Advertisement

ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ ಕೊರಗರ ಜನಸಂಖ್ಯೆ

07:17 PM Sep 13, 2021 | Team Udayavani |

ಪುತ್ತೂರು: ವರ್ಷದಿಂದ ವರ್ಷಕ್ಕೆ ಕೊರಗ ಸಮುದಾಯದ ಜನಸಂಖ್ಯೆ ಇಳಿಮುಖಗೊಳ್ಳುತ್ತಿದ್ದು, ಪ್ರಮುಖ ಆದಿ ವಾಸಿ ಸಮುದಾಯವೊಂದು ಅಳಿವಿನಂಚಿತ್ತ ಸಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಆದಿವಾಸಿ ಬುಡಕಟ್ಟು ಪಂಗಡದ ಕೊರಗ ಜನಾಂಗದವರು ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯದ ಈಗಿರುವ ಒಟ್ಟು ಜನಸಂಖ್ಯೆ ಕೇವಲ 16 ಸಾವಿರ. ದ.ಕ. ಜಿಲ್ಲೆಯಲ್ಲಿ ಇರುವ ಕೊರಗರ ಸಂಖ್ಯೆ ಕೇವಲ 4,818.

55 ಸಾವಿರದಿಂದ  6 ಸಾವಿರಕ್ಕೆ ಕುಸಿತ:

ಸ್ವಾತಂತ್ರ್ಯ ಪೂರ್ವದಲ್ಲಿ (ಬ್ರಿಟಿಷ್‌ ಆಡಳಿತದ ದಾಖಲೆಗಳ ಪ್ರಕಾರ) ಕೊರಗರ ಒಟ್ಟು ಜನಸಂಖ್ಯೆ 55,000 ಇತ್ತು. ಸ್ವಾತಂತ್ರ್ಯ ಅನಂತರ ಸರಕಾರ ನಡೆಸಿದ ಜನಗಣತಿಯಲ್ಲಿ ಕೊರಗ ಸಮುದಾಯದ ಜನಸಂಖ್ಯೆ 35,000 ಸಾವಿರ ಆಗಿತ್ತು.

1992ರಲ್ಲಿ ಕೊರಗರ ಜನ ಸಂಖ್ಯೆಯ ಅನುಪಾತ ಕುಸಿತವನ್ನು ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ನಡೆಸಿದ ಜನಸಂಖ್ಯಾ ಸಮೀಕ್ಷೆಯಲ್ಲಿ ಕೊರಗರ ಜನಸಂಖ್ಯೆ 22,000ಕ್ಕೆ ಕುಸಿದಿತ್ತು. 2004ರ ಬಳಿಕ ಇನ್ನಷ್ಟು ಕುಸಿತ ಕಂಡು 16,000ಕ್ಕೆ ಇಳಿದಿತ್ತು ಎಂಬುದನ್ನು ಕೊರಗ ಸಮುದಾಯದ ಮುಖಂಡರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನೀಡುವ ಅಂಕಿ ಅಂಶಗಳನ್ನು ತಿಳಿಸುತ್ತದೆ.

Advertisement

ಪೌಷ್ಟಿಕ ಆಹಾರದ ಕೊರತೆ:

ರಕ್ತಹೀನತೆ, ಪೋಷಕಾಂಶಗಳ ಕೊರತೆ, ಅಪೌಷ್ಟಿಕ ಆಹಾರ ಹಾಗೂ ಗರ್ಭಿಣಿ ಮಹಿಳೆಯರ ಆರೈಕೆಯಲ್ಲಿ ಹಿನ್ನಡೆ ಮೊದಲಾದ ಕಾರಣಗಳಿಂದಾಗಿ ಕೊರಗರ ಸಂಖ್ಯೆ ಇಳಿಮುಖಗೊಳ್ಳುತ್ತಿದೆ ಎನ್ನುವುದು ಅಧ್ಯಯನವೊಂದರಲ್ಲಿ ಬಹಿರಂಗಗೊಂಡಿದೆ. ಸಮಗ್ರ ಗಿರಿಜನ ಕಲ್ಯಾಣಾಭಿವೃದ್ಧಿ(ಐಟಿಡಿಪಿ)ಯೋಜನೆ ಪೌಷ್ಟಿಕ ಆಹಾರದ ಪ್ಯಾಕೇಜ್‌ಗಳನ್ನು ವಿತರಿಸುತ್ತಿದ್ದರೂ ಅವು ಗುಣಮಟ್ಟದಿಂದ ಕೂಡಿಲ್ಲ ಎಂಬ ದೂರು ಕೇಳಿ ಬಂದಿದೆ. ಕೆಲವು ದಿನಗಳ ಹಿಂದೆ ನಡೆದ ಸಭೆಯಲ್ಲಿ ಈ ಬಗ್ಗೆ ಪರಿಶೀಲನೆಗೆ ದ.ಕ. ಜಿಲ್ಲಾ ಸಚಿವ ಎಸ್‌.ಅಂಗಾರ ಸೂಚಿಸಿದ್ದರು. ಜತೆಗೆ ಕೊರಗರ ಕಾಲನಿಯ ಅನೈರ್ಮಲ್ಯ ಪರಿಸರವು ಅನಾರೋಗ್ಯಕ್ಕೆ ಕಾರಣವಾಗಿದೆ. ಇದರಿಂದ ಗಂಭೀರ ಕಾಯಿಲೆಗಳು ಕಾಣಿಸಿಕೊಂಡು ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಮರಣ ಪ್ರಮಾಣ ಹೆಚ್ಚಳ:

