Advertisement

ಸಕಾಲದಲ್ಲಿ ಸೋತ ನಗರ ಜಿಲ್ಲೆ

12:52 AM Oct 15, 2019 | Team Udayavani |

ಬೆಂಗಳೂರು: ಸಕಾಲ ಸೇವೆ ಕಲ್ಪಿಸುವಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದ್ದು, ನವೆಂಬರ್‌ ತಿಂಗಳೊಳಗೆ ಮೊದಲ ಹತ್ತು ಸ್ಥಾನದೊಳಗೆ ಗುರುತಿಸಿಕೊಳ್ಳುವಂತೆ ಕಾರ್ಯ ನಿರ್ವಹಿಸಲು ಸಚಿವ ಎಸ್‌.ಸುರೇಶ್‌ಕುಮಾರ್‌ ಸೂಚನೆ ನೀಡಿದರು.

Advertisement

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನಾಗರಿಕರಿಗೆ ಸರಿಯಾದ ಸಮಯಕ್ಕೆ ಎಲ್ಲಾ ಸೇವೆಗಳನ್ನು ನೀಡುವ ದೃಷ್ಟಿಯಿಂದ ಸಕಾಲ ಯೋಜನೆ ಆರಂಭಿಸಲಾಗಿದೆ. ಆದರೆ, 7 ವರ್ಷಗಳಿಂದ ಹಲವು ಕಾರಣಗಳಿಂದ ಸಕಾಲ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ. ಸೇವೆಯಲ್ಲಿ ಪಾರದರ್ಶಕತೆ ತರುವಲ್ಲಿ ಸಾಕಷ್ಟು ಅಡತಡೆಗಳು ಎದುರಾಗಿವೆ.

ಹೀಗಾಗಿ, ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿ ಸಕಾಲ ಯೋಜನೆಯನ್ನು ನಾನೇ ನಿರ್ವಹಣೆ ಮಾಡುವುದಾಗಿ ತಿಳಿಸಿ ಹೆಚ್ಚುವರಿಯಾಗಿ ಈ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಅದರಂತೆ ನಾಗರಿಕರಿಗೆ ಯೋಜನೆಯ ಸಂಪೂರ್ಣ ಪ್ರಯೋಜನ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು. ಮುಂದಿನ ವಾರದೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳ ರ್‍ಯಾಂಕ್‌ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ನಂತರ ಒಂದು ತಿಂಗಳು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾರವರ ನೇತೃತ್ವದಲ್ಲಿ ಅರ್ಜಿಗಳ ಪರಿಶೀಲನೆ ಮತ್ತು ಸೇವೆ ವಿಳಂಬಕ್ಕೆ ಕಾರಣಗಳೇನು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ. ನವೆಂಬರ್‌ನಲ್ಲಿ ಮತ್ತೆ ರ್‍ಯಾಂಕ್‌ ಪಟ್ಟಿ ಬಿಡುಗಡೆ ಮಾಡಲಿದ್ದು, ಆಗ ಬೆಂಗಳೂರು ನಗರ ಜಿಲ್ಲೆ ಹತ್ತನೇ ರ್‍ಯಾಂಕ್‌ ಒಳಗಡೆ ಇರಬೇಕು. ಇದಕ್ಕೆ ಬೇಕಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಬಳಿಕ ಪ್ರತಿ ತಿಂಗಳು ಪರಿಶೀಲನೆ ನಡೆಸಿ ರ್‍ಯಾಂಕ್‌ ನೀಡಲಾಗುತ್ತದೆ ಎಂದು ಹೇಳಿದರು.

