Advertisement

ಎರಡು ಲೋಕಗಳನ್ನು ಬೆಸೆಯಬಲ್ಲ ಅಗ್ನಿತತ್ತ್ವ

08:49 PM Aug 10, 2019 | mahesh |

ಬದುಕು ಮಾಮೂಲಿನ ಲಯದಲ್ಲಿ ಸಾಗುತ್ತಿದೆ; ಇಲ್ಲಿ ಅಂಥ ವಿಶೇಷಗಳೇನಿಲ್ಲ ; ಎಲ್ಲವೂ ಸಹಜ ಲಯದಲ್ಲಿ ಸಾಗುತ್ತದೆ ಎಂದು ಸಾಮಾನ್ಯವಾಗಿ ನಾವು ಅಂದುಕೊಂಡಿರುತ್ತೇವೆ. ಆದರೆ, ನಮಗೆ ಗೊತ್ತಿಲ್ಲದಂತೆ ಇದೇ ಸಾಮಾನ್ಯ ಬದುಕಿನ ಅನುದಿನದ ಅನುಭವಗಳಲ್ಲಿ ಚಕಿತಗೊಳಿಸುವ ಅಂಶಗಳು ತುಂಬಿಕೊಂಡಿವೆ. ನಾವು ಹೇಗೆ ನೋಡುತ್ತೇವೋ ಹಾಗೆ ನಮಗೆ ಕಾಣುತ್ತದೆ ಎಂಬ ಸತ್ಯವು ಇಂಥ ಅಚ್ಚರಿಗಳಲ್ಲಿ ಒಂದು. ಅಂದರೆ ನಮಗೆ ಗೊತ್ತಿಲ್ಲದೇ ನಮ್ಮ ನೋಟ ಯಾವುದೋ ಒಂದು ಕೋನದಲ್ಲಿ ಒಂದು ಅnಜlಛಿ ನಲ್ಲಿ ನೆಲೆಯಾಗಿರುತ್ತದೆ. ಆ ಕೋನದಿಂದ ಕಾಣುವಷ್ಟು ಮಾತ್ರ, ಕಾಣುವಂತೆ ಮಾತ್ರ ನಮ್ಮ ಕಣ್ಣಿಗೆ ಕಾಣ್ಕೆಯು ಒದಗಿಬರುವುದು. ನಮ್ಮ ನೋಟದ ಕೋನ ಹೇಗೆ ಸಜ್ಜಾಗಿದೆಯೋ ಅದರಾಚೆಗೆ ಇರುವುದನ್ನು ನಾವು ನೋಡಲಾರೆವು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಾವು ಏನನ್ನು ಹೇಗೆ ನೋಡಬಯಸುವೆವೋ ಹಾಗೇ ನಮಗೆ ಕಾಣಿಸುವುದು!

