Advertisement

“ಹಳೆಯದೆಲ್ಲವೂ ಶ್ರೇಷ್ಠವಲ್ಲ, ಹೊಸದೆಂದ ಮಾತ್ರಕ್ಕೆ ತಿರಸ್ಕಾರಾರ್ಹವಲ್ಲ

10:48 AM Apr 12, 2018 | Sharanya Alva |

ಜ್ಞಾನ ವಿಜ್ಞಾನ ಇತಿಹಾಸದಾದ್ಯಂತ ಪರಿಷ್ಕರಣೆಗಳನ್ನು ಕಂಡಿವೆ. ಅರಿವು ನಿಂತ ನೀರಲ್ಲ, ಹರಿವ ತೀರ್ಥ. ಯುಗಧರ್ಮಕ್ಕನುಗುಣ ವಾಗಿ ತಿದ್ದುಪಡಿ, ಪರಿಶೋಧನೆ ಅಗತ್ಯವೇ. ಇಲ್ಲದಿದ್ದರೆ ಬೌದ್ಧಿಕ ನ್ಯೂನಪೋಷಣೆ ಕಟ್ಟಿಟ್ಟ ಬುತ್ತಿ. ಈಚೆಗೆ ನಾನೊಂದು ಪ್ರಸಿದ್ಧ ಸಾಹಿತಿಗಳ ಸಂಸ್ಮರಣೋತ್ಸವದಲ್ಲಿ ಭಾಗವಹಿಸಿದ್ದೆ. ಭರ್ಜರಿ ಯಾಗಿಯೇ ಕಾರ್ಯಕ್ರಮ ಉದ್ಘಾಟನೆಯಾಗಿ ಗೀತ ಗಾಯನ, ಗೋಷ್ಠಿ, ಸಂವಾದಗಳು ನೆರವೇರಿದವು. ಭೋಜನ ವಿರಾಮದಲ್ಲಿ ಒಂದು ಸಂಭಾಷಣೆ ಕಿವಿಗೆ ಬಿತ್ತು. “ಎಲ್ಲ ಸರಿಯೇ. ಇವರೊಬ್ಬ ಮೇರು ಸಾಹಿತಿ. ಇವರ ವೈಯಕ್ತಿಕ ಬದುಕನ್ನು ಯಾರೂ ಟೀಕಿಸದಷ್ಟು ಎತ್ತರದವರು ನಿಜ. ಆದರೆ ಮುಂದೆಯೂ ಇವರು ಟೀಕಾತೀತರಾಗಿಯೆ ಜನರ ನೆನಪಿನಲ್ಲಿರುವರೆನ್ನಲು ಖಾತರಿ  ಯೇನು? ಯಾರಾದರೂ ಪ್ರಶ್ನಿಸಬಹುದಲ್ಲವೇ?’ ಅಂತ ಒಬ್ಬರು.

