗೃತಿ ಕಾರ್ಯಕ್ರಮವೋ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು.

ಚುನಾವಣಾ ಜಾಹೀರಾತಿಗೆ ಅನುಮತಿ ಕಡ್ಡಾಯ: ರಾಮಚಂದ್ರನ್
ಬಾಗಲಕೋಟೆ: ಲೋಕಸಭಾ ಚುನಾವಣೆ 2019ಗೆ ಏಪ್ರಿಲ್ 23ರಂದು ಜರುಗುವ ಮತದಾನದ ಹಿನ್ನೆಲೆಯಲ್ಲಿ ಏ.22 ಮತ್ತು 23ರಂದು ಅಭ್ಯರ್ಥಿಗಳು, ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿಯು ದಿನಪತ್ರಿಕೆಗಳಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸಬೇಕಾದರೆ ಎಂ.ಸಿ.ಎಂ.ಸಿ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌. ರಾಮಚಂದ್ರನ್‌ ತಿಳಿಸಿದ್ದಾರೆ.

ಚುನಾವಣಾ ಜಾಹೀರಾತು ಪ್ರಟಿಸಲು ಬಯಸುವ ಅಭ್ಯರ್ಥಿಗಳು ಏಪ್ರಿಲ್ 22 ಮತ್ತು 23ರಂದು ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಈ ಜಾಹೀರಾತಿನ ಎರಡು ಸ್ವಯಂ ದೃಢೀಕರಣ ಪ್ರತಿಯೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಏ.20ರೊಳಗಾಗಿ ಎಂ.ಸಿ.ಎಂ.ಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕು.

ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾಮಟ್ಟದ ಎಂಸಿಎಂಸಿ ಕಡೆಯಿಂದ ಪೂರ್ವಾನುಮತಿ ಪಡೆಯದ ಅಭ್ಯರ್ಥಿಗಳ ಜಾಹೀರಾತುಗಳನ್ನು ಸ್ಥಳೀಯ, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ದಿನಪತ್ರಿಕೆಗಳು ಪ್ರಕಟಿಸಬಾರದು. ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮುಂಚೆ ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126ರ ಪ್ರಕಾರ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ನಿಗದಿತ 48 ಗಂಟೆಗಳ ಅವಧಿಯಲ್ಲಿ ಓಪಿನಿಯನ್‌ ಪೋಲ್ ಫಲಿತಾಂಶ ಪ್ರಕಟಿಸುವುದು, ಚರ್ಚೆ ಅಥವಾ ವಿಶ್ಲೇಷಣೆ ಏರ್ಪಡಿಸುವುದು, ಅದೇ ರೀತಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವುದು ಕೂಡಾ ಪ್ರಜಾಪ್ರತಿನಿಧಿ ಕಾಯ್ದೆಯಡಿ ಬರುತ್ತದೆ ಎಂದು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಎಲ್ಲ ಎಲೆಕ್ಟ್ರಾನಿಕ್‌, ಡಿಜಿಟಲ್ ಮಾಧ್ಯಮಗಳು ಏ.21ರಂದು ಸಂಜೆ 6 ಗಂಟೆಯಿಂದ ಏ.23ರ ಸಂಜೆ 6:30 ಗಂಟೆ ವರೆಗೆ ಮೇಲ್ಕಂಡ ನಿರ್ದೇಶನಗಳನ್ನು ಪಾಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಳಕಲ್ಲ ನಗರದಲ್ಲಿ ಮತ ಜಾಗೃತಿಗಾಗಿ ಪಾದಯಾತ್ರೆ
ಇಳಕಲ್ಲ: ಇಲ್ಲಿಯ ಶ್ರೀಮಠದಲ್ಲಿ ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಸ್ವೀಪ್‌ ಸಮಿತಿ, ಇಳಕಲ್ಲ ನಗರಸಭೆ ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಮತ ಜಾಗೃತಿ ಕಾರ್ಯಕ್ರಮಕ್ಕೆ ಇಳಕಲ್ಲ ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಚಾಲನೆ ನೀಡಿದರು. ನಂತರ ಮತ ಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮತದಾನವು ಬಹುಮುಖ್ಯ ಪಾತ್ರ ವಹಿಸುತ್ತದೆ. ಅದಕ್ಕಾಗಿ ದೇಶದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶದಲ್ಲಿ ಪ್ರಗತಿ ಕಾರ್ಯಗಳು ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕಾದರೆ ಆಡಳಿತ ಉತ್ತಮವಾಗಿರಬೇಕು. ಪವಿತ್ರವಾದ ಮತವನ್ನು ಚಲಾಯಿಸಿ ದೇಶದ ಪ್ರತಿಯತ್ತ ಸಾಗುವಂತೆ ಮಾಡಬೇಕು ಎಂದು ಹೇಳಿದರು. ಜಾಥಾದಲ್ಲಿ ನಗರಸಭೆ ಪೌರಾಯುಕ್ತ, ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.

