Advertisement

ಚಿನ್ನದ ಸರಕ್ಕಾಗಿ ಮಹಿಳೆಯ ಕೊಂದವನ ಸೆರೆ

11:55 AM Apr 21, 2018 | |

ಬೆಂಗಳೂರು: ಪರಿಚಯಸ್ತರ ಮನೆಗೇ ನುಗ್ಗಿದ ದುಷ್ಕರ್ಮಿ, ಮಹಿಳೆಯ ಕತ್ತು ಹಿಸುಕಿ ಕೊಲೆಗೈದು ಚಿನ್ನದ ಸರದೊಂದಿಗೆ ಪರಾರಿಯಾದ ಘಟನೆ ಗುರುವಾರ ನಡೆದಿದ್ದು, ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಚಿಕ್ಕಜಾಲ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Advertisement

ರಮೇಶ್‌(35) ಬಂಧಿತ ಆರೋಪಿ. ಹುಣಸಮಾರನಹಳ್ಳಿಯ ಭಾರತೀನಗರದ ಶ್ರೀನಿವಾಸ್‌ ಎಂಬುವರ ಪತ್ನಿ ಚಂದ್ರಕಲಾ (35) ಮೃತರು. ಶ್ರೀನಿವಾಸ್‌ ಸಲೂನ್‌ ಶಾಪ್‌ ಹೊಂದಿದ್ದು, ಪತ್ನಿ ಮತ್ತು ಮಕ್ಕಳೊಂದಿಗೆ ಭಾರತೀನಗರದಲ್ಲೇ ಮನೆ ಮಾಡಿದ್ದಾರೆ. ಸಲೂನ್‌ ಪಕ್ಕದಲ್ಲೇ ವಾಸವಿರುವ ಆರೋಪಿ ರಮೇಶ್‌, ಶ್ರೀನಿವಾಸ್‌ರ ಕುಟುಂಬಕ್ಕೆ ಪರಿಚಿತನಾಗಿದ್ದು, ಆಗಾಗ ಅವರ ಮನೆಗೆ ಹೋಗಿಬರುತ್ತಿದ್ದ.

ಶಾಲೆಗೆ ಬೇಸಿಗೆ ರಜೆ ಇರುವ ಕಾರಣ, ಶ್ರೀನಿವಾಸ್‌ರ ಮಕ್ಕಳು ಅಜ್ಜಿ ಮನೆಗೆ ತೆರಳಿದ್ದರು. ಗುರುವಾರ ಶ್ರೀನಿವಾಸ್‌ ಅಂಗಡಿಗೆ ತೆರಳಿದ ಬಳಿಕ ಚಂದ್ರಕಲಾ ಒಬ್ಬರೇ ಮನೆಯಲ್ಲಿದ್ದರು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಮನೆಗೆ ಬಂದ ರಮೇಶ್‌, ಚಿನ್ನದ ಸರ ನೀಡುವಂತೆ ಚಂದ್ರಕಲಾರನ್ನು ಕೇಳಿದ್ದ.

ಆದರೆ, ಅವರು ನಿರಾಕರಿಸಿದಾಗ ಕತ್ತು ಹಿಸುಕಿ ಅವರ ಕೊಲೆಗೈದು ಚಿನ್ನದ ಸರ ಕಸಿದು ಪರಾರಿಯಾಗಿದ್ದ. ಸಂಜೆ 5 ಗಂಟೆ ಸುಮಾರಿಗೆ ಚಂದ್ರಕಲಾ ತಾಯಿ ಮನೆಗೆ ಬಂದಾಗ ಮಗಳು ಬಿದ್ದಿರುವುದು ಕಂಡು ಅಕ್ಕ-ಪಕ್ಕದ ನಿವಾಸಿಗಳಿಗೆ ವಿಚಾರ ತಿಳಿಸಿದರು. ಸ್ಥಳಕ್ಕೆ ಬಂದ ಸ್ಥಳೀಯರೊಬ್ಬರು ಚಂದ್ರಕಲಾ ಮೃತಪಟ್ಟಿರುವುದಾಗಿ ತಿಳಿಸಿದರು.

ಕೂಡಲೇ ಶ್ರೀನಿವಾಸ್‌ರನ್ನು ಕರೆಸಿ ಪೊಲೀಸರಿಗೆ ದೂರು ನೀಡಲಾಯಿತು. ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಠಾಣೆ ಪೊಲೀಸರು, ರಮೇಶ್‌ ಬಗ್ಗೆ ಅನುಮಾನಗೊಂಡು ಶುಕ್ರವಾರ ಬೆಳಗ್ಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next