Advertisement

ಅವರು ಸಾಹಿತಿಯ ಯಾವ ವಿಷಯ ಕುರಿತು ಉದ್ಗರಿಸುತ್ತಿದ್ದಾರೆ ಎನ್ನುವುದನ್ನು ಇನ್ನೊಬ್ಬರು ಗ್ರಹಿಸಿದ್ದರು. “ಅಂತೂ ಇವೊತ್ತೇ ನೀವು ಪ್ರಸ್ತಾಪಿಸಿದಿರಲ್ಲ’ ಅಂತ ಚಟಾಕಿ ಹಾರಿಸಿ ಮಾತು ತಿರುಗಿಸಿ “ನಡೀರಿ ಕವನ ವಾಚನ ಶುರುವಾಗಿದೆ’ ಎಂದರವರು. ಶ್ರೇಷ್ಠರ ಸಾಧನೆಗಳು ಮುಕ್ತಕಂಠದಿಂದ ಅನವರತ ಪ್ರಶಂಸಿಸಲ್ಪಡುವು ದರಲ್ಲಿ ಎರಡು ಮಾತಿಲ್ಲ. ಮಹಾನ್‌ ವ್ಯಕ್ತಿಗಳಿಗೆ ಸಾವಿಲ್ಲ. ಈ ನಿಟ್ಟಿನಲ್ಲಿ ಇನ್ನೊಂದು ಮಗ್ಗುಲು ಪರಿಶೀಲನಾರ್ಹ. ವ್ಯಕ್ತಿ ಸಮಾಜಕ್ಕೆ ಘನವಾದುದನ್ನೇನೋ ನೀಡಿರುತ್ತಾನೆ. ಆದರೆ ಆತನ ವೈಯಕ್ತಿಕ ಬದುಕಿನಲ್ಲಿ ಇರಬಹುದಾದ, ಸಮಾಜ ಲೋಪದೋಷ  ಗಳೆಂದು ಪರಭಾವಿಸುವ ಅಂಶಗಳು ಸಾಧನೆಯ ಪ್ರಖರತೆ ಯಲ್ಲಿ “ಯಾರೂ ಕೇಳುತ್ತಾರೆ ಬಿಡಿ ಅದನ್ನೆಲ್ಲ, ಅದು ನಗಣ್ಯ’ ಎನ್ನಲಾಗದು. ಹಾಗಾಗಿ ವೈಯಕ್ತಿಕ ನೆಲೆಯಲ್ಲೂ ಉದಾತ್ತರಾಗಿದ್ದರೆ ಅವರ ಮಹತ್ಕಾರ್ಯಕ್ಕೆ ಕಳಸವಿಟ್ಟಂತಾಗುತ್ತದೆ. 

“ಮಹನೀಯರ ಖಾಸಗಿ ಜೀವನ ಸಾರ್ವಜನಿಕ ಮಹತ್ವದ್ದು’ ಎಂಬ ಮಾತಿದೆ. ಎಂದಮೇಲೆ ಪ್ರಸಿದ್ಧರು ಮೈಯೆಲ್ಲ ಎಚ್ಚರವಾಗಿ ನಡೆದುಕೊಳ್ಳಬೇಕಾಗುತ್ತದೆ. ಎಷ್ಟೇ ಪ್ರತಿಭಾನ್ವಿತ ಗಾಯಕನಿರಲಿ ಆತ ದುರಭ್ಯಾಸವೊಂದರ ವ್ಯಸನಿಯಾಗಿದ್ದರೆ ಆ ಐಬೇ ಎದ್ದು ಕಾಣುತ್ತದೆ. ಇದು ಲೋಕದ ಸ್ವಭಾವ. ಇನ್ನು ಸಾಹಿತ್ಯ, ಸಂಶೋಧನೆಯತ್ತ ಬರೋಣ. ಮೊದಲಿಗೆ ಬುದ್ಧ, ಕಾಳಿದಾಸರ ನುಡಿಮುತ್ತುಗಳನ್ನು ಮೆಲುಕು ಹಾಕದಿರಲು ಸಾಧ್ಯವೇ ಇಲ್ಲ. ಬುದ್ಧದೇವ “ಪ್ರಶ್ನಿಸದೆ ಏನನ್ನೂ ಒಪ್ಪಬೇಡಿ…..ಏಕೆ, ಏನು, ಹೇಗೆ ವಿಚಾರಿಸಿ’ ಎಂದಿದ್ದಾನೆ.

