Advertisement

Theft: ದ್ವಿಚಕ್ರ ವಾಹನ ಅಡ್ಡಗಟ್ಟಿ ಇಬ್ಬರು ವಿದ್ಯಾರ್ಥಿಗಳ ಚಿನ್ನದ ಸರ ಕಳವು

01:15 PM Sep 30, 2024 | Team Udayavani |

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಹಲ್ಲೆಗೈದು ಎರಡು ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಸೇಂಟ್‌ ಮಾರ್ಕ್ಸ್ರಸ್ತೆಯಲ್ಲಿ ನಡೆದಿದ್ದು, ಈ ಸಂಬಂಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ಸೆ.24ರ ಮುಂಜಾನೆ 3.30ಕ್ಕೆ ನಗರದ ಸೇಂಟ್‌ ಮಾರ್ಕ್ಸ್ರಸ್ತೆಯ ಎಸ್‌ಬಿಎಂ ಸರ್ಕಲ್‌ ಬಳಿಯ ಸಾರ್ವಜನಿಕ ಶೌಚಾಲಯದ ಬಳಿ ಈ ಘಟನೆ ನಡೆದಿದೆ.

ಸದಾಶಿವನಗರದ ನಿವಾಸಿ ಎಂ.ಜಿ. ಜೋತಿರ್ಗಗನ್‌ ಎಂಬವರು ನೀಡಿದ ದೂರಿನ ಮೇರೆಗೆ ಇಬ್ಬರು ಅಪರಿಚಿತರ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?: ದೂರುದಾರ ವಿದ್ಯಾರ್ಥಿ ಜ್ಯೋತಿರ್ಗಗನ್‌ ತನ್ನ ಸ್ನೇಹಿತ ಅನಿಶಾಂತ್‌ ಜತೆ ಸೆ.23ರಂದು ರಾತ್ರಿ 11.30ಕ್ಕೆ ಸ್ನೇಹಿತರನ್ನು ಭೇಟಿಯಾಗಲು ಎಂ.ಜಿ.ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ಗೆ ಬಂದಿದ್ದಾರೆ. ಇವರು ಬರುವಷ್ಟರಲ್ಲಿ ಸ್ನೇಹಿತರು ಮನೆಗೆ ತೆರಳಿದ್ದರಿಂದ ಸ್ವಲ್ಪ ಸಮಯ ಸುತ್ತಾಡಿಕೊಂಡು ಇಬ್ಬರು ದ್ವಿಚಕ್ರ ವಾಹನದಲ್ಲಿ ಮನೆಗೆ ಕಡೆಗೆ ಹೊರಟ್ಟಿದ್ದಾರೆ.

ಮುಂಜಾನೆ 3.30ಕ್ಕೆ ಸೇಂಟ್‌ ಮಾರ್ಕ್ಸ್ ರಸ್ತೆ ಎಸ್‌ ಬಿಎಂ ಸರ್ಕಲ್‌ ಬಳಿಯ ಸಾರ್ವಜನಿಕ ಶೌಚಾಲಯದ ಬಳಿ ತೆರಳುವಾಗ, ನಂಬರ್‌ ಪ್ಲೇಟ್‌ ಇಲ್ಲದ ಕೆಟಿಎಂ ಡ್ಯೂಕ್‌ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಏಕಾಏಕಿ ಜ್ಯೋತಿರ್ಗಗನ್‌ನ ಕುತ್ತಿಗೆಗೆ ಕೈ ಹಾಕಿ 28 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಈ ವೇಳೆ ವಿದ್ಯಾರ್ಥಿಗಳು ದುಷ್ಕರ್ಮಿಗಳನ್ನು ದ್ವಿಚಕ್ರ ವಾಹನದಲ್ಲಿ ಬೆನ್ನಟ್ಟಿದ್ದಾರೆ.

Advertisement

ಕಲಾಸಿಪಾಳ್ಯ ಪೊಲೀಸ್‌ ಠಾಣೆ ಪಕ್ಕದ ರಸ್ತೆಯಲ್ಲಿ ಮತ್ತೆ ಎದುರಾದ ದುಷ್ಕರ್ಮಿಗಳು, ಅನಿಶಾಂತ್‌ ಮೇಲೆ ಹಲ್ಲೆ ಮಾಡಿ ಆತನ ಕುತ್ತಿಗೆಯಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಬಳಿಕ ಆತನ ಪರ್ಸ್‌ ನಲ್ಲಿದ್ದ 150 ರೂ. ನಗದು ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next