Advertisement

ರಾಜ್ಯ ಎನ್‌ಎಸ್‌ಎಸ್ ಘಟಕಕ್ಕೆ 42,800 ಸ್ವಯಂ ಸೇವಕರ ಸೇರ್ಪಡೆಗೆ ಅವಕಾಶ

08:08 PM Jun 16, 2022 | Team Udayavani |

ಬೆಂಗಳೂರು : ರಾಜ್ಯ ಎನ್‌ಎಸ್‌ಎಸ್ ಕೋಶಕ್ಕೆ ಮತ್ತಷ್ಟು ಬಲ ತುಂಬಲು ಕೇಂದ್ರ ಸರ್ಕಾರ ಸಮ್ಮತಿಸಿದ್ದು, 10 ಕೋಟಿ ಹೆಚ್ಚುವರಿ ಅನುದಾನ ನೀಡಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.

Advertisement

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್.‌ ಎಸ್.‌ ಎಸ್.‌ ಕೋಶಕ್ಕೆ ಹೆಚ್ಚುವರಿಯಾಗಿ 42,800 ಸ್ವಯಂ ಸೇವಕರನ್ನು ಸೇರಿಸಿಕೊಳ್ಳಲು ಅನುಮೋದನೆ ನೀಡಿದೆ. ಇದುವರೆಗೂ 2,78,200 ಸ್ವಯಂಸೇವಕರ ಹಂಚಿಕೆ ಮಾಡಿದ್ದು, ರಾಜ್ಯ ಎನ್.‌ಎಸ್.‌ಎಸ್.‌ ಕೋಶವು ಇದುವರೆಗೆ 5,00,000 ಸ್ವಯಂಸೇವಕರನ್ನು ನೋಂದಾಯಿಸಿದೆ.‌ 2022-23 ಸಾಲಿಗೆ ರಾಜ್ಯ ಎನ್.‌ಎಸ್.‌ಎಸ್.‌ ಕೋಶವು ಹೆಚ್ಚುವರಿ ಸ್ವಯಂಸೇವಕರ ಹಂಚಿಕೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 42,800 ಸ್ವಯಂಸೇವಕರ ಸಂಖ್ಯಾಬಲವನ್ನು ಹಂಚಿಕೆ ಮಾಡಿದೆ. ಈ ಮೂಲಕ ರಾಜ್ಯದ ಎನ್‌‌ಎಸ್ಎಸ್ ಸ್ವಯಂ ಸೇವಕರ ಸಂಖ್ಯೆ ಸ್ವಯಂಸೇವಕರ ಸಂಖ್ಯೆಯು 2,78,200 ರಿಂದ 3,21,000ಕ್ಕೆ ಏರಿಕೆಯಾಗಿದೆ. ಕರ್ನಾಟಕ ರಾಜ್ಯವು ಹೆಚ್ಚುವರಿ ಸ್ವಯಂಸೇವಕರ ಸಂಖ್ಯಾಬಲದ ಹಂಚಿಕೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಸೇವಾ ಯೋಜನೆಯ ದೈನಂದಿನ ಚಟುವಟಿಕೆಗಳಿಗೆ ಮತ್ತು ವಿಶೇಷ ಶಿಬಿರಗಳಿಗೆ ಪ್ರತಿ ಸ್ವಯಂಸೇವಕರಿಗೆ ನೀಡುತ್ತಿದ್ದ ಅನುದಾನ 250 ರೂ. ಮತ್ತು .450 ರೂ. ಪರಿಷ್ಕರಿಸಿ, 400 ರೂ. ಮತ್ತು700-ರೂ.ಗಳಿಗೆ ಹೆಚ್ಚಳ ಮಾಡಿದೆ. ಈ ಹಿನ್ನಲೆಯಲ್ಲಿ ಎನ್‌ಎಸ್‌ಎಸ್ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಒಟ್ಟು ರೂ. 24.75 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಎನ್‌ಎಸ್ಎಸ್ ಉತ್ತಮ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ತ್ಯಾಜ್ಯ ಮುಕ್ತ ಅಭಿಯಾನ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹತ್ತಾರು ಕಾರ್ಯಕ್ರಮಗಳ ಜೊತೆ ಕೈ ಜೋಡಿಸುತ್ತಿದೆ. ಇದೀಗ ಹೆಚ್ಚುವರಿಯಾಗಿ 42 ಸಾವಿರ ಸ್ವಯಂ ಸೇವಕರ ನೀಡಿರುವುದರಿಂದ ಇನ್ನಷ್ಟು ಹೆಚ್ಚಿನ ಸೇವೆಯನ್ನು ಮಾಡಲು ಅನುಕೂಲವಾಗಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next