Advertisement

ಆರ್ ಎಸ್ಎಸ್ ನವರನ್ನು ಸೇನೆಯಲ್ಲಿ ನುಸುಳಿಸಲು ಅಗ್ನಿಪಥ್ : ವೀರಪ್ಪ ಮೊಯ್ಲಿ

09:38 PM Jun 17, 2022 | Team Udayavani |

ಚಿಕ್ಕಬಳ್ಳಾಪುರ: ದೇಶದ ಯುವಜನರನ್ನು ನಿರುದ್ಯೋಗದ ಸಮಸ್ಯೆಯಲ್ಲಿ ಸಿಲುಕಿಸುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಿರುವ ‘ಅಗ್ನಿಪಥ್’ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಿ ವಾಮಾ ಮಾರ್ಗದಲ್ಲಿ ಆರ್ ಎಸ್ಎಸ್ ನವರನ್ನು ಸೇನೆಯಲ್ಲಿ ಸೇರಿಸುವ ಹುನ್ನಾರವನ್ನು ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.

Advertisement

ತಾಲೂಕಿನ ನಂದಿಕ್ರಾಸ್ ಬಳಿ ಇರುವ ಶ್ರೀ ಕೃಷ್ಣ ಕನ್ವೆನ್ಷನ್ ಹಾಲ್‍ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಭಾಗವಹಿಸಿ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನೌಕಾಪಡೆ, ವಾಯುಸೇನೆ, ಸೇನೆಯಲ್ಲಿ ಸೇರಿ ಸೇವೆ ಮಾಡುವುದು ಒಂದು ರಾಷ್ಟ್ರಭಕ್ತಿಯ ಸಂಕೇತ, ಆದರೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗ್ನಿಪಥ್ ಎಂಬ ಯೋಜನೆಯನ್ನು ಜಾರಿಗೊಳಿಸಿ ಅಗ್ನಿಯಲ್ಲಿ ಕೈಹಾಕುವ ಕೆಲಸವನ್ನು ಮಾಡಿದೆ ತಕ್ಷಣ ಯೋಜನೆಯನ್ನು ರದ್ದುಪಡಿಸಬೇಕು ಇಲ್ಲದಿದ್ದ ಪಕ್ಷದಲ್ಲಿ ಬಿಜೆಪಿ ಪಕ್ಷ ಯುವಕರ ರೋಷಕ್ಕೆ ಭಸ್ಮವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವ ಆಸೆಯನ್ನು ತೋರಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಎಲ್ಲಾ ವಾಗ್ದಾನವನ್ನು ಮರೆತ್ತಿದೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಸಾಧ್ಯವಾಗದೆ ಇರುವ ಉದ್ಯೋಗವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿರುವ ಕೇಂದ್ರ ಸರ್ಕಾರ ಪ್ರತಿಷ್ಠಿತ ಸೇನೆ ನೇಮಕಾತಿಯಲ್ಲಿ ಹಿಂಬಾಗಲಿನಿಂದ ಆರ್.ಎಸ್.ಎಸ್.ನವರನ್ನು ಸೇರಿಸುವ ಸಲುವಾಗಿ ಅಗ್ನಿಪಥ ಯೋಜನೆಯನ್ನು ಜಾರಿಗೊಳಿಸಲು ಹೊರಟಿದೆ ಕೂಡಲೇ ಈ ಯೋಜನೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಸೋಲಿನ ಭೀತಿಯಿಂದ ಇಡಿ ದುರ್ಬಳಕೆ
ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃಧ್ಧಿ ಮರಿಚೀಕೆಯಾಗಿದೆ ನಿರುದ್ಯೋಗದ ಸಮಸ್ಯೆ ತಾಂಡವಾಡುತ್ತಿದೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಇನ್ನೂ ಪೆಟ್ರೋಲ್-ಡೀಸೆಲ್ ದರಗಳ ಏರಿಕೆಯನ್ನು ಪ್ರಶ್ನಿಸುವ ಹಾಗೆಯೆಯಿಲ್ಲ ಕಳೆದ 8 ವರ್ಷಗಳ ಅವಧಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚು ಹಾಕಲು ಮತ್ತು ಮುಂಬುರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸೋಲಿನ ಭೀತಿಯಿಂದ ಹತಾಶರಾಗಿ ಸಿಬಿಐ-ಇಡಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ರಾಹುಲ್‍ಗಾಂಧಿ ಸಹಿತ ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡಿ ಸೇಡಿನ ರಾಜಕಾರಣ ಮಾಡಲು ಹೊರಟಿದೆ ಇದರ ವಿರುಧ್ಧ ದೇಶಾದ್ಯಂತ ಹೋರಾಟ ನಡೆಯುತ್ತಿದ್ದು ಜನಸಾಮಾನ್ಯರು ಈ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ ಎಂದರು.

ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಾಶ ಮಾಡಲು ಹುನ್ನಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಬಲಿಷ್ಠಗೊಳಿಸುವ ಬದಲಿಗೆ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿ ಸರ್ವಾಧಿಕಾರದ ಪಟ್ಟವನ್ನು ಏರಲಕ್ಕೆ ಹುನ್ನಾರ ನಡೆಸಿದ್ದಾರೆ ದೇಶದಲ್ಲಿ ಭುಗಲಿದ್ದಿರುವ ಅಗ್ನಿಯನ್ನು ನಂಧಿಸುವ ಕೆಲಸವನ್ನು ಮಾಡಬೇಕು ಅದು ಬಿಟ್ಟು ದೇಶಭಕ್ತಿಯ ಸಂಕೇತವಾಗಿರುವ ಸೇನೆಯಲ್ಲಿ ಸೇರಿ ಸೇವೆ ಮಾಡಲು ಲಕ್ಷಾಂತರ ಯುವಕರು ಸನ್ನದ್ದರಾಗಿದ್ದಾರೆ ಕಳೆದ ಎರಡು ಮೂರು ವರ್ಷಗಳಿಂದ ಆರ್ಮಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಅಗ್ನಿಪಥ ಎಂಬ ಯೋಜನೆಯನ್ನು ಜಾರಿಗೆ ತರಲು ಹೊರಟಿರುವುದು ಸೂಕ್ತವಲ್ಲ ಕೂಡಲೇ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

Advertisement

ಕಾಂಗ್ರೆಸ್ ಪಕ್ಷದ ನಾಯಕರ ರಾಹುಲ್ ಗಾಂಧಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ ಜೋಡು ಅಭಿಯಾನ ಆರಂಭಿಸಲು ಹೊರಟಾಗ ಯುವಕರನ್ನು ದಾರಿತಪ್ಪಿಸಿ ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಈಗಾಗಲೇ ವರ್ಚಸ್ಸು ಕಳೆದುಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಇಡಿಯನ್ನು ದುರ್ಬಳಕೆ ಮಾಡಿಕೊಂಡು ರಾಹುಲ್‍ಗಾಂಧಿ ಅವರನ್ನು ಕಿರುಕುಳ ನೀಡಲು ಮುಂದಾಗಿದ್ದಾರೆ ಕಾಂಗ್ರೆಸ್ ಪಕ್ಷ ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ ನ್ಯಾಯಕ್ಕಾಗಿ ಜನರ ಬಳಿ ತೆರಳುತ್ತೇವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತ ಮತ್ತು ಆಡಳಿತ ವೈಫಲ್ಯಗಳ ಕುರಿತು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಅಭಿಯಾನವನ್ನು ನಡೆಸುತ್ತೇವೆ ಎಂದರು.

ಪ್ರಪಂಚದ ಭ್ರಷ್ಟ ಪಕ್ಷ ಬಿಜೆಪಿ

ಇವತ್ತು ಪ್ರಪಂಚದಲ್ಲಿ ಯಾವುದಾದರೂ ಭ್ರಷ್ಟ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ ಎಂದು ದೂರಿದ ಮಾಜಿ ಮುಖ್ಯಮಂತ್ರಿ ಕಾರ್ಪೋರೇಟ್ ಕಂಪನಿಗಳಿಗೆ ರಿಯಾಯಿತಿ ನೀಡಿದ್ದಾರೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಹರಸಾಹಸ ಮಾಡಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟಿದ್ದಾರೆ ಈ ದೇಶದ ಜನ ಎಲ್ಲವನ್ನು ನೋಡುತ್ತಿದ್ದಾರೆ ಸತ್ಯವನ್ನು ಮುಚ್ಚಲು ಸಾಧ್ಯವಿಲ್ಲ ಎಂದ ಅವರು ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾಗಾಂಧಿ ಮತ್ತು ರಾಹುಲ್‍ಗಾಂಧಿ ಅವರಿಗೆ ಅಧಿಕಾರದ ವ್ಯಾಮೋಹ ಇಲ್ಲ ಅದು ಇದ್ದಿದ್ದರೆ ಅವರು ಈ ದೇಶದ ಉನ್ನತಸ್ಥಾನವನ್ನು ಅಲಂಕರಿಸಬಹುದಿತ್ತು ಅದು ಮಾಡಿಲ್ಲ ಬಿಜೆಪಿಯ ಮುಖವಾಡ ಕಳಚಿ ಬೀಳುವ ದಿನಗಳು ದೂರ ಇಲ್ಲವೆಂದು ಭವಿಷ್ಯ ನುಡಿದರು.

ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲಾ ರಂಗಳಲ್ಲಿ ವಿಫಲವಾಗಿದೆ ರೈತ ಮತ್ತು ಜನ ವಿರೋಧಿ ನೀತಿಗಳಿಂದ ಎಲ್ಲರು ರೋಸಿ ಹೋಗಿದ್ದಾರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಪಾಠ ಕಲಿಸಲು ಸರ್ವಸನ್ನದ್ದರಾಗಿದ್ದಾರೆ ಈ ಹಿಂದೆ ಪೋಲಿಸ್ ಇಲಾಖೆಯಲ್ಲಿ ಆರ್.ಎಸ್.ಎಸ್‍ನರನ್ನು ಸೇರಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ನಾನು ಧ್ವನಿ ಎತ್ತಿದೆ ಇದೀಗ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯ ಹೆಸರಿನಲ್ಲಿ ಆರ್.ಎಸ್.ಎಸ್.ನವರನ್ನು ಸೇನೆಯಲ್ಲಿ ಸೇರಿಸಲು ಹರಸಾಹಸ ಮಾಡುತ್ತಿದೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್‍ನ ಉಸ್ತುವಾರಿ ವಿ.ಎಸ್.ಉಗ್ರಪ್ಪ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ನವಸಂಕಲ್ಪ ಚಿಂತನಾ ಶಿಬಿರದಲ್ಲಿ ತೆಗೆದುಕೊಳ್ಳಲಾಗಿದೆ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುಧ್ಧ ಹೋರಾಟಕ್ಕಾಗಿ ಬಳಸಿದ ನ್ಯಾಷನಲ್ ಹೆರಾಲ್ಡ್‍ವನ್ನು ಉಳಿಸುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಆದರೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಯಾಗದೆ ಇರುವ ಬಿಜೆಪಿ ಮತ್ತು ಸಂಘ ಪರಿವಾರದವರು ಅದನ್ನು ಮುಗಿಸಲು ಹೊರಟಿದ್ದಾರೆ ಎಂದು ದೂರಿದರು.

ಸುದ್ದಿ ಗೋಷ್ಠಿಯಲ್ಲಿ ಗೌರಿಬಿದನೂರು ಶಾಸಕ ಎನ್.ಎನ್.ಶಿವಶಂಕರ್ ರೆಡ್ಡಿ , ವಿಧಾನಪರಿಷತ್ತಿನ ಸದಸ್ಯ ಎಂಎಲ್ ಅನಿಲ್ ಕುಮಾರ್, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಎನ್.ಸಂಪಂಗಿ, ಮಾಜಿ ಶಾಸಕಿ ಅನುಸೂಯಮ್ಮ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯಶಂಕರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೇಶವರೆಡ್ಡಿ,ಉಪಾಧ್ಯಕ್ಷ ಬಿ.ಎಸ್.ರಫೀಉಲ್ಲಾ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಜಿಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಶಾಹೀದ್ ಅಬ್ಬಾಸ್, ಮುಖಂಡರಾದ ಅಡಗಲ್ ಶ್ರೀಧರ್,ಕೆಪಿಸಿಸಿ ಸದಸ್ಯ ಮುನೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್‍ರೆಡ್ಡಿ, ಸಂತೋಷ ಬೆಳ್ಳೂಟಿ, ಹರ್ಷ ಮೊಯ್ಲಿ, ಸೇವಾದಳದ ಜಿಲ್ಲಾಧ್ಯಕ್ಷ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next