Advertisement

ದರ್ಶನ್‌ –ಸುದೀಪ್‌ ಜೊತೆ ಅಜಾನುಬಾಹು!

09:49 AM Mar 26, 2019 | Lakshmi GovindaRaju |

ಸ್ಟಾರ್‌ ನಟರ ಚಿತ್ರಗಳಲ್ಲಿ ಸಾಮಾನ್ಯವಾಗಿ ಖಳನಟರಿಗೆ ಹೆಚ್ಚು ಪ್ರಾಮುಖ್ಯತೆ ಇದ್ದೇ ಇರುತ್ತದೆ. ಸ್ಟಾರ್‌ ನಟರ ಎದುರಿಗೆ ಖಡಕ್‌ ಆಗಿರುವ, ಕಟ್ಟುಮಸ್ತಾದ ದೇಹ ಹೊಂದಿರುವ ವಿಲನ್‌ ಪಾತ್ರಧಾರಿಗಳೇ ಇರಬೇಕು. ಈಗಾಗಲೇ ಹಲವು ಚಿತ್ರಗಳಲ್ಲಿ ಅಂತಹ ಖಳನಟರ ಎಂಟ್ರಿ ಜಬರ್‌ದಸ್ತ್ ಆಗಿ ಇರುವುದನ್ನು ಎಲ್ಲರೂ ನೋಡಿರುತ್ತಾರೆ.

Advertisement

ಇಲ್ಲೀಗ ಹೇಳಹೊರಟಿರುವ ವಿಷಯವೆಂದರೆ, ಅದು ದರ್ಶನ್‌ ಮತ್ತು ಸುದೀಪ್‌ ಚಿತ್ರಗಳಲ್ಲಿ ನಟಿಸುತ್ತಿರುವ ಖಳನಟನ ಬಗ್ಗೆ. ದರ್ಶನ್‌ ಮತ್ತು ಸುದೀಪ್‌ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾರು ತಾನೆ ಬಿಡುತ್ತಾರೆ ಹೇಳಿ. ಅಂಥದ್ದೊಂದು ಅವಕಾಶ ಇದೀಗ ಬಾಲಿವುಡ್‌ನ‌ಲ್ಲಿ ಈಗಷ್ಟೇ ಗುರುತಿಸಿಕೊಳ್ಳುತ್ತಿರುವ ಯುವ ನಟನಿಗೆ ಸಿಕ್ಕಿದೆ.

ಹೌದು, ಈಗಾಗಲೇ ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರದಲ್ಲಿ ಭೀಮ ಪಾತ್ರಧಾರಿಯಾಗಿ ಡ್ಯಾನಿಶ್‌ ಅಖ್ತರ್‌ ಸೈಫಿ ನಟಿಸಿದ್ದಾರೆ. ಆ ಪಾತ್ರಕ್ಕೆ ಸಖತ್‌ ಹೈಟು, ಗಟ್ಟಿಮುಟ್ಟಾದ ದೇಹ ಹೊಂದಿರುವ ನಟ ಬೇಕಿತ್ತು. ಸ್ವತಃ ದರ್ಶನ್‌ ಅವರೇ ಆ ನಟನ ಬಗ್ಗೆ ಹೇಳಿ, ಭೀಮನ ಪಾತ್ರಕ್ಕೆ ಸೂಕ್ತ ಎಂದು ಸೂಚಿಸಿದ್ದರು.

ಡ್ಯಾನಿಶ್‌ ಅಖ್ತರ್‌ ಸೈಫಿ “ಕುರುಕ್ಷೇತ್ರ’ದಲ್ಲಿ ಭೀಮನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆ ಬಗ್ಗೆ ಸ್ವತಃ ದರ್ಶನ್‌ ಅವರೇ ಡ್ಯಾನಿಶ್‌ ಬಗ್ಗೆ ಪ್ರೀತಿಯಿಂದ ಹೇಳಿಕೊಂಡಿದ್ದರು. ದರ್ಶನ್‌ ಚಿತ್ರದಲ್ಲಿ ನಟಿಸಿದ್ದ ಡ್ಯಾನಿಶ್‌ ಅಖ್ತರ್‌ ಸೈಫಿ ಅವರಿಗೆ ಸುದೀಪ್‌ ಚಿತ್ರದಲ್ಲೂ ನಟಿಸುವ ಅವಕಾಶ ಸಿಕ್ಕಿರುವುದು ವಿಶೇಷ.

