Advertisement

‘ಅಗ್ನಿಪಥ’ಯೋಜನೆ; ಸೋತುಹೋಗುವ ಭಯವೇ ಈ ದಂಗೆಗೆ ಕಾರಣವೇ?

12:19 PM Jun 18, 2022 | Team Udayavani |

ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿರುವ “ಅಗ್ನಿಪಥ’ ಯೋಜನೆಯು ದೇಶಾದ್ಯಂತ ಸೇನಾಕಾಂಕ್ಷಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಹಲವು ರಾಜ್ಯಗಳಲ್ಲಿ ಯುವಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಕಳೆದ ಮೂರು ದಿನಗಳಿಂದ ಅವರ ಪ್ರತಿಭಟನೆಯು ಹಿಂಸಾರೂಪ ಪಡೆದಿದೆ. ಈ ಹಿನ್ನೆಲೆಯಲ್ಲಿ ದೇಶದ ಸಶಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿರುವಂಥ ಸೇನಾಧಿಕಾರಿಗಳೇ ಈ ಯೋಜನೆಯ ಸಾಧಕಬಾಧಕಗಳನ್ನು ಇಲ್ಲಿ ವಿವರಿಸಿದ್ದಾರೆ.

Advertisement

ದೇಶದ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಸೇನೆಯ ಮೂರೂ ಅಂಗಗಳ ಮುಖ್ಯಸ್ಥರು ಇತ್ತೀಚೆಗೆ ಘೋಷಿಸಿರುವ “ಅಗ್ನಿಪಥ್‌’ ಯೋಜನೆಯು ವಿಶೇಷ ವಾಗಿ ವಿದ್ಯಾಭ್ಯಾಸ ಮುಂದುವರಿಸ ಲಾಗದ ಬಡ ಕುಟುಂಬದ, ಗ್ರಾಮೀಣ ಪ್ರದೇಶದ ಯುವಕ ರಿಗೆ ವರದಾನವಾಗಿ ಪರಿಣಮಿಸ ಲಿದೆ. ಸೈನ್ಯದ ಶಿಸ್ತಿನ ತರಬೇತಿ ಮತ್ತು ಅಲ್ಲಿನ ಜೀವನ ಶೈಲಿ ಈ ಮುಗ್ಧ ಬಾಲಕರನ್ನು ಹೋರಾಟದ ಗಂಡುಗಲಿಗಳನ್ನಾಗಿ ಪರಿವರ್ತಿಸಲಿದೆ.

