Advertisement

NEP Vs SEP ಶಿಕ್ಷಣದ ಜತೆಗೆ ಕೌಶಲ ತರಬೇತಿಗೂ ಎನ್‌ಇಪಿಯಲ್ಲಿ ಹೆಚ್ಚಿನ ಒತ್ತು

11:18 PM Sep 01, 2023 | Team Udayavani |

ಸ್ವಾತಂತ್ರ್ಯಾನಂತರ ಈವರೆಗೆ ಮೂರು ಶಿಕ್ಷಣ ನೀತಿಗಳನ್ನು ಜಾರಿಗೆ ತರಲಾಗಿದೆ. ಪ್ರತೀ ಶಿಕ್ಷಣ ನೀತಿ ಜಾರಿಗೊಳಿಸುವಾಗಲೂ ಆಮೂಲಾಗ್ರ ಸುಧಾರಣೆಯ ಅಂಶ­ಗಳನ್ನು ಅಳವಡಿಸಿಕೊಳ್ಳಲಾ­ಗಿದೆ. ಬಹ­ಳಷ್ಟು ಜನರಿಗೆ ಇದು ಹೊಸದಾಗಿ ಸೃಷ್ಟಿಸಿರುವ ನೀತಿಯಂತೆ ಕಂಡಿರ­ಬಹುದು, ಆದರೆ ವಾಸ್ತವ ಅದಲ್ಲ. 1968ರಲ್ಲಿ ಜಾರಿಗೆ ತಂದ ಮೊದಲ ಶಿಕ್ಷಣ ನೀತಿ, 1986ರಲ್ಲಿ ಜಾರಿಗೆ ತಂದ 2ನೇ ಶಿಕ್ಷಣ ನೀತಿಯ ಬಳಿಕ 34 ವರ್ಷಗಳ ಅನಂತರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅರ್ಥಾತ್‌ ಎನ್‌ಇಪಿ-2020 ಇದಾಗಿದೆ.

Advertisement

ಇಂದು ತಂತ್ರಜ್ಞಾನ, ಆವಿಷ್ಕಾರ, ನವೋದ್ಯಮ ಸಹಿತ ಬಹುತೇಕ ಔದ್ಯೋಗಿಕ ವಲಯಗಳು ಜಾಗತೀಕರಣ­ಗೊಂಡಿವೆ. ಜಾಗತೀಕರಣವು ಒಂದು ಸವಾಲಾಗಿ ಕಂಡರೂ ಯುವಜನತೆಯೇ ಹೆಚ್ಚಾಗಿರುವ ನಮ್ಮ ದೇಶಕ್ಕೆ ಇದೊಂದು ಬಹುದೊಡ್ಡ ಅವಕಾಶವಾಗಿದೆ. ನಮ್ಮ ವಿದ್ಯಾರ್ಥಿಗಳು ಜಗತ್ತಿನ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ನಡೆಸಬೇಕಿದೆ. ಈ ದಿಶೆಯಲ್ಲಿ ಭಾರತ ಜಗತ್ತಿನ ಭೂಪಟದಲ್ಲಿ ಅಗ್ರಸ್ಥಾನಕ್ಕೇರಲು ಶಿಕ್ಷಣವೊಂದೇ ಪರಿಹಾರ ಕಲ್ಪಿಸಬಲ್ಲದು ಎಂಬುದನ್ನು ಮನಗಂಡು ಶಿಕ್ಷಣದ ಜತೆ ಕೌಶಲ ಕಲಿಕೆಗೂ ಒತ್ತು ನೀಡುವ ಅಂಶಗಳನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಬಹುಮುಖ್ಯವಾಗಿ ಎನ್‌ಇಪಿಯ ಕರಡು ಸಮಿತಿ ಅಧ್ಯಕ್ಷರಾದ ಡಾ| ಕೆ.ಕಸ್ತೂರಿ ರಂಗನ್‌ ನೇತೃತ್ವದಲ್ಲಿ ನಮ್ಮ ಬೆಂಗಳೂರಿನಲ್ಲಿಯೇ ಇದರ ಬಹುತೇಕ ಪ್ರಕ್ರಿಯೆಗಳು ನಡೆದಿವೆ.

