Advertisement

“ಆ ದೃಶ್ಯ’ನೋಡೋಕೆ ಮೊದಲೇ ಬೇಡಿಕೆ

09:57 AM Nov 05, 2019 | Lakshmi GovindaRaju |

ಕನ್ನಡ ಚಿತ್ರರಂಗದಲ್ಲಿ “ದೃಶ್ಯ’ ಅದ್ಭುತ ಯಶಸ್ಸು ಕಂಡ ಚಿತ್ರ. ರವಿಚಂದ್ರನ್‌ ಅವರಿಗೆ ಆ ಚಿತ್ರದ ಮೂಲಕ ಹೊಸ ಇಮೇಜ್‌ ಬಂದಿದ್ದು ಎಲ್ಲರಿಗೂ ಗೊತ್ತು. ಈಗ “ಆ ದೃಶ್ಯ’ ಕೂಡ ಮತ್ತೂಂದು ಹೊಸ ಇಮೇಜ್‌ ತಂದು ಕೊಡುವ ಚಿತ್ರ ಎಂಬುದು ಚಿತ್ರತಂಡದ ಮಾತು. ಅಂದಹಾಗೆ, “ಆ ದೃಶ್ಯ’ ನ.8 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆ ಮೊದಲೇ “ಆ ದೃಶ್ಯ’ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಹೆಚ್ಚಿದೆ.

Advertisement

ರಾಜ್ಯಾದ್ಯಂತ ಇರುವ ಸುಮಾರು 300 ಕ್ಕೂ ಹೆಚ್ಚು ಚಿತ್ರಮಂದಿರಗಳಿಂದ ಚಿತ್ರಕ್ಕೆ ಬೇಡಿಕೆ ಬಂದಿದೆ ಎಂದರೆ ನಂಬಲೇಬೇಕು. ಅದಕ್ಕೆ ಕಾರಣ, “ದೃಶ್ಯ’ ಕೊಟ್ಟ ಯಶಸ್ಸು. ಈಗಾಗಲೇ “ಆ ದೃಶ್ಯ’ ಕೂಡ ಅಂಥದ್ದೊಂದು ಸೂಚನೆ ಕೊಟ್ಟಿದೆ. ಚಿತ್ರದ ಟ್ರೇಲರ್‌ ಹಾಗು ಪೋಸ್ಟರ್‌ ಜೊತೆಗೆ ರವಿಚಂದ್ರನ್‌ ಅವರ ನ್ಯೂ ಲುಕ್‌ ಎಲ್ಲವೂ ಹೊಸ ಕುತೂಹಲ ಮೂಡಿಸಿದೆ. ಹಾಗಾಗಿ, ಚಿತ್ರಮಂದಿರಗಳು ಚಿತ್ರವನ್ನು ಹಾಕುವಂತೆ ಬೇಡಿಕೆ ಇಟ್ಟಿವೆ. ಈ ಕುರಿತು ನಿರ್ಮಾಪಕ ಕೆ.ಮಂಜು ಹೇಳುವುದಿಷ್ಟು.

“ಚಿತ್ರವನ್ನು ನ.15 ರಂದು ಬಿಡುಗಡೆ ಮಾಡಲು ಯೋಚಿಸಿದ್ದೆ. ಈಗ ನ.8 ಕ್ಕೆ ರಿಲೀಸ್‌ ಮಾಡುತ್ತಿದ್ದೇನೆ. ಈ ಚಿತ್ರವನ್ನು ಸುಮಾರು 150 ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಚಿಂತನೆ ಇತ್ತು. ಈಗ ನೋಡಿದರೆ, 300 ಕ್ಕೂ ಹೆಚ್ಚು ಚಿತ್ರಮಂದಿರಗಳಿಂದಲೇ ಬೇಡಿಕೆ ಇದೆ. ಕಾರಣ, ಇದೊಂದು ಸಸ್ಪೆನ್ಸ್‌ ಜಾನರ್‌ ಸಿನಿಮಾ. ಜೊತೆಗೆ ಈಗಾಗಲೇ ರವಿಚಂದ್ರನ್‌ ಅವರ ಗೆಟಪ್‌ ನೋಡಿರುವ ಜನರು ಚಿತ್ರ ನೋಡುವ ಕಾತುರದಲ್ಲಿದ್ದಾರೆ.

ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಇರುವುದರಿಂದ ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತೆ. ಈ ಚಿತ್ರವನ್ನು ಎ ಮತ್ತು ಬಿ ಸೆಂಟರ್‌ನಲ್ಲೇ ಬಿಡುಗಡೆ ಮಾಡುತ್ತೇನೆ’ ಎಂಬುದು ಕೆ.ಮಂಜು ಅವರ ಮಾತು. ಈ ಚಿತ್ರ ನವೆಂಬರ್‌ 8 ರಂದು ಬಿಡುಗಡೆಯಾಗುತ್ತಿರುವುದರಿಂದ ರವಿಚಂದ್ರನ್‌ ಅವರಿಗೆ ಅವರ ತಂದೆ ನೆನಪಾಗುತ್ತಾರಂತೆ. ಅದಕ್ಕೆ ಕಾರಣ, ದಿನಾಂಕ. ಹೌದು, 8 ಅನ್ನೋದು ಅವರಿಗೆ ಲಕ್ಕಿಯಂತೆ. ಅವರ ತಂದೆ ವೀರಸ್ವಾಮಿ ಅವರು ಹುಟ್ಟಿದ್ದು, ಏಪ್ರಿಲ್‌ 17. ಅವರ ಕಾರು ನಂಬರ್‌ ಕೂಡ 6884. ಸೋ, “ಆ ದೃಶ್ಯ’ ಕೂಡ ನ.8 ಕ್ಕೆ ಬಿಡುಗಡೆಯಾಗುತ್ತಿದೆ.

ಈ ನಂಬರ್‌ ಲಕ್ಕಿಯಾಗಿದ್ದು, ಚಿತ್ರದ ಮೇಲೆ ಅಪ್ಪನ ಆಶೀರ್ವಾದ ಜೊತೆಗೆ ಇರುತ್ತದೆ’ ಎಂಬುದು ರವಿಚಂದ್ರನ್‌ ಅವರ ಮಾತು. ಈ ಚಿತ್ರವನ್ನು ಶಿವಗಣೇಶ್‌ ನಿರ್ದೇಶಿಸಿದ್ದಾರೆ. ವಿನೋದ್‌ ಭಾರತಿ ಛಾಯಾಗ್ರಹಣ ಮಾಡಿದರೆ, ಗೌತಮ್‌ ಶ್ರೀವತ್ಸ ಸಂಗೀತ ನೀಡಿದ್ದಾರೆ. ಸುರೇಶ್‌ ಆರ್ಮುಗಂ ಸಂಕಲನವಿದೆ. ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ರವಿಚಂದ್ರನ್‌ ಇಲ್ಲಿ ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next