Advertisement

ಆಹಾ! ಹಂಡೆ ಸ್ನಾನದ ಸುಖ

06:00 AM Oct 26, 2018 | |

ಮೊನ್ನೆ ಊರಿಗೆ ಬಂದ ಲಂಡನ್‌ನಲ್ಲಿರುವ ಚಿಕ್ಕಮ್ಮನ ಮಗಳು ತನ್ನ ಇಬ್ಬರು ಮಕ್ಕಳೊಂದಿಗೆ ನನ್ನ ಮನೆಗೂ ಬಂದಳು. ಅವಳ ಗಂಡ ಕೆಲಸದ ನಿಮಿತ್ತ ಲಂಡನ್‌ನಲ್ಲೇ ಉಳಿದಿದ್ದ. ಅವಳು ಶಾಲೆಗೆ ಹೋಗುವಾಗ ಒಮ್ಮೆ ಬಂದದ್ದು ಬಿಟ್ಟರೆ ಮತ್ತೆ ನನ್ನ ಮನೆಗೆ ಬಂದಿರಲಿಲ್ಲ. ಇದು ಅವಳ ಎರಡನೆಯ ಭೇಟಿ. ಅಂದು ಬಂದ ನೆನಪು ಅವಳಿಗೆ ಮರೆತುಹೋಗಿತ್ತು. ನನಗೂ ಕೂಡ. ಅವಳನ್ನು ದೂರದ ಬೆಂಗಳೂರಿಗೆ ಮದುವೆ ಮಾಡಿ ಕೊಟ್ಟಿದ್ದರು. ಅವಳ ಅತ್ತೆ-ಮಾವ ಎಷ್ಟೋ ವರ್ಷಗಳಿಂದ ಅಲ್ಲೇ ನೆಲೆ ನಿಂತವರು.

Advertisement

ಅವಳಿಗೆ ಇಲ್ಲಿಗೆ ಬರಲು ಮನೆ ಸಮೀಪ ಇರುವ ಜಲಪಾತ ಒಂದು ಆಕರ್ಷಣೆಯಾಗಿತ್ತು. ಅವಳು ಬಂದು ತಲುಪಿದಾಗ ಮಧ್ಯಾಹ್ನ ಗಂಟೆ ಒಂದು. ಊಟವನ್ನೂ ಮಾಡದೆ ಮಕ್ಕಳನ್ನು ಸೇರಿಸಿಕೊಂಡು “ಸಹನಕ್ಕ, ಜಲಪಾತಕ್ಕೆ ಹೋಗೋಣ’ ಎಂದು ಹೊರಟುನಿಂತಳು. “ಸರಿ’ ಎಂದು ನಾನು, ನನ್ನ ಗಂಡ ಅವಳ ಜೊತೆಗೂಡಿದೆವು. ಜಲಪಾತದ ನೀರಿಗೆ ತಲೆ ಒಡ್ಡಿ, ಪರಸ್ಪರ ನೀರು ಎರಚುತ್ತ ಮಕ್ಕಳೊಂದಿಗೆ ಮಕ್ಕಳಂತೆ ಆಟವಾಡಿದಳು. ಅಷ್ಟೂ ಹೊತ್ತು ಬಿಟ್ಟಿದ್ದ ಮಳೆ ಈಗ ಬರಲು ಶುರುವಾಯ್ತು. ನಾವು ಓಡುತ್ತ ಮನೆಗೆ ಬಂದೆವು. ಒದ್ದೆ ಮೈಯಲ್ಲಿದ್ದ ಅವಳು ಬಟ್ಟೆ ಬದಲಾಯಿಸುವ ಉದ್ದೇಶದಿಂದ ಬಚ್ಚಲು ಮನೆಗೆ ಹೋದವಳು ಎಷ್ಟು ಹೊತ್ತಾದರೂ ಬರಲಿಲ್ಲ! 

