Advertisement

ಬೇಸಿಗೆಯಲ್ಲಿ ಹಸಿರು ಸೈನಿಕರಂತೆ ಕಾರ್ಯ ಮಾಡಿ

09:44 PM Jan 18, 2020 | Team Udayavani |

ಹುಣಸೂರು: ಅರಣ್ಯ ಸಿಬ್ಬಂದಿ ಬೇಸಿಗೆಯಲ್ಲಿ ಹಸಿರು ಸೈನಿಕರಂತೆ ಕೆಲಸ ಮಾಡಬೇಕು, ಈ ನಾಲ್ಕು ತಿಂಗಳು ಕಾಳಜಿ ವಹಿಸಿ ಅರಣ್ಯ ಕಾಯಬೇಕು. ಅರಣ್ಯಕ್ಕೆ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆವಹಿಸುವುದೇ ಪ್ರಮುಖ ಧ್ಯೇಯವಾಗಬೇಕೆಂದು ಸಿಬ್ಬಂದಿ, ಅಧಿಕಾರಿಗಳಿಗೆ ನಾಗರಹೊಳೆ ಹುಲಿಯೋಜನೆ ಕ್ಷೇತ್ರ ನಿರ್ದೇಶಕ ನಾರಾಯಣ ಸ್ವಾಮಿ ಸೂಚಿಸಿದರು.

Advertisement

ನಾಗರಹೊಳೆ ಉದ್ಯಾನದ ಹೆಬ್ಟಾಗಿಲು ವೀರನಹೊಸಹಳ್ಳಿ ಕಚೇರಿ ಬಳಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಅರಣ್ಯಕ್ಕೆ ಅಕಸ್ಮಿಕವಾಗಿ ಬೆಂಕಿ ಬಿದ್ದ ತಕ್ಷಣವೇ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು, ಜೊತೆಗೆ ನೀರಿನ ಸಂಪನ್ಮೂಲ, ಸಮುದಾಯದ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಂಡಿರಬೇಕು, ಮುಖ್ಯವಾಗಿ ಬೆಂಕಿ ರೇಖೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮುಂಜಾಗ್ರತೆವಹಿಸಬೇಕು ಎಂದರು.

ಎಲ್ಲ ಪ್ರದೇಶಗಳಲ್ಲೂ ಬೆಂಕಿ ಲೈನ್‌ಗೆ ಬೆಂಕಿ ಹಾಕಬಾರದು, ಮುಖ್ಯವಾಗಿ ಈ ವೇಳೆ ಅರಣ್ಯದಲ್ಲಿ ಜೇನು ಬಸಿಯುವವರನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಬಫರ್‌ ಝೋನ್‌ಗಳಲ್ಲಿ ಅತೀ ಹೆಚ್ಚು ಮುತುವರ್ಜಿವಹಿಸಬೇಕು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಕಿ ನಂದಿಸುವ ಸಣ್ಣಪುಟ್ಟ ಉಪಕರಣಗಳನ್ನು ಬಳಸಿಕೊಂಡು ಕಾಡ್ಗಿಚ್ಚು ನಿಯಂತ್ರಿಸ ಬಹುದು, ಬೆಂಕಿ ನಿಯಂತ್ರಣದ ವೇಳೆ ಸಿಬ್ಬಂದಿ ತಮ್ಮ ಪ್ರಾಣದ ಬಗ್ಗೆಯೂ ಆದಷ್ಟು ಜಾಗ್ರತೆವಹಿಸಬೇಕು ಎಂದು ಎಚ್ಚರಿಸಿದರು.