ಅಗ್ನಿವೀರರಾಗಿ ಸೇವೆ ಸಲ್ಲಿಸುವಂಥ ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕಾಲೇಜುಗಳಲ್ಲಿ ಓದುತ್ತಿರುವ ಅವರ ಮಿತ್ರರಿಗಿಂತ ಸದೃಢವಾಗಿರುತ್ತದೆ. “ದೇಶ ಸುತ್ತುವ ಕೋಶ ಓದುವ’ ಮುಕ್ತ ಅವಕಾಶ ಇವರಿಗೆ ಸಿಗಲಿದೆ. ದೇಶದಲ್ಲಿರುವ ಹಲವಾರು ಮುಕ್ತ ವಿಶ್ವವಿದ್ಯಾಲಯಗಳ ಮೂಲಕ ಇವರು ವ್ಯಾಸಂಗವನ್ನೂ ಮುಂದುವರಿಸಬಹುದು. ನಾಲ್ಕು ವರ್ಷಗಳಲ್ಲಿ ಇವರು ಪಡೆಯುವ ಅನುಭವ, ವೃತ್ತಿ ಪರಿಣತಿ ಮತ್ತು ಸಂದಿಗ್ಧ ಪರಿಸ್ಥಿತಿಗಳ ನಿರ್ವಹಣೆ ಇವರನ್ನು ಎಂತಹ ಕಠಿಣ ಪರಿಸ್ಥಿತಿಯನ್ನಾದರೂ ಎದುರಿಸಿ ಜಯಿಸುವ ಮನೋಭಾವವನ್ನು ಬೆಳೆಸಿ ಕೊಳ್ಳುವು ದನ್ನು ಕಲಿಸಿಕೊಡುತ್ತದೆ. ಈಗಿನ ಕೆಲವು ವಿಶ್ವ ವಿದ್ಯಾನಿಲಯಗಳಲ್ಲಿ ಕಾಣಸಿಗುವ ಟುಕ್ಡೇ ಟುಕ್ಡೇ ಗ್ಯಾಂಗ್‌ ಗಳಲ್ಲಾಗಲೀ ಅಥವಾ ರಸ್ತೆಗಳನ್ನು ಅಡ್ಡಗಟ್ಟಿ ಟಯರ್‌ಗಳು, ಬಸ್ಸು ಗಳನ್ನು ಸುಡುವ ದುಷ್ಕೃತ್ಯ ಮನೋಭಾವದ ಗುಂಪಿನಿಂದ ಇವರು ದೂರ ಉಳಿಯುತ್ತಾರೆ. ಸೈನ್ಯದ ವಾತಾವರಣದಲ್ಲಿ ಬೆಳೆಸಿಕೊಂಡ ವಿಕಸಿತ ಮನೋಭಾವ ಮತ್ತು ರಾಷ್ಟ್ರಪ್ರೇಮ ಇವರನ್ನು ಉತ್ತಮ ಪ್ರಜೆಗಳ ಗುಂಪಿಗೆ ಸೇರಿಸುತ್ತದೆ. ಇದೊಂದು ಪೂರ್ಣಾವಧಿಯ ವೃತ್ತಿಯಲ್ಲದಿದ್ದರೂ ಭವಿಷ್ಯ ದಲ್ಲಿ ಒಂದು ಸಮರ್ಥ, ಸಮೃದ್ಧ ಜೀವನ ರೂಪಿಸಿಕೊಳ್ಳಲು ಖಂಡಿತಾ ನೆರವಾಗುವ ಒಂದು spring board ಆಗಲಿದೆ.

ಈ ಯೋಜನೆ ಸೈನ್ಯದ ಸರಾಸರಿ ವಯಸ್ಸು ಈಗಿರುವ 32ರಿಂದ ಮುಂಬರುವ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಲಿದ್ದು, ಒಂದು ಉತ್ಸಾಹಭರಿತ ಯುವ ಸೈನ್ಯವನ್ನು ರಚಿಸುವಲ್ಲಿ ಯಶಸ್ವಿಯಾಗಲಿದೆ. ಭವಿಷ್ಯತ್ತಿನ ಯುದ್ಧತಂತ್ರಕ್ಕೆ ಅತ್ಯವಶ್ಯಕವಾದ ತಾಂತ್ರಿಕ ಜ್ಞಾನವನ್ನು ಈ ಯುವ ಸೈನ್ಯ ಬಹುಬೇಗ ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ.