ಇತ್ತ ಅವಳ ಪುಟ್ಟ ಮಕ್ಕಳು ಅಮ್ಮನಿಗಾಗಿ ಅಳತೊಡಗಿದವು. ನನಗೆ ಗಾಬರಿಯಾಗಿ, “ಡ್ರೆಸ್‌  ಚೆೇಂಜ್‌ ಮಾಡಲು ಇಷ್ಟು ಹೊತ್ತು ಬೇಕಾ? ಏನು ಮಾಡುತ್ತಿರುವೆ? ಬೇಗ ಬಾ’ ಎನ್ನುತ್ತ ಸ್ನಾನದ ಕೋಣೆಯ ಬಾಗಿಲು ಬಡಿದೆ. “ಇರು ಬಂದೆ’ ಎಂದು ಮತ್ತೆ ಅರ್ಧ ಗಂಟೆ ಕಾಯಿಸಿ ಆಮೇಲೆ ಬಾಗಿಲು ತೆಗೆದಳು. ಕೂದಲನ್ನು ಬಟ್ಟೆಯಿಂದ ಬಿಗಿಯುತ್ತ  ಉಲ್ಲಾಸದಿಂದ ಹೇಳಿದಳು- “ಹಂಡೆಯಲ್ಲಿ ಹಬೆಯಾಡುತ್ತಿದ್ದ ನೀರನ್ನು ನೋಡಿ ಮೈಗೆ ಎರೆದುಕೊಳ್ಳುವ ಬಯಕೆಯಾಯ್ತು. ಹಂಡೆ ಸ್ನಾನ ಮಾಡಿ ಎಷ್ಟು ವರ್ಷವಾಯಿತೋ! ಚೆಂಬಿನಲ್ಲಿ ಬಿಸಿಬಿಸಿ ನೀರು ತೆಗೆದು ತೆಗೆದು ಮೈಗೆ ಎರೆದಷ್ಟು ಸಾಕಾಗಲಿಲ್ಲ. ಆಗ ಏಳುವ ಹೊಗೆಗೆ ಆಹಾ, ಏನು ಸುಖ ! ನಿನ್ನ ಮನೆಗೆ ಬಂದದ್ದು ಸಾರ್ಥಕವಾಯಿತು. ಗಂಡ ಇರುತ್ತಿದ್ದರೆ ಅವರು ಮತ್ತೂ ಖುಷಿ ಪಡುತ್ತಿದ್ದರು. ಅವರು ಚಿಕ್ಕವರಿದ್ದಾಗ ಅತ್ತೆ ಆದಿತ್ಯವಾರ ಅಥವಾ ಆಫೀಸಿಗೆ ರಜೆ ಇರುವ ದಿನಗಳಲ್ಲಿ ಪೇಟೆಯಿಂದ ದುಡ್ಡು ಕೊಟ್ಟು ಸೌದೆ ತರುತ್ತಿದ್ದರಂತೆ. ಹಂಡೆಗೆ ನೀರು ತುಂಬಿಸಿ ಬೆಂಕಿ ಹಾಕಿ ನೀರು ಕಾಯಿಸಿ ಮಕ್ಕಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದರಂತೆ. ಮಕ್ಕಳು ಬೆಳೆದು ಯುವಕರಾಗುವವರೆಗೆ ಇದು ನಡೆದುಕೊಂಡು ಬಂದಿತ್ತಂತೆ. ಆದರೆ ನಗರೀಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈಗ ಹಂಡೆ ಸ್ನಾನದ ಪದ್ಧತಿ ನಿಂತಿದೆ. ಹಿಂದೆ ತೋಟದ ಮನೆಯಲ್ಲಿ ನನ್ನ ತವರು ಮನೆ ಇದ್ದಾಗ ಹಂಡೆ ಸ್ನಾನವೇ ಮಾಡುತ್ತಿದ್ದದ್ದು ನಿನಗೂ ನೆನೆಪಿರಬಹುದು. 

ಈಗ ಅಮ್ಮ ಅಪಾರ್ಟ್‌ಮೆಂಟಿನಲ್ಲಿರುವುದರಿಂದ ಅಲ್ಲೂ ಹಂಡೆ ಸ್ನಾನ ಇಲ್ಲ. ಹಳ್ಳಿ ಮನೆಗಳಲ್ಲೂ ಸೌದೆ ಉರಿಸಿ ನೀರು ಕಾಯಿಸುವವರನ್ನು ಕಾಣುವುದೇ ಅಪರೂಪವಾಗಿದೆ. ಊರಿಗೆ ಬಂದ ಮೇಲೆ ನಿನ್ನ ಮನೆಯಲ್ಲಿಯೇ ಹಂಡೆ ಸ್ನಾನ ಮಾಡಿದ್ದು. ಗಂಡನನ್ನು ಕರೆದುಕೊಂಡು ಇನ್ನೊಮ್ಮೆ ಬರುತ್ತೇನೆ’ ಎಂದಳು.

