Advertisement

ಭಯ,ಹತಾಶೆ,ವೇದನೆ

11:14 PM Aug 13, 2021 | Team Udayavani |

ಕಾಬೂಲ್‌: ಪೊಲೀಸ್‌ ಠಾಣೆಗಳೆಲ್ಲ ಖಾಲಿ ಖಾಲಿ, ಸಮವಸ್ತ್ರ ತೊರೆದು ನಾಗರಿಕರ ವಸ್ತ್ರದ ಮೊರೆಹೋದ ಸೈನಿಕರು, ಉಗ್ರರ ಬಂದೂಕಿನ ಭಯದಲ್ಲೇ ದಿನದೂಡುತ್ತಿರುವ ಜನ…

Advertisement

ಅಫ್ಘಾನಿಸ್ಥಾನದ ಒಂದೊಂದೇ ನಗರಗಳನ್ನು ಮಿಂಚಿನ ವೇಗದಲ್ಲಿ ತಾಲಿಬಾನ್‌ ಉಗ್ರರು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆ ನಾಗರಿಕರು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ತಾವು ಏನಾಗಬಾರದೆಂದು ಭಾವಿಸಿದ್ದೆವೋ, ಅದುವೇ ನಡೆಯುತ್ತಿದೆ ಎಂಬ ಆತಂಕದಲ್ಲೇ “ಮುಂದೇನು’ ಎಂಬ ಪ್ರಶ್ನಾರ್ಥಕ ಚಿಹ್ನೆ ಎಲ್ಲರ ಮೊಗವನ್ನೂ ಆವರಿಸಿಕೊಂಡಿದೆ.

ಈಗಾಗಲೇ 18 ಪ್ರಾಂತೀಯ ರಾಜಧಾನಿಗಳಲ್ಲಿ ಉಗ್ರರು ನಿಯಂತ್ರಣ ಸಾಧಿಸಿದ್ದು, ಎಲ್ಲ ನಗರಗಳ ಪೊಲೀಸ್‌ ಠಾಣೆಗಳನ್ನು ವಶಕ್ಕೆ ಪಡೆದಿದ್ದಾರೆ. ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರೆಲ್ಲ ಅಲ್ಲಿದ್ದ ಎಲ್ಲ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಸ್ವಯಂ ರಕ್ಷಣೆಯ ಸಲುವಾಗಿ ಶಸ್ತ್ರಾಸ್ತ್ರಗಳನ್ನು ಹೊತ್ತೂಯ್ದಿದ್ದಾರೆ. ನಗರಪ್ರದೇಶಗಳಲ್ಲಿ ಸ್ವಲ್ವವಾದರೂ ಸುರಕ್ಷಿತವಾಗಿರಬಹುದು ಅಂದುಕೊಂಡು ಗ್ರಾಮಗಳನ್ನು ತೊರೆದಿದ್ದ ಜನರು, ಈಗ ಅಫ್ಘಾನ್‌ನ ಶೇ.90ರಷ್ಟು ಭಾಗ ತಾಲಿಬಾನ್‌ ವಶವಾಗುತ್ತಿದ್ದಂತೆ “ಬಾಣಲೆಯಿಂದ ಬೆಂಕಿಗೆ’ ಬಿದ್ದಂಥ ಸ್ಥಿತಿ ಅನುಭವಿಸುತ್ತಿದ್ದಾರೆ.

ಕಮಾಂಡರ್‌ ಸೆರೆ: ಶುಕ್ರವಾರ ತಾಲಿಬಾನ್‌ ಉಗ್ರರು ಹೆರಾತ್‌ ಪ್ರಾಂತ್ಯದ ಸೇನಾ ಕಮಾಂಡರ್‌ ಇಸ್ಮಾಯಿಲ್‌ ಖಾನ್‌ರನ್ನು ಬಂಧಿಸಿದ್ದಾರೆ. 70ರ ವಯೋಮಾನದ ಖಾನ್‌, ಉಗ್ರರ ವಶದಲ್ಲಿರುವ ಫೋಟೋ,  ವೀಡಿಯೋ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಶುಕ್ರವಾರ ತುರ್ತು ಸಭೆ ಕರೆದಿದ್ದು, ಅಫ್ಘಾನ್‌ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.

