Advertisement

ತಾಳಮದ್ದಳೆಯಲ್ಲೊಂದು ವಿಶಿಷ್ಟ ಪ್ರಯೋಗ

05:46 PM Apr 25, 2019 | mahesh |

ಕಲಾಸರಸ್ವತಿಯ ಹರಿವು ಅಂದರೆ ಆಯಾ ಸಂದರ್ಭದಲ್ಲಿ ಘಟಿಸುವ ಲಲಿತಕಲೆಗಳ ಪ್ರದರ್ಶನಗಳೇ ಹೌದಷ್ಟೇ? ಲಲಿತಕಲೆಗಳ ಪ್ರದರ್ಶನಗಳ ಆಯೋಜನೆ ಮತ್ತು ಪ್ರದರ್ಶನಗಳ ಸಂದರ್ಭದಲ್ಲಿ ಕಲಾ ಸರಸ್ವತಿ ತನ್ನ ಹರಿವಿನ ಪಾತ್ರವನ್ನು ವಿಸ್ತರಿಸಿಕೊಳ್ಳುತ್ತಾಳೆ. ಇಂತಹ ವಿಸ್ತರಣೆ ಕೆಲವು ಸಲ ಅಂಕೆ ಮೀರಿದವುಗಳಾಗಿರುತ್ತದೆ. ಕೆಲವು ಸಲ ಕಲೆ ತನ್ನದೇ ವ್ಯಾಪ್ತಿಯಾದರು ಇನ್ನೂ ಮುಟ್ಟದಿದ್ದ ವ್ಯಾಪ್ತಿಯನ್ನು ತಲುಪಿ ಅಲ್ಲಿ ತನ್ನ ಇರವನ್ನು ತೋರುವ ಕ್ರಿಯೆ ನಡೆಯುತ್ತದೆ. ತನ್ನ ಕಲಾಪ್ರಮೇಯದ ಚೌಕಟ್ಟಿನೊಳಗೇ ಇವು ಘಟಿಸಿಬಿಡಬಹುದು. ಇಂತಹಾ ಕಲಾ ಘಟನೆ ನಡೆದುದು ಪಣಂಬೂರಿನಲ್ಲಿ ಎ.4ರ0ದು. ಯಕ್ಷಗಾನ ಆಯೋಜಕರಾದ ಮಧುಕರ ಭಾಗವತ್‌ ಇವರ ಅರವತ್ತನೆಯ ವರುಷದ ಸಂಭ್ರಮದ ಸಂದರ್ಭದಲ್ಲಿ ನಡೆದ ವಿಭಿನ್ನ ಯೋಚನೆಯ ತಾಳಮದ್ದಳೆ ಇದು.

Advertisement

ಪ್ರಸಂಗ ಕೃಷ್ಣ ಸಂಧಾನ. ಪಾತ್ರಗಳು ಎರಡು. ಅರ್ಥಧಾರಿಗಳು ನಾಲ್ವರು. ಕೃಷ್ಣನಾಗಿ ವಾಸುದೇವ ರಂಗಾಭಟ್‌. ಕೌರವರಾಗಿ ಮೂವರು. ಮೂರು ನೆಲೆಗಳ ಕೌರವರು. ರಾಜಕಾರಣಿ ಕೌರವನಾಗಿ ಉಜಿರೆ ಅಶೋಕ ಭಟ್‌, ಪಾಂಡವ ದ್ವೇಷಿ ಕೌರವನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್‌ ಮತ್ತು ಕೃಷ್ಣ ದ್ವೇಷಿ ಕೌರವನಾಗಿ ರಾಧಾಕೃಷ್ಣ ಕಲ್ಚಾರ್‌. ಕೌರವರಾಗಿ ಮೂವರೂ ಅರ್ಥಧಾರಿಗಳು ಕೃಷ್ಣನೊಡನೆ ತಮ್ಮ ನೆಲೆಗಳಲ್ಲಿ ಪಾತ್ರದ ಒಳಗನ್ನು ತೋಡಿಕೊಳ್ಳುವ ಅನನ್ಯ ಪ್ರಸ್ತುತಿಗೆ ನಾವು ಸಾಕ್ಷಿಯಾದೆವು. ಕವಿ ದೇವಿದಾಸನ ಕೃಷ್ಣ ಸಂಧಾನ ಪ್ರಸಂಗದ ಪದ್ಯಗಳು ಮತ್ತು ಅದೇ ಚೌಕಟ್ಟಿನಲ್ಲಿ ನಡೆದ ಪ್ರಸಂಗದಲ್ಲಿ ಈ ತಾಳಮದ್ದಳೆಗೊಸ್ಕರವೇ ರಾಧಾಕೃಷ್ಣ ಕಲ್ಚಾರ್‌ ರಚಿಸಿದ ಮೂರು ಪದ್ಯಗಳೂ ಇಲ್ಲಿ ಬಳಕೆಯಾಗಿವೆ. ಬರೋಬ್ಬರಿ 5 ತಾಸುಗಳ ಅವಧಿಯ ನಾಲ್ಕು ಜನ ಅರ್ಥಧಾರಿಗಳ ಆಶು ವೈಭವ ಮಹಾಭಾರತದ ಉದ್ಯೊಗ ಪರ್ವದ ಮರು ವ್ಯಾಖ್ಯಾನವಾಗಿ ಮೂಡಿಬಂದಿದೆ. ಅರಸ ಮುನಿದಿಹೆ ಏಕೆ… ಎಂಬಲ್ಲಿಂದ ಆರಂಭವಾಯಿತು.

