Advertisement

ಅನ್ನದಾತನ ಗೈರು!!

09:59 AM Mar 10, 2020 | Team Udayavani |

ಕೃಷಿ ವಿದ್ಯಾಲಯಗಳಲ್ಲಿ ಪದವಿ ಪಡೆದವರೇ ಕೃಷಿಯಲ್ಲಿ ತೊಡಗಿಕೊಳ್ಳದಿರುವ ಪರಿಸ್ಥಿತಿ ನಮ್ಮ ನಡುವೆ ಇದೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ಕೃಷಿ ಪ್ರಮುಖ ಆದಾಯಮೂಲವಾಗಿ ಉಳಿದಿಲ್ಲ. ಇದರಿಂದಾಗಿ, ಆಹಾರ ಬೇಡಿಕೆ ಪೂರೈಸುವವರಾರು ಎಂಬ ಪ್ರಶ್ನೆ ಏಳುತ್ತದೆ.

Advertisement

ಕೃಷಿಕರು ಕೃಷಿಯಿಂದ ವಿಮುಖರಾದರೆ, ಆಹಾರಬೆಳೆ ಬೆಳೆಯುವವರು ಯಾರು? ಈಗಾಗಲೇ 137 ಕೋಟಿ ಜನಸಂಖ್ಯೆ ಇರುವ ಭಾರತಕ್ಕಂತೂ ಇದು ಆತಂಕದ ಪ್ರಶ್ನೆ. ಯಾಕೆಂದರೆ, ವರ್ಷದಿಂದ ವರ್ಷಕ್ಕೆ ಆಹಾರದ ಬೇಡಿಕೆ ಹೆಚ್ಚುತ್ತಿದೆ. ಆದರೆ, ಕೃಷಿಯನ್ನು ತೊರೆಯುತ್ತಿರುವವರ ಅಥವಾ ಕೃಷಿಯನ್ನು ಉದ್ಯೋಗವಾಗಿ ತಿರಸ್ಕರಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. 2016ರಲ್ಲಿ ಭಾರತೀಯ ರೈತನ ಸರಾಸರಿ ವಯಸ್ಸು 50.1 ವರ್ಷಗಳು. ಇದು ಕೇಂದ್ರ ಸರಕಾರದ ಕೃಷಿ ಮತ್ತು ಕೃಷಿಕರ ಕಲ್ಯಾಣ ಮಂತ್ರಾಲಯದ 2011-12ರ ಸಮೀಕ್ಷೆಯಲ್ಲಿರುವ ಮಾಹಿತಿ. ಕೃಷಿ ಹಿಡುವಳಿದಾರರಲ್ಲಿ ಮೊದಲ ಸ್ಥಾನ 41- 50 ವಯೋಮಾನದವರದು (ಶೇ. 33.7) ಮತ್ತು ಎರಡನೆಯ ಸ್ಥಾನ 51- 60 ವಯೋಮಾನದವರದು (ಶೇ.33.2)

ಗಮನಿಸಿ: ಈ ತಲೆಮಾರಿನವರು ಕೆಲವೇ ವರ್ಷಗಳಲ್ಲಿ ವೃದ್ಧಾಪ್ಯದಿಂದಾಗಿ ಕೃಷಿ ಮಾಡಲಾಗದವರ ವರ್ಗಕ್ಕೆ ಸೇರುತ್ತಾರೆ. ಅವರ ನಂತರದ ತಲೆಮಾರಿನವರಿಗೆ ಕೃಷಿಯೇ ಬೇಡವಾಗಿದೆ. ಈಗಿನ ಪರಿಸ್ಥಿತಿಯ ಗಂಭೀರತೆ ತಿಳಿಸುವ ಅಂಕೆಸಂಖ್ಯೆಗಳು ಇಲ್ಲಿವೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಪದವಿ ಮತ್ತು ಕೃಷಿ – ಸ್ನಾತಕೋತ್ತರ ಪದವಿ ಗಳಿಸುವವರಲ್ಲಿ ಬೆರಳೆಣಿಕೆಯ ಜನರಷ್ಟೇ ಕೃಷಿಯಲ್ಲಿ ತೊಡಗುತ್ತಾರೆ; ಉಳಿದವರು ಬೇರೆ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಸೇರುತ್ತಾರೆ.