ರಕ್ಷಣ ವಲಯದಲ್ಲೂ ಆತ್ಮನಿರ್ಭರತೆಯನ್ನು ಅಳವಡಿಸಿ ಕೊಳ್ಳುವ ನಿಟ್ಟಿನಲ್ಲಿ ಕೆಲವು ಕಹಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಇದನ್ನು ವಿವರಿಸಲು ಕೆಲವು ಅಂಕಿಅಂಶಗಳ ಸಹಾಯ ಬೇಕಾಗುತ್ತದೆ.
ಈ ವರ್ಷದ ರಕ್ಷಣ ಬಜೆಟ್‌ ಅಂದಾಜು 5.25 ಲಕ್ಷ ಕೋಟಿ ರೂ.ಗಳು. ಇದರಲ್ಲಿ ಸುಮಾರು 4.05 ಲಕ್ಷ ಕೋಟಿ ರೂ.ಗಳು ಸೈನ್ಯದ ಎಲ್ಲಾ ಅಂಗಗಳ ನಿರ್ವಹಣೆಗೆ ವೆಚ್ಚವಾಗುತ್ತದೆ. ಯುದ್ಧ ಸಾಮಗ್ರಿ ಖರೀದಿಸಲು 1.38 ಲಕ್ಷ ಕೋಟಿ ರೂ.ಗಳನ್ನು ಕೊಡಲಾಗಿದೆ. ನಿವೃತ್ತ ಸೈನಿಕರ ಪಿಂಚಣಿಯ ವೆಚ್ಚಕ್ಕೆಂದು ಸುಮಾರು 1.20 ಲಕ್ಷ ಕೋಟಿ ರೂ.ಗಳು ಅಂದರೆ ರಕ್ಷಣಾ ಬಜೆಟ್ಟಿನ ಸುಮಾರು ಶೇ. 23ರಷ್ಟು ಪಿಂಚಣಿಗೇ ಹೋಗಿಬಿಡುತ್ತದೆ. 2012-2013ರ ಬಜೆಟ್ಟಿನಲ್ಲಿ ಪಿಂಚಣಿ ಸುಮಾರು 19% ಇದ್ದದ್ದು ಈಗ 23% ಆಗಿದೆ. ನಾವು ಆಮದು ಮಾಡಿಕೊಳ್ಳುತ್ತಿರುವ ಬೃಹತ್‌ ಮೊತ್ತದ ಯುದ್ಧಸಾಮಗ್ರಿಗಳನ್ನು ಕ್ರಮೇಣ ಕಡಿಮೆ ಮಾಡಿ ಮತ್ತು ಸೈನ್ಯಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ನಮ್ಮ ದೇಶದಲ್ಲೇ ತಯಾರಿಸಲು ಸಂಶೋಧನ ಮತ್ತು ಅಭಿವೃದ್ಧಿ ಅತ್ಯವಶ್ಯಕ ಮತ್ತು ಇದಕ್ಕೆ ಮುಕ್ತವಾಗಿ ದೇಣಿಗೆ ನೀಡಬೇಕಾಗುತ್ತದೆ. ಸದ್ಯಕ್ಕೆ ಯುದ್ಧ ಸಾಮಗ್ರಿಗಳನ್ನು ಖರೀದಿಸಲು ಕೊಟ್ಟಿರುವ 1.38 ಲಕ್ಷ ಕೋಟಿಯಲ್ಲಿ 25% ಮಾತ್ರ ಸಂಶೋಧನ ಮತ್ತು ಅಭಿವೃದ್ಧಿಗೆ ಮೀಸಲಿಡಲಾಗಿದೆ. ಈ ಮೊತ್ತ ವನ್ನು ಇನ್ನೂ ಹೆಚ್ಚಿಸಬೇಕಾಗಿದೆ. ಇದು ವರ್ಷಗಳ ಹಿಂದೆಯೇ ನಡೆಯಬೇಕಾಗಿತ್ತು. ಆದರೆ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸಾಮಗ್ರಿಗಳಲ್ಲಿ ಸಿಗುತ್ತಿದ್ದ ಕಮಿಷನ್‌ನ ದುರಾಸೆಗೆ ಜೋತು ಬಿದ್ದು, ದೇಶದ ಸ್ವಾವಲಂಬನೆಯನ್ನೇ ಬಲಿ ಕೊಟ್ಟರು ಭ್ರಷ್ಟರು. ಮುಂಬರುವ ವರ್ಷಗಳಲ್ಲಾದರೂ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಈಗಿನ ಸರಕಾರ ಪ್ರಯತ್ನಿಸುತ್ತಿದೆ. ಪ್ರತೀ ವರ್ಷ ಹೆಚ್ಚಾಗುತ್ತಿರುವ ಪಿಂಚಣಿ ಬಜೆಟ್‌ನ್ನು ಕಡಿಮೆಗೊಳಿಸಿ ಈ ಮೊತ್ತವನ್ನು ರಕ್ಷಣ ವಲಯದಲ್ಲಿ ಆತ್ಮನಿರ್ಭರತೆಯನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ “ಅಗ್ನಿಪಥ್‌’ ಯೋಜನೆ ಸಹಾಯಕವಾಗಲಿದೆ.