ಸುದೀಪ್‌ ಅವರು “ಕೋಟಿಗೊಬ್ಬ 3′ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಡ್ಯಾನಿಶ್‌ ಅಖ್ತರ್‌ ಸೈಫಿ ಕಾಣಿಸಿಕೊಂಡಿದ್ದಾಗಿದೆ. ಇತ್ತೀಚೆಗೆ ಅವರ ಭಾಗದ ಚಿತ್ರೀಕರಣ ಕೂಡ ನಡೆದು ಹೋಗಿದೆ. ಸೂರಪ್ಪ ಬಾಬು ನಿರ್ಮಾಣದ “ಕೋಟಿಗೊಬ್ಬ 3′ ಚಿತ್ರದಲ್ಲಿ ಅದ್ಧೂರಿ ಮೆಟ್ರೋ ಸೆಟ್‌ ಹಾಕಿದ್ದ ಸುದ್ದಿಯನ್ನು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು.

Advertisement

ಆ ಸೆಟ್‌ನಲ್ಲಿ ನಡೆದ ಫೈಟ್‌ ಸೀನ್‌ನಲ್ಲಿ ಡ್ಯಾನೀಶ್‌ ನಟಿಸಿ ಹೋಗಿದ್ದಾರೆ. ಸುದೀಪ್‌ ಅವರ ಎದುರು ಡ್ಯಾನಿಶ್‌ ಅವರು ಪ್ರಮುಖ ಖಳನಟರಾಗಿ ಕಾಣಿಸಿಕೊಂಡಿದ್ದಾರೆ. ಡ್ಯಾನಿಶ್‌ ಅವರು ಅದಾಗಲೇ ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಅವರು, “ಸಿಯಾ ಕೆ ರಾಮ್‌’ ಧಾರಾವಾಹಿಯಲ್ಲಿ ಹನುಮಂತ ಪಾತ್ರಧಾರಿಯಾಗಿ ಮಿಂಚಿದ್ದಾರೆ.

“ಕುರುಕ್ಷೇತ್ರ’ ಚಿತ್ರದಲ್ಲಿ ಭೀಮನಾಗಿ ಘರ್ಜಿಸಿರುವ ಡ್ಯಾನಿಶ್‌ ಆ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇಟ್ಟುಕೊಂಡಿದ್ದಾರೆ. ಅತ್ತ ಸುದೀಪ್‌ ಅವರ “ಕೋಟಿಗೊಬ್ಬ 3′ ಚಿತ್ರದಲ್ಲೂ ನಟಿಸಿರುವುದು ಇನ್ನಷ್ಟು ಉತ್ಸಾಹದಲ್ಲಿದ್ದಾರೆ. ಇದರ ನಡುವೆಯೇ ಡ್ಯಾನಿಶ್‌ ಅಖ್ತರ್‌ ಸೈಫಿ ಅವರು ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ “ಉದ್ಘರ್ಷ’ ಚಿತ್ರದಲ್ಲೂ ನಟಿಸಿದ್ದಾರೆ.

ಅದೇನೆ ಇರಲಿ, ಕನ್ನಡಕ್ಕೆ ಸಖತ್‌ ಹೈಟ್‌ ಆಗಿರುವ, ಗಟ್ಟಿದೇಹ ಹೊಂದಿರುವ ನಟನ ಆಗಮನವಾಗಿದ್ದು, ಕನ್ನಡದಲ್ಲಿ ಹೆಸರು ಮಾಡಿರುವ ಹೊಸ ಪ್ರತಿಭೆಗಳ ಸಾಲಿಗೆ ಡ್ಯಾನಿಶ್‌ ಕೂಡ ಸೇರುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next