Advertisement

ಹೆದ್ದಾರಿಯಲ್ಲಿ ಅಪಘಾತ: ಎಂಜಿನಿಯರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ

09:20 PM Jun 25, 2019 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳಾದರೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಶಿಫಾರಸು ಮಾಡುವ ಬಗ್ಗೆ ಉಡುಪಿ ಜಿ.ಪಂ. ನಿರ್ಣಯ ಅಂಗೀಕರಿಸಿದೆ.

Advertisement

ಜೂ.25ರಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯಸಭೆಯಲ್ಲಿ ಹೆದ್ದಾರಿ ಅಪಘಾತಗಳ ಕುರಿತು ತೀವ್ರ ಕಳವಳ ವ್ಯಕ್ತವಾದ ಅನಂತರ ಸಭೆ ಈ ನಿರ್ಣಯ ಕೈಗೊಂಡಿತು.

ಪ್ರತಾಪ್‌ ಹೆಗ್ಡೆ ಮಾರಾಳಿ ಅವರು ವಿಷಯ ಪ್ರಸ್ತಾಪಿಸಿ “ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಅವೈಜ್ಞಾನಿಕ ಕಾಮಗಾರಿ ಕಾರಣ. ಎಂಜಿನಿಯರ್‌ಗಳು ಮಾಡಿ ಕೊಟ್ಟ ವಿನ್ಯಾಸದಂತೆ ಗುತ್ತಿಗೆದಾರರು ಕೆಲಸ
ಮಾಡಿದ್ದಾರೆ. ಹಾಗಾಗಿ ಎಂಜಿನಿಯರ್‌ಗಳನ್ನೇ ಹೊಣೆ ಮಾಡಬೇಕು’ ಎಂದರು.

ಪಡುಬಿದ್ರಿಯ ಎರ್ಮಾಳು ಕಲ್ಸಂಕ ದಲ್ಲಿ ಸೇತುವೆ ಕಾಮಗಾರಿ, ಪಡುಬಿದ್ರಿ ಭಾಗದಲ್ಲಿ ಸರ್ವೀಸ್‌ ರಸ್ತೆ ಕಾಮಗಾರಿ ಬಾಕಿಯಾಗಿ ರುವ ಬಗ್ಗೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ ಮತ್ತು ಸದಸ್ಯೆ ಗೀತಾಂಜಲಿ ಸುವರ್ಣ ಅವರು ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಕೂಡ ಹೆದ್ದಾರಿ ವಿಭಾಗದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ವಿದ್ಯುತ್‌ ಬಿಲ್‌ ಡಬಲ್‌
“ಕಾರ್ಕಳ ಭಾಗದಲ್ಲಿ ಈ ಬಾರಿ ವಿದ್ಯುತ್‌ ಬಿಲ್‌ ದುಪ್ಪಟ್ಟು ಬಂದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ’ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಎಸ್‌. ಕೋಟ್ಯಾನ್‌ ಹೇಳಿದರು.

Advertisement

“ಹೊಸ ಮೀಟರ್‌ ಅಳವಡಿಕೆ ಬಳಿಕ ದೂರುಗಳಿವೆ. ಪರಿಶೀಲನೆ ನಡೆಸಿ ಮೀಟರ್‌ ಬದಲಾಯಿಸುತ್ತೇವೆ’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಆಧಾರ್‌ ತಿದ್ದುಪಡಿ ತ್ವರಿತಕ್ಕೆ ಪ್ರಯತ್ನ
ಗ್ರಾ.ಪಂ.ಗಳಲ್ಲಿ ಆಧಾರ್‌ ತಿದ್ದುಪಡಿಯ ಅವಕಾಶವನ್ನು ಸ್ಥಗಿತ
ಗೊಳಿಸಿರುವುದರಿಂದಲೂ ತೊಂದರೆ ಯಾಗಿದೆ ಎಂದು ಸದಸ್ಯರು ದೂರಿ ದರು. ಕೋಟ ಶ್ರೀನಿವಾಸ ಪೂಜಾರಿ ಅವರು “ಆಧಾರ್‌ ತಿದ್ದುಪಡಿ ಪ್ರಕ್ರಿಯೆ
ಯನ್ನು ಗ್ರಾ.ಪಂ.ಗಳಲ್ಲಿ ಪುನರಾರಂಭಿ ಸಲು ಸಚಿವರು ಹಾಗೂ ರಾಜ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಿ ದ್ದೇನೆ. ಅಟಲ್‌ಜೀ ಕೇಂದ್ರಗಳಲ್ಲಿ ಹೆಚ್ಚುವರಿ ಆಧಾರ್‌ ಕಿಟ್ಸ್‌ ಒದಗಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕಾಗಿದೆ’ ಎಂದು ಹೇಳಿದರು.