Advertisement

ಸದ್ಯಕ್ಕೆ ನಮ್ಮ ದೇಶದ ನಿರುದ್ಯೋಗ ಸಮಸ್ಯೆ ಸುಮಾರು ಶೇ.8ರಷ್ಟಿದೆ. ಆದರೆ ಹರಿಯಾಣ, ಬಿಹಾರ, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಇದು ಶೇ. 34.5ರಿಂದ ಶೇ. 21ರ ವರೆಗೂ ಇದೆ. ಈ ಪ್ರದೇಶಗಳು ಅಸಲಿಗೆ ಅಗ್ನಿಪಥ್‌ನಂತಹ ಯೋಜನೆಯನ್ನು ಸ್ವಾಗತಿಸಬೇಕಿತ್ತು. ಆದರೆ ಇಲ್ಲಿಯವರು ಇದನ್ನು ವಿರೋಧಿಸಿ ದಂಗೆ ಎದ್ದು, ರೈಲು ಬೋಗಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಮೊಟ್ಟ ಮೊದಲನೆಯದಾಗಿ ಇಂತಹ ದುಷ್ಕರ್ಮಿ ಗಳು ಸೈನ್ಯಕ್ಕೆ ಸೇರಲು ಅನರ್ಹರು. ಆಮೇಲೆ ಇವರಿಗೆ ಪಿಂಚಣಿ ಸಿಗುವ ಖಾಯಂ ಕೆಲಸಗಳು ಬೇಕು. ಇನ್ನೊಂದು ಗಮನಾರ್ಹ ವಿಷಯವೆಂದರೆ ಈ ರಾಜ್ಯಗಳಲ್ಲಿ ಸಾಕ್ಷರತೆ ದೇಶದ ಸರಾಸರಿಗಿಂತ ಕಡಿಮೆ. ಹಾಗಾಗಿ ಅಗ್ನಿಪಥ್‌ನಲ್ಲಿ ನಡೆಯುವ ಪರೀಕ್ಷೆಗಳು ದೇಶಮಟ್ಟದ ಏಕಮುಖ ಪರೀಕ್ಷೆಗಳಲ್ಲಿ ಸೋತು ಹೋಗುವ ಭಯವೂ ಇರಬಹುದೇನೋ?
ದಿವಂಗತ ಜನರಲ್‌ ಬಿಪಿನ್‌ ರಾವತ್‌ ಹೇಳುತ್ತಿದ್ದರು- “ಸೈನ್ಯವೆಂದರೆ ಉದ್ಯೋಗ ವಿನಿಮಯ ಕೇಂದ್ರವಲ್ಲ, ನರೇಗಾ ಸ್ಕೀಮುಗಳಲ್ಲ. ಅದು ದೇಶದ ಸುರಕ್ಷತೆಗೆ ಬೇಕಾದ ದೂರದೃಷ್ಟಿಯ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯವಿಟ್ಟುಕೊಂಡಿರುತ್ತದೆ. ಅದು ಇಷ್ಟವಾಗದವರು They can go and climb a tree.’ಒಟ್ಟಿನಲ್ಲಿ, ಅಗ್ನಿಪಥ್‌ ಮತ್ತೊಂದು ಸಿಎಎ, ಕೃಷಿ ಕಾನೂನು ಆಗದಿದ್ದರೆ ಸಾಕು.

