Advertisement

ಶಶಿಕುಮಾರ್‌ ಪುತ್ರ ಅಕ್ಷಿತ್ ಚೊಚ್ಚಲ ಚಿತ್ರ ‘ಸೀತಾಯಣ’ ಮೇ 27ಕ್ಕೆ ರಿಲೀಸ್‌

12:37 PM May 23, 2022 | Team Udayavani |

ಸ್ಯಾಂಡಲ್‌ವುಡ್‌ನ‌ ಸುಪ್ರೀಂ ಹೀರೋ ಖ್ಯಾತಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಅಭಿನಯದ ಚೊಚ್ಚಲ ಚಿತ್ರ “ಸೀತಾಯಣ’ದ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಇದೇ ಮೇ. 27ಕ್ಕೆ “ಸೀತಾಯಣ’ ತೆರೆಗೆ ಬರುತ್ತಿದ್ದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಏಕಕಾಲಕ್ಕೆ ತೆರೆ ಕಾಣುತ್ತಿದೆ.

Advertisement

ಸದ್ಯ “ಸೀತಾಯಣ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದೆ. ನಟ ರಾಜವರ್ಧನ್‌ “ಸೀತಾಯಣ’ದ ಟ್ರೇಲರ್‌ ಬಿಡುಗಡೆಗೊಳಿಸಿದರು.

ಇದೇ ವೇಳೆ ಮಾತನಾಡಿದ ರಾಜವರ್ಧನ್‌, “ಕೇವಲ ಲವ್‌ಸ್ಟೋರಿ ಮಾತ್ರವಲ್ಲದೆ ಆ್ಯಕ್ಷನ್‌, ಸಸ್ಪೆನ್ಸ್‌-ಥ್ರಿಲ್ಲರ್‌ ಎಲ್ಲ ಎಲಿಮೆಂಟ್ಸ್‌ ಟ್ರೇಲರ್‌ನಲ್ಲಿ ಕಾಣುತ್ತಿದೆ. ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸುವಂತೆ ಟ್ರೇಲರ್‌ ಇದೆ. ಸಿನಿಮಾ ಕೂಡ ಹಾಗೆಯೇ ಥಿಯೇಟರ್‌ನಲ್ಲಿ ಪ್ರೇಕ್ಷಕರ ಮನರಂಜಿಸಿ ಗೆಲ್ಲಲಿ’ ಎಂದು ಚಿತ್ರತಂಡಕ್ಕೆ ಶುಭ ಕೋರಿದರು.

ಚಿತ್ರದ ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ನಟ ಅಕ್ಷಿತ್‌ ಶಶಿಕುಮಾರ್‌, “ಇದರಲ್ಲಿ ನನ್ನದು ಮಧ್ಯಮ ವರ್ಗದ ಹುಡುಗನ ಪಾತ್ರ. ಲವರ್‌ಬಾಯ್‌ ಮತ್ತು ಆ್ಯಕ್ಷನ್‌ ಲುಕ್‌ ಎರಡೂ ನನ್ನ ಪಾತ್ರಕ್ಕಿದೆ. ಮೊದಲ ಸಿನಿಮಾದಲ್ಲೇ ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರುವಂಥ ಪಾತ್ರ ಸಿಕ್ಕಿರುವುದಕ್ಕೆ ಖುಷಿಯಾಗುತ್ತದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥ ಕಥೆ ಮತ್ತು ಪಾತ್ರ ಸಿನಿಮಾದಲ್ಲಿದೆ. ಲವ್‌, ರೊಮ್ಯಾನ್ಸ್‌, ಆ್ಯಕ್ಷನ್‌, ಸಸ್ಪೆನ್ಸ್‌-ಥ್ರಿಲ್ಲರ್‌, ಎಮೋಶನ್ಸ್‌, ಕಾಮಿಡಿ ಎಲ್ಲವೂ ಕಥೆಯಲ್ಲಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು ನಟ ಅಕ್ಷಿತ್‌.

“ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಈ ಸಿನಿಮಾ ಶುರುವಾಗಿತ್ತು. ಆದ್ರೆ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಸಿನಿಮಾ ರಿಲೀಸ್‌ ಆಗೋದಕ್ಕೆ ತಡವಾಯ್ತು. ಸ್ವಲ್ಪ ತಡವಾದರೂ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂಬ ಭರವಸೆಯಲ್ಲಿ ಮೇ. 27ಕ್ಕೆ ಸಿನಿಮಾ ರಿಲೀಸ್‌ ಮಾಡುತ್ತಿದ್ದೇವೆ’ ಎಂಬುದು ಅಕ್ಷಿತ್‌ ಮಾತು.

Advertisement

ಇನ್ನು “ಸೀತಾಯಣ’ ಚಿತ್ರದಲ್ಲಿ ನಾಯಕ ಅಕ್ಷಿತ್‌ ಶಶಿಕುಮಾರ್‌ಗೆ ನಾಯಕಿಯಾಗಿ ಅನಹಿತಾ ಭೂಷಣ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ವಿಕ್ರಂ ಶರ್ಮಾ, ಶರ್ಮಿತಾ ಗೌಡ, ಮಧು ಸೂದನ್‌, ಮೇಘನಾ ಗೌಡ, ಅಜಯ್‌ ಘೋಷ್‌, ಹಿತೇಶ್‌, ವಿಧೆಯುಲೇಖ ರಮನ್‌, ಬಿತ್ರಿಸತ್ತಿ, ಕೃಷ್ಣ ಭಗವಾನ್‌, ಅನಂತ ಬಾಬು, ಗುಂಡು ಸುದರ್ಶನ್‌, ಮಧುಮಣಿ, ಅಪ್ಪರಾವ್‌, ಲೋಬೋ ಮುಂತಾದವರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ವಿಕ್ರಾಂತ್‌ ರೋಣ ಹವಾ ಶುರು; ಇಂದು ಗಡಂಗ್‌ ರಕ್ಕಮ್ಮ… ಹಾಡು ರಿಲೀಸ್‌

“ಸೀತಾಯಣ’ ಚಿತ್ರಕ್ಕೆ ಪ್ರಭಾಕರ್‌ ಆರಿಪ್ಕಾ ನಿರ್ದೇಶನ ಮಾಡುತ್ತಿದ್ದಾರೆ. “ಕಲರ್ ಕ್ಲೌಡ್ಸ್‌ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಲ್ಲಿ ಲಲಿತಾ ರಾಜಲಕ್ಷ್ಮೀ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಸೀತಾಯಣ’ ಚಿತ್ರಕ್ಕೆ ಪದ್ಮನಾಭ್‌ ಭಾರದ್ವಾಜ್‌ ಸಂಗೀತ ಸಂಯೋಜಿಸಿದ್ದು, ಕವಿರಾಜ್‌, ಗೌಸ್‌ಪೀರ್‌ ಸಾಹಿತ್ಯವನ್ನು ರಚಿಸಿದ್ದಾರೆ.

ಚಿತ್ರಕ್ಕೆ ದುರ್ಗಾಪ್ರಸಾದ್‌ ಕೊಳ್ಳಿ ಛಾಯಾಗ್ರಹಣ, ಪ್ರವೀಣ್‌ ಪುಡಿ ಸಂಕಲನವಿದೆ. ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಕ್‌, ಹೈದರಾಬಾದ್‌, ಬ್ಯಾಂಕಾಕ್‌ ಮೊದಲಾದ ಕಡೆಗಳಲ್ಲಿ ಸುಮಾರು 63 ದಿನಗಳ ಕಾಲ “ಸೀತಾಯಣ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಒಟ್ಟಾರೆ ಶಶಿಕುಮಾರ್‌ ಪುತ್ರನ ಚೊಚ್ಚಲ ಚಿತ್ರ “ಸೀತಾಯಣ’ ಹೇಗಿರಲಿದೆ ಎಂಬ ಕುತೂಹಲಕ್ಕೆ ಇದೇ ತಿಂಗಳಾಂತ್ಯ ಉತ್ತರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next