Advertisement

Adani: ಮಹುವಾ ಕೇಸಿನ ವಿಚಾರಣೆ ಹೇಗೆ?

08:51 PM Oct 26, 2023 | Team Udayavani |

ತೃಣಮೂಲ ಕಾಂಗ್ರೆಸ್‌ನ ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ಅದಾನಿ ಗ್ರೂಪ್‌ ಅನ್ನು ಗುರಿಯಾಗಿಸಿ, ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆ ಕೇಳುವ ನಿಟ್ಟಿನಲ್ಲಿ ಹಣಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಮಾಡಿರುವ ಆರೋಪದ ಕಾವು ಜೋರಾಗಿದೆ. ಗುರುವಾರ ನವದೆಹಲಿಯಲ್ಲಿ ಸಂಸತ್‌ನ ಎಥಿಕ್ಸ್‌ ಕಮಿಟಿ ಮುಂದೆ ಸಂಸದ ನಿಶಿಕಾಂತ್‌ ದುಬೆ, ವಕೀಲ ಜಯ ದೇಹದ್ರಾಯ್‌ ಹಾಜರಾಗಿದ್ದಾರೆ. ಕಮಿಟಿ ಯಾವ ರೀತಿ ವಿಚಾರಣೆ ನಡೆಸುತ್ತದೆ, ಪ್ರಕರಣದ ಗಂಭೀರತೆ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

Advertisement

ಏನಿದು ಪ್ರಕರಣ?
ಸಂಸತ್‌ನಲ್ಲಿ ಅದಾನಿ ಗ್ರೂಪ್‌ ವಿರುದ್ಧ ಪ್ರಶ್ನೆ ಕೇಳುವ ನಿಟ್ಟಿನಲ್ಲಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಲಂಚ ಪಡೆದಿದ್ದಾರೆ ಎನ್ನುವುದು ಪ್ರಕರಣದ ಪ್ರಧಾನ ಅಂಶ. ಈ ಅಂಶವನ್ನು ದುಬೈನಲ್ಲಿರುವ ರಿಯಲ್‌ ಎಸ್ಟೇಟ್‌ ಡೆವಲಪರ್‌ ದರ್ಶನ್‌ ಹೀರಾನಂದಾನಿ ಕೂಡ ತಮ್ಮ ಪ್ರಮಾಣ ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಬಿಜೆಪಿ ಸಂಸದ ದುಬೆ ತನಿಖೆ ನಡೆಯುವ ಉದ್ದೇಶದಿಂದ ಲೋಕಪಾಲಕ್ಕೆ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿ‌ನಿ ವೈಷ್ಣವ್‌ಗೂ ಪತ್ರ ಬರೆದು ಒತ್ತಾಯಿಸಿದ್ದಾರೆ. ಜತೆಗೆ ದರ್ಶನ್‌ ಹಿರಾನಂದಾನಿ ಅವರಿಗೆ ಮೊಯಿತ್ರಾ ಅವರು ಸಂಸತ್‌ಗೆ ಸಂಬಂಧಿಸಿದ ಲಾಗ್‌ಇನ್‌ ವಿವರಗಳನ್ನು ನೀಡಿದ್ದಾರೆ ಎಂಬ ಆರೋಪಗಳೂ ಅವೆ.

ಸಂಸದ ನಿಶಿಕಾಂತ್‌ ದುಬೆ ಮಾಡಿದ ಆರೋಪ ಎಷ್ಟು ಗಂಭೀರ?
ನಿಗದಿತ ಸಂಸದರೊಬ್ಬರು ಯಾರಿಂದಲೋ ಉಡುಗೊರೆ ಅಥವಾ ಲಾಭ ಪಡೆದು ಅವರಿಗೆ ಬೇಕಾಗಿ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ಅಂಶ ಸಾಬೀತಾದರೆ ಅದು ಗಂಭೀರ ವಿಚಾರವೇ. ಸದ್ಯ ಚರ್ಚೆಯಲ್ಲಿ ಇರುವ ಪ್ರಕರಣ ಗಂಭೀರವೇ ಆಗಿದೆ ಎನ್ನುವುದನ್ನು ಗುರುವಾರದ ವಿಚಾರಣೆ ವೇಳೆ, ಎಥಿಕ್ಸ್‌ ಕಮಿಟಿ ಅಭಿಪ್ರಾಯಪಟ್ಟಿದೆ. ಒಂದು ವೇಳೆ, ಅದು ಹೌದಾದರೆ ಹಕ್ಕುಗಳ ಸಮಿತಿ (ಪ್ರಿವಿಜಸ್‌ ಕಮಿಟಿ) ವ್ಯಾಪ್ತಿಗೆ ಬರುತ್ತದೆ. ಏಕೆಂದರೆ, ನಿಗದಿತ ವ್ಯಕ್ತಿಯ ಪರವಾಗಿ ಪ್ರಶ್ನೆ ಕೇಳುವುದು ಸದನದ ನಿಯಮಗಳ ಮತ್ತು ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ. ಸಂಸದೀಯ ವ್ಯವಸ್ಥೆ ಇರುವ ಎಲ್ಲಾ ರಾಷ್ಟ್ರಗಳಲ್ಲಿಯೂ ಸರಿ ಸುಮಾರಾಗಿ ಇದೇ ವ್ಯವಸ್ಥೆ ಜಾರಿಯಲ್ಲಿದೆ. ಆರೋಪಗಳು ಸಾಬಿತಾದ ಸಂದರ್ಭಗಳಲ್ಲಿ ಸದಸ್ಯನನ್ನು ಸದನದಿಂದ ಉಚ್ಚಾಟಿಸಲಾಗುತ್ತದೆ.

