Advertisement

ಏರೋ ಶೋ: ಬ್ರಿಟನ್‌ ರೂಪಾಂತರ ವೈರಸ್‌ ಕರಿನೆರಳು?

01:14 PM Jan 07, 2021 | Team Udayavani |

ಬೆಂಗಳೂರು: “ಏರೋ ಇಂಡಿಯಾ ಶೋ-2021’ಕ್ಕೆ ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ ಬ್ರಿಟನ್‌ ರೂಪಾಂತರ ಕೊರೊನಾ ವೈರಸ್‌ ಭಾರತಕ್ಕೆ ಕಾಲಿಟ್ಟಿದೆ. ಪರಿಣಾಮ ಪ್ರದರ್ಶನದ ಮೇಲೆ ಕೊರೊನಾ ಕಾರ್ಮೋಡ ಮತ್ತಷ್ಟು ದಟ್ಟವಾಗಲಿದೆ.
ಭಾರತದಲ್ಲಿ ಪತ್ತೆಯಾದ ಬ್ರಿಟನ್‌ ರೂಪಾಂತರ ವೈರಸ್‌ ಪ್ರಕರಣಗಳಲ್ಲಿ ದೆಹಲಿ ನಂತರ ಹೆಚ್ಚು (11) ಕೇಸುಗಳು ಕರ್ನಾಟಕದಲ್ಲಿ ದಾಖಲಾಗಿದ್ದು, ಅದರಲ್ಲೂ ಏಳು ಬೆಂಗಳೂರಿನಲ್ಲಿವೆ.

Advertisement

ಆಯೋಜಕರಿಗೆ ತಲೆನೋವು: ಒಂದೇ ದಿನದ ಅಂತರದಲ್ಲಿ ಈ ರೂಪಾಂತರ ವೈರಸ್‌ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದುಪ್ಪಟ್ಟಾಗಿದೆ. ಇನ್ನೂ ಹಲವರ ಪರೀಕ್ಷೆ ವರದಿ ಬರಬೇಕಿದೆ. ಈ ಮಧ್ಯೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನೂ ಪತ್ತೆಹಚ್ಚಿ, ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಪ್ರದರ್ಶನ ಹೊಸ್ತಿಲಲ್ಲಿ ಇರುವಾಗಲೇ ಅತಿ ವೇಗವಾಗಿ ಹರಡುವ ವೈರಸ್‌
ಲಗ್ಗೆ ಇಟ್ಟಿರುವುದು ಆಯೋಜಕರಿಗೆ ಮತ್ತೂಂದು ರೀತಿಯ ತಲೆನೋವಿಗೆ ಕಾರಣವಾಗಿದೆ.

ಹೆಚ್ಚು ಎಚ್ಚರ ವಹಿಸಬೇಕು: ಯಾಕೆಂದರೆ, ಇದುವರೆಗಿನ ವೈಮಾನಿಕ ಪ್ರದರ್ಶನದ ಪೂರ್ವಸಿದ್ಧತೆಗಳು ಚೀನಾದಿಂದ ಬಂದಿದ್ದ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಪೂರಕವಾಗಿತ್ತು. ಈಗ ರೂಪಾಂತರ ವೈರಸ್‌ ನಿಯಂತ್ರಣಕ್ಕೆ ಅನುಗುಣವಾಗಿ ಸಿದ್ಧತೆಗಳನ್ನು
ಮಾಡಿಕೊಳ್ಳಬೇಕಿದೆ. ತಜ್ಞರ ಪ್ರಕಾರ ಹೆಚ್ಚು-ಕಡಿಮೆ ಈ ಹಿಂದಿನ ಕ್ರಮಗಳನ್ನು ಅನುಸರಿಸಿದರೆ ಸಾಕು. ಆದಾಗ್ಯೂ ಹರಡುವ
ತೀವ್ರತೆ ವೇಗವಾಗಿರುವುದರಿಂದ ಹಾಗೂ ಎರಡನೇ ಅಲೆಗೆ ತುತ್ತಾಗಿರುವ ದೇಶಗಳಿಂದಲೂ ಪ್ರತಿನಿಧಿಗಳು ಪ್ರದರ್ಶನದಲ್ಲಿ
ಭಾಗವಹಿಸುವು ದರಿಂದ ಹೆಚ್ಚು ಎಚ್ಚರ ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಗಳ ಮರುಪರಿಶೀಲನೆಯ ಅನಿವಾರ್ಯತೆ ಉಂಟಾಗಿದೆ.