ಅವಳು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಏನೂ ಇರಲಿಲ್ಲ. ನಿಜವನ್ನೇ ಹೇಳಿದ್ದಳು. ನನಗೆ ನನ್ನ ಹತ್ತಿರದ ಬಂಧುಗಳೊಬ್ಬರ ನೆನಪಾಯಿತು. ಅವರೂ ನಮ್ಮಂತೆ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಇರುವವರು. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುವ ರಬ್ಬರ್‌, ಅಡಿಕೆ, ತೆಂಗಿನ ತೋಟದ ಒಡೆಯರು. ಅವರ ತಂದೆಯ ಕಾಲದಲ್ಲಿ ಅವರದು ಬಲು ದೊಡ್ಡ ಸಂಸಾರ. ಅವರ ಸ್ನಾನದ ಮನೆಯಲ್ಲಿ ಫ‌ಳಫ‌ಳ ಹೊಳೆಯುವ ತಾಮ್ರದ ಬೃಹತ್‌ ಹಂಡೆ, ನೀರೆರೆದುಕೊಳ್ಳಲು ತಾಮ್ರದ್ದೇ ದೊಡ್ಡ ಚೊಂಬು ಹಾಗೂ ಸರ್ವ ಕಾಲದಲ್ಲೂ, ಸರ್ವಸಮಯದಲ್ಲೂ ಕೊತಕೊತ ಕುದಿಯುವ ನೀರು ಇರುತ್ತಿತ್ತು. ಆದರೆ, ಮೊನ್ನೆ ಅವರ ಮನೆಗೆ ಹೋದಾಗ ಆ ಜಾಗವನ್ನು ಗ್ಯಾಸ್‌ ಸಿಲಿಂಡರ್‌ ಆಕ್ರಮಿಸಿತ್ತು. 

Advertisement

ಇದನ್ನು ನೋಡಿ ನನಗೆ ಬಹಳ ಬೇಜಾರಾಯಿತು. ನೀರು ಬಿಸಿ ಮಾಡಲು ಸೋಲಾರ್‌ ಘಟಕ ಅಳವಡಿಸುತ್ತಿದ್ದರೆ ಏನೂ ಅನಿಸುತ್ತಿರಲಿಲ್ಲ. “ಏಕೆ ಅಡುಗೆ ಅನಿಲ ಸಿಲಿಂಡರನ್ನು ತಂದು ಇಟ್ಟಿದ್ದೀರಿ?’ ಕೇಳಿದೆ. 

“ಈಗ ಕೆಲಸಕ್ಕೆ ಕೂಲಿ ಕಾರ್ಮಿಕರು ದೊರೆಯುವುದಿಲ್ಲ. ಹಣ ಕೊಟ್ಟರೆ ಸುಲಭವಾಗಿ ಸಿಲಿಂಡರ್‌ ಲಭಿಸುವಾಗ ಒಲೆ ಉರಿಸುವ ಕಷ್ಟ ಏಕೆ? ಅದಕ್ಕಿಂತ ಇದೇ ಸುಲಭ ಎಂದು ಅನಿಸಿದೆ’ ಎಂದರು. ಅವರಿಗೆ ಪ್ರತಿಯಾಗಿ ನಾನು ಏನೂ ಹೇಳಲಿಲ್ಲ. ಆದರೆ, ನನ್ನ ಮನಸ್ಸು ನೋವಿನಿಂದ ಒದ್ದಾಡಿತು. 

ನನ್ನ ಅಜ್ಜನ ಮನೆಯ ಈ ಕತೆ ಕೇಳಿ. ನನ್ನ ಅಜ್ಜ ಬಿಸಿನೀರು ಕಾಯಿಸಲಿಕ್ಕೆಂದೇ ಒಣಗಿದ ಅಡಿಕೆ ಹಾಳೆಯನ್ನು ಕೊಟ್ಟಿಗೆಯಲ್ಲಿ ಕಟ್ಟಕಟ್ಟಿ ಇಡುತ್ತಿದ್ದರು. ತೆಂಗಿನ ಗರಿ ಉದುರುವಾಗ ಅದರ ಕೊತ್ತಳಿಗೆಯನ್ನು ತುಂಡು ಮಾಡಿ ಶೇಖರಣೆ ಮಾಡುತ್ತಿದ್ದರು. ತೋಟಕ್ಕೆ ಹೋದಾಗ ಸತ್ತು ಬಿದ್ದ ಅಡಿಕೆ ಮರದ ಸಲಾಕೆಯನ್ನು ಆರಿಸಿ ತರುತ್ತಿದ್ದರು. ಒಟ್ಟಿನಲ್ಲಿ ಅಜ್ಜ ಕೃಷಿ ತ್ಯಾಜ್ಯವನ್ನು ಹಾಳಾಗಲು ಬಿಡುತ್ತಿರಲಿಲ್ಲ. ಸ್ನಾನದ ನೀರು ಕಾಯಿಸಲು ಬಳಸುತ್ತಿದ್ದರು. ಸೂರ್ಯ ಮೂಡುವ ಮೊದಲೇ ಎದ್ದು ಬಚ್ಚಲ ಮನೆಗೆ ಬೆಂಕಿ ಹಾಕಿ ಆಮೇಲೆ ಮುಂದಿನ ಕೆಲಸಕ್ಕೆ ಹೊರಡುತ್ತಿದ್ದರು. ಈಗ ಅಜ್ಜ ಇಲ್ಲ. ಮಾವ ಸ್ನಾನಕ್ಕೆ ಗೀಸರ್‌ ಅಳವಡಿಸಿದ್ದಾರೆ. ಸ್ವಿಚ್‌ ಒತ್ತಿದರೆ ಸಾಕು ಸ್ವಲ್ಪ$ ಸಮಯದಲ್ಲಿ ನೀರು ಬಿಸಿಯಾಗುತ್ತದೆ. ಹಂಡೆ ಸ್ನಾನದ ಪದ್ಧತಿ ಅಜ್ಜನೊಂದಿಗೇ ಮರೆಯಾಗಿದೆ. 