ಮಹಾಲಿಂಗಪುರದಲ್ಲಿ ಮತದಾನ ಜಾಗೃತಿ ರ್ಯಾಲಿ
ಮಹಾಲಿಂಗಪುರ: ಸ್ಥಳೀಯ ಪುರಸಭೆ, ಗ್ರೀನ್‌ ಬೇಸಿನ್‌ ಲಯನ್ಸ್‌ ಕ್ಲಬ್‌ ಹಾಗೂ ವಕೀಲರ ಸಂಘದ ವತಿಯಿಂದ ಮತದಾನ ಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಯಿತು. ಎಪಿಎಂಸಿ ಗಣಪತಿ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಬಸವ ವೃತ್ತ, ಜೋಡು ರಸ್ತೆ, ವಿವೇಕ ವೃತ್ತ, ನಡುಚೌಕಿ, ಜವಳಿ ಬಜಾರ, ಗಾಂಧಿ ವೃತ್ತ, ಚೆನ್ನಮ್ಮ ವೃತ್ತ ಮಾರ್ಗವಾಗಿ ಪುರಸಭೆವರೆಗೆ ರ್ಯಾಲಿ ನಡೆಸಲಾಯಿತು. ಲನ್ಸ್‌ ಕ್ಲಬ್‌ ಅಧ್ಯಕ್ಷ, ಸರ್ವ ಸದಸ್ಯರು, ವಕೀಲರು, ಪುರಸಭೆ ಸಿಬ್ಬಂದಿ ಸೇರಿ ನೂರಾರು ಜನ ರ್ಯಾಲಿ ಮೂಲಕ ಜಾಗೃತಿ ಮೂಡಿಸಿದರು.

ದಾದನಕಟ್ಟಿ ಗ್ರಾಪಂನಿಂದ ರಂಗೋಲಿ ಸ್ಪರ್ಧೆ
ಲೋಕಾಪುರ: ಸಮೀಪದ ದಾದನಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಪಂ ವತಿಯಿಂದ ಸಾರ್ವಜನಿಕರಿಗೆ ಮತದಾನದ ಮಹತ್ವ ತಿಳಿಸಲು ಜಿಲ್ಲಾ ಸ್ವೀಪ್‌ ಸಮಿತಿ ನಿರ್ದೇಶನದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಯಿತು.

ಪಿಡಿಒ ವಿಜಯಕುಮಾರ ಕಮ್ಮಾರ ಮಾತನಾಡಿ, ರಂಗೋಲಿ ಸ್ಪರ್ಧೆಯಲ್ಲಿ ಬಿಡಿಸಿರುವ ಅನೇಕ ಚಿತ್ರಗಳು ಕ್ರಿಯಾತ್ಮಕತೆ ಹಾಗೂ ಒಳ್ಳೆಯ ಸಂದೇಶ ನೀಡಿದಂತಾಗಿದೆ. ಜನರಲ್ಲಿ ಮತದಾನದ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಮತದಾನ ಜಾಗೃತಿಗಾಗಿ ಅನೇಕ ರೀತಿಯ ರಂಗೋಲಿ, ಚಿತ್ತಾರಗಳನ್ನು ಗ್ರಾಮದ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿಗಳು ಬಿಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಗ್ರಾಪಂ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next