Advertisement

ಎಲ್ಲ ಸಾಲವೂ ಮನ್ನಾ, ರಾಷ್ಟ್ರೀಕೃತ ಬ್ಯಾಂಕ್‌ ಸಾಲವೂ ಮಾಫಿ

06:00 AM Aug 25, 2018 | |

ಬೆಂಗಳೂರು: ಈಗಾಗಲೇ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಒಂದು ಲಕ್ಷ ರೂ.ವರೆಗಿನ ಸಾಲಮನ್ನಾ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ಇದೀಗ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ರೈತರು ಮಾಡಿರುವ ಎನ್‌ಪಿಎ, ಸುಸ್ತಿ ಮತ್ತು ಮರು ಹೊಂದಾಣಿಕೆ ಮಾಡಿರುವ 2ಲಕ್ಷ ರೂ.ವರೆಗಿನ ಸಾಲಮನ್ನಾ ಕುರಿತು ಆದೇಶ ಹೊರಡಿಸಿದೆ.

Advertisement

ಅಲ್ಲದೆ, ರೈತರು ಹಾಗೂ ಕೃಷಿ ಕಾರ್ಮಿಕರನ್ನು ಖಾಸಗಿ ಸಾಲಗಳಿಂದಲೂ ಮುಕ್ತಗೊಳಿಸಲು ಮುಂದಾಗಿರುವ ಸರ್ಕಾರ ಅದಕ್ಕಾಗಿ “ಋಣ ಪರಿಹಾರ ಅಧಿನಿಯಮ 2018′ ಕುರಿತು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ. ಈ ಹಿಂದೆ 1976 ಮತ್ತು 1980ರಲ್ಲಿ ಋಣ ಪರಿಹಾರ ಅಧಿನಿಯಮ ಜಾರಿಗೆ ತರಲಾಗಿತ್ತು.

ಈ ಎರಡು ವಿಚಾರಗಳ ಕುರಿತಂತೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎರಡು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ಬಗ್ಗೆ ಮಾಹಿತಿ ನೀಡಿದರು.

ರೈತರ ಸಾಲ ಮನ್ನಾ:
ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ 2ಲಕ್ಷ ರೂ.ವರೆಗಿನ ಎನ್‌ಪಿಎ ಸಾಲ, ಸುಸ್ತಿ ಸಾಲ ಮತ್ತು ಮರು ಹೊಂದಾಣಿಕೆ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡುವ ಕುರಿತು ಸಂಪುಟ ತೀರ್ಮಾನ ಕೈಗೊಂಡು ಈ ಆದೇಶ ಹೊರಡಿಸಲಾಗಿದೆ. ಸಾಲಮನ್ನಾ ಯೋಜನೆಯ ಪ್ರಕ್ರಿಯೆಗಳನ್ನು ಮುಂದುವರಿಸಲು ಇಬ್ಬರು ಐಎಎಸ್‌ ಅಧಿಕಾರಿಗಳನ್ನೊಳಗೊಂಡ ನೋಡಲ್‌ ಸಮಿತಿ ರಚಿಸಲಾಗಿದೆ. ಈ ಸಮಿತಿ ಬ್ಯಾಂಕ್‌ಗಳೊಂದಿಗೆ ಸಂಪರ್ಕ ಹೊಂದಿ ಸಾಲಮನ್ನಾದ ಅನುಕೂಲ ನೇರವಾಗಿ ರೈತರಿಗೆ ತಲುಪುವಂತೆ ಮಾಡಲಿದೆ. ಇದರ ಜತೆಗೆ ಚಾಲ್ತಿ ಸಾಲದ ಪೈಕಿ 25 ಸಾವಿರ ರೂ. ಮನ್ನಾ ಮಾಡಲಾಗುತ್ತದೆ. ಈ ಮೊತ್ತವನ್ನು ರೈತರ ಸಾಲದ ಖಾತೆಗೆ ಸರ್ಕಾರ ಜಮಾ ಮಾಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಆರಂಭದಲ್ಲಿ ಸಾಲ ಮನ್ನಾಕ್ಕೆ ಪೂರಕವಾಗಿ ಸ್ಪಂದಿಸಿದ್ದ ಬ್ಯಾಂಕ್‌ಗಳು ನಂತರ ಬಡ್ಡಿ ರಿಯಾಯಿತಿ ನೀಡಲು ಹಿಂದೆ ಸರಿದವು. ಆದರೆ, ಸಾಲ ಮನ್ನಾದ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಸರ್ಕಾರದಿಂದ ಪಡೆಯಲು ಒಪ್ಪಿಗೆ ನೀಡಿವೆ. ಇದರಿಂದಾಗಿ ಸುಮಾರು 23.17 ಲಕ್ಷ ರೈತರ 30163 ಕೋಟಿ ರೂ. ಸಾಲಮನ್ನಾ ಆಗಲಿದೆ. ತಕ್ಷಣದಿಂದಲೇ ರೈತರು ಋಣಮುಕ್ತರಾಗಲಿದ್ದು, ಅವರಿಗೆ ಋಣಮುಕ್ತ ಪತ್ರವನ್ನೂ ಬ್ಯಾಂಕ್‌ಗಳಿಂದ ನೀಡಲಾಗುವುದು. ನಂತರ ಹೊಸ ಸಾಲ ಪಡೆಯಲು ಅವರು ಅರ್ಹರಾಗಿರುತ್ತಾರೆ ಎಂದರು.