ಇದೇ ಮಾತನ್ನು ಮಹಾಕವಿ ಕಾಳಿದಾಸ ತನ್ನ “ಮಾಳವಿಕಾಗ್ನಿ ಮಿತ್ರಂ’ ನಾಟಕದಲ್ಲಿ ಸುಭಾಷಿತರೂಪದಲ್ಲಿ ಹೀಗೆ ನುಡಿದಿ ದ್ದಾನೆ; “ಹಳೆಯದೆಲ್ಲವೂ ಶ್ರೇಷ್ಠವಲ್ಲ. ಹೊಸದೆಂದ ಮಾತ್ರಕ್ಕೆ ತಿರಸ್ಕಾರಾರ್ಹವೆಂದೂ ಅಲ್ಲ. ಪ್ರಾಜ್ಞರು ಉತ್ತಮವೋ ನೀರಸವೋ ಪರಾಮರ್ಶಿಸುತ್ತಾರೆ. ಮೂಢರು ಇನ್ನೊಬ್ಬರು ಹೇಳಿದ್ದನ್ನೇ ಅವಲಂಬಿಸುತ್ತಾರೆ’. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸವ್ಯಸಾಚಿಯಾಗಿದ್ದರು ಪಂಜೆ ಮಂಗೇಶರಾಯರು. ಅವರು ರಚಿಸಿರುವ ಶಿಶುಸಾಹಿತ್ಯಕ್ಕೆ ಸಾಟಿಯಿಲ್ಲ.

ಅವರ “ಹಾವಿನ ಹಾಡು’ ಅತ್ಯಂತ ಜನಪ್ರಿಯವಾಗಿದೆ. ಮಕ್ಕಳಿಗೆ ಪ್ರಾಸಬದ್ಧವಾಗಿದೆ. ಗೇಯಪದ್ಯವಾಗಿ ರಂಜನೀಯವೂ ಹೌದು. ಮೈಸೂರಿನ ದಳವಾಯಿ ಮಾಧ್ಯಮಿಕ ಶಾಲೆಯಲ್ಲಿ ಅರ್ಧ ಶತಮಾನಕ್ಕೂ ಹಿಂದೆ ನಾನು ವ್ಯಾಸಂಗ ಮಾಡುತ್ತಿದ್ದಾಗ ಶಾಲಾ ವಾರ್ಷಿಕೋತ್ಸವದಂದು ನಮ್ಮ ತರಗತಿಯಿಡೀ ಈ ಹಾಡಿಗೆ ನರ್ತಿಸಿತ್ತು. ಈ ಸಾಲುಗಳನ್ನು ಗಮನಿಸಿ; “ನಾಗರ ಹಾವೆ ಹಾವೊಳು ಹೂವೆ/ಬಾಗಿಲ ಬಿಲದಲಿ ನಿನ್ನಯ ಠಾವೆ/ಕೈಯನು ಮುಗಿವೆ ಹಾಲನೀವೆ/…../…../ಕೊಳಲನೂದುವೆ ಆಲಿಸು ರಾಗ…’.ಪಂಜೆಯವರು ಸ್ವಾತಂತ್ರ್ಯಪೂರ್ವದಲ್ಲಿ ಬರೆದ ಶಿಶುಪ್ರಾಸದ
ಪಂಕ್ತಿಗಳಿವು. ಇದರ ಧ್ವನ್ಯಾರ್ಥ ಬೇರೆಯೆ ಇದೆ. ಇಲ್ಲಿನ ಹಾವು ಹಾವಲ್ಲ. ಬ್ರಿಟಿಷರೆ, ಭಾರತ ಬಿಟ್ಟು ತೆರಳಿ ಎನ್ನುವುದರ ಇಂಗಿತ ಹಾಡಿನದು. ರಚನೆಯ ಕಾಲಘಟ್ಟ, ಸಂದರ್ಭ ಅವಗಾಹಿಸಿ ಕೊಳ್ಳದಿದ್ದರೆ ಏನಾದೀತು ಗೊತ್ತೇ ಇದೆ. ಇದೇನು ಹೀಗೆ ಬರೆದರು?