ಅರಣ್ಯವನ್ನು ನಮ್ಮ ಆಸ್ತಿ ಎಂದುಕೊಳ್ಳಿ: ನಾಗರಹೊಳೆ ಉದ್ಯಾನವನದ ಕ್ಷೇತ್ರ ಉಪ ನಿರ್ದೇಶಕ ಪೂವಯ್ಯ ಮಾತನಾಡಿ, ಅರಣ್ಯವೆಂಬ ದೇವಸ್ಥಾನದಲ್ಲಿ ನಾವೆಲ್ಲರೂ ಪೂಜಾರಿಗಳಿದ್ದ ಹಾಗೆ, ಅರಣ್ಯಕ್ಕೆ ಬೆಂಕಿ ಬಿದ್ದಲ್ಲಿ ಅದು ನಮ್ಮ ಮನೆಯ ಆಸ್ತಿ ಎಂಬಂತೆ ಭಾವಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಮುಖ್ಯವಾಗಿ ರೇಂಜರ್‌ಗಳು ಹೆಚ್ಚು ಜವಾಬ್ದಾರಿ ಹೊತ್ತು, ಪ್ರತಿ ಬೀಟ್‌ನಲ್ಲೂ ಚುರುಕು ಸಿಬ್ಬಂದಿಯ ನಾಯಕತ್ವದಲ್ಲಿ ಮನಪೂರಕ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಗಿರಿಜನರೇ ಸಂಪನ್ಮೂಲ ವ್ಯಕ್ತಿಗಳು: ಎಸಿಎಫ್‌ ಪ್ರಸನ್ನಕುಮಾರ್‌ ಮಾತನಾಡಿ, ವಿಶ್ವವಿಖ್ಯಾತ ನಾಗರಹೊಳೆ ದೇಶದ ಆಸ್ತಿ, ಹೆಚ್ಚು ಹುಲಿ, ಆನೆಗಳಿರುವ ಸಂರಕ್ಷಿತ ಉದ್ಯಾನವಾಗಿದ್ದು ವೈಜ್ಞಾನಿಕವಾಗಿ ನಿರ್ವಹಣೆಯಿಂದಾಗಿ ಇಂದು ನಳನಳಿಸುತ್ತಿದೆ, ಇದರ ಸಂರಕ್ಷಣೆಗಾಗಿ ಅರಣ್ಯದೊಳಗೆ ಮತ್ತು ಅಂಚಿನಲ್ಲಿರುವ ಆದಿವಾಸಿಗಳೇ ನಿಜವಾದ ಸಂಪನ್ಮೂಲ ವ್ಯಕ್ತಿಗಳು, ಅವರನ್ನು ಸದ್ಬಳಕೆಮಾಡಿಕೊಂಡು ಹಾಗೂ ಅಕ್ಕ-ಪಕ್ಕದ ಗ್ರಾಮಸ್ಥರ ಸಹಕಾರ ಪಡೆದು ಕಾಡ್ಗಿಚ್ಚು ನಿಯಂತ್ರಿಸುವ ಬುದ್ಧಿವಂತಿಕೆಯನ್ನು ಸಿಬ್ಬಂದಿ ತೋರಬೇಕೆಂದು ಸೂಚಿಸಿದರು.

Advertisement

ಮುನ್ನೆಚ್ಚರಿಕೆ ಅತ್ಯಗತ್ಯ: ಅಗ್ನಿಶಾಮಕ ದಳದ ಅಧಿಕಾರಿಗಳಾದ ಲತೇಶ್‌ಕುಮಾರ್‌ ಹಾಗೂ ದಿನೇಶ್‌ ಆನಂದ್‌ ಮಾತನಾಡಿ, ಬೆಂಕಿಯಲ್ಲಿ ಅನೇಕ ತರದ ಬೆಂಕಿ ಅವಘಡಗಳಿದ್ದು, ಅರಣ್ಯಕ್ಕೆ ಬೆಂಕಿ ಬೀಳದಂತೆ ನೋಡಿಕೊಳ್ಳುವುದೇ ದೊಡ್ಡ ಉಪಾಯ, ಇನ್ನು ಬೆಂಕಿ ಬಿದ್ದ ವೇಳೆ ದಟ್ಟಹೊಗೆ ಆವರಿಸಲಿದ್ದು, ಆ ವೇಳೆ ಮಲಗಿಕೊಳ್ಳುವ ಮೂಲಕ ಹೊಗೆಯಿಂದ ತಪ್ಪಿಸಿಕೊಳ್ಳಬಹುದು, ಮೊದಲೇ ರಸ್ತೆ, ನೀರನ್ನು ಸಾಗಿಸುವ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಥರ್ಮಲ್‌ ಡ್ರೋಣ್‌ ಬಳಕೆ: ಇದೇ ಮೊದಲ ಬಾರಿಗೆ ಪರಿಚಯಿಸುತ್ತಿರುವ ಥರ್ಮಲ್‌ ಡ್ರೋಣ್‌ ಹಾರಾಟ, ಸೆರೆ ಹಿಡಿಯುವ, ವಾತಾವರಣದ ಉಷ್ಣಾಂಶ ತಿಳಿಸುವ ಹಾಗೂ ಅರಣ್ಯದ ಸಂಪೂರ್ಣ ಚಿತ್ರಣವನ್ನು ನೀಡುವ ಕಾರ್ಯವೈಖರಿ ಬಗ್ಗೆ ಹಾಗೂ ಬೆಂಕಿ ಬಿದ್ದ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾದ, ನಂದಿಸುವ ಕುರಿತು ಅಗ್ನಿಶಾಮಕದಳವು ಪ್ರಾತ್ಯಕ್ಷಿತೆ ಮೂಲಕ ಮಾಹಿತಿ, ಅಲ್ಲದೆ ವಿವಿಧ ಪರಿಕರಗಳನ್ನು ಬಳಸಿಕೊಂಡು ಬೆಂಕಿ ನಂದಿಸುವ ಬಗೆಯೂ ಸಮಗ್ರ ತರಬೇತಿ ನೀಡಲಾಯಿತು.

ಬೆಂಕಿ ನಿಯಂತ್ರಣದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಎಸಿಎಫ್‌ಗಳಾದ ಪೌಲ್‌ಆಂಟೋಣಿ, ಕೇಶವ್‌ಗೌಡ, ಆರ್‌ಎಫ್‌ಒಗಳಾದ ಸುಬ್ರಮಣ್ಯ, ವಿನಯ್‌, ಡಿಆರ್‌ಎಫ್‌ಒ ಕುಮಾರಸ್ವಾಮಿ ಅರಣ್ಯ ರಕ್ಷಕರಾದ ಸುನಿಲ್‌ಕಟಕಿ, ಸತೀಶ್‌, ರಾಮು, ಮೋಹನ್‌ ಮತ್ತಿತರರು ತಮ್ಮ ಅನುಭವವನ್ನು ಹಂಚಿಕೊಂಡರು. ಎಲ್ಲ 8 ವಲಯಗಳ ವಲಯ ಅರಣ್ಯಾಧಿಕಾರಿಗಳು, ಡಿಆರ್‌ಎಫ್‌ಒಗಳು ಸೇರಿದಂತೆ ಇನ್ನೂರಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಭಾಗವಹಿಸಿದ್ದರು.

4 ಕಿ.ಮೀ.ವರೆಗೆ ಡ್ರೋಣ್‌ ಕಾರ್ಯಾಚರಣೆ: ಈ ಥರ್ಮಲ್‌ ಡ್ರೋಣ್‌ ಸ್ಥಳದಿಂದ 4 ಕಿ.ಮೀ.ವರೆಗೆ ಅರಣ್ಯ ಪ್ರದೇಶದಲ್ಲಿನ ಆಗು ಹೋಗುಗಳನ್ನು ಬಗ್ಗೆ ಟ್ಯಾಬ್‌ ಪರದೆಯ ಮೂಲಕ ವೀಕ್ಷಿಸಬಹುದಾಗಿದ್ದು, ಇದರಿಂದ ಒಂದೆಡೆ ಕುಳಿತು ಮಾಹಿತಿ ಪಡೆಯಬಹುದಾಗಿದೆ ಎಂಬುದನ್ನು ಪ್ರಾತ್ಯಕ್ಷತೆ ಮೂಲಕ ಸಿಬ್ಬಂದಿಗೆ ತಿಳಿಸಿಕೊಡಲಾಯಿತು. ಪ್ರತಿವಲಯಕ್ಕೂ ಡ್ರೋಣ್‌ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ ಎಂದು ಸಿಎಫ್‌ ನಾರಾಯಣಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next