ಎಥಿಕ್ಸ್‌ ಕಮಿಟಿಗೆ ವಿಚಾರಣೆ ನಡೆಸಲು ಅಧಿಕಾರ ಇದೆಯೇ?
ಹದಿನಾಲ್ಕು ಮತ್ತು ಹದಿನೈದನೇ ಲೋಕಸಭೆಯ ನಿವೃತ್ತ ಸೆಕ್ರೆಟರಿ ಜನರಲ್‌ ಪಿ.ಡಿ.ಟಿ. ಆಚಾರಿ ಅವರು ಹೇಳುವಂತೆ ಪ್ರಕರಣವನ್ನು ಹಕ್ಕುಗಳ ಸಮಿತಿ (ಪ್ರಿವಿಜಸ್‌ ಕಮಿಟಿ)ಗೆ ತನಿಖೆಗಾಗಿ ವಹಿಸಬೇಕಾಗಿತ್ತು. ಸದನ ಸದಸ್ಯರು ತಮ್ಮ ಹಕ್ಕುಗಳನ್ನು ಮತ್ತು ನಿಯಮಗಳನ್ನು ಉಲ್ಲಂ ಸಿದರೆ ಆ ಸಮಿತಿ ಪರಿಶೀಲನೆ ನಡೆಸಿ ತನಿಖೆಗೆ ನಡೆಸುತ್ತದೆ. ಎಥಿಕ್ಸ್‌ ಕಮಿಟಿ ಇಂಥ ಗಂಭೀರ ಪ್ರಕರಣಗಳನ್ನು ಪರಿಶೀಲಿಸುವುದಿಲ್ಲ. ಎಥಿಕ್ಸ್‌ ಕಮಿಟಿ ಕೇವಲ ನೈತಿಕವಾಗಿ ಸಂಸದರ ವಿರುದ್ಧ ಕೇಳಿ ಬಂದಿರುವ ನೈತಿಕತೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆ ಮಾಡುತ್ತದೆ.

ಹಿಂದಿನ ಸಂದರ್ಭಗಳಲ್ಲಿ ಸಂಸತ್‌ ಸದಸ್ಯರು ತಾವು ಹೊಂದಿರುವ ಸಂಸತ್‌ನ ಲಾಗ್‌ಇನ್‌ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ನೀಡಿ ವಿವಾದಕ್ಕೆ ಗುರಿಯಾಗಿದ್ದ ಉದಾಹರಣೆಗಳಿವೆಯೇ?
ಇಂಥ ಪ್ರಕರಣಗಳು ನಡೆದಿಲ್ಲ. ತೀರಾ ಇತ್ತೀಚೆಗಷ್ಟೇ ಈ ವ್ಯವಸ್ಥೆ ಜಾರಿಯಾಗಿದೆ. ಲೋಕಸಭೆಯ ನಿಯಮಗಳ ಪ್ರಕಾರ ಸದನದ ಸದಸ್ಯ ನಿಗದಿತ ನಮೂನೆಯಲ್ಲಿ ಪ್ರಶ್ನೆಯನ್ನು ಬರೆದು, ಸಹಿ ಹಾಕಿ, ಸಂಸದರಿಗೆ ನೀಡಲಾಗಿರುವ ಗುರುತಿನ ಸಂಖ್ಯೆಯನ್ನು ನಮೂದಿಸಬೇಕು. ಆದರೆ, ಅದನ್ನು ಸಂಸದರ ಪರವಾಗಿ ಯಾರೂ ಕೂಡ ಹಸ್ತಾಂತರ ಮಾಡಬಹುದು. ಸಂಸತ್‌ ಸದಸ್ಯರ ಸಹಿಯನ್ನು ಲೋಕಸಭೆಯಲ್ಲಿ ಹೋಲಿಕೆ ಮಾಡಿ ಪರಿಶೀಲಿಸಿದ ಬಳಿಕ ಅದನ್ನು ಅಂಗೀಕರಿಸಿ, ಮುಂದುವರಿಯಲಾಗುತ್ತದೆ.