Advertisement

ಹಾವಿಗೆ ಕೇಳಲು ಕಿವಿಯೂ ಇಲ್ಲ. ಅದು ಹಾಲು ಕುಡಿಯುವುದೂ ಇಲ್ಲ…ಇತ್ಯಾದಿ ಗುಣದೋಷ ವಿವೇಚನೆಗೆ ಪದ್ಯ ತೆರೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಮಕ್ಕಳಿಗೆ ನಿಜ, ಹಾವು ಆಲಿಸದು, ಹಾಲನ್ನೂ ಕುಡಿಯದು ಎಂದು ಹೇಳಿಯೆ ಈ ಹಾಡು ಹಾಡಿಸಲು ಮುಂದಾಗಬೇಕು. ಈ ಷರಾ ಕೈಬಿಟ್ಟರೆ ಜೀವ ಶಾಸ್ತ್ರದ ಪಾಠ, ಕನ್ನಡ ಪಾಠ ಭಿನ್ನ ಭಿನ್ನವೆನ್ನಿಸಿ ಎಳೆಯರು ತಬ್ಬಿಬ್ಟಾಗುತ್ತಾರೆ. ಹದಿನೆಂಟನೆ ಶತಮಾನದ ಷಡಕ್ಷರಕವಿ ತನ್ನ “ಕೋಳೂರು ಕೊಡಗೂಸು’ನಲ್ಲಿ ಶಿವನ ಪ್ರತಿಮೆ ಬಾಲಕಿಯಿತ್ತ ಕೊಡ ಹಾಲನ್ನು ಕುಡಿಯಿತೆಂದು ಚಿತ್ರಿಸಿದ್ದಾನೆ. ಅದಕ್ಕೆ ಸುಮಾರು ಆರು ಶತಮಾನಗಳ ಹಿಂದೆ ಬಸವಾದಿ ಶರಣರ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವ ನುಡಿ ಆತನನ್ನು ಪ್ರಭಾವಿಸಬಹುದಿತ್ತಲ್ಲವೆ ಎಂಬ ಪ್ರಶ್ನೆ ಉದ್ಭವಿಸದಿರಲಾರದು.

ಬೆಳಕೆಂಬ ಮಾಯಾವಿ ವಿಜ್ಞಾನಿಗಳನ್ನು ಐನಾತಿಯಾಗಿಯೇ ಅಟ್ಟಾಡಿಸಿತು. 1676 ತನಕ ಬೆಳಕಿನ ವೇಗ ಅನಂತ, ಅದನ್ನು ಅಳೆಯಲಾಗದೆಂದೇ ಭಾವಿಸಲಾಗಿತ್ತು. ಹಾಗೇನಿಲ್ಲ. ಅದು ಸೆಕೆಂಡಿಗೆ ಮೂರು ಲಕ್ಷ ಕಿ.ಮೀ. ವೇಗದಲ್ಲಿ ಧಾವಿಸುವುದಾಗಿ ಪ್ರಯೋಗಗಳಿಂದ ದೃಢವಾಯಿತು. ನಂತರ ಬೆಳಕಿನ ಸಾಗಣೆ ಯಾವ ತೆರನಲ್ಲಿ ಎಂಬ ಜಿಜ್ಞಾಸೆ. 

ಏಕೆಂದರೆ ಯಾವುದರ ಪಯಣಕ್ಕೂ ಒಂದು ಮಾಧ್ಯಮ ಬೇಕಲ್ಲ. “ಈಥರ್‌’ ಎಂಬ ಮಾಧ್ಯಮವುಂಟೆಂದು ಭಾವಿಸಲಾಯಿತು. ಆದರೆ ಹಲವು ವೈಜ್ಞಾನಿಕ ಅಂಶಗಳಿಗೆ ಸಮಜಾಯಿಷಿ ನೀಡಲು ಈ ಅಂದಾಜು ವಿಫ‌ಲವಾಯಿತು. ಸರ್‌ ಐಸಾಕ್‌ ನ್ಯೂಟನ್‌(1643-1727) 1675 ರಲ್ಲಿ “ಕಣ ಸಿದ್ಧಾಂತ’ ಮಂಡಿಸಿದ. ಆದರೆ ಹೈಗನ್ಸ್‌  (1628-1695) 1678 ರಲ್ಲಿ ಸಾದರಪಡಿಸಿದ “ತರಂಗ ಸಿದ್ಧಾಂತ’ದ ಎದುರು ಅದು ಸೋಲೊಪ್ಪುವಂತಾಯಿತು. ಹೈಗನ್ಸ್‌ ಸಿದ್ಧಾಂತ ಕೂಡ ಪ್ರಶ್ನಾತೀತವಾಗಲಿಲ್ಲ. ಕಂಡೇ ಕಂಡಿತು ಸುಧಾರಣೆ. 