Advertisement

ಈ ಮಾತಿಗೆ ಪ್ರತಿವಾದ ಹೂಡಬಹುದು. ನಮ್ಮನ್ನು ನಾವು ಧನಿಕರನ್ನಾಗಿ ನೋಡಬಯಸುವೆವು; ಹಾಗೆಯೇ ಆಗುವುದು ಸಾಧ್ಯವೇ ಎಂದು. ಆದರೆ, ವಿಷಯ ಅದಲ್ಲ. ಯಾವುದರದ್ದೇ ಬಯಕೆ ಎಂದರೂ ನಮ್ಮಲ್ಲಿರುವುದು ಆ ಕುರಿತಾದ ಅತೃಪ್ತಿ. ಈ ಅತೃಪ್ತಿಯ ಮೂಲಕವೇ ಲೋಕವನ್ನು ನೋಡುವೆವು. ನಮಗೆ ಅತೃಪ್ತಿಯೇ ಗೋಚರಿಸುವುದು. ನಾವು ಸಜ್ಜುಗೊಂಡ ರೀತಿ ಹೇಗೆ ನಮಗೆ ಒದಗಿಬರುವ ನೋಟ ಅಥವಾ ಅನುಭವ- ಹಾಗೆ. ಲೋಕವನ್ನು ನೋಡಿ ಅದರಂತಾಗಬೇಕೆಂಬ ಹಂಬಲ ಹುಟ್ಟಿ ಅದನ್ನು ಅನುಕರಿಸತೊಡಗಿದೆವು- ಇದು ನಮ್ಮ ಬಾಳಿನ ಮೂಲ ತಥ್ಯ. ಈ ತಥ್ಯದ ಇನ್ನೊಂದು ಮುಖವಿದು- ನಾವು ಹೇಗೆ ನೋಡುತ್ತೇವೆಯೋ ಹಾಗೆ ನಮಗೆ ಗೋಚರಿಸುತ್ತದೆ ಎಂಬುದು. ಈ ಒಳ ಅರಿವನ್ನು ಮೊದಲಾಗಿ ನಮ್ಮಲ್ಲಿ ಉಂಟುಮಾಡುವುದೇ ಎಲ್ಲ ತಾತ್ವಿಕ ವಾಗ್ಮಯಗಳ ಉದ್ದೇಶವಾಗಿರುವುದು. ಈ ಅರಿವು ಉಂಟಾಗುವಾಗ ದೊಡ್ಡದೊಂದು ಆಶ್ಚರ್ಯದ ಜೊತೆಗೆ ಒಂದು ಜಿಜ್ಞಾಸೆಯೂ ಹುಟ್ಟಿಕೊಳ್ಳುವುದು. ಅದೇನೆಂದರೆ, ನಾವು ಹೇಗೆ ನೋಡುತ್ತೇವೋ ಹಾಗೆ ಲೋಕ ನಮ್ಮೆದುರು ಕಾಣಿಸಿಕೊಳ್ಳುತ್ತದೆ ಎಂದಾದರೆ ನಿಜವೆಂದು ನೆಚ್ಚುವುದು ಯಾವುದನ್ನು? ನಾವು ನೋಡಿದ್ದನ್ನು ನಿಜ ಎನ್ನುವುದೋ? ನಾವು ನೋಡಲಾಗದೇ ಇದ್ದುದನ್ನು ನಿಜ ಎನ್ನುವುದೋ? ಹೀಗೆ ನೋಡಬಯಸಿದ್ದರಿಂದ ಹೀಗೆ ಕಂಡಿತಾಗಿ ಹೀಗಲ್ಲದೆ ಬೇರೆ ರೀತಿ ನೋಡಬಯಸಿದ್ದರೆ ಹಾಗೆಯೇ ಕಾಣಿಸುತ್ತಿತ್ತಲ್ಲವೆ? ಈ ಸಾಧ್ಯತೆಯನ್ನು ಒಪ್ಪಲೇಬೇಕಾಯಿತು. ಅಂದಾಗ ನಮ್ಮ ಬದುಕು ಅನೇಕ ಸಾಧ್ಯತೆಗಳಿಗೆ ತೆರೆದುಕೊಂಡ ಒಂದು ವ್ಯವಹಾರವಾಯಿತು. ನಾವು ಬದುಕಿನಲ್ಲಿ ಏನೂ ಆಗಬಹುದಿತ್ತು, ಈಗ ಹೀಗಾಗಿದ್ದೇವೆ ಎಂದು ಎಲ್ಲರಿಗೂ ಒಂದಲ್ಲ ಒಂದು ಕ್ಷಣ ತೀವ್ರವಾಗಿ ಅನ್ನಿಸುವುದು ಈ ಸಾಧ್ಯತೆಯ ಕಾರಣದಿಂದಲೇ. ಹೀಗಿರುವಲ್ಲಿ ನೆಚ್ಚುವುದು ಯಾವುದನ್ನು? ಯಾವುದು ನಿಜ?- ಎಂಬ ಜಿಜ್ಞಾಸೆ. ನಮ್ಮದೇ ಮಿತಿಯಿಂದಾಗಿ ನಮಗೆ ದಕ್ಕಿದಷ್ಟು ಮಾತ್ರವನ್ನೇ ಬದುಕಿನ ಸತ್ಯವೆನ್ನೋಣವೆ? ಇದು ನಮ್ಮ ಮಿತಿ ಎಂದು ಅರಿವಿಗೆ ಬಂದಮೇಲೆ ಇದನ್ನು ಮಟ್ಟಿಗೆ ಸತ್ಯವೆನ್ನೋದು ಹೇಗೆ? ನಮ್ಮ ಮಿತಿಯ ಆಚೆಗೆ ಇರುವ ಅಗಾಧ ಸಾಧ್ಯತೆಯ ಸತ್ಯವನ್ನು ನಿರಾಕರಿಸುವುದಾದರೂ ಹೇಗೆ?