ಅಶೋಕ ಭಟ್ಟರು ತನ್ನ ಎಂದಿನ ಜನಪ್ರಿಯ ಶೈಲಿಯಲ್ಲಿ ನಡುನಡುವೆ ಚಾಟೋಕ್ತಿ, ಸಮಕಾಲೀನ ಸಂದರ್ಭಗಳ ವಿವರದ ಜತೆಗೆ ತಮ್ಮ ಶೈಲಿಯಾದ ಲೌಕಿಕ-ಪೌರಾಣಿಕ ನಿಲುವು, ಸಮೃದ್ಧ ನಾಟಕೀಯ ಮಂಡನೆಗಳಿಂದ ರಾಜಕಾರಣಿ ಕೌರವನ ಪಾತ್ರವನ್ನು ನಿರ್ವಹಿಸಿದರು. ರಾಜಕಾರಣಿಯಾಗಿ ತನ್ನ ನಿಲುವು, ಸ್ವಾರ್ಥಪರತೆ, ಕೆಳಗೆ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲವೆಂಬ ರೀತಿಯ ವಾದಗಳು, ಕೊನೆಯವರೆಗೂ ಕೃಷ್ಣ ದೇವರಾದರೂ ದೇವರೆಂದಂತೆ ನಡೆದುಕೊಳ್ಳಲಾರೆನೆಂಬ ದೃಢನಿಲುವುಗಳಿಂದ ರಾಜಕಾರಣಿ ಕೌರವನ ಪಾತ್ರವನ್ನು ಅನಾವರಣಗೊಳಿಸಿದರು.

ಓತಪ್ರೋತವಾಗಿ ಹೊರಡುವ ಅಪೂರ್ವ ಭಾಷಾಸಂಪನ್ನತೆ ಮತ್ತು ಅರ್ಥಸಮೃದ್ಧಿಗಳಿಂದ ಕೂಡಿದ ಪಾಂಡವ ದ್ವೇಷಿ ಕೌರವನಾಗಿ ನಿರ್ವಹಿಸಿದ ವಿಶ್ವೇಶ್ವರ ಭಟ್‌ ಕೃಷ್ಣನೊಡನೆ ಮಾತನಾಡುತ್ತಲೇ ತಮ್ಮ ನೆಲೆಗಳನ್ನು ಬದಲಾಯಿಸಿಕೊಳ್ಳಲು ಸಹ ಕೌರವರೊಡನೆ ತೋರಿದ ಹೊಂದಾಣಿಕೆ ಅವರ ರಂಗದ ಅನುಭವ ಮತ್ತು ಅಪಾರ ಕಸುಬುಗಾರಿಕೆಯನ್ನು ಅಭಿವ್ಯಕ್ತಿಸುತ್ತಿತ್ತು. ರಾಜಕಾರಣಿ ಕೌರವ ಅಥವಾ ಕೃಷ್ಣ ದ್ವೇಷಿ ಕೌರವರು ಮಾತನಾಡುವಾಗ ಸ್ವಯಂಪ್ರೇರಣೆಯಿಂದ ತನ್ನ ನೆಲೆಯಲ್ಲಿ ತಾವು ಅರ್ಥ ಮಂಡನೆ ಮಾಡುತ್ತಿದ್ದ ರೀತಿ ಮಿಂಚು ಹರಿಸುತ್ತಿತ್ತು. ತಾಂತ್ರಿಕವಾಗಿ ಬಹಳ ಸವಾಲಿನ ಕೆಲಸ ಇದಾದುದರಿಂದ ಬಹಳ ಜಾಗ್ರತೆ ಮತ್ತು ಅವಧಾನತೆ ಕಲಾವಿದರಲ್ಲಿ ಇರಬೇಕಾದದ್ದು ಮತ್ತು ಇಲ್ಲಿ ಕಲಾವಿದರು ಇದನ್ನು ಸಲೀಸಾಗಿ ಮಾಡಿದ್ದಾರೆ.

