Advertisement

ದತ್ತು ಸ್ವೀಕಾರ ಸರಳಗೊಳಿಸಲು ಸಲಹೆ

12:26 PM Nov 26, 2018 | Team Udayavani |

ಬೆಂಗಳೂರು: ಭಾರತದಲ್ಲಿ ದತ್ತು ಸ್ವೀಕಾರದ ಪ್ರಕ್ರಿಯೆಗಿರುವ ಕಾನೂನನ್ನು ಸರಳಗೊಳಿಸಿದರೆ ಹಲವು ಅನಾಥ ಮಕ್ಕಳಿಗೆ ತಂದೆ ತಾಯಿಯ ಪ್ರೀತಿ, ವಾತ್ಸಲ್ಯ ಸಿಗಲಿದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಪಾರ್ಥಸಾರಥಿ ತಿಳಿಸಿದರು.

Advertisement

ನಗರದ ಬಸವನಗುಡಿಯ ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಭಾನುವಾರ ನಡೆದ ಅನಾಥ ಶಿಶು ನಿವಾಸದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಭಾರತದಲ್ಲಿ ಒಟ್ಟು 30 ದಶಲಕ್ಷ ಅನಾಥ ಮಕ್ಕಳಿದ್ದಾರೆ. ಅವರನ್ನು ದತ್ತು ತೆಗೆದುಕೊಳ್ಳಲು ಪೋಷಕರು ಆಸಕ್ತಿ ತೋರುತ್ತಿಲ್ಲ. ಕಾನೂನಿನ ಕ್ಲಿಷ್ಟತೆಯನ್ನು ನಿವಾರಿಸಿ ಸರಳಗೊಳಿಸಿದರೆ ಅನಾಥ ಮಕ್ಕಳಿಗೂ ಪೋಷಕರ ಪ್ರೀತಿ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಭಾರತ‌ ಎಲ್ಲ ಕ್ಷೇತ್ರಗಳಲ್ಲೂಅಗಾಧ ಸಾಧನೆ ಮಾಡುತ್ತಿದೆ. ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯಿಂದ ಜಗತ್ತಿನಲ್ಲಿ ವಿಶೇಷವಾದ ಸ್ಥಾನಮಾನ ಹೊಂದಿರುವ ಭಾರತದ ಸಾಧನೆ ದೊಡ್ಡದು. ವಿಜ್ಞಾನ, ಸಂಶೋಧನೆ, ಕಲೆ, ಪರಂಪರೆಯಲ್ಲಿ ಮಹತ್ತರ ಸಂಶೋಧನೆ ನಡೆಸುತ್ತ ನಮ್ಮ ರಾಷ್ಟ್ರ ಮುಂದುವರಿಯುತ್ತಿದೆ. ಭಾರತದಲ್ಲಿ ಕೆಳಮಟ್ಟದಲ್ಲಿರುವ ವ್ಯಕ್ತಿಯೂ ಉನ್ನತ ಮಟ್ಟ ತಲುಪಬಹುದು. ಅಂತಹ ಅವಕಾಶಗಳನ್ನು ಈ ದೇಶ ನಮಗೆ ನೀಡುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರ ಸಹಕಾರ್ಯವಾಹ ನಾ.ತಿಪ್ಪೇಸ್ವಾಮಿ ಮಾತನಾಡಿ, ಹಳ್ಳಿಯಲ್ಲಿ ಅನಕ್ಷರಸ್ಥರಾಗಿದ್ದ ತಾಯಂದಿರೂ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವಗಳನ್ನು ನಿರ್ಮಿಸುತ್ತಿದ್ದರು. ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವ ಜವಾಬ್ದಾರಿ ತಾಯಂದಿರ ಮೇಲಿರುತ್ತದೆ. ಹೀಗಾಗಿಯೇ ಭಾರತದಲ್ಲಿ ತಾಯಂದಿರಿಗೆ ಉನ್ನತ ಸ್ಥಾನ ಮತ್ತು ಗೌರವ ನೀಡಲಾಗುತ್ತದೆ ಎಂದು ಹೇಳಿದರು.

ಪ್ರಕೃತಿ ತನಗಾಗಿ ಬದುಕುವುದಿಲ್ಲ. ಇತರಿಗಾಗಿಯೇ ಜೀವನ ಮುಡಿಪಾಗಿಡುತ್ತದೆ. ಅಂತೆಯೇ ಮನುಷ್ಯರು ಕೂಡ ತಮ್ಮ ಜೀವನವನ್ನು ಅನ್ಯರಿಗಾಗಿ ಮೀಸಲಿಟ್ಟರೆ ಅವರ ಬದುಕು ಸುಂದರವಾಗಿರಲಿದೆ. ಅವಕಾಶ ವಂಚಿತರು, ಸೌಲಭ್ಯಗಳಿಂದ ದೂರ ಉಳಿದವರನ್ನು ಗುರುತಿಸಿ ಅವರಿಗೆ ನೆರವಾಗುವುದರ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಧನ್ಯತೆಗಾಗಿ ಕೆಲಸ ಮಾಡಿದರೆ ಶ್ರೇಷ್ಠವಾಗಿರುತ್ತದೆ ಎಂದು ತಿಳಿಸಿದರು.

Advertisement

ಅನಾಥ ಶಿಶುನಿವಾಸದ ಅಧ್ಯಕ್ಷ ಸಿ.ವಿ.ವೆಂಕಟಕೃಷ್ಣ ಮಾತನಾಡಿ, ಅನಾಥ ಶಿಶುನಿವಾಸದ ಹೆಸರು ಬದಲಾಯಿಸಲು ನಿರ್ಧರಿಸಲಾಗಿದೆ. ಅನಾಥ ಬದಲಿಗೆ ಅಮೃತ ಶಿಶುನಿವಾಸ ಎಂದು ಹೆಸರಿಡಲು ಕಾರ್ಯಕಾರಿ ಮಂಡಳಿ ತೀರ್ಮಾನಿಸಿದೆ ಎಂದು ತಿಳಿಸಿದರು. ಕಳೆದ 16 ವರ್ಷಗಳಿಂದ ಅನಾಥ ಶಿಶುನಿವಾಸದ ಮಕ್ಕಳಿಗೆ ಉಚಿತವಾಗಿ ಕೌರ ಮಾಡುತ್ತಿರುವ ಗಿರೀಶ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next