Advertisement

ದೇಶದ ಸಂಸತ್‌ ಸದಸ್ಯರು ತಮ್ಮ ಲಾಗ್‌ಇನ್‌ ಐಡಿಗಳನ್ನು ಮತ್ತೂಬ್ಬರಿಗೆ ಕೊಡಬಾರದು ಎಂಬ ನಿಯಮಗಳಿವೆಯೇ?
ಇದುವರೆಗೆ ಅಂಥ ನಿಯಮಗಳು ಇಲ್ಲ. ಸಂಸತ್‌ ಸದಸ್ಯರಿಗೆ ಆನ್‌ಲೈನ್‌ನಲ್ಲಿ ಪ್ರಶ್ನೆಗಳನ್ನು ಕೇಳುವ ವ್ಯವಸ್ಥೆಯನ್ನು ಇತ್ತೀಚೆಗಷ್ಟೇ ಜಾರಿಗೆ ತರಲಾಗಿದೆ. ಹೊಸ ವ್ಯವಸ್ಥೆ ಜಾರಿಗೆ ತರುವ ಸಂದರ್ಭದಲ್ಲಿಯೇ ಅದರ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ನಿಯಮಕ್ಕೆ ತಿದ್ದುಪಡಿ ತಂದು ಜಾರಿಗೆ ತರಬಹುದಾಗಿತ್ತು ಎಂದು ಹದಿನಾಲ್ಕು ಮತ್ತು ಹದಿನೈದನೇ ಲೋಕಸಭೆಯ ನಿವೃತ್ತ ಸೆಕ್ರೆಟರಿ ಜನರಲ್‌ ಪಿ.ಡಿ.ಟಿ. ಆಚಾರಿ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ಬರೆದ ಲೇಖನದಲ್ಲಿ ಅಭಿಪ್ರಾಯಪಡುತ್ತಾರೆ.

ಎಥಿಕ್ಸ್‌ ಕಮಿಟಿ ವಿಚಾರಣೆ ನಡೆಸಲು ಶುರು ಮಾಡಿದ ಬಳಿಕ ಏನಾಗಲಿದೆ?
ಸಂಸದೆ ಮಹುವಾ ಮೊಯಿತ್ರಾ ಪ್ರಕರಣದಲ್ಲಿ ಕಮಿಟಿ ಗುರುವಾರ ಆರೋಪ ಮಾಡಿದ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ, ನ್ಯಾಯವಾದಿ ಜಯ ದೇಹದ್ರಾಯ್‌ ಅವರಿಂದ ಹೇಳಿಕೆ ಪಡೆದುಕೊಂಡಿದೆ. ಸಂಸದೆ ಮೊಯಿತ್ರಾರನ್ನು ಅ.31ರಂದು ವಿಚಾರಣೆಗೆ ಬರುವಂತೆ ಕಮಿಟಿ ಸೂಚಿಸಿದೆ. ಆರೋಪಕ್ಕೆ ಗುರಿಯಾಗಿರುವ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ದೂರುದಾರ ಸಂಸದ ದುಬೆ ಅವರನ್ನೂ ನಿಯಮಗಳ ಅನ್ವಯ ಪಾಟಿ ಸವಾಲಿಗೆ ಒಳಪಡಿಸಲು ಅವಕಾಶ ಇದೆ. ಅದಕ್ಕಾಗಿ ಅವರು ಲೋಕಸಭೆ ಸ್ಪೀಕರ್‌ ಅವರ ಅನುಮತಿಯೊಂದಿಗೆ ವಕೀಲರ ಮೂಲಕವೂ ಈ ಪ್ರಕ್ರಿಯೆಗೆ ಹಾಜರಾಗಲು ಸಾಧ್ಯವಿದೆ.

ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸಮಿತಿ ಎಷ್ಟು ಸಮಯ ತೆಗೆದುಕೊಳ್ಳಬಹುದು?
ಪ್ರಕರಣದ ಗಂಭೀರತೆಯನ್ನು ಅರಿತುಕೊಂಡು ಎಥಿಕ್ಸ್‌ ಕಮಿಟಿ ಕಡಿಮೆ ಅಥವಾ ದೀರ್ಘಾವಧಿಯನ್ನು ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಎರಡು ತಿಂಗಳ ಅವಧಿಯನ್ನು ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ತನಿಖೆ ಅಥವಾ ವಿಚಾರಣೆ ಪೂರ್ಣಗೊಳ್ಳದಿದ್ದರೆ ಹೆಚ್ಚಿನ ಸಮಯದ ಅವಕಾಶ ಕೇಳುವ ಅವಕಾಶ ಉಂಟು. ಹಿಂದಿನ ಸಂದರ್ಭಗಳಲ್ಲಿ ಸಂಸದರನ್ನು ನಿಯಮಿತ ಅವಧಿಗೆ ಸದನದಿಂದ ಸಸ್ಪೆಂಡ್‌ ಮಾಡುವ ಬಗ್ಗೆಯೂ ಶಿಫಾರಸು ಮಾಡಬಹುದು.

ಎಥಿಕ್ಸ್‌ ಕಮಿಟಿಗೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಅಥವಾ ಪೊಲೀಸರಿಗೆ ತನಿಖೆಗಾಗಿ ವರ್ಗಾಯಿಸುವ ಅಧಿಕಾರ ಇದೆಯೇ?
ಈ ಸಮಿತಿಗೆ ಅಂಥ ಅಧಿಕಾರವಿಲ್ಲ. ಎಥಿಕ್ಸ್‌ ಕಮಿಟಿಯಲ್ಲಿ ಬಿಜೆಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸಂಸದೆ ಮಹುವಾ ಮೊಯಿತ್ರಾ ಆರೋಪದ ಬಗ್ಗೆ ಸಂಸತ್‌ನ ಎಲ್ಲಾ ಸಮಿತಿಗಳಲ್ಲಿಯೂ ಕೂಡ ಆಳುವ ಪಕ್ಷದ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅದೇ ರೀತಿಯಲ್ಲಿ ಸಮಿತಿ ರಚನೆಯಾಗುತ್ತದೆ. ಆದರೆ, ಸಂಸತ್‌ನ ಸಮಿತಿಗಳೆಲ್ಲವೂ ಕೂಡ ಪಕ್ಷಪಾತ ರಹಿತವಾಗಿ ಕಾರ್ಯನಿರ್ವಹಿಸಬೇಕು ಎನ್ನುವುದು ಸಾಮಾನ್ಯ ತಿಳಿವಳಿಕೆ. ಕಮಿಟಿಗೆ ಶಾಸನಾತ್ಮಕ ಅಧಿಕಾರವಿಲ್ಲ. ಅದರ ಶಿಫಾಸುಗಳೇನಿದ್ದರೂ, ಸದನಕ್ಕೆ ಬಂದು ಅಲ್ಲಿ ಅದರ ಬಗ್ಗೆ ತೀರ್ಮಾನವಾಗಲಿದೆ.

ಸಂಸತ್‌ ಸದಸ್ಯರು ಕಮಿಟಿ ತೀರ್ಮಾನಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆಯೇ?
ನಿಗದಿತ ಸದಸ್ಯರನ್ನು ಉಚ್ಚಾಟನೆ ಮಾಡಿದ ತೀರ್ಮಾನ ಕೈಗೊಂಡಲ್ಲಿ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಸಮಿತಿ ಸಾಂವಿಧಾನಿಕ ನೆಲೆಯಲ್ಲಿ ಪ್ರಕರಣವನ್ನು ನಿಭಾಯಿಸಿಲ್ಲ ಎಂಬ ವಾದವನ್ನು ಮುಂದಿಟ್ಟುಕೊಂಡು ವಾದಿಸಲು ಅವಕಾಶ ಇದೆ. ಸಹಜ ನ್ಯಾಯದ ಅವಕಾಶವಿದ್ದರೂ, ಪೂರ್ಣವಾಗಿ ನಿರಾಕರಿಸಲಾಗಿದೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ವಾದಿಸಬಹುದು. ಆದರೆ, ಇಲ್ಲಿ ಕೋರ್ಟ್‌ಗಳ ಪ್ರವೇಶಕ್ಕೆ ಅವಕಾಶ ಅತ್ಯಲ್ಪ.

Advertisement

Udayavani is now on Telegram. Click here to join our channel and stay updated with the latest news.

Next