ಕಡೆಗೆ(ಸದ್ಯಕ್ಕೆ!) ಉಪಸಂಹಾರವಿಷ್ಟು. ಬೆಳಕಿಗೆ ಯಾವ ಮಾಧ್ಯಮದ ಹಂಗೂ ಬೇಕಿಲ್ಲ. ಹೇಳಿ ಕೇಳಿ ಅದು “ಕಣಲೆ’-ಕಣ ಮತ್ತು ಅಲೆ ಎರಡೂ ಸ್ವಭಾವದ ಅರ್ಧನಾರೀಶ್ವರ!. ಬಂದೇ ಬಂತು “ಕ್ವಾಂಟಂ ಸಿದ್ಧಾಂತ’. ಗೆಲಿಲಿಯೊ(1564-1642)ನಿಂದ ಐನ್‌ ಸ್ಟೀನ್‌ವರೆಗೆ ಚಲನೆಗೆ ಸಂಬಂಧಿಸಿದ ಸಾಪೇಕ್ಷತಾ ವಾದ ಪರಿಷ್ಕೃತವಾಗುತ್ತಲೇ ಬಂತು. ಸಮವೇಗದಲ್ಲಿ ಒಂದೇ ದಿಕ್ಕಿನಲ್ಲಿ ಚಲಿಸುವ ಕಾಯದಲ್ಲಿ ಕುಳಿತಿರುವವನಿಗೆ ತನ್ನ ಚಲನೆಯ ಪರಿವೆಯೇ ಆಗದು ಎಂದ ಗೆಲಿಲಿಯೊ. ಸರ್‌ ಐಸಾಕ್‌ ನ್ಯೂಟನ್‌ ಹಾಗೇಕೆಂದು ವಿವರಿಸಿದ್ದಲ್ಲದೆ ಚಲನೆಯ ಮೂರು ನಿಯಮಗಳನ್ನು ಆವಿಷ್ಕರಿಸಿದ. ಐನ್‌ಸ್ಟಿನ್‌(1879-1955) ನ್ಯೂಟನ್ನನ ಚಲನೆಯ ನಿಯಮಗಳು ಸೀಮಿತ ವೇಗಕ್ಕೆ ಮಾತ್ರ ಅನ್ವಯವೆಂದರು.

ಗುರುತ್ವಾಕರ್ಷಣದ ಕಾರ್ಯ ಹೇಗೆನ್ನುವುದು ನ್ಯೂಟನ್‌ಗೆ ತಿಳಿದಿರಲಿಲ್ಲ. ಐನ್‌ಸ್ಟಿàನ್‌ ಗುರುತ್ವಾಕರ್ಷಣ ವಿದ್ಯಮಾನವನ್ನು ಸಂಪೂರ್ಣವಾಗಿ ಬೇರೆಯದೆ ಬಗೆಯಲ್ಲಿ ಕಂಡರು. ಅದು ದ್ರವ್ಯರಾಶಿ ಸ್ಥಳದ ಮೇಲುಂ ಟುಮಾಡುವ ಪರಿಣಾಮ ಅಂತ ನಿರ್ವಚಿಸಿದರು. ನ್ಯೂಟನ್‌ ಬೆಳಕಿನ ವೇಗ ಸಾಪೇಕ್ಷ ಎಂದ. ಐನ್‌ ಸ್ಟೀನ್‌ ಇಲ್ಲ ಅದು ನಿರಪೇಕ್ಷ, ಬೆಳಕಿಗಿಂತಲೂ ವೇಗವಾಗಿ ಪಯಣಿಸುವುದು ಬೆಳಕು ಮಾತ್ರವೇ ಎಂದರು. 