ಎನ್‌ಇಪಿ-2020ಯನ್ನು ಏಕಾಏಕಿ ಅಳವಡಿಸಿಕೊಳ್ಳ­ಲಾಗಿದೆ ಎಂಬಂತೆ ಬಿಂಬಿಸಲು ಹೊರಟಿರುವ ರಾಜ್ಯ ಕಾಂಗ್ರೆಸ್‌ ಸರಕಾರ ಕರ್ನಾಟಕದಲ್ಲಿ ಎನ್‌ಇಪಿಯನ್ನು ರದ್ದುಪಡಿಸಿ, ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತೇವೆಂದು ಘೋ ಷಿಸಿದೆ. ಈ ನಿರ್ಧಾರ ಘೋಷಿಸುವ ಮುನ್ನ ಯಾವುದೇ ಸಮಾಲೋಚನೆಯಾಗಲಿ ಅಥವಾ ಸಾರ್ವಜನಿಕ ಚರ್ಚೆಯಾಗಲಿ ನಡೆದಿಲ್ಲ. ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯುಲ್ಲಿ ಲೋಪದೋಷಗಳು ಏನಿವೆ ಎಂದು ಕೇಳಿದರೆ ಅವರಲ್ಲಿ ಯಾವುದೇ ಸ್ಪಷ್ಟೀಕರಣವಿಲ್ಲ.

ಪ್ರಸ್ತುತ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸುತ್ತಿರುವ ಎಸ್‌ಇಪಿಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಚರ್ಚೆ ನಡೆಸಿಲ್ಲ, ಶಿಕ್ಷಣ ತಜ್ಞರ ಸಮಾಲೋಚನೆಯೂ ನಡೆದಿಲ್ಲ. ಏಕಾಏಕಿ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುತ್ತೇವೆ ಎನ್ನುತ್ತಿರುವುದು ಕಾಂಗ್ರೆಸ್‌ ಸರಕಾರದ ದುರಾಲೋಚನೆಗೆ ಸ್ಪಷ್ಟ ನಿದರ್ಶನವಾಗಿದೆ. ಈ ದುಡುಕಿನ ನಿರ್ಧಾರವು ಕಾಂಗ್ರೆಸ್‌ ಸರಕಾರ ಮಾಡುತ್ತಿರುವ ನಾಡು ಕ್ಷಮಿಸದ ಅಪರಾಧವಾಗಿದೆ.

1968ರಲ್ಲಿ ಜಾರಿಗೆ ತಂದ ಮೊದಲ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಆದರೆ ಭಾರತದ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿ ಸರ್ವರಿಗೂ ಸಮಾನ ಶಿಕ್ಷಣ ಕಲ್ಪಿಸುವ ಆಶಯ ಹೊಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಮಾತೃಭಾಷಾ ಕಲಿಕೆಗೆ ಆದ್ಯತೆ ನೀಡಿದೆ. ವಿದ್ಯಾರ್ಥಿಗಳ ಕೌಶಲ ವೃದ್ಧಿಯ ಮೂಲಕ ಶೇಕಡಾ ನೂರರಷ್ಟು ಉದ್ಯೋಗಾವಕಾಶ ಕಲ್ಪಿಸಲು ಪೂರಕವಾಗಿದೆ.

