Advertisement

ಅಸಮಾಧಾನ ತಣಿಸಲು ಉಭಯ ಪಕ್ಷಗಳಿಂದ ತೀವ್ರ ಕಸರತ್ತು

11:35 PM Mar 31, 2024 | Team Udayavani |

ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭವಾಗಿದ್ದರೂ ಬಿಜೆಪಿಯಲ್ಲಿ ಇನ್ನೂ ಅಸಮಾಧಾನ ಹೊಗೆಯಾಡುತ್ತಿದೆ. ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಶಾಸಕ ಎಂ.ಚಂದ್ರಪ್ಪ ವಿಶ್ವಾಸ ಸಿಕ್ಕಿಲ್ಲ. ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಗೆ ಒಲ್ಲೆ ಎನ್ನುತ್ತಲೇ ಇರುವ ಅನಂತ್‌ಕುಮಾರ್‌ ಹೆಗಡೆ. ತುಮಕೂರಿನಲ್ಲಿ ವಿ.ಸೋಮಣ್ಣ ಪರ ಕೆಲಸ ಮಾಡದ ಮಾಧುಸ್ವಾಮಿ…

Advertisement

ಹೀಗೆ ಅಲ್ಲಲ್ಲಿ ಹೊಗೆಯಾಡುತ್ತಿರುವ ಅಸಮಾಧಾನಗಳು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ವಿರುದ್ಧಸ್ಪರ್ಧೆ ಖಚಿತ ಎಂದಿರುವ ದಿಂಗಾಲೇಶ್ವರ ಶ್ರೀಗಳ ಮನವೊಲಿಕೆ ಒಂದೆಡೆಯಾದರೆ, ಸ್ಪರ್ಧಿಸದಂತೆ ಖುದ್ದು ಯಡಿಯೂರಪ್ಪ ಅವರೂ ಕರೆ ಮಾಡಿ ಮನವಿ ಮಾಡಿರುವುದು ಇನ್ನೊಂದೆಡೆ. ಶಿವಮೊಗ್ಗದಲ್ಲಿ ಬಂಡೆದ್ದಿರುವ ಈಶ್ವರಪ್ಪ ಪ್ರಚಾರವೂ ಬಿ.ವೈ. ವಿಜಯೇಂದ್ರರ ನಿದ್ದೆಗೆಡಿಸಿದೆ. ಒಲ್ಲದ ಮನಸ್ಸಿನಿಂದಲೇ ಬೆಳಗಾವಿಯಿಂದ ಕಣಕ್ಕಿಳಿದಿರುವ ಜಗದೀಶ್‌ ಶೆಟ್ಟರ್‌ ಕೂಡ ಅಬ್ಬರದ ಪ್ರಚಾರ ನಡೆಸಲು ಹಿಂದೇಟು ಹಾಕಿದ್ದಾರೆ.

ಇವೆಲ್ಲದರ ನಡುವೆ ಕೋಲಾರದಲ್ಲಿ ಜೆಡಿಎಸ್‌ನ ಮಲ್ಲೇಶ್‌ ಬಾಬು ಪರ ಕೆಲಸ ಮಾಡಲು ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯ ಕರ್ತರು ಒಂದಾಗಿದ್ದಾರೆ, ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಪರ ಬಿಜೆಪಿಯ ಒಂದು ಬಣ ಕೆಲಸ ಮಾಡುತ್ತಿದ್ದರೆ, ಪ್ರೀತಂ ಗೌಡ ಬಣ ತಟಸ್ಥ ನೀತಿ ಅನುಸರಿಸುತ್ತಿದೆ. ಮಂಡ್ಯ ದಲ್ಲಿ ಮುನಿಸಿಕೊಂಡಿದ್ದ ನಾರಾಯಣ ಗೌಡರ ಮನವೊಲಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದು, ಬಿಜೆಪಿ-ಜೆಡಿಎಸ್‌ಒಂದಾಗಿದ್ದರೂ ಮೈತ್ರಿ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿಗೆ ಸಂಸದೆ ಸುಮಲತಾ ನಡೆ ತಲೆಬಿಸಿ ಮಾಡಿಸಿದೆ.