ಕೃಷಿಕರಾದ ನಮಗೆ ಸ್ನಾನದ ನೀರು ಕಾಯಿಸಲು ಹಸಿಮರ ಕಡಿದು ಸೌದೆ ಮಾಡಬೇಕಾಗಿಲ್ಲ. ನಮ್ಮ ತೋಟದಲ್ಲಿ ಖರ್ಚಿಲ್ಲದೆ ಸಿಗುವ ವಸ್ತುಗಳಾದ ಮಡಲು, ಹಾಳೆ, ಅಡಿಕೆ ಸಿಪ್ಪೆ , ಗೆರಟೆ, ತೆಂಗಿನ ಸಿಪ್ಪೆ$, ಅಡಿಕೆ ಮರದ ಸಲಾಕೆ, ರಬ್ಬರ್‌ ಮರದ ಒಣಗಿದ ಕಾಂಡ ಮುಂತಾದವು ಹೇರಳವಾಗಿ ಇರುತ್ತವೆ. ತೋಟದಿಂದ ಮನೆಗೆ ತರುವ ಶ್ರಮ ಮಾತ್ರ ಇರುವುದು. ಹೀಗಾಗಿ, ಪೇಟೆಯಿಂದ ದುಡ್ಡು ಕೊಟ್ಟು ಸಿಲಿಂಡರ್‌ ತಂದು ನೀರು ಕಾಯಿಸುವುದು ನಷ್ಟದ ಬಾಬತ್ತು ಅಲ್ಲವೇ? ಅಷ್ಟಕ್ಕೂ ಅಡುಗೆ ಅನಿಲ ಮುಗಿದುಹೋಗುವ ಸಂಪನ್ಮೂಲವಾದ್ದರಿಂದ ನಾವು ಉಳಿಸಿದ ಸಿಲಿಂಡರನ್ನು ಪೇಟೆಯವರು ಬಳಸಬಹುದಲ್ಲವೇ? ಗೀಸರ್‌ ಅಳವಡಿಕೆಯಿಂದ ನೀರು ಬೇಗ ಬಿಸಿಯಾದರೂ ವಿದ್ಯುತ್‌ ಖರ್ಚಾಗುತ್ತದೆ. ಈ ವಿದ್ಯುತ್ತನ್ನು ಕೃಷಿಕರು ಉಳಿಸಿದರೆ “ಹನಿ ಹನಿಗೂಡಿ ಹಳ್ಳ’ ಎಂಬಂತೆ ರಾಷ್ಟ್ರಕ್ಕೂ ಅಷ್ಟು ಉಳಿತಾಯವಾಯಿತಲ್ಲವೇ? ಮಾತ್ರವಲ್ಲ, ನಮ್ಮ ಪರಂಪರೆಯ ಹಂಡೆ ಸ್ನಾನ ಪದ್ಧತಿಯನ್ನು ಮುಂದುವರಿಸಿದ ಹಾಗೂ ಆಗುತ್ತದೆ. ಇದು ರೈತರಿಂದ ಮಾತ್ರ ಸಾಧ್ಯ.

ಇನ್ನೇನು ಚಳಿಗಾಲ ಕಾಲಿಡುತ್ತಿದೆ. ನಾಯಿ, ಬೆಕ್ಕು, ತಮ್ಮ, ತಂಗಿಯೊಂದಿಗೆ ಚಿಕ್ಕವಳಿದ್ದಾಗ ನಾನು ಸ್ನಾನದ ಮನೆಯ ಉರಿಯುವ ಒಲೆ ಬುಡದಲ್ಲಿ ಕೂತು ಚಳಿ ಕಾಯಿಸುತ್ತಿದ್ದ ಆ ದಿನಗಳು ಕಣ್ಣ ಮುಂದೆ ಬಂದು ಮೈಮನಸು ಬೆಚ್ಚಗಾಗುತ್ತಿದೆ.

– ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next