ಉಪನಿಷತ್ತು, ಬದುಕಿನ ಈ ಮೂಲ ಜಿಜ್ಞಾಸೆಗಳ ಸುತ್ತಲೇ ಸುಳಿಯುವ ಚಿಂತನಶೀಲ ವಾಗ್ಮಯವಾದುದರಿಂದ ಅದು ವ್ಯವಹಾರ ಲೋಕಕ್ಕೆ ಸಾಧ್ಯತೆಯ ಲೋಕವನ್ನು ಬೆಸೆದು ನೋಡುವುದು! ಪ್ರತ್ಯಕ್ಷ ಲೋಕಕ್ಕೆ ಪರೋಕ್ಷ ಲೋಕವನ್ನು; ವರ್ತಮಾನಕ್ಕೆ ಭವಿಷ್ಯವನ್ನು ಬೆಸೆಯುವುದು. ಬೆಸೆಯುವ ನಿರಾಕರಣ ಮಾಡದ ಅರಿವೇ ಉಪನಿಷತ್ತಿಗೆ ಉಪಾದೇಯವಾಗಿದೆ. ನಾನು ಬ್ರಹ್ಮವನ್ನು ನಿರಾಕರಿಸುವಂತಾಗದಿರಲಿ, ಮತ್ತು ಬ್ರಹ್ಮವು ನನ್ನನ್ನು ನಿರಾಕರಿಸದಿರಲಿ- ಅನಿರಾಕರಣ ಮಸ್ತು- ಎನ್ನುವುದೇ ಉಪನಿಷತ್ತಿನ ಶಾಂತಿಪಾಠವಾಗಿದೆ! ಹೀಗೆ ಎರಡು ಲೋಕಗಳನ್ನು ಬೆಸೆಯಬಲ್ಲ ಒಂದು ತಣ್ತೀದ ಕಾಣ್ಕೆಗಾಗಿ ಉಪನಿಷತ್ತು ಹುಡುಕಾಡುವುದು. “ಅಗ್ನಿ’ಯು ಅಂಥ ಒಂದು ತಣ್ತೀ !

ಅಗ್ನಿಯು ಮರ್ತ್ಯವನ್ನೂ ಸ್ವರ್ಗವನ್ನೂ ಬೆಸೆಯಬಲ್ಲುದು. ಹಾಗೆ ಬೆಸೆಯುವಲ್ಲಿ ಅದು ಬದುಕನ್ನೂ ಸಾವನ್ನೂ ಬೆಸೆಯಲೇಬೇಕು. ಬದುಕು ಮತ್ತು ಸಾವು ಪರಸ್ಪರ ತಳಕು ಹಾಕಿಕೊಂಡೇ ಇವೆ ಎಂಬ ಅರಿವೇ ಉಜ್ವಲವಾದ ಒಂದು ಅರಿವಲ್ಲವೆ? ಅಗ್ನಿಯಂತೆ ಬೆಳಗುವ ಅರಿವಲ್ಲವೆ? ಅಂದರೆ ಮನುಕುಲದ ಪೂರ್ವಜರು ಅಗ್ನಿಯನ್ನು ಕರ್ಮಕಾಂಡದ ಪ್ರತಿನಿಧಿಯನ್ನಾಗಿ ಮಾತ್ರ ಕಂಡುದಲ್ಲ. ಜ್ಞಾನದ-ಅರಿವಿನ ಸಂಕೇತವನ್ನಾಗಿಯೂ ಕಂಡರು. ಜ್ಞಾನಾಗ್ನಿ ದಗ್ಧ ಕರ್ಮಾಣಂ ಎಂಬ ವಿಶೇಷವಾದ ಮಾತೊಂದು ಗೀತೆಯಲ್ಲಿದೆ. ಅರಿವಿನ ಬೆಂಕಿಯಿಂದ ಕರ್ಮ ಜಡತೆಯೆಲ್ಲ ಸುಟ್ಟುರಿದ ಅನುಭವವನ್ನು ಈ ಮಾತು ಹೇಳುತ್ತದೆ. ಅರಿವಿಗೆ ಸುಡುವ ಗುಣ!