ಒಟ್ಟಾರೆ ಬಿಜೆಪಿಯಲ್ಲಿ ಬಂಡಾಯ ಶಮನಕ್ಕೆ ಕಸರತ್ತು ನಡೆಯುತ್ತಿದ್ದು, ಎ.2 ರಂದು ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ಪ್ರಚಾರ ಸಭೆ, ರ್ಯಾಲಿ ನಡೆಸಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದಕ್ಕೆಲ್ಲ ಮದ್ದರೆಯ ಲಿದ್ದಾರೆಯೇ ಎನ್ನುವ ಕುತೂಹಲವೂ ಇದೆ.

Advertisement

ನನಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರಿಗೂ ವೈಯಕ್ತಿಕ ಕಲಹಗಳಿಲ್ಲ. ಅವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಹಲವು ಬಾರಿ ದೂರವಾಣಿ ಕರೆ ಮಾಡಿದ್ದೆ, ಉತ್ತರ ಬರಲಿಲ್ಲ. ಇನ್ನೂ ಎರಡು ಬಾರಿ ಭೇಟಿ ಮಾಡಿ, ಅವರ ಮನವೊಲಿಸಲು ಪ್ರಯತ್ನಿಸುತ್ತೇನೆ.
– ಡಾ| ಕೆ. ಸುಧಾಕರ್‌, ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ

ಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್‌ ಆಕಾಂಕ್ಷಿಯಾಗಿದ್ದರು. ಪಕ್ಷ ನನಗೆ ಟಿಕೆಟ್‌ ಕೊಟ್ಟಿದೆ. ಅಸಮಾಧಾನ ಸಹಜ. ಆದರೆ ಅದು ಶಾಶ್ವತ ಅಲ್ಲ. ಚಂದ್ರಪ್ಪ ಅವರು ಪಕ್ಷದ ಕಟ್ಟಾಳು. ಯಾವುದೇ ಕಾರಣಕ್ಕೂ ಪಕ್ಷ ಬಿಡುವವರಲ್ಲ. ಅಸಮಾಧಾನ ಶಮನವಾಗುತ್ತಿದೆ.
– ಗೋವಿಂದ ಕಾರಜೋಳ, ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ

ಅಸಮಾಧಾನ ಶಮನಕ್ಕೆ ಕಾಂಗ್ರೆಸ್‌ ನಾಯಕರ ತಂತ್ರ
ಬೆಂಗಳೂರು: ಹಲವು ಸುತ್ತಿನ ಮಾತುಕತೆಗಳು, ಸಂಧಾನದ ಕಸರತ್ತುಗಳ ನಡುವೆಯೂ ರಾಜ್ಯದಲ್ಲಿ ಅಲ್ಲಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಇದಕ್ಕೆ ಮದ್ದರೆಯುವ ಕೆಲಸವನ್ನೂ ಕಾಂಗ್ರೆಸ್‌ ನಾಯಕರು ನಡೆಸಿದ್ದಾರೆ.

ಕೋಲಾರದಲ್ಲಿ ಸಚಿವ ಕೆ.ಎಚ್‌. ಮುನಿಯಪ್ಪ ಮತ್ತು ಮಾಜಿ ಸಚಿವ ರಮೇಶ್‌ ಕುಮಾರ್‌ ಬಣಗಳ ನಡುವಿನ ಗುದ್ದಾಟ ತಾರಕಕ್ಕೇರಿದ್ದರಿಂದ ರಾಜ್ಯ ನಾಯಕರು ಸಭೆ ನಡೆಸಿ ಈ ಎರಡೂ ಬಣಗಳಿಂದ ಹೊರತಾದ ಅಭ್ಯರ್ಥಿಯನ್ನು ಘೋಷಿಸಿದ್ದರೂ ಅಲ್ಲಲ್ಲಿ ಅಪಸ್ವರ ಕೇಳಿಬರುತ್ತಿವೆ.