ಸ್ವಾರಸ್ಯ ಗಮನಿಸಿ. ಗೆಲಿಲಿಯೊ ಕಾಲವಶನಾದ ಮರುವರ್ಷವೇ ನ್ಯೂಟನ್‌ ಜನನ. ಆದರೆ ನ್ಯೂಟನ್‌ ಐನ್‌ಸ್ಟಿàನ್‌ರ ನಡುವೆ 236 ವರ್ಷಗಳ ಅಂತರವೆನ್ನಿ. ಈ ಮೂವರೂ ದಿಗ್ಗಜರೆ. ಅರಿವಿನ ತೇರನ್ನು ಎಳೆದವರು. ವಿಜ್ಞಾನ ವಲಯ ಅನುಕ್ರಮವಾಗಿ ಗೆಲಿಲಿಯೊ, ನ್ಯೂಟನ್‌, ಐನ್‌ಸ್ಟಿನ್‌ ಅವರನ್ನು ಸಾಪೇಕ್ಷತಾ ಸಿದ್ಧಾಂತದ ಅಜ್ಜ, ಹಿತಪೋಷಕ, ತಂದೆ ಎಂದು ಆದರಣೀಯ  ವಾಗಿ ಗೌರವಿಸುತ್ತದೆ. ಅಮೆರಿಕದ ಪ್ರಖ್ಯಾತ ಕವಯಿತ್ರಿ ಸಿ. ಜಾಯ್‌ ಬೆಲ್‌ ಹೇಳುವ ಚೆನ್ನುಡಿಯಿದು; “”ಪರಿಷ್ಕರಣೆಗೆ ಹೆದರ ಬಾರದು. ನಾವಿರುವ ಕೊಳವೇನೊ ಸುರಕ್ಷಿತವಾಗಿದೆ. ಆದರೆ
ಅದರಿಂದಾಚೆಗೆ ಹೋಗಲೆತ್ನಿಸದಿದ್ದರೆ ನದಿ, ಸರೋವರ, ಸಮುದ್ರವಿರುವುದೇ ನಮಗೆ ತಿಳಿಯುವುದಿಲ್ಲ. ಇಂದು ಹೇಗೂ ಉತ್ತಮವಾಗಿದೆಯಲ್ಲ ಎನ್ನುವ ತೃಪ್ತಿಯೇ ಮತ್ತೂ ಉತ್ತಮ ವಾದವನ್ನು ಪಡೆಯಲು ಅಡ್ಡಿಯಾಗಬಹುದು.” ಸಿಂಹಾವಲೋಕನ ಎನ್ನುವುದೊಂದಿದೆ. ಕಾಲಪುರುಷ ಬಲು ನಿಷ್ಪಕ್ಷಪಾತಿ, ಪರಿಪೂರ್ಣ ಪರ. ನೈತಿಕ, ಬೌದ್ಧಿಕ ವ್ಯತ್ಯಯಗಳತ್ತ ಸರ್ವದಾ ಕಣ್ಣಿಟ್ಟಿರುತ್ತಾನೆ! ಸುಧಾರಣೆಯನ್ನಂತು ಮೆಚ್ಚುತ್ತಾನೆ.