Advertisement

ಮೊದಲು ಶಿಕ್ಷಣ ಮತ್ತು ಕೌಶಲ ಎರಡು ದೋಣಿಗಳಂತೆ ಇದ್ದವು. ಶಿಕ್ಷಣ ಮುಗಿಸಿ ಕೌಶಲ ಕಲಿಯಬೇಕಾದ ಸ್ಥಿತಿ ಹಾಗೂ ಶಿಕ್ಷಣ ಅಥವಾ ಕೌಶಲ ಎಂಬೆರೆಡು ಆಯ್ಕೆಯ ನಡುವೆ ಒಂದನ್ನು ಮಾತ್ರ ಆರಿಸಿಕೊಳ್ಳುವ ಅನಿವಾರ್ಯತೆ ಇತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ನೂತನ ಶಿಕ್ಷಣ ನೀತಿಯ ಅಡಿ ಶಿಕ್ಷಣ ಹಾಗೂ ಕೌಶಲವನ್ನು ಒಟ್ಟೊಟ್ಟಿಗೇ ಕಲಿಯುವ ಸದಾವಕಾಶ ವಿದ್ಯಾರ್ಥಿಗಳಿಗೆ ಲಭಿಸುತ್ತಿದೆ.

ಮಗುವಿನ 3ನೇ ವರ್ಷದ ಅವಧಿಯಲ್ಲಿ ಶೇ.85ರಷ್ಟು ಮೆದುಳು ಬೆಳವಣಿಗೆ ಹೊಂದುತ್ತದೆ. ಈ ಅವಧಿಯಲ್ಲಿ ಸರಿಯಾದ ಶಿಕ್ಷಣದ ಅಡಿಪಾಯ ಹಾಕುವುದು ಬಹು ಮುಖ್ಯವಾಗಿದೆ. ಈ ದಿಶೆಯಲ್ಲಿ ಪ್ರಿ-ನರ್ಸರಿ ಮಟ್ಟ ದಿಂದಲೇ ಮಗುವಿಗೆ ಪೂರಕ ಶಿಕ್ಷಣ ನೀಡುವ ಬಗ್ಗೆ ಎನ್‌ಇಪಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಪರಿಕಲ್ಪನೆ ಆಧಾರಿತ ಕಲಿಕೆಯ ಜತೆ ಬಹು ಮುಖ್ಯವಾಗಿ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲಗಳನ್ನು ಕಲಿಸಲು ಪೂರಕವಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮಲ್ಟಿಪಲ್‌ ಎಂಟ್ರಿ ಮತ್ತು ಎಕ್ಸಿಟ್‌ ಸಿಸ್ಟಮ್‌ ಕಲ್ಪಿಸಲಾಗಿದೆ. ಇದೊಂ ದು ವ್ಯವಸ್ಥೆ ಅಥವಾ ಶಿಕ್ಷಕರ ಆಧಾರಿತ ಶಿಕ್ಷಣವಾಗಿರದೇ ಸಂಪೂರ್ಣವಾಗಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀಡುವ ಆಶಯ ಹೊಂದಿದೆ. 21ನೇ ಶತಮಾನದ ಜ್ಞಾನಾಧಾರಿತ ಸಮಾಜದಲ್ಲಿ ಬಡವ ಶ್ರೀಮಂತ ಎನ್ನದೇ ಎಲ್ಲರಿಗೂ ಕೌಶಲಾಧಾರಿತ ಗುಣಮಟ್ಟದ ಶಿಕ್ಷಣ ಸಿಗಬೇಕು, ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಆಸಕ್ತಿಗೆ ಪೂರಕ­ವಾದ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎನ್ನುವುದು ಎನ್‌ಇಪಿಯ ಆಶಯಗಳಲ್ಲಿ ಒಂದಾಗಿದೆ.

