Advertisement

ಅಭಿಷೇಕ್‌ಗೆ ದರ್ಶನ್‌ ಸಾಥ್‌

09:02 AM Jan 09, 2019 | |

ಅಭಿಷೇಕ್‌ ಅಂಬರೀಶ್‌ ಅಭಿನಯದ “ಅಮರ್‌’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆದಿದೆ. “ಅಮರ್‌’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ ಎಂದು ನಿರ್ದೇಶಕ ನಾಗಶೇಖರ್‌ ಈ ಹಿಂದೆಯೇ ಹೇಳಿದ್ದರು. ಅಷ್ಟೇ ಅಲ್ಲ, ಚಿತ್ರದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್‌ ನಟರು ಸಹ “ಅಮರ್‌’ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿಕೊಂಡಿದ್ದರು. ಅದಕ್ಕೀಗ ಮೊದಲ ಉತ್ತರ ಸಿಕ್ಕಿದೆ.

Advertisement

ಹೌದು, “ಅಮರ್‌’ ಚಿತ್ರದಲ್ಲಿ ಸದ್ದಿಲ್ಲದೆಯೇ ದರ್ಶನ್‌ ಅವರು ಕಾಣಿಸಿಕೊಂಡಾಗಿದೆ. ಅದರಲ್ಲೂ ವಿಶೇಷವಾಗಿರುವಂತಹ ಒಂದು ಹಾಡಿನಲ್ಲಿ ಅಭಿಷೇಕ್‌ ಜೊತೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ದಿ ಕ್ಲಬ್‌ನಲ್ಲಿ “ಅಮರ್‌’ ಚಿತ್ರದ ಹಾಡಿನ ಚಿತ್ರೀಕರಣ ನಡೆಯಿತು. ಆ ಹಾಡಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಅಭಿಷೇಕ್‌ಗೆ ಸಾಥ್‌ ಕೊಡುವ ಮೂಲಕ ದರ್ಶನ್‌ ಅವರ ಖುಷಿಯಲ್ಲೇ ಆ ಹಾಡಿಗೆ ಹೆಜ್ಜೆ ಹಾಕಿ, ಚಿತ್ರತಂಡದ ಜೊತೆ ಒಂದಷ್ಟು ಹರಟಿದ್ದಾರೆ ಕೂಡ.

ಅಂದಹಾಗೆ, ಆ ಹಾಡಲ್ಲಿ ದೇವರಾಜ್‌, ನಿರೂಪ್‌ ಭಂಡಾರಿ ಕೂಡ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ದರ್ಶನ್‌ ಹೆಜ್ಜೆ ಹಾಕಿರುವ ಹಾಡಿಗೆ ನೃತ್ಯ ನಿರ್ದೇಶಕ ಧನಂಜಯ್‌ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ದರ್ಶನ್‌ ಬರೀ ಹಾಡಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ ಎಂದು ಅರ್ಥೈಸಿಕೊಳ್ಳುವಂತಿಲ್ಲ. “ಅಮರ್‌’ ಚಿತ್ರದಲ್ಲಿ ಅವರು ಹಾಡಿಗೆ ಹೆಜ್ಜೆ ಹಾಕುವುದರ ಜೊತೆಗೆ ಮಾತಿನ ಭಾಗದ ದೃಶ್ಯದಲ್ಲೂ ಅಭಿನಯಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ, ರಾಜರಾಜೇಶ್ವರಿ ನಗರ ಮುಂತಾದ ಕಡೆ ಅವರ ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಇನ್ನು, ನಿರೂಪ್‌ ಭಂಡಾರಿ ಅವರು ಸಹ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು ಹಾಗೂ ಸ್ವಿಜರ್‌ಲೆಂಡ್‌ನ‌ಲ್ಲೂ ಚಿತ್ರದ ಚಿತ್ರೀಕರಣವಾಗಿದೆ.

ಫೆಬ್ರವರಿ 11ರಿಂದ ಸಿಂಗಾಪುರದಲ್ಲಿ “ಅಮರ್‌’ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರದ ಇನ್ನೊಂದು ಹೆಚ್ಚುಗಾರಿಕೆ ಅಂದರೆ, ಅತೀ ಹೆಚ್ಚು ಲೊಕೇಷನ್‌ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವುದು. ಈ ಚಿತ್ರವನ್ನು ಸಂದೇಶ್‌ ಪೊ›ಡಕ್ಷನ್ಸ್‌ನಲ್ಲಿ ಸಂದೇಶ್‌ ಅವರ ನಿರ್ಮಾಣವಿದೆ. ಈ ಹಿಂದೆ ಅಂಬರೀಶ್‌ ಅಭಿನಯದ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದ  ಸಂದೇಶ ನಾಗರಾಜ್‌ ಅವರು ಈಗ ಅವರ ಪುತ್ರ ಸಂದೇಶ್‌ ಅವರಿಗೆ ಈ ಚಿತ್ರ ನಿರ್ಮಾಣದ ಜವಾಬ್ದಾರಿ ಹೊರಿಸಿದ್ದಾರೆ.

Advertisement

ನಾಗಶೇಖರ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದರೆ, ಹರ್ಷ ಸಂಕಲನ ಮಾಡಿದ್ದಾರೆ. ಧನಂಜಯ್‌, ಇಮ್ರಾನ್‌ ಸರ್ದಾರಿಯಾ, ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ. ರವಿವರ್ಮ, ಥ್ರಿಲ್ಲರ್‌ ಮಂಜು, ಅಂಬು ಅರಿವು ಅವರ ಸಾಹಸ ನಿರ್ದೇಶನವಿದೆ. ಚಿತ್ರದಲ್ಲಿ ಅಭಿಷೇಕ್‌ ಅಂಬರೀಶ್‌ ಅವರಿಗೆ ತಾನ್ಯಾ ಹೋಪ್‌ ನಾಯಕಿಯಾಗಿ ಕಾಣಿಸಿಕೊಂಡರೆ, ಉಳಿದಂತೆ ಸುಧಾರಾಣಿ, ದೇವರಾಜ್‌, ದೀಪಕ್‌ ಶೆಟ್ಟಿ, ಅರುಣ್‌ ಸಾಗರ್‌, ಚಿಕ್ಕಣ್ಣ, ಸಾಧುಕೋಕಿಲ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next