“ಅಗ್ನಿ’ಯನ್ನು ಹೇಗೆಲ್ಲ ನೋಡಿದರು ಎಂದು ಆಶ್ಚರ್ಯವಾಗುತ್ತದೆ. ಮರದ ತುಂಡುಗಳೆರಡನ್ನು ಚಕಮಕಿ ತಿಕ್ಕಿ ಉಂಟಾದ ಅಗ್ನಿ- ಯಜ್ಞಾಗ್ನಿಯಾಗಿ ಕರ್ಮಮಾರ್ಗವನ್ನು ರೂಪಿಸಿ ಮನುಷ್ಯ ಜೀವವನ್ನು ಸ್ವರ್ಗದ ತನಕ ಒಯ್ಯುವ ಹಾದಿಯನ್ನು ಹಾಸಿದರೆ ಇದೇ “ಅಗ್ನಿ’, ಹೀಗೆ ತಿಕ್ಕಿ ಪ್ರಕಟವಾಗುವ ಮುನ್ನ ಎಲ್ಲಿ-ಹೇಗೆ ಅಡಗಿತ್ತು ಎಂಬ ಚಿಂತನೆಯ ಎಳೆಯೊಂದು ಬಳ್ಳಿಯಂತೆ ಬೆಳೆಯುತ್ತ, ಹಸಿರುಕ್ಕಿ ನಳನಳಿಸುತ್ತಿರುವ ಮರದೊಳಗಡೆ- ಮರದ ಪ್ರಾಣಸಣ್ತೀವಾಗಿ-ಪ್ರಾಣಾಗ್ನಿಯಾಗಿ-ಪೋಷಕವಾಗಿ, ಹಸಿರಿಗೆ ಕಾರಣವಾಗಿ ಇದೇ ಅಗ್ನಿ ಅಡಗಿತ್ತು ಎಂಬ “ದರ್ಶನ’ದ ತನಕ ಒಯ್ದಿತು! ಹೊರಬಂದರೆ ಸುಡಬಲ್ಲ “ಅಗ್ನಿ’, ಒಳಗೆ ಇದ್ದಾಗ ಅದ್ಭುತವಾದ ಜೀವಂತಿಕೆಗೆ ಕಾರಣವಾಗುವ ವಿಸ್ಮಯಕ್ಕೆ ಬೆರಗಾಗದವರಿಲ್ಲ ! ಈ ಬೆರಗು, ಹೊರಗೆ-ಒಳಗೆ ಎನ್ನುವ ಸ್ಥಿತಿಗತಿಗಳ ಬಗ್ಗೆಯೇ ಹೊಸ ಬೆಳಕನ್ನೆ ಚೆಲ್ಲಿತು. ಅಂದರೆ ಒಳಗಿರುವುದೇ ಹೊರಗೆ ಪ್ರಕಟವಾಗುವುದರಿಂದ, ಈ ಹೊರಗೆ ಪ್ರಕಟವಾಗುವ ಸ್ಥಿತಿಯನ್ನೇ ನಾವು ನಮ್ಮ “ಒಳಗೆ’ ಮಾಡಿಕೊಳ್ಳುವುದಕ್ಕೆ ಸಾಧ್ಯವಾದರೆ, ಬಹಿರ್ಮುಖವೂ ನಮ್ಮ ಅಂತರಂಗದ ಅಂತರ್ಮುಖ ಅವಸ್ಥೆಯ ಒಂದು ಭಾಗ ಎಂದು ಅರಿತೆವಾದರೆ, ಹೊರಗಿನ “ಕಾಲ’ವು