ಅವರ ಸಲಹೆಯಂತೆ ಅಟಲ್‌ಜೀ ಕೇಂದ್ರಗಳಲ್ಲಿ ಹೆಚ್ಚುವರಿ ಆಧಾರ್‌ ಕಿಟ್‌ ಅಳವಡಿಸಲು ಸರಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಣಯಿಸಿತು.

ಪಿಂಚಣಿ ಹಣ ಬರುತ್ತಿಲ್ಲ
ಅಂಗಲವಿಕಲ ವೇತನ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಪಿಂಚಣಿ ಯೋಜನೆಗಳ ಹಣ ಫ‌ಲಾನುಭವಿಗಳಿಗೆ ನಿಗದಿತವಾಗಿ ಬರುತ್ತಿಲ್ಲ ಎಂದು ಜನಾರ್ದನ ತೋನ್ಸೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಂದಾಪುರ ಉಪವಿಭಾಗಾಧಿಕಾರಿಯವರು “ನಿರ್ದಿಷ್ಟ ಪ್ರಕರಣಗಳ ಬಗ್ಗೆ ಪಿಂಚಣಿ ಅದಾಲತ್‌ನಲ್ಲಿ ದೂರು ನೀಡಿದರೆ ವಾರದೊಳಗೆ ಪರಿಹರಿಸಿಕೊಡಲಾಗುವುದು’ ಎಂದು ಹೇಳಿದರು.

ನೆರೆ ನಿರ್ವಹಣೆಗೆ ಕೆಮ್ಮಣ್ಣು, ಕಲ್ಯಾಣಪುರ ಮತ್ತು ಮೂಡುತೋನ್ಸೆ ಗ್ರಾ.ಪಂ.ಗಳಲ್ಲಿ ಕೆಲಸಗಳು ನಡೆದಿಲ್ಲ ಎಂದು ಜನಾರ್ದನ ತೋನ್ಸೆ ದೂರಿದರು. ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ರಘುಪತಿ ಭಟ್‌, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಿಇಒ ಸಿಂಧೂ ರೂಪೇಶ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಉಪ ಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ ಉಪಸ್ಥಿತರಿದ್ದರು.

ಟೋಲ್‌ ವಿನಾಯಿತಿ ಬೇಡಿಕೆ
“ಸಾಸ್ತಾನ ಟೋಲ್‌ಗೇಟ್‌ನಲ್ಲಿ ಸ್ಥಳೀಯ 5 ಕಿ.ಮೀ. ವ್ಯಾಪ್ತಿ ಪ್ರದೇಶದವರೆಗಿನ ವಾಹನಗಳಿಗೆ ಟೋಲ್‌ ವಿನಾಯಿತಿ ನೀಡಿರುವಂತೆ ಹೆಜಮಾಡಿ ಟೋಲ್‌ಗೇಟ್‌ನಲ್ಲಿಯೂ ನೀಡಬೇಕು’ ಎಂದು ಶಶಿಕಾಂತ ಪಡುಬಿದ್ರಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು “ಸಾಸ್ತಾನದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಪಡುಬಿದ್ರಿಯಲ್ಲಿಯೂ ಕಾಮಗಾರಿ ಪೂರ್ಣಗೊಂಡ ಅನಂತರ ಮೇಲಧಿಕಾರಿ ಗಳು ಕೇಂದ್ರ ಸಚಿವಾಲಯದ ಒಪ್ಪಿಗೆ ಪಡೆದು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಪ್ರಸ್ತುತ ಹೆಜಮಾಡಿ ಟೋಲ್‌ಗೇಟ್‌ನಿಂದ 20 ಕಿ.ಮೀ. ವ್ಯಾಪ್ತಿಯವರಿಗೆ ತಿಂಗಳ ರಿಯಾಯಿತಿಯ ಪಾಸ್‌ ನೀಡಲಾಗುತ್ತಿದೆ’ ಎಂದರು.

15 ದಿನಗಳಲ್ಲಿ ಪಡಿತರ ಚೀಟಿ
“ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಹಲವು ಮಂದಿಗೆ ಇಂದಿಗೂ ಪಡಿತರ ಚೀಟಿ ದೊರೆತಿಲ್ಲ’ ಎಂದು ಜನಾರ್ದನ ತೋನ್ಸೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು “ಜಿಲ್ಲೆಯಲ್ಲಿ 3,089 ರೇಷನ್‌ ಕಾರ್ಡ್‌ ಗಳು ವಿತರಣೆಗೆ ಬಾಕಿ ಇದೆ. ಚುನಾವಣಾ ನೀತಿಸಂಹಿತೆಯಿಂದಾಗಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಬಾಕಿ ಇರುವ ಕಾರ್ಡ್‌ಗಳನ್ನು 15 ದಿನಗಳಲ್ಲಿ ನೀಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next