Advertisement

ವೈಮಾನಿಕ ಕೆಸರೆರಚಾಟ

06:00 AM Aug 14, 2018 | |

ಬೆಂಗಳೂರು: ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಲಕ್ನೋಗೆ ಸ್ಥಳಾಂತರಿಸುವ ವಿಚಾರ ರಾಜ್ಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಏರೋ ಇಂಡಿಯಾ ಸ್ಥಳಾಂತರಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯವೆಸಗಿದೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆರೋಪಿಸಿದರೆ, ಈ ಕುರಿತು ಇನ್ನೂ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿಲ್ಲ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿನಾ ಕಾರಣ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.

Advertisement

ಈ ಮಧ್ಯೆ 2019ರ ಏರೋ ಇಂಡಿಯಾವನ್ನು ಬೆಂಗಳೂರಿನಲ್ಲೇ ಮುಂದುವರಿಸುವ ಸಂಬಂಧ ನಿರ್ಧಾರ ಕೈಗೊಳ್ಳಲು ಕೋರಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ. ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಲಕ್ನೋಗೆ ಸ್ಥಳಾಂತರಿಸುವ ಬಗ್ಗೆ ಕಳೆದೆರಡು ದಿನಗಳಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪದೇ ಪದೇ ಪ್ರಸ್ತಾಪಿಸಿ ಕೇಂದ್ರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದರೂ  ಮೌನವಾಗಿದ್ದ ಬಿಜೆಪಿ ನಾಯಕರು ಸೋಮವಾರ ಎಚ್ಚೆತ್ತುಕೊಂಡಿದ್ದು,  ಏರೋ ಇಂಡಿಯಾ ಬೆಂಗಳೂರಿನಿಂದ ಸ್ಥಳಾಂತರವಾಗುವುದಿಲ್ಲ ಎಂದು ಗಟ್ಟಿದನಿಯಲ್ಲಿ ಹೇಳಿದ್ದಾರೆ.

ಈ ಮಧ್ಯೆ ಏರೋ ಇಂಡಿಯಾ ಸ್ಥಳಾಂತರ ಮಾಡಲಾಗುತ್ತಿದ್ದು, ಇದನ್ನು ಕೈಬಿಡುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.

ಇನ್ನೊಂದೆಡೆ ಬೆಂಗಳೂರಿನಲ್ಲೇ ಏರ್‌ಶೋ ನಡೆಸಬೇಕು ಮತ್ತು ಲಕ್ನೋಗೆ ಸ್ಥಳಾಂತರಿಸಬಾರದು ಎಂದು ಪ್ರಧಾನಿ ಹಾಗೂ ರಕ್ಷಣಾ ಸಚಿವರಿಗೆ ರಾಜ್ಯ ಸರ್ಕಾರದ ಮೂಲಕ ಮನವಿ ಮಾಡಲು ನಿರ್ಣಯ ಕೈಗೊಂಡಿದ್ದರೆ, ಏರ್‌ ಶೋ ಸ್ಥಳಾಂತರಿಸದಂತೆ ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿದೆ. ಏರ್‌ ಶೋ ಬೆಂಗಳೂರಿನಲ್ಲೇ ನಡೆಸಬೇಕು ಇಲ್ಲವೇ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯರಾದ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಮತ್ತು ಎಚ್‌.ಎಂ.ರೇವಣ್ಣ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲೇ ಏರ್‌ ಶೋ :
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್‌, ಏರೋ ಇಂಡಿಯಾ ಬೆಂಗಳೂರಿನಿಂದ ಲಕ್ನೋಗೆ ಸ್ಥಳಾಂತರವಾಗುವುದಿಲ್ಲ. ಕಳೆದ ಬಾರಿಯೂ (2017) ಇದೇ ರೀತಿ ವದಂತಿ ಹರಡಿತ್ತು. ಈ ಬಾರಿಯೂ  ಹಬ್ಬಿದೆ. ರಕ್ಷಣಾ ಸಚಿವಾಲಯದಿಂದ ಈ ಬಗ್ಗೆ ಪತ್ರ ಹೊರಡಿಸಲಾಗಿದೆ. ಲಕ್ನೋದಲ್ಲಿ ಏರ್‌ ಶೋ ನಡೆಸಲು ಮೂಲ ಸೌಕರ್ಯಗಳಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಅಲ್ಲಿ ಏರ್‌ಶೋ ನಡೆಯುವುದಿಲ್ಲ. ಒಂದು ವೇಳೆ ಬೆಂಗಳೂರಿನಿಂದ ಸ್ಥಳಾಂತರಿಸಲು ಪ್ರಯತ್ನಿಸಿದರೂ ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.