ಕೊರಗ ಸಮುದಾಯದಲ್ಲಿ ಜನನ ಸಂಖ್ಯೆಗಿಂತಲೂ, ಮರಣ ಹೊಂದುವವರ ಸಂಖ್ಯೆಯೇ ಅಧಿ ಕವಾಗಿದೆ. 25 ವರ್ಷದಿಂದ 40 ವರ್ಷದೊಳಗಿನವರು ಹೆಚ್ಚು ಮೃತಪಟ್ಟ ದಾಖಲೆಗಳಿವೆ. ಹೀಗಾಗಿ ಸಾವಿನ ಪ್ರಮಾಣ ಇಳಿಮುಖದ ಕಡೆ ಇಲಾಖೆ ಆದ್ಯತೆ ನೀಡುವ ಅಗತ್ಯವಿದೆ.

ಜಿಲ್ಲಾ ಅಂಕಿ ಅಂಶ ವಿವರ :

ತಾಲೂಕು         ಕುಟುಂಬ          ಜನಸಂಖ್ಯೆ        ಕಾಲನಿ

ಮಂಗಳೂರು(ಉ)         271         1,204     13

ಮಂಗಳೂರು(ದ)          503         2,202     38

ಬಂಟ್ವಾಳ         187         572         26

ಪುತ್ತೂರು          100         356         21

ಬೆಳ್ತಂಗಡಿ         113         383         13

ಸುಳ್ಯ   32           101         08

ಒಟ್ಟು 1,206     4,818     119

ಸಮುದಾಯ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಈಗ 16 ಸಾವಿರಕ್ಕೆ ಕುಸಿದಿದೆ. ಇದಕ್ಕೆ ಜಾಗದ ಕೊರತೆ, ಹಕ್ಕುಪತ್ರ ಸಿಗದಿರುವುದು, ಅಪೌಷ್ಟಿಕ ಆಹಾರ ಹೀಗೆ ಹತ್ತಾರು ಕಾರಣಗಳಿವೆ. ಹೀಗಾಗಿ ಕೊರಗ ಸಮುದಾಯಕ್ಕೆಂದೇ ಸರಕಾರ ಪ್ರತ್ಯೇಕ ಯೋಜನೆ ರೂಪಿಸಿ ಜಾರಿ ಮಾಡುವ ಅಗತ್ಯವಿದ್ದು ಈ ಬಗ್ಗೆ ಸಚಿವರ ಮೂಲಕ ಮನವಿ ಸಲ್ಲಿಸಲಾಗಿದೆ.ಮತ್ತಡಿ, ಸಮುದಾಯದ ಮುಂದಾಳು

ಕೊರಗ ಸಮುದಾಯ ಜನರ ಸಮಸ್ಯೆ ಗಮನಕ್ಕೆ ಬಂದಿದೆ. ಅಪೌಷ್ಟಿಕ ಆಹಾರ ಸೇರಿ ನಾನಾ ಸಮಸ್ಯೆಗಳಿಗೆ ಸಂಬಂಧಿಸಿ ತಾಲೂಕು ಮಟ್ಟದಲ್ಲಿ ಸಭೆ ಕರೆದು ಸ್ಥಳದಲ್ಲೇ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುವುದು.ಎಸ್‌.ಅಂಗಾರ, ಉಸ್ತುವಾರಿ ಸಚಿವರು, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next