ಗಡಿಯಲ್ಲಿ ಘರ್ಷಣೆ ಅಫ್ಘಾನ್‌ ಹಾಗೂ ಪಾಕಿಸ್ಥಾನದ ನಡುವಿನ ಗಡಿ ಪ್ರದೇಶ ಚಮನ್‌ನಲ್ಲಿ ಶುಕ್ರವಾರ ಪಾಕಿಸ್ತಾನದ ಭದ್ರತಾ ಪಡೆಗಳು ಹಾಗೂ ಅಫ್ಘಾನ್‌ ನಾಗರಿಕರ ನಡುವೆ ಭಾರೀ ಘರ್ಷಣೆ ಏರ್ಪಟ್ಟಿದೆ. ಪಾಕ್‌ನಿಂದ ಅಫ್ಘಾನ್‌ಗೆ ಗಡಿ ದಾಟಲು ಬಯಸುತ್ತಿರುವ ಅಫ್ಘಾನ್‌ನ ನೂರಾರು ನಾಗರಿಕರು ಗಡಿಯಲ್ಲಿ ನೆರೆದಿದ್ದಾರೆ. ಆದರೆ ಸ್ಪಿನ್‌ ಬೋಲ್ಡಾಕ್‌ ಪ್ರದೇಶ ಈಗ ತಾಲಿಬಾನ್‌ ವಶದಲ್ಲಿರುವ ಕಾರಣ, “ನಮ್ಮ ಬೇಡಿಕೆಯನ್ನು ಪಾಕಿಸ್ಥಾನ ಈಡೇರಿಸುವವರೆಗೂ ಯಾರನ್ನೂ ಗಡಿಯೊಳಗೆ ಪ್ರವೇಶಿಸಲು ಬಿಡುವುದಿಲ್ಲ’ ಎಂದು ತಾಲಿಬಾನ್‌ ಹೇಳಿದೆ. ಹೀಗಾಗಿ ಪಾಕ್‌ ಸೇನೆಯು ನಾಗರಿಕರನ್ನು ಗಡಿ ದಾಟಲು ಬಿಡುತ್ತಿಲ್ಲ. ಹೀಗಾಗಿ ಈ ಘರ್ಷಣೆ ನಡೆದಿದ್ದು, ಅಶ್ರುವಾಯು, ಲಾಠಿ ಪ್ರಹಾರ ನಡೆದಿದೆ.

Advertisement

ಮಹಿಳಾ ಬ್ಯಾಂಕರ್‌ಗಳಿನ್ನು ಮನೆಗೇ ಸೀಮಿತ! :

ತಾಲಿಬಾನ್‌ ಆಡಳಿತದಲ್ಲಿ ಯಾವ ಕಾರಣಕ್ಕೂ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ತಾವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರಕ್ಷಣೆ ನೀಡುತ್ತೇವೆ ಎಂದಿದ್ದ ಉಗ್ರರು, ಈಗ ಉದ್ಯೋಗ ಮಾಡುತ್ತಾ ಸ್ವಾವಲಂಬಿಯಾಗಿದ್ದ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಕೆಲಸ ಬಿಡಿಸುತ್ತಿದ್ದಾರೆ. ಹಲವು ಬ್ಯಾಂಕುಗಳ ಶಾಖೆಗಳಿಗೆ ನುಗ್ಗಿರುವ ಶಸ್ತ್ರಧಾರಿ ಉಗ್ರರು, ಅಲ್ಲಿದ್ದ ಎಲ್ಲ ಮಹಿಳಾ ಉದ್ಯೋಗಿಗಳನ್ನು ಮನೆಗೆ ಬಿಟ್ಟು ಬಂದಿದ್ದಾರೆ. ಜತೆಗೆ ಇನ್ನು ಯಾವತ್ತೂ ಉದ್ಯೋಗಕ್ಕೆ ಹೋಗುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಅಲ್ಲದೇ, ಅವರ ಹುದ್ದೆಗಳನ್ನು ಆ ಮಹಿಳೆಯರ ಪುರುಷ ಸಂಬಂಧಿಕರಿಗೆ ನೀಡುವಂತೆ ಸೂಚಿಸಿದ್ದಾರೆ.