Advertisement

ಇನ್ನೊಂದೆಡೆ ಗದಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಏರ್‌ ಶೋ ಬೆಂಗಳೂರು ಬಿಟ್ಟು ಹೋಗದಂತೆ ಬಿಜೆಪಿಯ ಎಲ್ಲ ಕೇಂದ್ರ ಸಚಿವರು, ಸಂಸದರು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಬಾರಿ ಲಕ್ನೋದಲ್ಲಿ ಏರ್‌ಶೋ ನಡೆಸುವಂತೆ ಉತ್ತರ ಪ್ರದೇಶ ಸರ್ಕಾರ ಮನವಿ ಸಲ್ಲಿಸಿತ್ತು. ಈ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿರುವ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಇದು ಕೇವಲ ಬೇಡಿಕೆಯಷ್ಟೇ, ಅಂತಿಮ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಆಡಳಿತ ಪಕ್ಷದ ನಾಯಕರು ಇದಕ್ಕೆ ರಾಜಕೀಯ ಲೇಪನ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಡಿ.ಕೆ.ಶಿವಕುಮಾರ್‌ ಅಂಥವರೂ ಲಕ್ನೋಗೆ ಸ್ಥಳಾಂತರವಾಗಿದೆ ಎಂದು ಹೇಳಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಕ್ರಿಯಿಸಲು ನಿರಾಕರಿಸಿದ ಕೇಂದ್ರ ಸಚಿವ:
ಏರ್‌ ಶೋ ಸ್ಥಳಾಂತರ ವಿವಾದ ಕುರಿತಂತೆ ಪ್ರತಿಕ್ರಿಯಿಸಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ದನ್‌ ನಿರಾಕರಿಸಿದ್ದಾರೆ. ಇದೊಂದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರವಾಗಿದ್ದು, ವಿವಿಧ ಇಲಾಖೆಗಳು ಯಾವ ರೀತಿಯ ತೀರ್ಮಾನ ಕೈಗೊಂಡಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ. ಹೀಗಾಗಿ ಸಾರ್ವಜನಿಕವಾಗಿ ವೈಯಕ್ತಿಕ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.

ಮುಖ್ಯಮಂತ್ರಿಗಳ ಪತ್ರದಲ್ಲೇನಿದೆ?
ಏಷ್ಯಾದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ವಿಚಾರದಲ್ಲಿ ಬೆಂಗಳೂರು ಮೊದಲಿನಿಂದಲೂ ಪ್ರಖ್ಯಾತಿ ಹೊಂದಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ವೈಮಾನಿಕ ಮತ್ತು ರಕ್ಷಣಾ ವಲಯದ ಪ್ರದರ್ಶನ ಆ ಕ್ಷೇತ್ರದ ದೈತ್ಯ ಉದ್ಯಮಗಳನ್ನು ಮಾತ್ರವಲ್ಲದೆ, ಜನಸಾಮಾನ್ಯರನ್ನೂ ಆಕರ್ಶಿಸುತ್ತಿದೆ. 2017ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ 11ನೇ ಏರೋ ಇಂಡಿಯಾದಲ್ಲಿ 51 ರಾಷ್ಟ್ರಗಳ 549 ಜಾಗತಿಕ ಮತ್ತು ಭಾರತೀಯ ಕಂಪೆನಿಗಳು ಭಾಗವಹಿಸಿದ್ದವು.

ಬೆಂಗಳೂರು ರಾಷ್ಟ್ರದ ರಕ್ಷಣಾ ವಲಯ ಮತ್ತು ವೈಮಾನಿಕ ಕ್ಷೇತ್ರದ ಮುಂಚೂಣಿ ನಗರ. ಅಲ್ಲದೆ, ನಗರವು ಏರ್‌ ಶೋ ನಡೆಸಲು ಅತ್ಯಂತ ಸೂಕ್ತ ಪ್ರದೇಶ. ಇದುವರೆಗೆ ನಡೆದ ಏರ್‌ ಶೋಗಳಲ್ಲಿ ಇದು ಸಾಬೀತಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಸಹಕಾರಿಯಾಗಿ ರಾಜ್ಯ ಸರ್ಕಾರವೂ ಇದಕ್ಕೆ ಬೇಕಾದ ರಸ್ತೆ ಮತ್ತಿತರೆ ಮೂಲ ಸೌಕರ್ಯಗಳನ್ನು ಒದಗಿಸಿದೆ. ಸಂಚಾರ ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡಿದೆ.

ಅಲ್ಲದೆ, ಉತ್ತಮ ವಾತಾವರಣ ಮತ್ತು ಇಲ್ಲಿರುವ ರಕ್ಷಣಾ ಮತ್ತು ವೈಮಾನಿಕ ಉದ್ದಿಮೆಗಳ ನೆರವಿನೊಂದಿಗೆ ಈಗಾಗಲೇ ಯಶಸ್ವಿಯಾಗಿ ಏರ್‌ ಶೋಗಳನ್ನು ನಡೆಸಿದ ಅನುಭವ ಬೆಂಗಳೂರಿಗೆ ಇದೆ. ಹೀಗಾಗಿ ಬೆಂಗಳೂರು ಏರ್‌ ಶೋ ನಡೆಸಲು ಅತ್ಯುತ್ತಮ ಸ್ಥಳ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಈ ಏರ್‌ ಶೋಗೆ ಎಲ್ಲಾ ರೀತಿಯ ನೆರವು ನೀಡುವುದು ನನ್ನ ಮತ್ತು ರಾಜ್ಯದ ಜವಾಬ್ದಾರಿಯಾಗಿದೆ. ಆದ್ದರಿಂದ 2019ರ ಏರೋ ಇಂಡಿಯಾವನ್ನು ಬೆಂಗಳೂರಿನಲ್ಲೇ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವಲ್ಲಿ ನಿಮ್ಮ ಸಹಕಾರವನ್ನು ಬಯಸುತ್ತೇನೆ ಎಂದು ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next