ನಮ್ಮ ಒಳಗಿನ “ಕಾಲ’ದಲ್ಲೇ ಅಳವಟ್ಟರೆ- ಅಖಂಡವಾದ ಜೀವಂತಿಕೆಯ ಅನುಭವವೊಂದು ನಮ್ಮದಾಗುವುದು ಎಂಬ ಹೊಸ ಅರಿವಿನ ಬೆಳಕು! ಮರದೊಳಗಣ ಮಂದಾಗ್ನಿಯಂತೆ ಎಂದು ತಮ್ಮ ಇಷ್ಟದೈವವನ್ನು ಬಾಯ್ತುಂಬ ಬಣ್ಣಿಸುವುದು ಅನುಭಾವಿಗಳಿಗೆ ಬಹುಪ್ರಿಯವಾದದ್ದು. ದಾರುಫ‌ು ಅಗ್ನಿಮಿವ ಸ್ಥಿತಂ ಎಂದು ಭಾಗವತ ಇದನ್ನೇ ಹೇಳಿತ್ತು! ಮರದ ತುಂಡುಗಳನ್ನು ತಿಕ್ಕಿ ಅಗ್ನಿಯನ್ನು ಹೊಮ್ಮಿಸುವುದು ಬಹಿರ್ಮುಖ ಯಜ್ಞವಾದರೆ, ಮರದೊಳಗಣ ಮಂದಾಗ್ನಿಯನ್ನು ಗುರುತಿಸುವುದು ಅಪೂರ್ವವಾದ ಅಂತರ್ಯಜ್ಞವೆಂದು ಎಲ್ಲರೂ ಒಪ್ಪುವರು. ಕನ್ನಡದ ಅದ್ಭುತ ವ್ಯಕ್ತಿಯಾದ ಅಲ್ಲಮ ಇನ್ನೂ ಒಂದು ಹೆಜ್ಜೆ ಮುಂದಿರುವಂತಿದೆ! ಮರದೊಳಗಣ ಮಂದಾಗ್ನಿ ಎಂದೂ ಅಲ್ಲಮ ಬಳಸುವನು. ಜೊತೆಗೆ ಶಿಲೆಯೊಳಗಣ ಪಾವಕನಂತೆ ಎಂದೂ ಉದ್ದಾಮವಾಗಿ ಹೇಳುವನು. ಚಕಮಕಿ ಕಲ್ಲನ್ನು ಉಜ್ಜಿ ಬೆಂಕಿಯನ್ನುಂಟುಮಾಡುವರೇನೋ ನಿಜ. ಆ ಬೆಂಕಿ ಕಲ್ಲಿನೊಳಗಿರುವುದೂ ನಿಜ. ಆದರೆ, ಹಸಿರು ಮರದಂತೆ ಜೀವಂತಿಕೆಯ ಬೇರೆ ಯಾವ ಕುರುಹುಗಳೂ ಕಾಣಿಸದೆ, ಶಿಲೆಯಲ್ಲಿ ಆ ಬೆಂಕಿ; ಜಡದಂತೆ ಬಿದ್ದಿರುವಲ್ಲಿ ಅಲ್ಲಿಯೂ ಪಾವಕನನ್ನು (ಅಗ್ನಿ) ಒಳನೋಟದಿಂದಲೇ ಕಂಡ ಅಲ್ಲಮ ಈ ಅರ್ಥದಲ್ಲಿ ಕಲ್ಲೆದೆಯವನೇ ನಿಜ!

