Advertisement

ಅಕ್ರಮ ದಂಧೆ ನಿಲ್ಲದಿದ್ದರೆ ಕ್ರಮ: ಲಕ್ಷ್ಮಣ ಸವದಿ

06:24 PM Jan 26, 2021 | Team Udayavani |

ರಾಯಚೂರು: ಜಿಲ್ಲೆಯಲ್ಲಿ ಮರಳು ಅಕ್ರಮ ಗಣಿಗಾರಿಕೆ, ಮಟಕಾದಂಥ ಅಕ್ರಮ ದಂಧೆಗಳು ಎಗ್ಗಿಲ್ಲದೇ ಸಾಗಿದ್ದು, ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದಲ್ಲಿ ಡಿಸಿ, ಎಸ್‌ಪಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ  ಎಚ್ಚರಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಗ್ರಾಮೀಣ ಕ್ಷೇತ್ರದ ಶಾಸಕ ದದ್ದಲ್‌ ಬಸನಗೌಡ ಮಾತನಾಡಿ, ನೀವು ಉಸ್ತುವಾರಿ ವಹಿಸಿಕೊಂಡಾಗಿನಿಂದ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಅನುಪಾಲನಾ ವರದಿಗಳು ಜಾರಿಯಾಗುತ್ತಿಲ್ಲ. ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದೆ. 40 ಟನ್‌ ಮರಳು ತುಂಬಿದ ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದರು.

ಇದಕ್ಕೆ ಕೆಲ ಶಾಸಕರು ದನಿಗೂಡಿಸಿದರೆ, ಶಾಸಕ ಡಿ.ಎಸ್‌. ಹೂಲಗೇರಿ, ಮಟಕಾ ದಂಧೆಯೂ ಎಗ್ಗಿಲ್ಲದೇ ಸಾಗಿದೆ ಎಂದು ದೂರಿದರು. ಓವರ್‌ ಲೋಡ್‌ಗೆ ಸಂಬಂಧಿಸಿ ಎಷ್ಟು ಪ್ರಕರಣ ದಾಖಲಿಸಿದ್ದೀರಿ ಎಂದು ಸಚಿವರು ಕೇಳಿದರು. ಇದಕ್ಕೆ ಉತ್ತರಿಸಿದ ಆರ್‌ಟಿಒ ವಿಶಾಲ್‌, ಈವರೆಗೆ 24 ಪ್ರಕರಣ ದಾಖಲಾಗಿದೆ ಎಂದರು. ಇದಕ್ಕೆ ಸಮಾಧಾನಗೊಳ್ಳದ ಸಚಿವರು, ನಿಮಗೆ ನಾಚಿಕೆ ಆಗುವುದಿಲ್ಲವೇ. ಇಷ್ಟು ದೊಡ್ಡ ಜಿಲ್ಲೆಯಲ್ಲಿ ಇಷ್ಟು ಕಡಿಮೆ ಪ್ರಕರಣ ದಾಖಲಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಅಕ್ರಮ ಮರಳಿಗೆ ಅನುಮತಿ ನೀಡುತ್ತಿರುವ ಗಣಿ ಇಲಾಖೆ ಹಿರಿಯ ವಿಜ್ಞಾನಿ ವಿಶ್ವನಾಥ ಅವರನ್ನು ಅಮಾನತು ಮಾಡಬೇಕು. ಎಷ್ಟೇ ಪ್ರಭಾವಿ ಇದ್ದರೂ ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡಿ. ನಾನು ಸೇರಿದಂತೆ ಯಾವ ರಾಜಕಾರಣಿ ಫೋನ್‌ಗೂ ಮಣಿಯುವ ಅಗತ್ಯವಿಲ್ಲ. ಇದರ ಸಂಪೂರ್ಣ ಹೊಣೆ ಡಿಸಿ, ಎಸ್‌ಪಿಯೇ ಹೊರಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.