ತಮಗೆ ಪ್ರದಾನವಾದ ಇಂಥ ಪುರಸ್ಕಾರದಿಂದ ತಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ಪ್ರಶಸ್ತಿ ಪಡೆದವರು ಉದ್ಗರಿಸುವುದಿದೆ. ಆದರೆ ಇದು ಕೇವಲ ಶಿಷ್ಟಾಚಾರವಾಗದೆ ಮತ್ತಷ್ಟು ಬದ್ಧತೆ ಯಿಂದ ಅವರು ತಂತಮ್ಮ ಸಾಧನಾ ಕ್ಷೇತ್ರದಲ್ಲಿ ತೊಡಗುವುದು ಆದರ್ಶ. ಅಂದಹಾಗೆ ಪ್ರಶಸ್ತಿಗಳು ಒಂದೆಡೆ ಏಕಾದರೂ ಮಡುಗಟ್ಟಬೇಕೊ ಅರ್ಥವಾಗದು! ಸಂದವರಿಗೇನೆ ಮತ್ತೆ ಮತ್ತೆ ಯಾವುದಾದರೊಂದು ಪುರಸ್ಕಾರಗಳು ಪ್ರಾಪ್ತವಾಗುವುದು ಯುಕ್ತವೆ? ಇದು ಇತರರಲ್ಲಿ ಹತಾಶೆ, ಕೀಳರಿಮೆ ಮೂಡುವುದು ಸ್ಪಷ್ಟ. ಅದರಲ್ಲೂ ವಿಶೇಷವಾಗಿ ಉದಯೋನ್ಮುಖರು ಉತ್ತೇಜನ ವಂಚಿತರಾಗುತ್ತಾರೆ. 

ಅಯ್ಯೊ ನನಗೆ ಈಗಾಗಲೇ ಸಾಕಷ್ಟು ಗೌರವಗಳು ದೊರೆತಿವೆ, ಜನ ಬೆನ್ನು ತಟ್ಟಿದ್ದಾರೆ. ಉಳಿದ ಸಾಧಕರನ್ನೂ ಗಮನಿಸಿ ಎನ್ನುವ ಅಂಬೋಣ ಮೇಲಿಂದ ಮೇಲೆ ಸತ್ಕರಿಸ್ಪಟ್ಟವ ರಿಂದ ಸಮಾಜ ನಿರೀಕ್ಷಿಸಬಹುದು ತಾನೇ? ನಲವತ್ನಾಲ್ಕು ವರ್ಷ ಗಳ ಹಿಂದಿನ ಸಂಗತಿ. ಆ ಸಂಜೆ
ದೊಡ್ಡಬಳ್ಳಾಪುರದ ಪುರಭವನದಲ್ಲಿ ಪುಟ್ಟಣ್ಣ ಕಣಗಾಲರಿ ಗೊಂದು ಅದ್ದೂರಿ ಸನ್ಮಾನ ಏರ್ಪಟ್ಟಿತ್ತು. ಕೆಲ ದಿನಗಳಿಂದ ವೃತ್ತಿ ನಾಟಕ ಕಂಪೆನಿಯೊಂದು ಅಲ್ಲಿ ಬಿಡಾರ ಹೂಡಿತ್ತು. ಕಣಗಾಲರಿಗೆ ಶಾಲು ಹೊದಿಸಿ, ನೋಟುಗಳ ಹಾರ ಹಾಕಲಾ ಯಿತು. ದಿಢೀರನೆ ಪಾತ್ರಧಾರಿಯೊಬ್ಬರು ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮನ್ನು, ತಮ್ಮ ತಂಡದವರನ್ನು ಪರಿಚಯಿಸಿಕೊಂಡರು. ನೋಡಿ, ನೀವಿಷ್ಟೂ ಮಂದಿ ಬೇಡ, ಅರ್ಧದಷ್ಟು ನನ್ನ  ನಾಟಕಕ್ಕೆ ಬಂದುಬಿಟ್ಟರೆ ನನಗದೇ ಸಾಕು ಎಂದರು. ಪುಟ್ಟಣ್ಣ ನವರು ಭಾವುಕರಾದರು. ಅವರ ಕೊರಳಿನಲ್ಲಿದ ನೋಟಿನ ಹಾರ ಆ ಪಾತ್ರಧಾರಿಯ ಕೊರಳಿಗೇರಿತ್ತು!

 *ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next