Advertisement

ಅಲೆವೂರು ಗ್ರಾ.ಪಂ.: ಲಾಕ್‌ಡೌನ್‌ ನಡುವೆ ಜಲಸಂರಕ್ಷಣೆ ಕಾರ್ಯ

09:05 PM May 01, 2020 | Sriram |

ಉಡುಪಿ: ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಎಲ್ಲ ಕೆಲಸಗಳು ಸ್ಥಗಿತಗೊಂಡಿದ್ದರೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳನ್ನು ಮುಂದುವರಿಸಲು ಅವಕಾಶ ನೀಡಲಾಗಿತ್ತು. ಇದರ ಲಾಭವನ್ನೆತ್ತುವಲ್ಲಿ ಅಲೆವೂರು ಗ್ರಾ.ಪಂ. ಯಶಸ್ವಿಯಾಗಿದೆ. ಇದು ಪಡೆದು ಕೆರೆಗಳ ಪುನಶ್ಚೇತನ ಮತ್ತು ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಮುಂಗಾರು ಮಳೆಯ ನೀರಿನ ಸಂಗ್ರಹಕ್ಕೆ ಸಕಲ ತಯಾರಿ ಮಾಡಿದೆ.

Advertisement

ಅಲೆವೂರು ಗ್ರಾ.ಪಂ.ವ್ಯಾಪ್ತಿಯ ಕೋಡಿ ಪ್ರದೇಶದಲ್ಲಿ 15 ವರ್ಷಗಳಿಂದ ಮುಚ್ಚಿದ ರೀತಿ ಇರುವ 93 ಸೆಂಟ್ಸ್‌ ಕೋಡಿ ಮದಗ ಪುನಶ್ಚೇತನಕ್ಕೆ ಗ್ರಾ.ಪಂ. ಮುಂದಾಗಿದೆ. ನರೇಗಾ ಯೋಜನೆಯಲ್ಲಿ ಮದಗದ ಹೂಳು ತೆಗೆಯಲು 1.5 ಲಕ್ಷ ರೂ. ಮೊತ್ತವನ್ನು ಮೀಸಲಿರಿಸಲಾಗಿದೆ. ಎ.24ರಂದು ಅಲೆವೂರು ಗ್ರಾ.ಪಂ.ಅಧ್ಯಕ್ಷ ಶ್ರೀಕಾಂತ್‌ ನಾಯಕ್‌ ಕಾಮಗಾರಿಗೆ ಚಾಲನೆ ನೀಡಿದ್ದರು. ಕೋವಿಡ್ 19 ಮುನ್ನೆಚ್ಚರಿಕೆ ಪ್ರಕಾರ ಇಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಕೆಲಸ ಮಾಡುವವರು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಮಾಸ್ಕ್ ಧರಿಸಿ ಕೆಲಸ ಮಾಡುತ್ತಿದ್ದಾರೆ.

ಉದ್ಯೋಗ ಲಭ್ಯತೆ,
ಅಂತರ್ಜಲ ಮಟ್ಟ ವೃದ್ಧಿ
ಬೇರೆ ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಉದ್ಯೋಗ ಚೀಟಿ ಹೊಂದಿದವರು ಸಾಮೂಹಿಕ ಕೂಲಿ ಕೆಲಸಕ್ಕಿಂತ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಇದಕ್ಕೆ ಅಲೆವೂರು ಗ್ರಾ.ಪಂ.ಭಿನ್ನವಾಗಿದೆ. ಲಾಕ್‌ಡೌನ್‌ನಿಂದ ಸ್ಥಳೀಯರು ಮನೆಯಲ್ಲಿ ಬಿಡುವಿನಲ್ಲಿದ್ದು, ಸಾರ್ವಜನಿಕ ಕೋಡಿ ಕೆರೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ. 20 ಮಂದಿ ಉದ್ಯೋಗ ಚೀಟಿ ಹೊಂದಿದ್ದವರು ಕೋಡಿ ಮದಗದ ಹೂಳು ತೆಗೆಯಲು ಶ್ರಮಿಸುತ್ತಿದ್ದಾರೆ. ಇವರೊಂದಿಗೆ ಕೆಲ ಸ್ವಯಂಸೇವಕರೂ ಕೈ ಜೋಡಿಸಿದ್ದಾರೆ. ಸಂಜೆ 3 ರಿಂದ 9 ಗಂಟೆಯವರೆಗೆ ಜನರು ಹೂಳೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ರಾತ್ರಿ ಗ್ಯಾಸ್‌ ಲೈಟ್‌ ಬೆಳಕಿನಲ್ಲಿ ಶ್ರಮಿಸುತ್ತಿದ್ದಾರೆ.

ಪುನಶ್ಚೇತನ ಅಗತ್ಯ
ಅಲೆವೂರು ಗ್ರಾ.ಪಂ.ವ್ಯಾಪ್ತಿಯಲ್ಲಿ 50 ರಿಂದ 60 ಮನೆಗಳಿವೆ. ಹೆಚ್ಚಿನ ಮನೆಗಳಲ್ಲಿ ಬಾವಿ ಇದೆ. ಆದರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಮದಗಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿಯಾಗುವುದರಿಂದ ನೀರಿನ ಸಮಸ್ಯೆಯನ್ನು ತಡೆಯಬಹುದು. ಜತೆಗೆ ಕೃಷಿ ಪ್ರದೇಶಕ್ಕೆ ನೀರನ್ನು ಬಳಸಬಹುದು. ಬಿಡುವಿನಲ್ಲಿರುವ ಸ್ಥಳಿಯರಿಗೆ ಉದ್ಯೋಗ ಕೂಡ ದೊರೆತಂತಾಗಿದೆ.
-ಶ್ರೀಕಾಂತ್‌ ನಾಯಕ್‌, ಅಧ್ಯಕ್ಷರು, ಅಲೆವೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next