ಹೈದರಾಬಾದ್: ಶೀಘ್ರದಲ್ಲಿ ಮದುವೆಯಾಗಲು ಸಿದ್ದರಾಗಿದ್ದ ಖ್ಯಾತ ನಟರೊಬ್ಬರ ಕಾರು ಅಪಘಾತವಾಗಿರುವ ಘಟನೆ ಹೈದರಾಬಾದ್ ನ ಫಿಲಂನಗರ ಜಂಕ್ಷನ್ ನಲ್ಲಿ ಶನಿವಾರ (ಮೇ.27 ರಂದು) ನಡೆದಿರುವುದು ವರದಿಯಾಗಿದೆ.
ಟಾಲಿವುಡ್ ನಟ ಶರ್ವಾನಂದ್ ಸಂಚರಿಸುತ್ತಿದ್ದ ರೇಂಜ್ ರೋವರ್ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ ಪರಿಣಾಮ ನಟ ಗಾಯಗೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ನಟನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
2023ರ ಜನವರಿಯಲ್ಲಿ ಟಾಲಿವುಡ್ ನಟ ಶರ್ವಾನಂದ್ ಯುಎಸ್ ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿರುವ ಆಂಧ್ರ ಮೂಲದ ರಕ್ಷಿತಾ ರೆಡ್ಡಿ ಅವರೊಂದಿಗೆ ಎಂಗೇಜ್ ಮೆಂಟ್ ಆಗಿದ್ದಾರೆ. ವರದಿಯೊಂದರ ಪ್ರಕಾರ ಅವರ ಮದುವೆ ಜೂನ್ ಮೊದಲ ವಾರದಲ್ಲಿ ನಡೆಯಲಿದೆ ಎನ್ನಲಾಗಿದೆ.
ಅಪಘಾತದ ಬಗ್ಗೆ ಕುಟುಂಬದ ಸದಸ್ಯರು ಅಧಿಕೃತವಾಗಿ ಹೇಳದೆ ಇದ್ದರೂ, ಆಪ್ತ ಮೂಲಗಳ ಪ್ರಕಾರ ನಟನ ಆರೋಗ್ಯ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ವರದಿಯೊಂದು ತಿಳಿಸಿದೆ.
Related Articles
ಸದ್ಯ ಶರ್ವಾನಂದ್ ಅವರು ಶ್ರೀರಾಮ್ ಆದಿತ್ಯ ಅವರ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಲಂಡನ್ ನಲ್ಲಿ 40 ದಿನಗಳ ಶೂಟಿಂಗ್ ಮುಗಿಸಿ ಇತ್ತೀಚೆಗೆ ಭಾರತಕ್ಕೆ ಬಂದಿದ್ದಾರೆ. ಅವರು ಹೊಸ ಜೀವನಕ್ಕೆ ಕಾಲಿಡುವ ಮುನ್ನ ಸಿನಿಮಾ ಸಂಬಂಧಿತ ಕೆಲಸಗಳನ್ನು ಪೂರ್ತಿಗೊಳಿಸುವಲ್ಲಿ ನಿರತರಾಗಿದ್ದಾರೆ.
ಅಪಘಾತ ಸಂಭವಿಸಿದ್ದರಿಂದ ಅವರ ಮದುವೆಯ ದಿನ ಮುಂದೂಡಿಕೆ ಆಗುತ್ತದ್ದೋ ಇಲ್ವೋ ಎನ್ನುವುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.
ಇತ್ತೀಚೆಗೆ ನಟ ಶರ್ವಾನಂದ್ ಅವರ ಮದುವೆ ರದ್ದಾಗಿದೆ. ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು.