Advertisement

ಕಲ್ಲಹಳ್ಳಿ ಸುತ್ತಮುತ್ತ ಪರಿಸರ ಮಾಲಿನ್ಯ ತಡೆಗೆ ಕ್ರಮ

02:18 PM May 30, 2018 | Team Udayavani |

ನಂಜನಗೂಡು: ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲೆಂಟ್‌ ಕಾರ್ಖಾನೆಯಿಂದ ಹೊರ ಬಿಡುತ್ತಿರುವ ತ್ಯಾಜ್ಯದಿಂದ ಕಲ್ಲಹಳ್ಳಿ ಸುತ್ತಮುತ್ತಲಿನ ಪರಿಸರ ಮಾಲಿನ್ಯ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಶಾಸಕ ಹರ್ಷವರ್ಧನ್‌ ಹೇಳಿದರು.

Advertisement

ನಗರದ ಹೊರವಲಯದ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಕಲ್ಲಹಳ್ಳಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯರು ಕಾರ್ಖಾನೆಯಿಂದಾಗುತ್ತಿರುವ ಅನಾಹುತಗಳ ಕುರಿತು ಮಾಹಿತಿ ನೀಡಿದ್ದಾರೆ.

ಸುತ್ತಲಿನ ಪ್ರದೇಶದಲ್ಲಿ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು, ಕಲ್ಲಹಳ್ಳಿ ಗ್ರಾಮದ ಜನರು ರೋಗ ಗ್ರಸ್ಥರಾಗಿದ್ದಾರೆ. ಜೊತೆಗೆ ವಯೋವೃದ್ಧರು ದೇಹದ ತೂಕವನ್ನೇ ಕಳೆದುಕೊಂಡಿದ್ದು ಮಕ್ಕಳ ಮೇಲೂ ಅನಾರೋಗ್ಯದ ಭೀತಿ ಎದುರಾಗಿದೆ. ಹೀಗಾಗಿ ಕಾರ್ಖಾನೆಯಿಂದ ಹೊರ ಬೀಳುತ್ತಿರುವ ತ್ಯಾಜ್ಯ ಕುರಿತು ಗ್ರಾಮಸ್ಥರು ತಕರಾರು ತೆಗೆದಿದ್ದಾರೆ.

ಹೀಗಾಗಿ ಜುಬಿಲೆಂಟ್‌ ಔಷಧಿ ತಯಾರಿಕಾ ಕಾರ್ಖಾನೆಯಿಂದ ಹೊರ ಬೀಳುತ್ತಿರುವ ತ್ಯಾಜ್ಯ ಪದಾರ್ಥಗಳಿಂದ ಸುತ್ತಲಿನ ಪರಿಸರ ಕಲುಷಿತಗೊಳ್ಳುತ್ತಿದೆ. ಅಲ್ಲದೆ ಕಪಿಲಾ ನದಿಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ. ಇದರಿಂದ ಕಲ್ಲಹಳ್ಳಿ ಪ್ರದೇಶದಲ್ಲಿ ಪರಿಸರ ಮಾಲಿನ್ಯದಿಂದಾಗುತ್ತಿರುವ ಅನಾಹುತಗಳ ಕುರಿತು ತಜ್ಞರಿಂದ ಅಗತ್ಯ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾಮಗಾರಿಗಳ ಪರಿಶೀಲನೆ: ಶಾಸಕ ಹರ್ಷವರ್ಧನ್‌ ನಗರದ ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿ ಶಾಸಕರ ಕಚೇರಿಗೆ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಅನವಶ್ಯಕವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಡಕನ್ನುಂಟು ಮಾಡದಂತೆ ಸೂಚಿಸಿದರು.

Advertisement

ನಗರದ ಬಜಾರ್‌ರಸ್ತೆಯಲ್ಲಿ ನಗರಸಭೆಯಿಂದ ನಿರ್ಮಿಸಲಾಗುತ್ತಿರುವ ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕರು, ನಿಗಧಿತ ಕಾಲಾವಧಿ ಪೂರ್ಣಗೊಂಡರೂ ಆಮೆ ವೇಗದಲ್ಲಿ ಸಾಗುತ್ತಿದ್ದು ತ್ವರಿತಗತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಈ ವೇಳೆ ತಾಪಂ ಅಧ್ಯಕ್ಷ ಬಿ.ಎಸ್‌.ಮಹದೇವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಮ್ಮರಗಾಲ ಶಿವಣ್ಣ, ಸದಸ್ಯ ಮಹದೇವಯ್ಯ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕುಂಬರಳ್ಳಿ ಸುಬ್ಬಣ್ಣ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next