Advertisement

ಈಚೆಗೆ ಭೂ-ವಿಜ್ಞಾನ ಕ್ಷೇತ್ರದಲ್ಲಿ ಪರಿಣತರಾದ ಮಿತ್ರರೊಬ್ಬರು- ಅತ್ಯಂತ ಕಠಿಣವಾದ ಶಿಲಾಖಂಡಗಳನ್ನು- ಭೂಮಿಯಲ್ಲಿ ಅವು ಎಲ್ಲೆಲ್ಲಿ ಇವೆ ಎಂದು ಹುಡುಕುತ್ತಿದ್ದೇವೆ ಎಂದರು. ಮನುಷ್ಯನೇ ಇದ್ದಾನಲ್ಲ ಎಂಬ ಮಾತಿಗೆ ತುಸು ನಕ್ಕು- “ಈ ಶಿಲಾಖಂಡಗಳೇಕೆ ಗೊತ್ತೋ? ಅಣುಸ್ಥಾವರಗಳಲ್ಲಿ ಅಣುಶಕ್ತಿಯನ್ನು ಉತ್ಪಾದಿಸಿದ ಮೇಲೆ ಉಳಿಯುವ ಜೀವಸಂಕುಲಕ್ಕೆ ಅತ್ಯಂತ ಮಾರಕವಾದ ಬೆಂಕಿಯಂಥ ಅಣುತ್ಯಾಜ್ಯವನ್ನು , ಈ ಶಿಲಾಖಂಡಗಳನ್ನು ಕೊರೆದು ಅದರೊಳಗೆ ತುಂಬಿಸಿ ಭದ್ರವಾಗಿ ಮುಚ್ಚಿ ಭೂಗರ್ಭದಲ್ಲಿ ಹೂಳಬೇಕಾಗಿದೆ- ಅದಕ್ಕಾಗಿ ಎಂದರು! “ಶಿಲೆಯೊಳಗಣ ಪಾವಕನಂತೆ’ ಎಂಬ ಅಲ್ಲಮನ ನುಡಿಗಟ್ಟು ನೆನಪಾಯಿತು! “ಪಾವಕ’ ಎಂಬ ನುಡಿ ಮತ್ತೆ ಮತ್ತೆ ಕೆಣಕುತ್ತಿತ್ತು. ಅದಿರಲಿ. ಬಹಿರ್ಮುಖತೆಯ ಅವಸ್ಥೆ ಹೀಗಿದೆ; ಅಂತರ್ಮುಖತೆಯ ಅವಸ್ಥೆ ಹಾಗಿದೆ- ಅಷ್ಟೆ !

ಅರಿವೆನ್ನುವುದು ಅಗ್ನಿಯಂತೆ ಎಂಬ ಕಾಣ್ಕೆ ಒಮ್ಮೆ ಹೊಳೆದ ಮೇಲೆ- “ಅಗ್ನಿ’ಗೆ ಅರಿವಿಗೆ ಸಂಬಂಧಿಸಿದ ಯಾವೆಲ್ಲ ರೂಪಗಳು ಒದಗಬಹುದು ನೋಡಿ. ಅಗ್ನಿ ಎಂದರೆ “ವಾಕ್‌’ ಎನ್ನುವುದು ವೈದಿಕ ಕಾಣ್ಕೆಯೇ ಆಗಿದೆ. ಅರಿವಿಗೂ-ಭಾಷೆಗೂ ನಿಕಟಸಂಬಂಧವಲ್ಲವೆ? ವೈದಿಕವೆಂದೇನು? ಎಲ್ಲ ಅನುಭಾವಿಗಳ ಕಾಣ್ಕೆಯೂ ಹಾಗೆಯೇ ಇದೆ. ಮಾತೆಂಬುದು ಜ್ಯೋತಿರ್ಲಿಂಗ- ಎಂದರೇನು? ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು- ಎಂದರೇನು? ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು- ಎಂದರೇನು? ಈ ಎಲ್ಲವೂ ನುಡಿಗೂ-ಹೊಳೆಯುವ ಬೆಳಕಿಗೂ ಇರುವ ಸಂಬಂಧವನ್ನು ಹೇಳುತ್ತವೆ. ಅಗ್ನಿಯನ್ನು “ವಾಕ್‌’ ಎನ್ನುವಾಗಲೂ- ಅಗ್ನಿಯೂ ಮಾತೂ ಎರಡೂ ಬೆಳಕಾದುದರಿಂದಲೇ ಈ ಸಮೀಕರಣ.

