Advertisement

ಆರುಷಿಯನ್ನು ಕೊಂದದ್ದು ಹೆತ್ತವರಲ್ಲ: ಹೈಕೋರ್ಟ್‌ ತೀರ್ಪು

03:23 PM Oct 12, 2017 | Team Udayavani |

ಹೊಸದಿಲ್ಲಿ : ‘ನೂಪುರ್‌ ಮತ್ತು ರಾಜೇಶ್‌ ತಲ್ವಾರ್‌ ಅವರು ತಮ್ಮ 14ರ ಹರೆಯದ ಪುತ್ರಿ ಆರುಷಿಯನ್ನು ಕೊಂದಿಲ್ಲ’ ಎಂದು ಅಲಹಾಬಾದ್‌ ಹೈಕೋರ್ಟ್‌ ಇಂದು ಗುರುವಾರ ಮಹತ್ವದ ತೀರ್ಪನ್ನು ನೀಡಿದೆ.

Advertisement

ಅಂತೆಯೇ ಆರುಷಿ ಮತ್ತು ಮನೆ ಕೆಲಸದಾಳು ಹೇಮರಾಜ್‌ ಅವಳಿ ಕೊಲೆ ಪ್ರಕರಣದಲ್ಲಿ ರಾಜೇಶ್‌ ಮತ್ತು ನೂಪುರ್‌ ತಲ್ವಾರ್‌ ದಂಪತಿಯನ್ನು ಹೈಕೋರ್ಟ್‌ ಖುಲಾಸೆಗೊಳಿಸಿದೆ. 

‘ತಲ್ವಾರ್‌ ದಂಪತಿಗೆ ಸಂದೇಹದ ಲಾಭವನ್ನು ಕೊಡಬೇಕಾಗುತ್ತದೆ. ಏಕೆಂದರೆ ಕೇವಲ ಶಂಕೆಯ ಮೇಲೆ ಹೆತ್ತವರನ್ನು ಕೊಲೆ ಅಪರಾಧಿಗಳೆಂದು ತೀರ್ಮಾನಿಸುವಂತಿಲ್ಲ’ ಎಂದು ಹೈಕೋರ್ಟ್‌ ಹೇಳಿತು.

ತೀರ್ಪನ್ನು ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಆರುಷಿಯ ಅಜ್ಜ, “ನಾವು ಈ ತೀರ್ಪಿಗಾಗಿ ನ್ಯಾಯಾಲಯಕ್ಕೆ ಆಭಾರಿಯಾಗಿದ್ದೇವೆ; ಆರುಷಿಯ ಹೆತ್ತವರು ಅಮಾಯಕರೆಂದು ನಾವು ಮೊದಲಿನಿಂದಲೂ ತಿಳಿದಿದ್ದೆವು; ಕೋರ್ಟ್‌ ಈಗ ಅದೇ ಅಭಿಪ್ರಾಯವನ್ನು ತಳೆದು ತೀರ್ಪು ನೀಡಿದೆ” ಎಂದು ಹೇಳಿದರು.

‘ತಮ್ಮ ಮಗಳಾಗಿರುವ ಆರುಷಿಯನ್ನು ಆಕೆಯ ಹೆತ್ತವರಾದ ತಲ್ವಾರ್‌ ದಂಪತಿಯೇ ಕೊಂದದ್ದೆಂದು ನಿಸ್ಸಂಶಯವಾಗಿ ಸಾಬೀತು ಪಡಿಸುವಲ್ಲಿ ಸಿಬಿಐ ವಿಫ‌ಲವಾಗಿದೆ; ಅಂತೆಯೇ ತಲ್ವಾರ್‌ ದಂಪತಿಗೆ ಸಂದೇಹದ ಲಾಭವನ್ನು ಕೊಡಬೇಕಾಗುತ್ತದೆ’ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿತು. 

Advertisement

ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ 14 ವರ್ಷ ಪ್ರಾಯದ ಆರುಷಿ ತಲ್ವಾರ್‌ ಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಲಹಾಬಾದ್‌ ಹೈಕೋರ್ಟ್‌ ಇಂದು ಗುರುವಾರ ತೀರ್ಪು ನೀಡಿತು. 2008ರಲ್ಲಿ ನೋಯ್ಡಾದಲ್ಲಿನ ತನ್ನ ನಿವಾಸದಲ್ಲಿ ಆರುಷಿ ಸತ್ತು ಬಿದ್ದಿರುವುದು ಪತ್ತೆಯಾಗಿತ್ತು. 

ಆರುಷಿ ಮತ್ತು ಮನೆ ಕೆಲಸದಾಳು ಹೇಮರಾಜ್‌ನನ್ನು ಹತ್ಯೆಗೈದ ಅಪರಾಧಕ್ಕಾಗಿ ಉತ್ತರ ಪ್ರದೇಶ ನ್ಯಾಯಾಲಯ ಆರುಷಿಯ ಹೆತ್ತವರಾದ ರಾಜೇಶ್‌ ಮತ್ತು ನೂಪುರ್‌ ತಲ್ವಾರ್‌ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

ಗಾಜಿಯಾಬಾದ್‌ನ ಸಿಬಿಐ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಆರುಷಿ ಹೆತ್ತವರು ಅಲಹಾಬಾದ್‌ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ಸೆಪ್ಟಂಬರ್‌ನಲ್ಲಿ  ಜಸ್ಟಿಸ್‌ ಬಿ ಕೆ ನಾರಾಯಣ ಮತ್ತು ಜಸ್ಟಿಸ್‌ ಎ ಕೆ ಮಿಶ್ರಾ ಅವರನ್ನು ಒಳಗೊಂಡ ಪೀಠವು ಈ ಪ್ರಕರಣದ ಮೇಲಿನ ತೀರ್ಪನ್ನು ಕಾದಿರಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next