ಸಿದ್ದಿಕಿ ನಮ್ಮ ಒಪ್ಪಿಗೆ ಪಡೆದಿರಲಿಲ್ಲ:  ತಾಲಿಬಾನ್‌ ಉಗ್ರರ ಸ್ಪಷ್ಟನೆ :

ತಾಲಿಬಾನ್‌ಗಳಿಂದ ಇತ್ತೀಚೆಗೆ ಹತರಾದ ಭಾರತೀಯ ಪತ್ರಕರ್ತ ಡ್ಯಾನಿಶ್‌ ಸಿದ್ದಿಕಿ ಅವರಿಗೆ ಸಂಬಂಧಿಸಿ ಹೊಸ ಹೇಳಿಕೆಯೊಂದನ್ನು ತಾಲಿಬಾನ್‌ ನೀಡಿದೆ. ಅಫ್ಘಾನ್‌ ಸೇನೆ ಮತ್ತು ತಾಲಿಬಾನ್‌ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದಾಗ, ಗುಂಡು ತಾಕಿ ಸಿದ್ದಿಕಿ ಮೃತಪಟ್ಟರು. ಅವರು ನಮ್ಮೊಂದಿಗೆ ಸಮನ್ವಯತೆ ಸಾಧಿಸದ್ದೇ ಅವರ ಸಾವಿಗೆ ಕಾರಣ. ನಮ್ಮ ಪ್ರದೇಶಕ್ಕೆ ಕಾಲಿಡುವ ಪ್ರತಿಯೊಬ್ಬ ಪತ್ರಕರ್ತರೂ ನಮ್ಮೊಂದಿಗೆ ಸಮನ್ವಯತೆ ಸಾಧಿಸಿ, ಒಪ್ಪಿಗೆ ಪಡೆಯಬೇಕು ಎಂದು ನಾವು ಎಷ್ಟೋ ಬಾರಿ ಹೇಳಿದ್ದೆವು. ಆದರೆ ಅದನ್ನು ಸಿದ್ದಿಕಿ ಮಾಡಲಿಲ್ಲ ಎಂದು ತಾಲಿಬಾನ್‌ ಹೇಳಿದೆ.

ಲಸಿಕೆ ಪಡೆಯುವಂತಿಲ್ಲ! :

ತಾಲಿಬಾನ್‌ ಹಿಡಿತದಲ್ಲಿರುವ ಪೂರ್ವ ಅಫ್ಘಾನ್‌ನ ಪಕ್ತಿಯಾದಲ್ಲಿ ಕೊರೊನಾ ಲಸಿಕೆಗೆ ಉಗ್ರರು ನಿಷೇಧ ಹೇರಿದ್ದಾರೆ. ಪಕ್ತಿಯಾ ಪ್ರಾದೇಶಿಕ ಆಸ್ಪತ್ರೆಯಲ್ಲಿ ಈ ಕುರಿತ ನೋಟಿಸ್‌ ಅಂಟಿಸಲಾಗಿದೆ. ಯಾರು ಕೂಡ ಲಸಿಕೆಯನ್ನು ಸ್ವೀಕರಿಸುವಂತೆಯೂ ಇಲ್ಲ, ವಿತರಣೆ ಮಾಡುವಂತೆಯೂ ಇಲ್ಲ ಎಂಬ ಖಡಕ್‌ ಸೂಚನೆಯನ್ನು ಉಗ್ರರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next