Advertisement

ಏರ್‌ಪೋರ್ಟ್‌ ಮಾರ್ಗ ವರ್ಷಾಂತ್ಯಕೆ ಟೆಂಡರ್‌

10:42 AM Jul 24, 2023 | Team Udayavani |

ಬೆಂಗಳೂರು: ಅತ್ತ “ನಮ್ಮ ಮೆಟ್ರೋ’ ಯೋಜನೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ ವೇಗ ಪಡೆದುಕೊಂಡ ಬೆನ್ನಲ್ಲೇ ಇತ್ತ ಅದೇ ದಿಕ್ಕಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯ ಕಾರಿಡಾರ್‌-1 ಚುರುಕು ಗೊಳ್ಳು ತ್ತಿದ್ದು, ವರ್ಷಾಂತ್ಯಕ್ಕೆ ಈ ಸಂಬಂಧ ಟೆಂಡರ್‌ಗೆ ಸಿದ್ಧತೆ ನಡೆದಿದೆ.

Advertisement

ಉದ್ದೇಶಿತ ಯೋಜನೆಗೆ ಅಗತ್ಯವಿರುವ ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು ನಡೆಸಿರುವ ಕೆ-ರೈಡ್‌ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ), 7,438 ಕೋಟಿ (800 ಮಿಲಿಯನ್‌ ಯೂರೋ) ಹಣವನ್ನು ಜರ್ಮನಿಯ ಕೆಎಫ್ಡಬ್ಲ್ಯು, ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ಮತ್ತು ಲಗ್ಜೆಂಬರ್ಗ್‌ನಿಂದ ದೀರ್ಘಾವಧಿ ಸಾಲ ಪಡೆಯುತ್ತಿದೆ. ಬರುವ ಸೆಪ್ಟೆಂಬರ್‌ನಲ್ಲಿ ಈ ಸಂಬಂಧದ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಲಾಗುತ್ತಿದೆ. ಈ ಒಡಂಬಡಿಕೆಯಿಂದ ಲಭ್ಯವಾಗುವ ಹಣದಲ್ಲಿ ಕಾರಿಡಾರ್‌ 1 (ಬೆಂಗಳೂರು ನಗರ-ಯಲಹಂಕ- ದೇವನ ಹಳ್ಳಿ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮತ್ತು 3 (ಕೆಂಗೇರಿ- ಬೆಂಗಳೂರು ನಗರ- ವೈಟ್‌ ಫೀಲ್ಡ್‌) ಮಾರ್ಗಕ್ಕೆ ಹೆಚ್ಚಿನ ಪಾಲು ಬಳಕೆಯಾಗಲಿದೆ. ಈ ಸಾಲವನ್ನು ಪೂರೈಸುವ ವಿದೇಶಿ ಹಣಕಾಸು ಏಜೆನ್ಸಿಗಳು ಈಗಾಗಲೇ 2 ಬಾರಿ ಭೇಟಿ ನೀಡಿ, ಪೂರಕವಾಗಿ ಸ್ಪಂದಿಸಿವೆ.

ಸೆಪ್ಟೆಂಬರ್‌ನಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ಬೆಂಗಳೂರಿಗೆ ಭೇಟಿ ನೀಡುತ್ತಿವೆ. ಇದರೊಂದಿಗೆ ಸಂಪನ್ಮೂಲ ಕ್ರೋಡೀಕರಣದ ಅಡತಡೆಗಳು ನಿವಾ ರಣೆಯಾದಂತೆ ಆಗಲಿದೆ. ಈ ಪ್ರಕ್ರಿಯೆ ಮುಗಿ ಯುತ್ತಿದ್ದಂತೆ ಟೆಂಡರ್‌ ಪ್ರಕ್ರಿಯೆಗೆ ಸಿದ್ಧತೆಗಳು ಆರಂಭಗೊಳ್ಳಲಿವೆ. ಹೆಚ್ಚು-ಕಡಿಮೆ ಡಿಸೆಂಬರ್‌ ಒಳಗೆ ಸಿವಿಲ್‌ ಟೆಂಡರ್‌ ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಕೆ-ರೈಡ್‌ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ವಿಮಾನ ಪ್ರಯಾಣಿಕರು ಸೇರಿದಂತೆ ನಿತ್ಯ ಬಂದಿಳಿಯುವ ಹಾಗೂ ಹೋಗುವವರ ಸಂಖ್ಯೆ 1.50 ಲಕ್ಷ. ಟರ್ಮಿನಲ್‌-2 ಸಂಪೂರ್ಣ ಕಾರ್ಯಾರಂಭವಾದಲ್ಲಿ ಈ ಸಂಖ್ಯೆ 2 ಲಕ್ಷದ ಗಡಿ ದಾಟಲಿದೆ. ಉಳಿ ದಂತೆ ಮಾರ್ಗದುದ್ದಕ್ಕೂ ಬರುವ ವಸತಿ ಪ್ರದೇಶಗಳ ಜನ ಕೂಡ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಒಂದೆಡೆ ಈ ವಿಮಾನ ನಿಲ್ದಾಣ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದರೆ, ಮತ್ತೂಂದೆಡೆ ಉಪನಗರ ರೈಲು ಬರಲು ಸಿದ್ಧವಾಗುತ್ತಿದೆ. ಇವೆರಡರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. 2

