Advertisement

ಸ್ವಚ್ಛ ಪುತ್ತೂರು ನಿರ್ಮಾಣಕ್ಕೆ  ಸರ್ವ ಪ್ರಯತ್ನ

11:38 AM Dec 13, 2018 | Team Udayavani |

ನಗರ: ಬಗೆದಷ್ಟು ಹೊರಗೆ ಬರುತ್ತಿರುವ ತ್ಯಾಜ್ಯಗಳ ರಾಶಿಗೆ ಮುಕ್ತಿ ನೀಡುವುದು ಸವಾಲೇ ಸರಿ. ಸ್ವಚ್ಛತಾ ಕಾರ್ಯಕ್ರಮ, ತ್ಯಾಜ್ಯ ವಿಲೇವಾರಿ ಹೊರತುಪಡಿಸಿ, ಸಾರ್ವಜನಿಕರು ಜಾಗೃತರಾಗದೇ ಹೋದರೆ ಸ್ವಚ್ಛ ಪುತ್ತೂರು ಕನ್ನಡಿಯೊಳಗಿನ ಗಂಟಾದೀತು.

Advertisement

ಕೆಲ ಸಮಯಗಳ ಹಿಂದೆ ಪುತ್ತೂರು ಪೇಟೆಯ ಹಲವು ಕಡೆಗಳಲ್ಲಿ ತ್ಯಾಜ್ಯಗಳ ರಾಶಿಯೇ ಕಂಡುಬರುತ್ತಿತ್ತು. ಆಗಿನ ಸ್ಥಳೀಯಾಡಳಿತ ತ್ಯಾಜ್ಯ ಸಂಗ್ರಹಕ್ಕಾಗಿ ಅಲ್ಲಲ್ಲಿ ಇಟ್ಟಿದ್ದ ಡಬ್ಬಗಳು ತುಂಬಿ ತುಳುಕುತ್ತಿದ್ದವು. ಇದರ ವಿಲೇವಾರಿಗೆ ಏನೆಲ್ಲ ಕಸರತ್ತು ನಡೆಸಿದರೂ ಯಾವೊಂದು ಕೆಲಸವೂ ಫಲಪ್ರದವಾಗಲಿಲ್ಲ. ಕೊನೆಗೆ ತ್ಯಾಜ್ಯ ಡಬ್ಬಗಳನ್ನೇ ತೆಗೆದು ಬದಿಗಿರಿಸಲಾಯಿತು. ಡಬ್ಬ ಇಲ್ಲದಿದ್ದರೂ ತ್ಯಾಜ್ಯ ಎಸೆದು ರೂಢಿಯಾಗಿದ್ದ ಜನರು ಮತ್ತೆ ಅಲ್ಲಿಯೇ ತ್ಯಾಜ್ಯ ಸುರಿಯಲಾರಂಭಿಸಿದರು. ಇದನ್ನು ತಡೆಗಟ್ಟಲು ಎಚ್ಚರಿಕೆ ಫಲಕ ಹಾಕುವುದು ಅನಿವಾರ್ಯವಾಯಿತು.

ಸೂಚನೆ ಕೊಟ್ಟರೂ ಕ್ಯಾರೇ ಇಲ್ಲ
ಸದ್ಯದ ಪರಿಸ್ಥಿತಿಯಲ್ಲಿ ಪುತ್ತೂರು ಪೇಟೆಯ ಅಲ್ಲಲ್ಲಿ ಎಚ್ಚರಿಕೆ ಫಲಕಗಳು ರಾರಾಜಿಸುತ್ತಿವೆ. ಆದರೆ ತ್ಯಾಜ್ಯ ರಾಶಿ ಹಾಕುವ ಪ್ರಸಂಗ ಹೆಚ್ಚುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲು ಮನೆ, ಅಂಗಡಿ ಬಾಗಿಲಿನಿಂದ ತ್ಯಾಜ್ಯ ಸಂಗ್ರಹಿಸುವ ಪ್ರಕ್ರಿಯೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ.

ದಿನ ಬಿಟ್ಟು ದಿನ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ತ್ಯಾಜ್ಯ ವಿಂಗಡಣೆಗಾಗಿ ತಂದಿರಿಸಿದ ಬಕೆಟ್‌ಗಳನ್ನು ಎಲ್ಲ ಮನೆಗಳಿಗೆ ಹಂಚುವ ಕೆಲಸ ಇನ್ನೂ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ.