ಮುಖ್ಯ ಆದಾಯವಾಗಿ ಉಳಿದಿಲ್ಲ
ಲಾಭರಹಿತ ಸಂಸ್ಥೆ ಪ್ರಥಮ್‌ 2017ರಲ್ಲಿ, 30,000 ಗ್ರಾಮೀಣ ಯುವಜನರ ಸಮೀಕ್ಷೆ ನಡೆಸಿತ್ತು. ಅವರಲ್ಲಿ ಕೇವಲ ಶೇ.1.2 ಯುವಜನರು ಕೃಷಿಕರಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಜಗತ್ತಿನಲ್ಲೇ ಆಹಾರದ ಬೇಡಿಕೆ ಹೆಚ್ಚಿರುವ ನಮ್ಮ ದೇಶದಲ್ಲಿ ಆಹಾರಬೆಳೆ ಬೆಳೆಸುವ ರೈತರ ಸಂಖ್ಯೆ ಸದ್ಯದಲ್ಲೇ ತೀರಾ ಕಡಿಮೆಯಾಗಲಿದೆ. 2011ರ ಮಹಾಜನಗಣತಿಯ ಅನುಸಾರ, ಪ್ರತಿ ದಿನ 2,000 ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಯಾಕೆಂದರೆ ಕೃಷಿ ಆದಾಯವು ಗ್ರಾಮೀಣ ಕೃಷಿಕುಟುಂಬಗಳ ಮುಖ್ಯ ಆದಾಯವಾಗಿ ಉಳಿದಿಲ್ಲ. 1970ರಲ್ಲಿ ಗ್ರಾಮೀಣ ಕುಟುಂಬದ ಶೇ.75 ಆದಾಯ ಕೃಷಿಮೂಲದಿಂದ ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣ ಶೇ.33ಕ್ಕಿಂತ ಕಡಿಮೆಯಾಗಿದೆ!

ಬದಲಾವಣೆಗಳ ಪರಿಣಾಮಗಳೇನು?
ಭಾರತದ ಕೃಷಿಕರು ಕೃಷಿಯಲ್ಲೇ ಮುಂದುವರಿಯುವರೇ ಅಥವಾ ಕೃಷಿಯೇತರ ವೃತ್ತಿಗಳಲ್ಲಿ ತೊಡಗುವರೇ? ಕೃಷಿಯಲ್ಲಿ ತೊಡಗಿದವರ ಬದುಕಿಗೆ ಆಸರೆಯಾಗುವಷ್ಟು ಆದಾಯ ಒದಗಿಸುವ ಮೂಲಕ ಕೃಷಿ ಉಳಿದೀತೇ? ಈ ಪ್ರಶ್ನೆಗಳಿಗೆ ಉತ್ತರ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರ್ಥಿಕತೆಯ ಬದಲಾವಣೆಗಳನ್ನು ಅವಲಂಬಿಸಿರುತ್ತದೆ. 2001ರಿಂದ 2011ರ ಮಹಾಜನಗಣತಿಗಳ ಅವಧಿಯಲ್ಲಿ ಮಹಾಜನಗಣತಿ ಪಟ್ಟಣಗಳ ಸಂಖ್ಯೆ 1,362ರಿಂದ 3,894ಕ್ಕೆ ಏರಿತ್ತು! ಗ್ರಾಮೀಣ ಪ್ರದೇಶಗಳ ಜನರು ಕೃಷಿ ತೊರೆಯುತ್ತಿದ್ದಾರೆ ಮತ್ತು ಕೃಷಿಯೇತರ ವೃತ್ತಿಗಳಲ್ಲಿ ತೊಡಗುತ್ತಿದ್ದಾರೆ ಎಂಬುದಕ್ಕೆ ಇದುವೇ ಪುರಾವೆ.