Advertisement

ಬ್ಯಾಂಕ್‌ಗಳಿಗೆ ನಾಲ್ಕು ಕಂತುಗಳಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ ಸಾಲ ಮನ್ನಾದ ಮೊತ್ತವನ್ನು ಪಾವತಿಸಲಾಗುತ್ತದೆ. 2018 19ನೇ ಸಾಲಿನಲ್ಲಿ 6,500 ಕೋಟಿ ರೂ., 2019 20ನೇ ಸಾಲಿನಲ್ಲಿ 8,656 ಕೋಟಿ ರೂ., 2020 21ನೇ ಸಾಲಿನಲ್ಲಿ 7,876 ಕೋಟಿ ರೂ., 2021 22ನೇ ಸಾಲಿನಲ್ಲಿ 7,121 ಕೋಟಿ ರೂ. ಬ್ಯಾಂಕ್‌ಗಳಿಗೆ ನೀಡಲಾಗುವುದು. ಈ ವಿಚಾರವನ್ನೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

ಋಣ ಪರಿಹಾರ ಅಧಿನಿಯಮ
ರಾಜ್ಯದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಖಾಸಗಿಯವರಿಂದಲೂ ಸಾಲ ಮಾಡಿದ್ದು, ಅವರನ್ನು ಋಣಮುಕ್ತಗೊಳಿಸುವ ಸಲುವಾಗಿ ಋಣ ಪರಿಹಾರ ಅಧಿನಿಯಮ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಅದಕ್ಕಾಗಿ ಅಧಿನಿಯಮವನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು. ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಅಧಿನಿಯಮ ಜಾರಿಯಾಗಲಿದ್ದು, ಇದರಿಂದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರದಿರುವ ಭೂ ರಹಿತ ಕೃಷಿ ಕಾರ್ಮಿಕರು, ಸಣ್ಣ ರೈತರು ಹಾಗೂ ದುರ್ಬಲ ವರ್ಗದ ವ್ಯಕ್ತಿಗಳು ಖಾಸಗಿಯವರಿಂದ ಪಡೆದಿರುವ ಸಾಲಗಳಿಂದ ಮುಕ್ತರಾಗಲಿದ್ದಾರೆ. ಒಂದೊಮ್ಮೆ ಖಾಸಗಿಯವರು ಬಲವಂತವಾಗಿ ಸಾಲ ವಸೂಲಿ ಮಾಡಲು ಮುಂದಾದರೆ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅಧಿನಿಯಮದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ರೈತರ ಸಾಲ ಮನ್ನಾಕ್ಕೆ ಬ್ಯಾಂಕ್‌ಗಳು ಒಪ್ಪಿದ್ದರೂ ನಂತರದಲ್ಲಿ ಬಡ್ಡಿ ರಿಯಾಯಿತಿ ಸಾಧ್ಯವಿಲ್ಲ ಎಂದು ಹೇಳಿವೆ. ಈ ಹಿನ್ನೆಲೆಯಲ್ಲಿ ಬಡ್ಡಿ ಸಹಿತ 30163 ಕೋಟಿ ರೂ. ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಬ್ಯಾಂಕ್‌ಗಳಿಗೆ ಪಾವತಿಸಲಾಗುವುದು.
 - ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