ಕಾಂಗ್ರೆಸ್‌ ನಾಯಕರು ಹೇಳುತ್ತಿರುವ ಹಾಗೆ ಎನ್‌ಇಪಿಯನ್ನು ದೇಶದಲ್ಲಿ ಏಕಾಏಕಿ ಜಾರಿಗೊಳಿಸಲಾಗಿಲ್ಲ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಸಮಾಲೋಚನೆ ಆರಂಭವಾಗಿದ್ದು 2015ರಲ್ಲಿಯೇ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೇ ಸರಕಾರ ಇತ್ತು. ಸುದೀರ್ಘ‌ ಚರ್ಚೆಗಳು, ಸಲಹೆಗಳು, ಸಾರ್ವಜನಿಕ ಪ್ರತಿಕ್ರಿಯೆಗಳು ಮತ್ತು ಬದಲಾವಣೆಗಳ ಅನಂತರ – ಅಂತಿಮವಾಗಿ 29 ಜುಲೈ 2020ರಲ್ಲಿ ಎನ್‌ಇಪಿ-2020ಕ್ಕೆ ಸಚಿವ ಸಂಪುಟದಿಂದ ಅನುಮೋದನೆ ಸಿಕ್ಕಿತು. ಜುಲೈ 2020ರಲ್ಲಿ ಘೋಷಣೆಯಾದ ಈ ನೀತಿಯನ್ನು ಆ. 2021ರಲ್ಲಿ ಅಳವಡಿಸಿಕೊಳ್ಳಲಾಗಿದೆ. ಹಾಗೆಯೇ 2035ರ ವೇಳೆಗೆ ದೇಶದಾದ್ಯಂತ ಪೂರ್ಣಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ಗುರಿ ಹೊಂದಲಾಗಿದೆ.

ರಾಜ್ಯದಲ್ಲಿ ಅಳವಡಿಸಿಕೊಳ್ಳುವಾಗಲೂ ಎಸ್‌.ವಿ. ರಂಗನಾಥ್‌ ನೇತೃತ್ವದ ಶಿಕ್ಷಣ ತಜ್ಞರ ಸಮಿತಿ ರಚಿಸಿ, ಅವರು 2020ರ ನವೆಂಬರ್‌ನಲ್ಲಿ ಸಲ್ಲಿಸಿದ ವರದಿಯ ಆಧಾರದ ಮೇಲೆಯೇ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ 2030ರ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ನೂತನ ಶಿಕ್ಷಣ ನೀತಿಯ ಅಳವಡಿಕೆಯ ಗುರಿ ಹೊಂದಲಾಗಿದೆ. ಎನ್‌ಇಪಿ ಅಡಿಯಲ್ಲಿ ಶಿಕ್ಷಣವನ್ನು ಡಿಜಿಟಲೀಕರಣಗೊಳಿಸುವ ಜತೆ ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ ಅಳವಡಿಸಿಕೊಂಡ ವಿಶ್ವದ ಮೊದಲ ರಾಜ್ಯ ನಮ್ಮದಾಗಿದೆ.

ಇಂದು ಶಿಕ್ಷಣವು ವ್ಯಾಪಾರವಾಗುತ್ತಿದೆ. ಅದನ್ನು ತಪ್ಪಿಸಲು ಎನ್‌ಇಪಿಯಲ್ಲಿ “ಜ್ಞಾನ, ವಿಜ್ಞಾನ, ಅನುಸಂಧಾನ, ವಿಚಾರ, ಸಂಸ್ಕಾರ’ಕ್ಕೆ ಆದ್ಯತೆ ನೀಡಲಾಗಿದೆ.ಇದ ನ್ನೇ ಇಂಗ್ಲೀಷ್‌ನಲ್ಲಿ ಹೇಳುವುದಾದರೆ ‘Knowledge, Science, Resear ch, Ideas, and Tradition’. ಇದರಿಂದಾಗಿ ಪ್ರಸ್ತುತ ಶಿಕ್ಷಣ ಮತ್ತು ಭಾರತೀಯತೆಯ ಬೇರುಗಳ ಸಮ್ಮಿಳನದ ಲಾಭ ನಮ್ಮ ವಿದ್ಯಾರ್ಥಿಗಳಿಗೆ ಸಿಗಲಿದೆ.

– ಡಾ| ಸಿ.ಎನ್‌. ಅಶ್ವತ್ಥನಾರಾಯಣ,
ಮಾಜಿ ಉನ್ನತ ಶಿಕ್ಷಣ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next