ವಿದೇಶಿ ಉದ್ಯಮಿಗಳ ಭಾಗಿ ತುಂಬಾ ಮುಖ್ಯ: “ಏಷ್ಯಾದ ಅತಿದೊಡ್ಡ ಹಾಗೂ ಅಪರೂಪದ ವೈಮಾನಿಕ ಪ್ರದರ್ಶನ ಇದಾಗಿದ್ದು, ವಿಮಾನಗಳು, ಅದರ ಬಿಡಿ ಭಾಗಗಳು ಸೇರಿದಂತೆ ಹತ್ತುಹಲವು ವ್ಯವಹಾರಗಳು ಇಲ್ಲಿ ಕುದುರುತ್ತವೆ. ಹಾಗಾಗಿ, ವಿದೇಶಿ ಹಾಗೂ ದೇಶೀಯ ಉದ್ಯಮಿಗಳಿಗೆ ಇದರಲ್ಲಿ ಭಾಗವಹಿಸುವಿಕೆ ತುಂಬಾ ಮುಖ್ಯ. ಈ ಅವಕಾಶವನ್ನು ಕಳೆದುಕೊಳ್ಳಲು ಅವರೆಲ್ಲ ಇಷ್ಟಪಡುವುದಿಲ್ಲ. ಅಷ್ಟಕ್ಕೂ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಹೆಚ್ಚೆಂದರೆ ಐದಾರು ಜನ ಬರುತ್ತಾರೆ. ಬಹುತೇಕರು ಲಸಿಕೆ ಪಡೆದು, ಸಾಕಷ್ಟು ಮುನ್ನೆಚ್ಚರಿಕೆಗಳೊಂದಿಗೆ ಬರುತ್ತಾರೆ. ಆದ್ದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಿದರೂ, ಈಗಾಗಲೇ
ನೋಂದಣಿ ಮಾಡಿಕೊಂಡ ಉದ್ಯಮಿಗಳು ತಮ್ಮ ಭೇಟಿಯನ್ನು ರದ್ದುಗೊಳಿಸುವ ಸಾಧ್ಯತೆಗಳು ತುಂಬಾ ಕಡಿಮೆ’ ಎಂದು ಹೇಳುತ್ತಾರೆ.

ವರ್ಚುವಲ್‌ ಆಗಿ ವೀಕ್ಷಣೆಗೂ ಅವಕಾಶ?:
ಪ್ರದರ್ಶನ ವೀಕ್ಷಣೆಗೆ ಬರುವ ವೀಕ್ಷಕರ ಸಂಖ್ಯೆಗೆ ಕಡಿವಾಣ ಹಾಕಬಹುದು. ಆದರೆ, ಇದು ರಕ್ಷಣಾ ಸಚಿವಾಲಯ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಆಗುವ ವಿಚಾರ. ಅದೇನೇ ಇರಲಿ, ವರ್ಚುವಲ್‌ ಆಗಿ ವೀಕ್ಷಣೆಗೂ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Advertisement

ಸೂಕ್ತ ತೀರ್ಮಾನ ಕೈಗೊಳ್ಳುವ ಅವಶ್ಯಕತೆಯಿದೆ:
ವೈಮಾನಿಕ ಕ್ಷೇತ್ರದ ಅಭಿವೃದ್ಧಿ ಹಾಗೂ ಉದ್ದಿಮೆಗಳ ಪ್ರಗತಿ ದೃಷ್ಟಿಯಿಂದ ವೈಮಾನಿಕ ಪ್ರದರ್ಶನ ಅತ್ಯಗತ್ಯ. ಆದರೆ, ಈಗಿರುವ ಸ್ಥಿತಿಯಲ್ಲಿ ಅದನ್ನು ಯಾವ ರೀತಿಯಲ್ಲಿ ನಡೆಸಬೇಕು ಎನ್ನುವುದು ತುಂಬಾ ಸೂಕ್ಷ್ಮ ವಿಚಾರ. ಆಯೋಜಕರಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಅದರಲ್ಲೂ ನಿರ್ಣಾಯಕ ಪಾತ್ರ ವಹಿಸುವವರು ಎಲ್ಲ ದೃಷ್ಟಿಕೋನಗಳಿಂದ ಅವಲೋಕಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ. ಇನ್ನು ಬೆಂಗಳೂರು ಟೆಕ್‌ ಸಮಿಟ್‌ ಅನ್ನು ಸರ್ಕಾರ ಇತ್ತೀಚೆಗೆ ಸಂಪೂರ್ಣ ವರ್ಚುವಲ್‌ ಆಗಿ ಯಶಸ್ವಿಯಾಗಿ ಪೂರೈಸಿದೆ. “ಏರೋ ಇಂಡಿಯಾ ಶೋ’ದಲ್ಲೂ ಇದರ ಪ್ರಯೋಗ ಮಾಡಬಹುದು
ಎಂದು ಬೆಲ್ಜಿಯಂ ಟ್ರೇಡ್‌ ಕಮೀಷನರ್‌ ಜಯಂತ್‌ ನಾಡಿಗೇರ್‌ ಅಭಿಪ್ರಾಯಪಡುತ್ತಾರೆ.