ಡಿಸಿ ಆರ್‌. ವೆಂಕಟೇಶಕುಮಾರ್‌ ಪ್ರತಿಕ್ರಿಯಿಸಿ, ಮರಳು ಅಕ್ರಮ ತಡೆಗೆ ಸಂಬಂಧಿ ಸಿ ಆರ್‌ಟಿಒಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಎಲ್ಲ 14 ಚೆಕ್‌ಪೋಸ್ಟ್‌ಗಳಿಗೆ ಸಿ.ಸಿ ಟಿವಿ ಹಾಕಲು ನಿರ್ದೇಶಿಸಲಾಗಿದೆ. ಜಿಲ್ಲಾಡಳಿತದ ಆದೇಶ ಟಿಪ್ಪರ್‌ಗಳ ಮಾಲೀಕರು ಉಲ್ಲಂಘಿಸುತ್ತಿದ್ದರೂ ಆರ್‌ಟಿಒ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಿರವಾರ ಮತ್ತು ಮಾನ್ವಿ ತಾಲೂಕುಗಳ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಬೆಳೆಗಳು ಒಣಗುತ್ತಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಉಪ ಮುಖ್ಯಮಂತ್ರಿ ಏನಾದರೂ  ಮಾಡಿ ನೀರು ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸಚಿವ ಪ್ರತಿಕ್ರಿಯಿಸಿ ಟಿಎಲ್‌ಬಿಸಿ 69 ಮೈಲಿಗೆ ನೀರು ತಲುಪಿಸಬೇಕಿದೆ. ಹೊಸಪೇಟೆಯಲ್ಲಿ ರವಿವಾರ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್‌ ಜತೆ ಸಭೆ ಮಾಡಿದ್ದೇವೆ. ಅಧಿ ಕಾರಿಗಳು ಕಾಲುವೆ ಪರಿಶೀಲಿಸದ ಕಾರಣ ಸಮಸ್ಯೆ ಉದ್ಭವ ಆಗುತ್ತಿದೆ. ಅನಗತ್ಯ ನೀರು ಪಡೆಯುವುದಕ್ಕೆ ಕಡಿವಾಣ ಹಾಕಬೇಕು. ಭದ್ರಾದಿಂದ 4 ಟಿಎಂಸಿ ನೀರು ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಬೆಳೆ ಒಣಗಲು ಬಿಡಬಾರದು ಎಂದರು.

ಅನುಪಾಲನಾ ವರದಿ ಪ್ರಸ್ತಾಪಿಸಿದ ಎಸಿ ಸಂತೋಷ ಕಾಮಗೌಡ, ವಿವಿಧ ಪುನರ್ವಸತಿ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು.
ಗ್ರಾಮೀಣ ಶಾಸಕ ದದ್ದಲ್‌ ಮಾತನಾಡಿ, ಗುರ್ಜಾಪುರ ಗ್ರಾಮದ ಸ್ಥಳಾಂತರ ಕೆಲಸ ಇನ್ನೂ ಶುರುವಾಗಿಲ್ಲ. ಪ್ರತಿ ವರ್ಷ ಇದೇ ನೆಪ ಹೇಳುತ್ತ ಸಾಗಬೇಕೆ ಎಂದರು. ಸ್ಥಳಾಂತರಿಸುವ ಗ್ರಾಮಗಳಿಗೆ ಸಂಬಂಧಿಸಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿಸಿ ಎಂದು ತಾಕೀತು ಮಾಡಿದರು.

ಸಿಇಒ ಶೇಖ್‌ ಆಸೀಫ್‌ ಮಾತನಾಡಿ, ರಸ್ತೆ ಜಂಗಲ್‌ ಕಟಿಂಗ್‌ ಕೆಲಸ ಮಾಡಲು, ಸ್ಥಳಾಂತರವಾಗುವ ಗ್ರಾಮಗಳಲ್ಲಿ ಕೆಲಸ ಆರಂಭಿಸಲು ತಿಳಿಸಲಾಗುವುದು ಎಂದರು. ಶಾಸಕ ಕೆ. ಶಿವನಗೌಡ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ವೇಗ ಕಡಿಮೆಯಾಗಿದೆ ಎಂದರು. ಈ ವೇಳೆ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next