Advertisement

ಆಲಮಟ್ಟಿ -ಚಿತ್ರದುರ್ಗ ಹೊಸ ರೈಲ್ವೆ ಮಾರ್ಗ: ಸಂಸದ ಕರಡಿ

05:45 PM Jul 14, 2022 | Team Udayavani |

ಕೊಪ್ಪಳ: ಬಹುಜನರ ಬೇಡಿಕೆ ಯಾಗಿರುವ ಆಲಮಟ್ಟಿ- ಚಿತ್ರದುರ್ಗ ನೇರ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಒಂದೆರಡು ವಾರದಲ್ಲಿ ರೈಲ್ವೆ ಇಲಾಖೆಗೆ ವರದಿ ಸಲ್ಲಿಕೆಯಾಗಲಿದೆ. ಈ ನೂತನ ರೈಲ್ವೆ ಮಾರ್ಗಕ್ಕೆ ಕೊಪ್ಪಳವನ್ನು ಸಹ ಸೇರ್ಪಡೆಗೊಳಿಸಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.

Advertisement

ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ಕಚೇರಿಯಲ್ಲಿ ಬುಧವಾರ ರೈಲ್ವೆ ಇಲಾಖೆ ಪ್ರಮುಖ ಅಧಿ ಕಾರಿಗಳೊಂದಿಗೆ ಜರುಗಿದ ಸಭೆಯ ಬಳಿಕ ಸಂಸದರು ಮಾಹಿತಿ ಬಿಡುಗಡೆ ಮಾಡಿದರು.

ಆಲಮಟ್ಟಿ-ಚಿತ್ರದುರ್ಗ ರೈಲ್ವೆ ಮಾರ್ಗಕ್ಕೆ ಈ ಹಿಂದೆಯೇ ಸರ್ವೇ ಕಾರ್ಯ ಜರುಗಿದೆ. ಆದರೆ ಈ ಸರ್ವೇಯಲ್ಲಿ ಕೊಪ್ಪಳವನ್ನು ಸೇರ್ಪಡೆಗೊಳಿಸಿರಲಿಲ್ಲ. ಇದೀಗ ನಮ್ಮ ಮನವಿಯಂತೆ ಈ ನೂತನ ಮಾರ್ಗಕ್ಕೆ ಕೊಪ್ಪಳವನ್ನು ಸಹ ಸೇರ್ಪಡೆಗೊಳಿಸಿ, ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ. ಒಂದೆರಡು ವಾರದಲ್ಲಿ ಸರ್ವೇ ವರದಿ ಸಲ್ಲಿಕೆಯಾಗಲಿದೆ. ದರೋಜಿ-ಗಂಗಾವತಿ ನೂತನ ರೈಲ್ವೆ ಮಾರ್ಗದ ಸರ್ವೇ ಕಾರ್ಯಕ್ಕೆ ರೈಲ್ವೆ ಇಲಾಖೆ ಈಗಾಗಲೇ ಮಂಜೂರಾತಿ ನೀಡಿದ್ದು, ಐತಿಹಾಸಿಕ ತಾಣಗಳ ಸಂಪರ್ಕ ಹಾಗೂ ಉದ್ಯಮಕ್ಕೆ ಅನುಕೂಲ ವಾಗಲು ಈ ಯೋಜನೆಯನ್ನು ಮಾರ್ಪಡಿಸಿ, ದರೋಜಿ-ಗಂಗಾವತಿ ರೈಲ್ವೆ ಮಾರ್ಗವನ್ನು ಬಾಗಲಕೋಟೆ ಯವರೆಗೂ ವಿಸ್ತರಿಸುವಂತೆ ಮನವಿ ಮಾಡಲಾಯಿತು.

ಇದಕ್ಕೆ ರೈಲ್ವೆ ಇಲಾಖೆ ಮಹಾಪ್ರಬಂಧಕರು ತಾತ್ವಿಕವಾಗಿ ಸಮ್ಮತಿ ಸೂಚಿಸಿದ್ದಾರೆ. ಶೀಘ್ರದಲ್ಲಿ ಈ ಕುರಿತು ಆದೇಶ ಹೊರಬೀಳುವ ಸಾಧ್ಯತೆ ಇದೆ. ಗದಗ-ವಾಡಿ ರೈಲ್ವೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಬರುವ ಜನವರಿ ವೇಳೆಗೆ ತಳಕಲ್‌ನಿಂದ ಲಿಂಗಲಬಂಡಿವರೆಗೆ ರೈಲು ಸಂಚರಿಸಲು ಮಾರ್ಗ ಸಿದ್ಧವಾಗಲಿದೆ ಎಂಬುದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಆದರೆ, ತಳಕಲ್‌ನಿಂದ ಕೇವಲ ಲಿಂಗಲಬಂಡಿವರೆಗೆ ರೈಲು ಸಂಚರಿಸುವ ರೀತಿ ಆಗುವ ಬದಲು ಬರುವ ಫೆಬ್ರವರಿ ವೇಳೆಗೆ ಕನಿಷ್ಟ ತಳಕಲ್‌ನಿಂದ ಕುಷ್ಟಗಿವರೆಗಾದರೂ ರೈಲು ಸಂಚರಿಸುವಂತೆ ಯೋಜನೆ ಕಾರ್ಯಗತಗೊಳಿಸಬೇಕು ಎಂದರು.

Advertisement

ರೈಲ್ವೆ ಇಲಾಖೆ ಅಧಿಕಾರಿಗಳು ಫೆಬ್ರವರಿ ವೇಳೆಗೆ ಕುಷ್ಟಗಿವರೆಗೂ ಮಾರ್ಗ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಮುನಿರಾಬಾದ್‌ -ಮೆಹಬೂಬ್‌ನಗರ ರೈಲ್ವೆ ಮಾರ್ಗದಲ್ಲಿ ರೈಲು ಇದೀಗ ಗಂಗಾವತಿ ಮಾರ್ಗವಾಗಿ ಕಾರಟಗಿವರೆಗೆ ಸಂಚರಿಸಲು ಅನುವಾಗಿದ್ದು, ಬರುವ ಫೆಬ್ರವರಿ ವೇಳೆಗೆ ಸಿಂಧನೂರು ವರೆಗೂ ರೈಲು ಸಂಚರಿಸುವ ರೀತಿ ಕಾಮಗಾರಿ ಪೂರ್ಣಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಗಂಗಾವತಿ-ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲಿಗೆ ಬನ್ನಿಕೊಪ್ಪದಲ್ಲಿ ನಿಲುಗಡೆ ನೀಡುವಂತೆ ಮಾಡಿದ ಮನವಿಗೆ ರೈಲ್ವೆ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ. ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ವಲಯದ ರೈಲ್ವೆ ಮಹಾಪ್ರಬಂಧಕ ಸಂಜೀವ್‌ ಕಿಶೋರ್‌ ಸೇರಿದಂತೆ ರೈಲ್ವೆ ಇಲಾಖೆಯ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next