2 ಸಾವಿರ ಕೋಟಿ ರೂ. ಪರಿಹಾರಕ್ಕೆ ಪ್ರಧಾನಿಗೆ ಪತ್ರ
ಬೆಂಗಳೂರು:
ಕೊಡಗಿನಲ್ಲಿ ಉಂಟಾದ ಭಾರಿ ಪ್ರವಾಹದಿಂದ ಅಂದಾಜು 3 ಸಾವಿರ ಕೋಟಿ ರೂಪಾಯಿ ನಷ್ಟವುಂಟಾಗಿದ್ದು, ಮಧ್ಯಂತರ ಪರಿಹಾರವಾಗಿ ಕೇಂದ್ರ ಸರ್ಕಾರ 2 ಸಾವಿರ ಕೋಟಿ ನೀಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಂಕಷ್ಟಕ್ಕೀಡಾದ ಜನರ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯದ ಬಗ್ಗೆ ದೂರವಾಣಿ ಮೂಲಕ ಮಾಹಿತಿ ಪಡೆದು ಅಗತ್ಯ ಧನ ಸಹಾಯ ಮಾಡುವ ಭರವಸೆ ನೀಡಿರುವುದಕ್ಕೆ ಪ್ರಧಾನಿಗೆ ಪತ್ರದ ಮೂಲಕ ಧನ್ಯವಾದ ಅರ್ಪಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಕೊಡಗು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಕೆಲವು ಭಾಗದಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಸಾಕಷ್ಟು ಹಾನಿಯುಂಟಾಗಿದ್ದು, ಭೂ ಕುಸಿತದಿಂದ ನದಿಗಳು, ರಸ್ತೆಗಳ ಚಿತ್ರಣವೇ ಬದಲಾಗಿದ್ದು, ಈ ದುರಂತದಲ್ಲಿ 17 ಜನ ಜೀವ ಕಳೆದುಕೊಂಡಿದ್ದು, ಆಗಸ್ಟ್‌ 14 ರಿಂದ 22 ರ ವರೆಗೆ ಸುರಿದ ಮಳೆಗೆ 2,200 ಮನೆಗಳು ಸಂಪೂರ್ಣ ನಾಶವಾಗಿವೆ.

ಈಗ ಆಗಿರುವ ಪ್ರಕೃತಿ ವಿಕೋಪದಿಂದ ಸಂತ್ರಸ್ಥರಾಗಿರುವ ಜನರಿಗೆ ಅಗತ್ಯ ಪರಿಹಾರ ನೀಡಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಮಹಾಮಳೆಯಿಂದ ನಿರಾಶ್ರಿತರಾಗಿರುವ 4500 ಜನರನ್ನು ರಕ್ಷಿಸಿ, 53 ಪರಿಹಾರ ಕೇಂದ್ರಗಳಲ್ಲಿ 7500 ಜನರಿಗೆ ಆಶ್ರಯ ನೀಡಲಾಗಿದೆ. ನಿರಾಶ್ರಿತರಿಗೆ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ ಸೇರಿದಂತೆ ಇತರ ವಸ್ತುಗಳನ್ನು 50 ಸಾವಿರ ಪ್ಯಾಕೆಟ್‌ಗಳಲ್ಲಿ ವಿತರಿಸಲಾಗಿದೆ.

ಧೈರ್ಯಶಾಲಿಗಳಾದ ಕೊಡಗು ಜನರು ಮತ್ತೆ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಆದರೆ, ಕೊಡಗಿನಲ್ಲಿ ಆಗಿರುವ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಯ ನಷ್ಟ ಮತ್ತು ಮೂಲ ಸೌಕರ್ಯ ಕಲ್ಪಿಸಲು ಕೇಂದ್ರದಿಂದ ಅನುದಾನದ ಅಗತ್ಯವಿದೆ. ರಾಜ್ಯ ಸರ್ಕಾರ ತಕ್ಷಣಕ್ಕೆ ಮನೆ ಕಳೆದುಕೊಂಡ ಹತ್ತು ಸಾವಿರ ಜನರಿಗೆ ತಾತ್ಕಾಲಿಕ ಸೆಡ್‌ಗಳನ್ನು ನಿರ್ಮಿಸಿಕೊಡಲಾಗುತ್ತಿದೆ.

ಆದರೆ, ಶಾಶ್ವತ ಪರಿಹಾರ ಕಲ್ಪಿಸಿ ಕೊಡಗು ಜಿಲ್ಲೆಯನ್ನು ಪುನರ್‌ ನಿರ್ಮಿಸಲು ಸಾವಿರಾರು ಕೋಟಿ ರೂಪಾಯಿ ಅಗತ್ಯವಿದ್ದು, ಕೇಂದ್ರ ಸರ್ಕಾರ ತಕ್ಷಣಕ್ಕೆ 2 ಸಾವಿರ ಕೋಟಿ ಮಧ್ಯಂತರ ಪರಿಹಾರ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಕೊಡಗಿನಲ್ಲಿ ಆಗಿರುವ ಸಂಪೂರ್ಣ ಹಾನಿಯ ಬಗ್ಗೆ ವಾರದಲ್ಲಿ  ವಿಸ್ತೃತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next