Advertisement

ಮಾ. 1ರಿಂದ ಆಗುಂಬೆ ಘಾಟಿ ಸಂಚಾರ ಬಂದ್‌

01:00 AM Feb 24, 2019 | Team Udayavani |

ಹೆಬ್ರಿ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಾ.1ರಿಂದ 31ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶ ಹೊರಡಿಸಿದ್ದಾರೆ.

Advertisement

ಕಳೆದ ಜು. 10, 13ರಂದು ಸುರಿದ ಭಾರೀ ಮಳೆಯಿಂದಾಗಿ ಆಗುಂಬೆ ಘಾಟಿಯ 7ನೇ, 14ನೇ ತಿರುವಿನಲ್ಲಿ ಮತ್ತು ಆನೆಬಂಡೆ ಬಳಿ ಗುಡ್ಡ ಕುಸಿತ ಉಂಟಾಗಿ ಭಾಗಶಃ ರಸ್ತೆ ಕುಸಿದಿದ್ದು, ಶಾಶ್ವತ ದುರಸ್ತಿ ಕಾಮಗಾರಿಯನ್ನು ಇದೀಗ ಕೈಗೊಳ್ಳಲಾಗುತ್ತಿದೆ.

ಬದಲಿ ವ್ಯವಸ್ಥೆ
ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದ್ದು ಉಡುಪಿ ಯಿಂದ ಶಿವಮೊಗ್ಗ ಹೋಗುವವರು ತೀರ್ಥಹಳ್ಳಿ-ಮಾಸ್ತಿಕಟ್ಟೆ-ಕುಂದಾಪುರ -ಬಾಳೆಬರೆ ಘಾಟಿ (ಹುಲಿಕಲ್‌ ಘಾಟಿ) ಮೂಲಕ ಹಾಗೂ ಕಾರ್ಕಳದಿಂದ ಹೋಗುವವರಿಗೆ ಶೃಂಗೇರಿ – ತೀರ್ಥಹಳ್ಳಿ ಕುದುರೆಮುಖ ಘಾಟಿ ಮೂಲಕ ಸಂಚರಿಸಬಹುದಾಗಿದೆ.

ಲಘುವಾಹನಗಳಾದ ಸಾಮಾನ್ಯ ಬಸ್‌ಗಳು, ಜೀಪು, ವ್ಯಾನ್‌, ಮಿನಿ ಬಸ್‌, ದ್ವಿಚಕ್ರ ವಾಹನಗಳು ಕುದುರೆ ಮುಖ ಘಾಟಿ ಮೂಲಕ ಸಂಚರಿಸ ಬಹುದಾಗಿದೆ. 

ಘನ ವಾಹನಗಳಾದ ರಾಜಹಂಸ, ಐರಾವತ ಬಸ್‌ಗಳು, ಲಾರಿ, ಬುಲೆಟ್‌ ಟ್ಯಾಂಕರ್‌, ಕಂಟೈನರ್‌ಗಳು ಕಡ್ಡಾಯವಾಗಿ ಮಾಸ್ತಿಕಟ್ಟೆ – ಹೊಸಂಗಡಿ ಮಾರ್ಗದ ಹುಲಿಕಲ್‌ ಘಾಟಿ ಮೂಲಕ ಸಂಚರಿಸಬೇಕು. 

Advertisement

ರೋಗಿಗಳಿಗೆ ತೊಂದರೆ
ಕರಾವಳಿ-ಮಲೆನಾಡ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟಿ ಬಂದ್‌ನಿಂದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಿಂದ ಚಿಕಿತ್ಸೆ ಗಾಗಿ ಮಣಿಪಾಲ ಆಸ್ಪತ್ರೆಯನ್ನು ಅವಲಂಬಿಸಿರುವ ರೋಗಿಗಳಿಗೆ ತೊಂದರೆಯಾಗಲಿದೆ. 

ಉಡುಪಿ ಜಿಲ್ಲೆಯ ಬ್ಯಾಂಕ್‌ ಉದ್ಯೋಗಿಗಳು ಹಾಗೂ ಶಿಕ್ಷಕರು ತೀರ್ಥಹಳ್ಳಿಗೆ ನಿತ್ಯ ಆಗುಂಬೆ ಘಾಟಿ ಮೂಲಕ ಸಂಚರಿಸುತ್ತಿದ್ದು ಅವರಿಗೆ ಸಮಸ್ಯೆಯಾಗಲಿದೆ.

ಎಚ್ಚರಿಸಿದ್ದ  ಉದಯವಾಣಿ
ಘಾಟಿ ರಸ್ತೆ ಕುಸಿದು 7 ತಿಂಗಳುಗಳು ಕಳೆದರೂ ದುರಸ್ತಿ ಕಾಮಗಾರಿಗೆ ಮುಂದಾಗದಿರುವುದನ್ನು ಗಮನಿಸಿ ಉದಯವಾಣಿ ಪತ್ರಿಕೆಯು ಜ. 20ರಂದು ವರದಿ ಪ್ರಕಟಿಸಿತ್ತು. ಚುನಾವಣೆ ಬಂದಾಗ ಯಾವುದೇ ಕಾಮಗಾರಿ ಮಾಡಲು ಆಗುವುದಿಲ್ಲ. ಬಳಿಕ ಮಳೆಗಾಲ ಆರಂಭವಾಗಲಿರುವುದರಿಂದ ಕಾಮಗಾರಿ ಆಸಾಧ್ಯ ಎಂಬ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದು  ಇದಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ, ಹೆದ್ದಾರಿ ಎಂಜಿನಿಯರ್‌ ಶೀಘ್ರ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next