ತಮ್ಮ ಗಂಭೀರ ಶುಚಿ-ರುಚಿಯಾದ ಕನ್ನಡ ಭಾಷೆ ಮತ್ತು ಪಾತ್ರಗೌರವಕ್ಕೆ ಗೌಣವಾಗದ ಪಾತ್ರ ಪ್ರಸ್ತುತಿ ಮಾಡುವ ಕಲ್ಚಾರರ ಕೃಷ್ಣವಿರೋಧಿ ಕೌರವ ಪ್ರೌಢತೆಯಿಂದ ಕೂಡಿತ್ತು. ಎಲ್ಲಿಯೂ ವಾಕ್‌ ಸಾಲಿತ್ಯ, ಅರ್ಥ ಸಾಲಿತ್ಯ, ವಿನಾಕಾರಣ ಅರ್ಥ ಸ್ಫೋಟ ಇರದ ಅರ್ಥ-ವಸ್ತು ಕೇಂದ್ರಿತವಾದ ಪಾತ್ರ ನಿರ್ವಹಣೆ ಕಲ್ಚಾರರದ್ದು. ಪಾತ್ರದ ನೆಲೆಗಳು ಬದಲಾಗುತ್ತಾ ಹೋಗುವಾಗ ಅರ್ಥ ಪ್ರಸ್ತುತಿಯ ಲಹರಿ, ಸೆಲೆಗಳು ಕೆಲವೊಮ್ಮೆ ಸಿಕ್ಕುವುದೂ ಕೆಲವೊಮ್ಮೆ ತಪ್ಪುವುದೂ ಇದ್ದರೂ ಅದನ್ನು ಜತನದಿಂದ ನಿಭಾಯಿಸಿದ್ದಾರೆ ಕಲ್ಚಾರರು.

Advertisement

ಇಂತಿಪ್ಪ ಕೌರವರುಗಳನ್ನೆಲ್ಲಾ ಕೃಷ್ಣನಾಗಿ ಎದುರಿಸಿದವರು ಪ್ರತಿಭಾಸಂಪನ್ನ ವಾಸುದೇವ ರಂಗಾಭಟ್‌. ಕ್ರಿಕೆಟ್‌ ಭಾಷೆಯಲ್ಲಿ ಹೇಳುವುದಾದರೆ ಮೂವರು ಕೌರವರ ಬೌನ್ಸರ್‌, ಯಾರ್ಕರ್‌, ಗುಡ್‌ ಲೆಂತ್‌ ಎಸೆತಗಳಿಗೆಲ್ಲ ಕ್ರಮವಾಗಿ ಹುಕ್‌, ಗ್ಲೆನ್ಸ್‌ ಮತ್ತು ಸ್ಟ್ರೈಟ್‌ ಡ್ರೈವ್‌ ಹೊಡೆತ ಕೊಟ್ಟಂತೆ, ಒಳ್ಳೆಯ ಎಸೆತವನ್ನು ಗೌರವಿಸಿ ಬಿಟ್ಟಂತೆ ನಿರ್ವಹಿಸಿಲ್ಲಾರೆ. ರಂಗಾಭಟ್ಟರ ಪ್ರಾಪ್ತಿ ಏನೆಂದರೆ ತಾವು ಓದಿದ, ಅಧ್ಯಯನ ಮಾಡಿದ ವಿಚಾರಗಳು ಸಮಯಕ್ಕೆ ಒದಗುವ ರೀತಿ ನಮ್ಮನ್ನೆಲ್ಲಾ ವಿಸ್ಮಯಗೊಳಿಸಿದೆ. ಅಸಾಮಾನ್ಯ ಹಿಡಿತ ವಸ್ತುವಿನ ಮೇಲೆ, ಸದೃಢ ತಾರ್ಕಿಕ ಚೌಕಟ್ಟು ಇವೆಲ್ಲದರಿಂದ ತಮ್ಮ ಪಾತ್ರ ಪ್ರಸ್ತುತಿಯಿಂದ ನೋಡುಗರನ್ನು ಹಿಡಿದಿರಿಸಿಕೊಂಡರು.

