ಮಹಾಲಿಂಗಪುರ : ಪಟ್ಟಣದ ಗೋಕಾಕ್ ರಸ್ತೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿನ ಕುಸ್ತಿ ಮೈದಾನದಲ್ಲಿ ರವಿವಾರ ದೇಸಾಯಿ ಚಿತ್ರದ ಚಿತ್ರೀಕರಣ ನಡೆಯಿತು.
ಇದೇ ಮೊದಲ ಬಾರಿಗೆ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ದೇಸಾಯಿ ಚಿತ್ರದಲ್ಲಿನ ಅತಿಥಿ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ರವಿವಾರ ಲಕ್ಷ್ಮಣ ಸವದಿ ಅಭಿನಯದ ದೃಶ್ಯಗಳನ್ನು ಚಿತ್ರದ ನಿರ್ದೇಶಕ ನಾಗಿರಡ್ಡಿ ಅವರು ಸೆರೆಹಿಡಿದರು.
ಬಾಗಲಕೋಟೆಯ ಮಹಾಂತೇಶ ಚೋಳಚಗುಡ್ಡ ಅವರ ಕಥೆ-ನಿರ್ಮಾಣದ ದೇಸಾಯಿ ಚಿತ್ರವು ಸಂಪೂರ್ಣ ಉತ್ತರ ಕರ್ನಾಟಕದ ಕಥೆಯಾಗಿದ್ದು, ಚಿತ್ರದಲ್ಲಿ ಡಾ.ಪ್ರವೀಣಕುಮಾರ್ ನಾಯಕನಾಗಿ, ರಾಜಿಯಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ಛಾಯಾಗ್ರಹಕ ಪಿ.ಕೆ.ಎಚ್ ದಾಸ ಅವರ ಛಾಯಾಗ್ರಹಣ, ಜೋಗಿ ಖ್ಯಾತಿಯ ಪೈಟ್ ಮಾಸ್ಟರ್ ಮಾಸ ಮಾದ ಅವರ ಸಾಹಸ ಸಂಯೋಜನೆ, ಸಾಯಿ ಕಾರ್ತಿಕ ಅವರ ಸಂಗೀತ ಚಿತ್ರಕ್ಕಿದೆ.
ಮಹಾಲಿಂಗೇಶ್ವರ ಜಾತ್ರೆಯ ನಿಮಿತ್ಯ ಶನಿವಾರ ನಡೆದ ಕುಸ್ತಿ ಮೈದಾನದಲ್ಲಿಯೇ ದೇಸಾಯಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಚಿತ್ರದಲ್ಲಿ ಬರುವ ಕುಸ್ತಿ ಪಂದ್ಯಾವಳಿ ವಿಜೇತ ನಾಯಕನಿಗೆ ಪ್ರಶಸ್ತಿ ಪ್ರಧಾನ ಮಾಡುವ ಮುಖ್ಯ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರವಿವಾರ ಶಾಸಕ ಲಕ್ಷ್ಮಣ ಸವದಿ ಅವರ ಭಾಗದ ಚಿತ್ರೀಕರಣ ಮುಗಿಸಲಾಗಿದೆ. ಸೋಮವಾರವು ಕುಸ್ತಿ ಮೈದಾನದಲ್ಲಿ ನಮ್ಮ ಚಿತ್ರದ ಚಿತ್ರೀಕರಣ ಮುಂದುವರೆಯಲಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣವು ಬಾಗಲಕೋಟೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿಯೇ ನಡೆಯಲಿದೆ ಎಂದು ಚಿತ್ರದ ಕಥೆಗಾರ-ನಿರ್ಮಾಪಕ ಮಹಾಂತೇಶ ಚೋಳಚಗುಡ್ಡ ಉದಯವಾಣಿಗೆ ತಿಳಿಸಿದರು.