ಮಾತು ಎಲ್ಲವನ್ನೂ ಬೆಸೆಯುತ್ತದೆ. ಸ್ವರ್ಗ-ಮರ್ತ್ಯಗಳನ್ನೂ ಬೆಸೆಯುತ್ತದೆ. ಬೆಸೆಯುವುದು ಪ್ರೀತಿಯ ಗುಣ ಎಂದು ಬೇರೆ ಹೇಳಬೇಕಿಲ್ಲ. ಪ್ರೀತಿಯ ಗುಣ ಎಂದಾಗ “ಬೆಂಕಿ’ಯ ನೆನಪಾದವರಿದ್ದಾರೆಯೆ? ಇಲ್ಲಿದೆ ನೋಡಿ ಒಂದು ಉಲ್ಲೇಖ: Someday, after we have mastered the winds, the waves, the tide and gravity, we shall harness for God the energies of love. Then for the second time in the history of the world, man will have discovered fire. ಎಂದೋ ಒಂದು ದಿನ ಈ ಬೀಸುವ ಗಾಳಿ, ಈ ಅಲೆಗಳ ಉಬ್ಬರದ ವೇಗ, ಎಲ್ಲವನ್ನೂ ತನ್ನ ಕೇಂದ್ರದತ್ತ ಸೆಳೆವ ಈ ನೆಲದ ಗುರುಣ್ತೀ ಬಲ- ಇವನ್ನೆಲ್ಲ ತಮ್ಮ ವಶಮಾಡಿಕೊಂಡ ಮೇಲೆ, ಮನುಷ್ಯ, “ಪ್ರೀತಿ’ಯ ಧಾರಣಶಕ್ತಿಯನ್ನು , ದೇವರನ್ನೇ ಹೊರಬಲ್ಲ ಧಾರಣಶಕ್ತಿಯನ್ನು ಮನಗಾಣುವನು. ಆ ಸಂಭವವಾದರೋ ಮನುಷ್ಯ ಬೆಂಕಿಯನ್ನು ಇನ್ನೊಮ್ಮೆ ಕಂಡುಹಿಡಿದಂತೆ ಇರುವುದು. ಈ ಮಾತುಗಳನ್ನಾಡಿದವನು ಸ್ವಯಂ ವಿಜ್ಞಾನಿಯೂ ಆಧ್ಯಾತ್ಮಿಕ ಸಾಧಕನೂ ಆದ Pierre Teilhard De Chardin.

ಮನುಷ್ಯ ಬೆಂಕಿಯನ್ನು ಕಂಡುಕೊಂಡದ್ದೆಂದರೆ ತನ್ನ ಅಂತರಂಗ ಬಹಿರಂಗ ಜಗತ್ತನ್ನೇ ಕಂಡುಕೊಂಡಂತೆ! ಬೆಂಕಿಯನ್ನು ಕಂಡುಕೊಂಡ ಕ್ಷಣದಲ್ಲಿಯೇ “ಭಾಷೆ’ಯ ಮೂಲ ಪರಿಕಲ್ಪನೆಯೂ ಅವನ ಮನದಾಳದಲ್ಲಿ ಹೊಳೆದಿರಬೇಕು! ಏಕೆಂದರೆ “ಭಾಷೆ’ ಎಂದರೆ ಬೆಳಕು ಎಂದೇ ಅರ್ಥ.
ನಚಿಕೇತ- ಅಗ್ನಿಯ ರಹಸ್ಯವನ್ನು ನೀನು ಬಲ್ಲೆ- ನನಗದನ್ನು ತಿಳಿಸುವ ಕೃಪೆ ಮಾಡು ಎನ್ನುತ್ತಾನೆ; ಯಮನೊಡನೆ. ಅಗ್ನಿ ಎಂದರೆ ಮಾತೂ ಹೌದಾಗಿ- ಸಾವಿನ ದೊರೆ, ಮಾತೇನು; ಮಾತಿಗಿಂತ ಹೆಚ್ಚಾಗಿ ಮೌನದ ರಹಸ್ಯವನ್ನೇ ಬಲ್ಲವನಲ್ಲವೆ ಎನಿಸುತ್ತದೆ.

ಲಕ್ಷ್ಮೀಶ ತೋಳ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next