-ವಿಂಗ್‌ ಕಮಾಂಡರ್‌(ನಿವೃತ್ತ) ಸುದರ್ಶನ

ಯುವಕರ ಭವಿಷ್ಯಕ್ಕೆ ಭದ್ರ ಅಡಿಪಾಯ
“ಅಗ್ನಿಪಥ’ ಯೋಜನೆ ನನ್ನ ಪ್ರಕಾರ ಒಳ್ಳೆಯ ಕಾರ್ಯ ಕ್ರಮ. ನಾಲ್ಕು ವರ್ಷ ತುಂಬಾ ಕಡಿಮೆ ಅನಿಸಬಹುದು. ಆದರೆ ಆ ಅವಧಿಯಲ್ಲಿ ರಕ್ಷಣ ಇಲಾಖೆಯ ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದ ಯುವಕರ ವ್ಯಕ್ತಿತ್ವವೇ ಸಂಪೂರ್ಣ ಬದಲಾಗಲಿದೆ. ಇದು ಅವರ ಭವಿಷ್ಯಕ್ಕೆ ಅಡಿಪಾಯ ಆಗಲಿದೆ.

ಅಷ್ಟಕ್ಕೂ ಶೇ.25ರಷ್ಟು ಅಭ್ಯರ್ಥಿಗಳನ್ನು ಮುಂದುವರಿಸಲು ಅವಕಾಶ ನೀಡ ಲಾಗಿದೆ. ಶ್ರಮಪಟ್ಟು ಉತ್ತಮ ಪ್ರದರ್ಶನ ನೀಡಿದರೆ, ಖಂಡಿತ ಅಂತಹವರು ಮುಂದುವರಿಯುತ್ತಾರೆ. ಉಳಿದವರಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಉದಾಹರಣೆಗೆ ಬರೀ ಏರ್‌ಮನ್‌ ಆಗಿದ್ದವರು, ಚೆನ್ನಾಗಿ ಓದಿ ಐಎಎಸ್‌ ಆಗಿರುವವರಿದ್ದಾರೆ. ಅಷ್ಟೇ ಅಲ್ಲ, ಬ್ಯಾಂಕಿಂಗ್‌ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉತ್ತಮ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಉದಾಹರಣೆಗಳಿವೆ.

ಅಷ್ಟಕ್ಕೂ 70ರ ದಶಕದಲ್ಲಿ ಕೂಡ ಇದೇ ರೀತಿ ಸೇನೆಯಲ್ಲಿ 9 ವರ್ಷಕ್ಕಷ್ಟೇ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಅನಂತರ ಉತ್ತಮ ಸೇವೆ ಸಲ್ಲಿಸಿದರೆ ಮತ್ತೆ ಆರು ವರ್ಷ ವಿಸ್ತರಣೆ ಆಗುತ್ತಿತ್ತು. ತದನಂತರದ ವರ್ಷಗಳಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ಆಯಿತು. ವಿದೇಶಗಳಲ್ಲಿ ಕೂಡ ಇದೇ ವ್ಯವಸ್ಥೆ ಇದೆ. ಅಭದ್ರತೆ ಪ್ರಶ್ನೆಯೇ ಬರುವುದಿಲ್ಲ. ಇಲ್ಲಿ ತರಬೇತಿ ಪಡೆಯುವ ಯುವಕರಲ್ಲಿ ಆತ್ಮವಿಶ್ವಾಸ, ಶಿಸ್ತು, ಏನನ್ನಾದರೂ ಎದುರಿಸಬಹುದಾದ ಸಾಮರ್ಥ್ಯ ವೃದ್ಧಿಯಾಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಇದು ಸ್ವಾಗತಾರ್ಹ.

-ಎಚ್‌.ಬಿ. ರಾಜಾರಾಂ, ನಿವೃತ್ತ ಏರ್‌ ಮಾರ್ಷಲ್‌, ಭಾರತೀಯ ವಾಯುಸೇನೆ

ಹೊಸ ಪ್ರಯೋಗಗಳಿಗೆ ಅವಕಾಶ ಸಿಗಲಿ
ಯುವಕರು ಹೆಚ್ಚಾಗಿರುವ ನಮ್ಮ ಭಾರತದಂತಹ ರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ದೇಶಪ್ರೇಮ ಕಡಿಮೆ ಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ತರಬೇತಿ ಕೋರ್ಸ್‌ಗಳ ಆವಶ್ಯಕತೆ ಹೆಚ್ಚಿತ್ತು. ಇದರಿಂದ ಜೀವನದಲ್ಲಿ ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಸಿಗಲಿದೆ.

ನಾಲ್ಕು ವರ್ಷಗಳ ಅನಂತರ ಹೊರದಬ್ಬಲಾಗುತ್ತದೆ ಎನ್ನುವ ವಾದ ಸರಿ ಅಲ್ಲ. ಯಾಕೆಂದರೆ, ಉತ್ತಮ ಪ್ರದರ್ಶನ ನೀಡಿದರೆ, ಅಲ್ಲಿಯೇ ಮುಂದುವರಿಯಲು ಅವಕಾಶಗಳಿರುತ್ತವೆ. ಎಲ್ಲರಿಗೂ ಆ ಅವಕಾಶ ಸಿಗದಿರಬಹುದು. ಹಾಗೆಂದು ನಿರಾಸೆಯಾಗುವ ಆವಶ್ಯಕತೆಯೂ ಇಲ್ಲ. ಯಾಕೆಂದರೆ ಪೊಲೀಸ್‌ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ. ತರಬೇತಿ ಎಂಬ ಬುನಾದಿಯಿಂದ ಆ ಯುವಕರು ಭವಿಷ್ಯವನ್ನು ಕಟ್ಟಿಕೊಳ್ಳಬಹುದು.

ಈಗಿರುವ ವ್ಯವಸ್ಥೆಯಲ್ಲಿ ಯುವಕರು ಕಾಲೇಜುಗಳಲ್ಲಿ ವ್ಯಾಸಂಗ ಮಾಡಿಕೊಂಡಿರುತ್ತಾರೆ. ಆದರೆ ಅಲ್ಲಿ ಬಹುತೇಕರಲ್ಲಿ ಜೀವನ ಮತ್ತು ಗುರಿಯ ಗಂಭೀರತೆ ಇರುವುದಿಲ್ಲ. “ಅಗ್ನಿಪಥ’ ಯೋಜನೆ ಅಡಿ ಅಭ್ಯರ್ಥಿಗಳಿಗೆ ಶಿಸ್ತು, ಆತ್ಮವಿಶ್ವಾಸ ಬರುತ್ತದೆ. ಅಷ್ಟಕ್ಕೂ ಈ ಕೋರ್ಸ್‌ ಗಳಿಂದ ಸರಕಾರಕ್ಕೆ ಹೊರೆಯೇ ಆಗಲಿದೆ. ಹೇಗೆಂದರೆ ಅಭ್ಯರ್ಥಿಗಳಿಗೆ ಊಟ, ತಿಂಡಿ, ಬಟ್ಟೆ, ವೈದ್ಯಕೀಯ ಸೇವೆ ಸೇರಿದಂತೆ ಪ್ರತಿಯೊಂದು ಸೌಲಭ್ಯಗಳು ಸಿಗುತ್ತವೆ. ಅದೇನೇ ಇರಲಿ ಇದೊಂದು ಹೊಸ ಮತ್ತು ವಿನೂತನ ಪ್ರಯೋಗವಾಗಿದ್ದು, ನನ್ನ ಪ್ರಕಾರ ದೇಶದ ಯುವಕರ ಭವಿಷ್ಯದ ದೃಷ್ಟಿಯಿಂದ ಇದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಯೋಜನೆ ಏನು ಎಂಬುದನ್ನೂ ನೋಡದೆ ನಾವು ಪ್ರತಿಭಟನೆಗಿಳಿದರೆ, ಹೊಸ ಪ್ರಯೋಗಗಳು ನಡೆಯುವುದೇ ಇಲ್ಲ.

-ಮೋಹನ್‌ ದೇಶಮುಖ್‌, ನಿವೃತ್ತ ಜೆಡಬ್ಲ್ಯೂಒ,
ಭಾರತೀಯ ವಾಯುಸೇನೆ ಹಾಗೂ ಇಸ್ರೋ ನಿವೃತ್ತ ವಿಜ್ಞಾನಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next