ಸಕಾಲ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿನ ಮಾಹಿತಿ ನಿಖರವಾಗಿಲ್ಲ ಎಂಬ ಅಂಶವನ್ನು ಸಿಬ್ಬಂದಿ, ಫ‌ಲಾನುಭವಿಗಳಿಗೆ ಸೇವೆ ಕಲ್ಪಿಸಬೇಕಿರುವ ಕೊನೇ ದಿನ ತಿಳಿಸುತ್ತಿದ್ದಾರೆ. ಇದರಿಂದ ಸೇವೆಗೆ ಹಿನ್ನಡೆಯಾಗಿದೆ. ಇನ್ನು ಕೆಲವು ಅಧಿಕಾರಿಗಳಿಗೆ ಸಕಾಲ ಯೋಜನೆ ಮಹತ್ವವೇ ತಿಳಿದಿಲ್ಲ. ಹೀಗಾಗಿ, 10 ದಿನಗಳೊಳಗೆ ಕಾರ್ಯಾಗಾರ ಆಯೋಜಿಸಿ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಕಾಲ ಆರಂಭವಾದ ಏಳು ವರ್ಷಗಳಲ್ಲಿ ಒಟ್ಟಾರೆ 63,90,648 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 63,40,199 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಮಾಸಿಕ ಸರಾಸರಿ 80,601 ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಬೆಂಗಳೂರು ಮಹಾನಗರಕ್ಕೆ ಈ ಅರ್ಜಿಗಳ ಪ್ರಮಾಣ ತೀರಾ ಕಡಿಮೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್‌ ಚಾವ್ಲಾ, ಪ್ರಾದೇಶಿಕ ಆಯುಕ್ತ ಹರ್ಷಗುಪ್ತ, ಸಕಾಲ ಆಡಳಿತಾಧಿಕಾರಿ ಕೆ. ಮಥಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜನಮನ್ನಣೆ ಗಳಿಸಿದ “ಜನ ಸೇವಕ’: ದೆಹಲಿ ಸರ್ಕಾರ, ಒಂದೇ ಯೋಜನೆಯಡಿ ಹಲವು ಸೇವೆಗಳನ್ನು ನೀಡುತ್ತಿರುವಂತೆಯೇ, ರಾಜ್ಯದ ಸಮ್ಮಿಶ್ರ ಸರ್ಕಾರ “ಜನ ಸೇವಕ’ ಯೋಜನೆ ಶುರುಮಾಡಿತ್ತು. ಪ್ರಾಯೋಗಿಕವಾಗಿ ಮಾರ್ಚ್‌ನಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸೇವಾ ಕೇಂದ್ರ ಪ್ರಾರಂಭಿಸಿದ್ದು, ಈವರೆಗೆ 26 ಸಾವಿರ ಅರ್ಜಿಗಳು ವಿಲೇವಾರಿಯಾಗಿವೆ.

ಸದ್ಯ ಆದಾಯ, ಜಾತಿ ಪ್ರಮಾಣಪತ್ರ, ಹಿರಿಯ ನಾಗರಿಕರ ಗುರುತಿನ ಚೀಟಿ ಹಾಗೂ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಸೇವೆಗಳನ್ನು ಪಡೆಯಲು ಅಷ್ಟೇ ಅವಕಾಶವಿದೆ. ಅಂದಾಜು 25 ಸಾವಿರ ಜನ ಆರೋಗ್ಯ ಕಾರ್ಡ್‌ ಪಡೆದಿದ್ದಾರೆ. ಉಳಿದ ಒಂದು ಸಾವಿರದಲ್ಲಿ ಜಾತಿ, ಆರೋಗ್ಯ ಪ್ರಮಾಣ ಪತ್ರ ಮತ್ತು ಹಿರಿಯ ನಾಗರಿಕರ ಚೀಟಿ ಪಡೆದುಕೊಂಡಿದ್ದಾರೆ ಎಂದು ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ಜನ ಸೇವಕ ಕಾರ್ಯನಿರ್ವಹಣೆ ಹೇಗೆ?: ಕೆಲಸದ ದಿನಗಳಂದು ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರು ಜನಸೇವಕ ಸಹಾಯವಾಣಿ: 080-44554455ಗೆ ಕರೆ ಮಾಡಿ, ತಮಗೆ ಅಗತ್ಯವಿರುವ ಸೇವೆ ಯಾವುದೆಂದು ಫೋನ್‌ ಮೂಲಕವೇ ಬುಕ್‌ ಮಾಡಿಕೊಳ್ಳಬೇಕು. ಬಳಿಕ ಜನ ಸೇವಕರೇ ಮನೆಗೆ ಭೇಟಿ ನೀಡಿ, ಸ್ಥಳದಲ್ಲೇ ಅರ್ಜಿ ಪಡೆದು, ರಸೀದಿ ನೀಡುತ್ತಾರೆ. ಬಳಿಕ ನಿಗದಿತ ಕಾಲಮಿತಿಯೊಳಗೆ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಾರೆ. ಇಲ್ಲಿ ಪ್ರತಿ ಸೇವೆಗೆ 115 ರೂ. ಶುಲ್ಕ ಪಡೆಯಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next