ಲಕ್ಷಕ್ಕೂ ಅಧಿಕ ಜನರಿಗೆ ಅನುಕೂಲ: ವಿಮಾನ ನಿಲ್ದಾಣ ಮಾರ್ಗವು ಹೆಬ್ಟಾಳ ಫ್ಲೈಓವರ್‌ ಮೇಲಿನ ಒತ್ತಡ ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಲಿದೆ. ಉಪನಗರ ರೈಲು ಯೋಜನೆ ಬಹುತೇಕ ಮಾರ್ಗವು ರಸ್ತೆಯಿಂದ ಹೊರಗೆ ಬರಲಿದ್ದು, ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗುವುದಿಲ್ಲ. ಯಶವಂತಪುರ ರೈಲು ನಿಲ್ದಾಣ ಮತ್ತು ಸಿಟಿ ರೈಲು ನಿಲ್ದಾಣದ ಮೂಲಕ ಈ ಮಾರ್ಗ ಹಾದು ಹೋಗುವುದರಿಂದ ತುಮಕೂರು-ಮೈಸೂರು ಕಡೆಯಿಂದ ಬರುವ ಪ್ರಯಾಣಿಕರಿಗೂ ಅನುಕೂಲ. ಇಂತಹ ಹತ್ತುಹಲವು ಕಾರಣಗಳಿಂದ ಉಪನಗರ ರೈಲು ಯೋಜನೆ ಮಹತ್ವ ಪಡೆದುಕೊಂಡಿದೆ. ವರ್ಷಾಂತ್ಯ ದೊಳಗೆ ಟೆಂಡರ್‌ ಕರೆಯಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಸಿ4ಸಿ ಸಂಸ್ಥೆಯ ಸಂಚಾಲಕ ಹಾಗೂ ಉಪನಗರ ರೈಲು ಹೋರಾಟಗಾರ ರಾಜಕುಮಾರ್‌ ದುಗರ್‌ ಹೇಳುತ್ತಾರೆ.

Advertisement

“ವಾಸ್ತವವಾಗಿ ಕಾರಿಡಾರ್‌-1 ಮೊದಲ ಆದ್ಯತೆ ಆಗಿತ್ತು. ಆದರೆ, ಹಲವು ಕಾರಣಗಳಿಂದ ಕೊನೇ ಆದ್ಯತೆ ಆಗಿರುವುದು ಬೇಸರದ ಸಂಗತಿ. ಈಗಲಾದರೂ ಚುರುಕುಗೊಂಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಉಳಿದ ಕಾರಿಡಾರ್‌ಗಳು ಮುಗಿಯುವವರೆಗೆ ಉದ್ದೇಶಿತ ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಗೆ ಕೈಹಾಕದಿರುವುದು ಅಥವಾ “ನಮ್ಮ ಮೆಟ್ರೋ’ ಯೋಜನೆಯೊಂದಿಗೆ ತಳುಕುಹಾಕಿ ಇದನ್ನು ನಿರ್ಲಕ್ಷಿಸುವುದು ಸರಿ ಅಲ್ಲ’ ಎಂದೂ ಅವರು ತಿಳಿಸುತ್ತಾರೆ.

ಎರಡು ಡಿಪೋಗಳು; ಭಿನ್ನ ವಿನ್ಯಾಸ: ಉಪನಗರ ರೈಲು ಯೋಜನೆಯಲ್ಲಿ ದೇವನಹಳ್ಳಿ ಮತ್ತು ಸೋಲದೇವನಹಳ್ಳಿ ಸೇರಿ ಎರಡು ಡಿಪೋಗಳು ತಲೆಯೆತ್ತಲಿವೆ. ಯಾವ ಮೂಲೆಯಿಂದ ಮತ್ತು ಯಾವ ಕಾರಿಡಾರ್‌ನಿಂದಾದರೂ ಎರಡೂ ಡಿಪೋಗಳಿಗೆ ರೈಲುಗಳು ಹೋಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ಪ್ರಸ್ತುತ “ನಮ್ಮ ಮೆಟ್ರೋ’ದಲ್ಲಿ ಪೀಣ್ಯ ಮತ್ತು ಬೈಯಪ್ಪನಹಳ್ಳಿ ಸೇರಿ ಎರಡು ಡಿಪೋಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಆಯಾ ಕಾರಿಡಾರ್‌ನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ರೈಲು ಆಯಾ ಕಾರಿಡಾರ್‌ನಲ್ಲಿ ಬರುವ ಡಿಪೋಗೆ ಮಾತ್ರ ಹೋಗುವಂತೆ ವಿನ್ಯಾಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಪನಗರ ರೈಲು ಯೋಜನೆ ಡಿಪೋಗಳು ತುಸು ಭಿನ್ನ ಎನ್ನಲಾಗಿದೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next