ನವದೆಹಲಿ: ಎಸ್ಸಿ, ಎಸ್ಟಿ ಅಥವಾ ಒಬಿಸಿ ವರ್ಗಗಳಿಂದ ಸಾಕಷ್ಟು ಅಭ್ಯರ್ಥಿಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಈ ವರ್ಗಗಳ ಅಭ್ಯರ್ಥಿಗಳಿಗೆ ಕಾಯ್ದಿರಿಸಿದ್ದ ಹುದ್ದೆಗಳನ್ನು “ಕಾಯ್ದಿರಿಸಿಲ್ಲ’ ಎಂದು ಘೋಷಿಸಬಹುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ದ ಹೊಸ ಕರಡು ಮಾರ್ಗಸೂಚಿ ಹೇಳಿದೆ.
“ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತ ಸರ್ಕಾರದ ಮೀಸಲಾತಿ ನೀತಿಯ ಅನುಷ್ಠಾನಕ್ಕಾಗಿ ಮಾರ್ಗಸೂಚಿ’ ಕುರಿತು ಯುಜಿಸಿ, ಸಾರ್ವಜನಿಕರಿಂದ ಅಭಿಪ್ರಾಯ, ಸಲಹೆಗಳನ್ನು ಆಹ್ವಾನಿಸಿತ್ತು. ಈಗಾಗಲೇ ಈ ನಿರ್ಧಾರದ ವಿರುದ್ಧ ಅನೇಕರು ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ. ಯುಜಿಸಿ ನಿರ್ಧಾರ ಖಂಡಿಸಿ ದೆಹಲಿಯ ಜೆಎನ್ಯು ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆಗೆ ನಿರ್ಧರಿಸಿದೆ.
ಪ್ರಸ್ತುತ ನಿಯಮಗಳ ಪ್ರಕಾರ, ಎಸ್ಸಿ ಅಥವಾ ಎಸ್ಟಿ ಅಥವಾ ಒಬಿಸಿ ಅಭ್ಯರ್ಥಿಗಳಿಗೆ ಕಾಯ್ದಿರಿಸಿದ್ದ ಹುದ್ದೆಗಳು ಭರ್ತಿಯಾಗದೇ ಇದ್ದಾಗ, ಈ ವರ್ಗಗಳಿಗೆ ಸೇರದ ಬೇರೆ ಅಭ್ಯರ್ಥಿಗಳಿಂದ ಆ ಹುದ್ದೆಗಳನ್ನು ತುಂಬಿಸುವಂತಿಲ್ಲ. ಆದರೆ ನೂತನ ಕರಡು ಮಾರ್ಗಸೂಚಿ ಪ್ರಕಾರ, ಅಪರೂಪದ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಗ್ರೂಪ್ ಎ ಹುದ್ದೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಖಾಲಿ ಉಳಿಯುವಂತಿಲ್ಲ. ಹಾಗಾಗಿ ಎಸ್ಸಿ ಅಥವಾ ಎಸ್ಟಿ ಅಥವಾ ಒಬಿಸಿ ವರ್ಗಗಳಿಂದ ಸಾಕಷ್ಟು ಅಭ್ಯರ್ಥಿಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಈ ವರ್ಗಗಳ ಅಭ್ಯರ್ಥಿಗಳಿಗೆ ಕಾಯ್ದಿರಿಸಿದ್ದ ಹುದ್ದೆಗಳನ್ನು “ಕಾಯ್ದಿರಿಸಿಲ್ಲ’ ಎಂದು ಘೋಷಿಸಿ, ಇತರೆ ಅಭ್ಯರ್ಥಿಗಳಿಂದ ಹುದ್ದೆಗಳನ್ನು ತುಂಬಬಹುದು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಕೊನೆಗೊಳಿಸುವ ಪಿತೂರಿ ನಡೆಯುತ್ತಿದೆ. ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರವು ಕೇವಲ ತೋರಿಕೆಯ ರಾಜಕಾರಣದಲ್ಲಿ ತೊಡಗಿದೆ.
– ಜೈರಾಮ್ ರಮೇಶ್, ಕಾಂಗ್ರೆಸ್ ನಾಯಕ