Advertisement

ಗ್ರಾಮೀಣ ಜನರ ಅಭಿವೃದ್ಧಿಗಾಗಿ ಸರಕಾರಗಳು ರೂಪಿಸುವ ಎಲ್ಲ ಯೋಜನೆಗಳೂ ಈ ಮೇಲೆ ವಿವರಿಸಿದ ಬದಲಾವಣೆಗಳನ್ನು ಪರಿಗಣಿಸಲೇ ಬೇಕಾಗುತ್ತದೆ. ಒಂದೆಡೆ, ಕೃಷಿ ತೊರೆಯುವ ರೈತರನ್ನು ಹಾಗೂ ಕೃಷಿಕಾರ್ಮಿಕರನ್ನು ಯಾವ ವೃತ್ತಿಯಲ್ಲಿ ತೊಡಗಿಸುವುದೆಂಬ ಸವಾಲು. ಇನ್ನೊಂದೆಡೆ, ಕೇಂದ್ರ ಸರಕಾರ ಮತ್ತೆಮತ್ತೆ ಘೋಷಿಸಿರುವಂತೆ, 2022ರಲ್ಲಿ ಕೃಷಿಕರ ಆದಾಯ ಇಮ್ಮಡಿಗೊಳಿಸುವ ಸವಾಲು. ಇವೆರಡೂ ಗಂಭೀರ ಸವಾಲುಗಳ ಹಿನ್ನೆಲೆಯಲ್ಲಿ 137 ಕೋಟಿ ಜನರಿಗೆ ಆಹಾರ ಒದಗಿಸುವ ಮಹಾಸವಾಲನ್ನು ಸರಕಾರ ಹೇಗೆ ನಿಭಾಯಿಸುತ್ತದೆ ಎಂಬುದೇ ಯಕ್ಷಪ್ರಶ್ನೆ.

ಬದಲಾಗುತ್ತಿರುವ ಗ್ರಾಮೀಣ ಪ್ರದೇಶ
“ಭಾರತದ ಗ್ರಾಮೀಣ ಪ್ರದೇಶಗಳು ಕೃಷಿಪ್ರಧಾನವಾಗಿ ಉಳಿದಿಲ್ಲ. 2004- 2005ರಿಂದ ಗ್ರಾಮೀಣ ಪ್ರದೇಶಗಳದ್ದು ಕೃಷಿಯೇತರ ಆರ್ಥಿಕತೆಯಾಗಿದೆ’ ಎಂದು ನೀತಿ ಆಯೋಗಕ್ಕೆ ನೀಡಿದ ಸಂಶೋಧನಾ ಲೇಖನದಲ್ಲಿ ಆರ್ಥಿಕ ತಜ್ಞ ರಮೇಶ್‌ ಚಂದ್‌ ಸ್ಪಷ್ಟ ಪಡಿಸಿ¨ªಾರೆ. 1993-94 ಮತ್ತು 2004-2005 ಅವಧಿಯಲ್ಲಿ ಕೃಷಿರಂಗದ ಬೆಳವಣಿಗೆ ಶೇ. 1.87ಕ್ಕೆ ಕುಸಿದು, ಕೃಷಿಯೇತರ ರಂಗದ ಬೆಳವಣಿಗೆ ಶೇ.7.93ಕ್ಕೆ ಏರಿತು ಎಂದವರು ಹೇಳುತ್ತಾರೆ. ಹೆಚ್ಚೆಚ್ಚು ರೈತರು ಕೃಷಿ ತೊರೆದು ಕೃಷಿಯೇತರ ವೃತ್ತಿಗಳಲ್ಲಿ ತೊಡಗುತ್ತಿದ್ದಾರೆ – ಹೆಚ್ಚು ಆದಾಯ ಗಳಿಸಲಿಕ್ಕಾಗಿ. ಅದು ಅವರ ವೈಯಕ್ತಿಕ ನಿರ್ಧಾರ. ಯಾಕೆಂದರೆ ಕೃಷಿಯೇತರ ವೃತ್ತಿಯವರ ಆದಾಯಕ್ಕೆ ಹೋಲಿಸಿದಾಗ ಬಹುಪಾಲು ರೈತರ ಆದಾಯ ಅದರ ಶೇ.20ರಷ್ಟು ಮಾತ್ರ!

-ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next