ಏರೋಬ್ಯಾಟಿಕ್ಸ್ ಅನುಮಾನ?
ಸಾಮಾನ್ಯವಾಗಿ ಪ್ರತಿ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಫ್ರಾನ್ಸ್‌, ರಷ್ಯಾ, ಅಮೆರಿಕದಂತಹ ಪ್ರಮುಖ ದೇಶಗಳ ಭಾಗವಹಿಸುವಿಕೆ ಹೆಚ್ಚಿರುತ್ತದೆ. ಇದರೊಂದಿಗೆ ಮನರಂಜನೆ ನೀಡುವ ಏರೋಬ್ಯಾಟಿಕ್‌ ತಂಡಗಳೂ ಇರುತ್ತವೆ. ಈ ಪೈಕಿ
ಇಂಗ್ಲೆಂಡ್‌ನ‌ ಲೋಹದಹಕ್ಕಿಗಳ ಮೇಲೆ ಬೆಕ್ಕಿನ ನಡಿಗೆಯ “ಯಾಕೋಲೇವ್ಸ್‌’ ಕೂಡ ಒಂದು. ಆದರೆ, ರೂಪಾಂತರ ವೈರಸ್‌ ಹಾವಳಿ ಅಲ್ಲಿ ಇರುವುದರಿಂದ ಈ ತಂಡ ಭಾಗವಹಿಸುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ.

ಪ್ರತ್ಯೇಕ ಮಾರ್ಗಸೂಚಿ ಪ್ರಕಟ
ಈ ಮಧ್ಯೆ ಏರೋ ಇಂಡಿಯಾ ಶೋ-2021ರಲ್ಲಿ ಸೋಂಕು ನಿಯಂತ್ರಣಕ್ಕಾಗಿ ಪ್ರತ್ಯೇಕ “ಕೋವಿಡ್‌-19 ಮಾರ್ಗಸೂಚಿ’ಯನ್ನು
ಪ್ರಕಟಿಸಲಾಗಿದೆ. ಅದರಂತೆ ಎರಡನೇ ಅಲೆಗೆ ತುತ್ತಾದ ದೇಶಗಳಿಂದ ವೈಮಾನಿಕ ಪ್ರದರ್ಶನಕ್ಕೆ ಭಾಗವಹಿಸಲು ಬರುವ ಪ್ರತಿನಿಧಿಗಳು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೊಳಪಡಬೇಕು. ಜತೆಗೆ ಪ್ರಯಾಣದ ಹಿನ್ನೆಲೆಯನ್ನು ನೀಡಬೇಕು. ಅಲ್ಲದೆ, ವಾಪಸ್‌ ತವರಿಗೆ ತೆರಳುವ ವಿಮಾನ ಪ್ರಯಾಣದ ಟಿಕೆಟ್‌ ಅನ್ನು ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ.

ಪ್ರದರ್ಶನದ ಉತಾಹಕ್ಕೆ ಮಂಕು?
ದೇಶದಲ್ಲಿ ಕೊರೊನಾ ಹಾವಳಿ ಬಹುತೇಕ ಕಡಿಮೆಯಾಗಿತ್ತು. ಜನ ಮತ್ತು ಸರ್ಕಾರ ಕೂಡ ನಿರಾಳವಾಗಿದ್ದರು. ಇದರಿಂದ ಎರಡು
ವರ್ಷಗಳಿಗೊಮ್ಮೆ ನಡೆಯುವ ವೈಮಾನಿಕ ಪ್ರದರ್ಶನವೂ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿತ್ತು. ಇದೇ ಕಾರಣಕ್ಕೆ ತಿಂಗಳುಗಳ ಹಿಂದೆಯೇ ಪ್ರದರ್ಶನ ಪ್ರದೇಶ ಶೇ.99ರಷ್ಟು ಭರ್ತಿ ಆಗಿತ್ತು. ಆದರೆ, ಈಗ ಹೊಸ ರೂಪದಲ್ಲಿ ಮರುಪ್ರವೇಶ ಆಗಿದೆ. ಒಂದು ವೇಳೆ ಈ ಮಾದರಿಯ ಸೋಂಕಿನ ಪ್ರಮಾಣ ಮುಂದೊಂದು ತಿಂಗಳಲ್ಲಿ ಏರಿಕೆ ಕ್ರಮದಲ್ಲಿ ಸಾಗಿದರೆ, ಪ್ರದರ್ಶನದ ಉತ್ಸಾಹಕ್ಕೆ ಮಂಕು
ಕವಿಯಲಿದೆ ಎಂದು ಆಯೋಜಕರ ವಿಭಾಗದ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next