ಭಾಗವತನಾದವ ಇಂಥ ತಾಳಮದ್ದಳೆಗಳಲ್ಲಿ ಯಾವತ್ತೂ ಇಡೀ ಪ್ರಬಂಧದ ಸಂಪೂರ್ಣ ಹಿಡಿತ ಹೊಂದಿದವರಾಗಿದ್ದು ಪಠ್ಯದ ಅಧ್ಯಯನ ಮಾಡಿದ್ದವರಾಗಿ ಕ್ಷಣಕ್ಷಣದಲ್ಲಿ ಬದಲಾಗುವ ನೆಲೆಗಳಿಗೆ ಹೊಂದಿ ಪದ ಹಾಡುವಂತವರಾಗಿರಬೇಕು. ಪ್ರಜ್ಞಾವಂತ ಭಾಗವತರಾದ ಪುತ್ತೂರು ರಮೇಶ ಭಟ್ಟರು ಈ ನೆಲೆಯಲ್ಲಿ ಯಶಸ್ವಿಯಾಗಿಲ್ಲಾರೆ. ಇವರಿಗೆ ಮದ್ದಳೆ ವಾದಕರಾಗಿದ್ದ ಪದ್ಮನಾಭ ಉಪಾಧ್ಯ ನುಡಿಸಿದ ಜಂಪೆ ತಾಳದ ಬಿಡಿತ ಹಳೆಯ ಮಟ್ಟಿನ ನಿಜ ಮದ್ದಳೆ ಪೆಟ್ಟು ಮನಸೂರೆಗೊಂಡಿತು. ದೇವಿಪ್ರಸಾದ್‌ ಕಟೀಲು ತಮ್ಮ ಮೃದುವಾದ ಚೆಂಡೆಯ ಕಣತ್ಕಾರಗಳಿಂದ ನಿರ್ವಹಿಸಿದರು.

ತಾಂತ್ರಿಕ ದೃಷ್ಟಿಯಿಂದ ಅತ್ಯಂತ ಕ್ಲಿಷ್ಟಕರವಾದ ತಾಳಮದ್ದಳೆಯ ಈ ಕವಲು ಕಲಾದೃಷ್ಟಿಯಿಂದಲೂ ಅತ್ಯಂತ ಸವಾಲಿನದ್ದು. ಜಾಗ್ರತ ನಿರ್ವಹಣೆಯನ್ನು, ಅವಧಾನತೆ, ವಿಚಕ್ಷಣತೆಗಳನ್ನು ಕಲಾವಿದರಿಂದ ಈ ರೀತಿಯ ತಾಳಮದ್ದಳೆ ಬಯಸುತ್ತದೆ. ಈ ನೆಲೆಯಲ್ಲಿ ಹೇಳುವುದಾದರೆ ಭಾಗವತರ ಈ ಪ್ರಯತ್ನ ಯಶಸ್ವಿ ಎನ್ನುವುದರಲ್ಲಿ ಸಂಶಯವಿಲ್ಲ.

ಕೃಷ್ಣಪ್ರಕಾಶ ಉಳಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next