ಒಂದೆಡೆ ಸ್ವತಃ ಸಿಎಂ ಸಿದ್ದರಾಮಯ್ಯ ರವಿವಾರ ಕೋಲಾರಕ್ಕೆ ಭೇಟಿ ನೀಡಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನೆಪದಲ್ಲಿ ವಿವಿಧ ಬಣಗಳನ್ನು ಭೇಟಿಯಾಗಿ ರಾಜಿ-ಸಂಧಾನದ ತಂತ್ರ ಹೆಣೆದಿದ್ದಾರೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ಎರಡೂ ಬಣಗಳ ನಾಯಕರ ಮನೆಗಳಿಗೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ಇದರೊಂದಿಗೆ ತಕ್ಕಮಟ್ಟಿಗೆ ಶಮನಗೊಂಡಿದೆ ಎನ್ನಲಾಗಿದೆ.

ರವಿವಾರ ಪ್ರತಿಕ್ರಿಯಿಸಿರುವ ಸಚಿವ ಕೆ.ಎಚ್‌. ಮುನಿಯಪ್ಪ, ಮೊದಲೇ ಸಮನ್ವಯ ಸಮಿತಿ ರಚಿಸಿ, ರಾಜಿಸೂತ್ರ ನೀಡಬೇಕಿತ್ತು. ಆದರೆ ಈಗ ಅಭ್ಯರ್ಥಿ ಘೋಷಣೆ ಮಾಡಿಯಾಗಿದ್ದು, ಚುನಾವಣೆ ಬಂದಾಗಿದೆ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಗೆಲುವಿಗೆ ಶ್ರಮಿಸಲಾಗುವುದು ಎಂದರು. ಒಂದು ವೇಳೆ ಕಾಂಗ್ರೆಸ್‌ ಕೋಲಾರದಲ್ಲಿ ಸೋತರೆ ಯಾರು ಹೊಣೆ ಎಂದು ಕೇಳಿದಾಗ, ಈ ಬಗ್ಗೆ ಅಭ್ಯರ್ಥಿ ಯನ್ನು ಅಂತಿಮಗೊಳಿಸಿದವರನ್ನು ಕೇಳಬೇಕು ಎಂದರು.

ಮತ್ತೊಂದೆಡೆ ಡಿ.ಕೆ. ಶಿವಕುಮಾರ್‌ ಮಾತನಾಡಿ, ಬಂಡಾಯ ಎಲ್ಲವೂ ಒಂದೇ ದಿನಕ್ಕೆ ಠುಸ್‌ ಆಗಿದೆ. ಈಗ ಎಲ್ಲ ನಾಯಕರು ಕೋಲಾರದಲ್ಲಿ ವಿಜಯ ಪತಾಕೆ ಹಾರಿಸಲು ಹೊರಟಿದ್ದಾರೆ. ಮುನಿಯಪ್ಪ, ರಮೇಶ್‌ ಕುಮಾರ್‌ ಹಾಗೂ ಇತರ ನಾಯಕರು ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲು ಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಎಂ. ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಶಿವಶಂಕರ ರೆಡ್ಡಿ ಸಹಿತ ಟಿಕೆಟ್‌ ಆಕಾಂಕ್ಷಿಗಳಲ್ಲಿ ಅತೃಪ್ತಿ ಮನೆ ಮಾಡಿದೆ. ಇದನ್ನು ಶಮನಗೊಳಿಸುವ ನಿಟ್ಟಿನಲ್ಲಿ ವೀರಪ್ಪ ಮೊಲಿಗೆ ರಾಜ್ಯಸಭೆ ಸದಸ್ಯ ಸ್ಥಾನ ಹಾಗೂ ಶಿವಶಂಕರ ರೆಡ್ಡಿಗೆ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಪರಿಗಣಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆಯಲ್ಲಿ ಮಾತ್ರ ವೀಣಾ ಕಾಶಪ್ಪನವರ್‌ ಮುನಿಸು ಮಾತ್ರ ಮುಂದುವರಿದಿದೆ. ಈ ಮಧ್ಯೆ ವೀಣಾ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next