ಕೆಲ ವಾರ್ಡ್‌ಗಳಲ್ಲಿ ತ್ಯಾಜ್ಯ ಸಮಸ್ಯೆ ಹೆಚ್ಚುತ್ತಿದ್ದಂತೆ, ಸ್ಥಳೀಯ ವಾರ್ಡ್‌ ಸದಸ್ಯರಿಗೆ ದೂರು ನೀಡಿದ್ದಾರೆ. ತತ್‌ ಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ, ನೇರವಾಗಿ ತ್ಯಾಜ್ಯ ವಿಂಗಡಣೆಯ ಬಕೆಟ್‌ ಹಸ್ತಾಂತರಿಸುವ ಕೆಲಸ ನಡೆದಿದೆ. ಇನ್ನೂ ಕೆಲ ವಾರ್ಡ್‌ಗಳಲ್ಲಿ ಇದನ್ನೇ ಅನುಕರಿಸಲಾಗಿದೆ. ಅಂದರೆ ವಾರ್ಡ್‌ ಸದಸ್ಯರೇ ಮುಂದಾಗಿ ಬಕೆಟ್‌ಗಳನ್ನು ವಿತರಿಸುತ್ತಿರುವುದು ಕಂಡುಬರುತ್ತಿದೆ.

Advertisement

ನಾಗರಿಕರಿಗೆ ಹಂಚಲೆಂದು ಪುತ್ತೂರು ನಗರಸಭೆ ತಂದಿರಿಸಿದ 11 ಸಾವಿರ ಬಕೆಟ್‌ ಗಳ ಪೈಕಿ 6 ಸಾವಿರದಷ್ಟು ಬಕೆಟ್‌ಗಳನ್ನು ವಿತರಿಸಲಾಗಿದೆ. ಉಳಿದ ಬಕೆಟ್‌ಗಳು ಗೋದಾಮಿನಲ್ಲೇ ರಾಶಿ ಬಿದ್ದುಕೊಂಡಿವೆ.

ನಾಗರಿಕರು ಎಚ್ಚೆತ್ತುಕೊಳ್ಳಿ
ಮನೆ ಹಾಗೂ ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ ಮಾತ್ರಕ್ಕೆ ಪುತ್ತೂರು ಸ್ವಚ್ಛ ಆಗುತ್ತದೆ ಎಂದು ಭಾವಿಸಿದರೆ ತಪ್ಪಾದೀತು. ಯಾಕೆಂದರೆ ಪುತ್ತೂರಿನ ಅಲ್ಲಲ್ಲಿ ಕಾಣಸಿಗುವ ತ್ಯಾಜ್ಯಕ್ಕೆ ನಾಗರಿಕರು ಕಾರಣ. ಅಲ್ಲಲ್ಲಿ ತ್ಯಾಜ್ಯ ಎಸೆಯುತ್ತಿರುವುದು, ಶುಚಿತ್ವಕ್ಕೆ ಗಮನ ಕೊಡದೇ ಇರುವುದು ಇತ್ಯಾದಿ. ಇದರಿಂದಾಗಿ ದಿನನಿತ್ಯ ಎಲ್ಲೆಂದರಲ್ಲಿ ತ್ಯಾಜ್ಯ ಕಾಣಸಿಗುತ್ತದೆ. ಇದಕ್ಕೆ ಪೂರ್ಣವಿರಾಮ ಹಾಕಬೇಕಾದರೆ ಸ್ವತಃ ಜನರಿಗೇ ಅರಿವು ಮೂಡಬೇಕಷ್ಟೇ.

ಎಸೆಯುವುದು ಕಡಿಮೆಯಾಗಿಲ್ಲ
ಪೇಟೆಯ ಆಯಕಟ್ಟಿನ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವ ಪ್ರಕರಣಗಳು ನಡೆಯುತ್ತಿವೆ. ಪುತ್ತೂರು- ಉಪ್ಪಿನಂಗಡಿ ರಸ್ತೆ, ಪುತ್ತೂರು ಮುಖ್ಯರಸ್ತೆಯ ಅಲ್ಲಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದೆ. ಇಂತಹ ವಾತಾವರಣ ದೂರ ಆಗಬೇಕಿದೆ.

ಉಳಿದ ಬಕೆಟ್‌ ವಿತರಿಸುತ್ತೇವೆ
ತ್ಯಾಜ್ಯ ವಿಲೇವಾರಿ ನಡೆಯುತ್ತಿದೆ. ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ಕಸ ವಿಂಗಡಣೆ ಮಾಡಿ ಕೊಡಲು ಈಗಾಗಲೇ ಸುಮಾರು 6 ಸಾವಿರದಷ್ಟು ಬಕೆಟ್‌ಗಳನ್ನು ವಿತರಿಸಲಾಗಿದೆ. ಉಳಿದದ್ದನ್ನು ವಿತರಿಸುತ್ತೇವೆ.
– ರೂಪಾ ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next