Advertisement

‘ಇ-ವೇಸ್ಟ್‌ ‘ಸಂಗ್ರಹಕ್ಕೆ  ಅಂಗಡಿಗಳಿಗೆ ತೆರಳುವ ವಿದ್ಯಾರ್ಥಿಗಳ ತಂಡ

10:03 AM Oct 15, 2018 | |

ಮಹಾನಗರ : ಬಳಕೆ ಮಾಡಲಾಗದ ಹಳೆ ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಚಾರ್ಜರ್‌, ರಿಮೋಟ್‌, ಸಿಡಿ ಪ್ಲೇಯರ್‌ ಮುಂತಾದ ಇ ವೇಸ್ಟ್‌ಗಳನ್ನು (ಎಲೆಕ್ಟ್ರಾನಿಕ್‌ ತ್ಯಾಜ್ಯ) ಎಲ್ಲೆಂದರಲ್ಲಿ ಎಸೆಯುತ್ತಿರುವ ನಗರದ ಕೆಲವು ಮನೆ, ಎಲೆಕ್ಟ್ರಾನಿಕ್ಸ್‌ ಮಳಿಗೆಗಳಿಗೆ ಇದೀಗ ವಿದ್ಯಾರ್ಥಿಗಳ ತಂಡವೊಂದು ಭೇಟಿ ನೀಡಿ ತಾವೇ ಇ-ವೇಸ್ಟ್‌ ಸಂಗ್ರಹಿಸಿ ಅದನ್ನು ಮಹಾನಗರ ಪಾಲಿಕೆಗೆ ನೀಡುವ ಮೂಲಕ ಮಾದರಿ ಕಾರ್ಯಕ್ಕೆ ಮುಂದಾಗಿದೆ.

Advertisement

ಪಾಠದ ಅಂಗವಾಗಿ ಯೋಜನ ವಿಷಯ ಹಾಗೂ ಸೃಜನಾತ್ಮಕವಾದ ಅರಿವು ಮೂಡಿಸುವ ಆಲೋಚನೆಗೂ ಪೂರಕವಾಗಿ ಯಕ್ಷಗಾನ ಕಲಾವಿದೆ, ಕೆನರಾ ಕಾಲೇಜಿನ ವಿದ್ಯಾರ್ಥಿಗಳಾದ ದಿಶಾ ಶೆಟ್ಟಿ ಕಟ್ಲ ನೇತೃತ್ವದಲ್ಲಿ, ರಮ್ಯಾ, ಪೂರ್ಣಿಮಾ, ಜಾಸೀಂ, ಪೃಥ್ವೀಶ್‌, ಸೌರವ್‌, ವಿಶ್ರುತ್‌, ಕಿರಣ್‌, ಸಂಶುದ್ದೀನ್‌, ತೇಜಸ್ವಿನಿ, ಸುನೇಹಾ, ವೈಶಾಖ್‌, ಅಕ್ಷಯ್‌ ಅವರನ್ನೊಳಗೊಂಡ 13 ಜನರ ತಂಡವು ನಗರ ಪಾಲಿಕೆಯ ಅನುಮತಿಯೊಂದಿಗೆ ಇ-ವೇಸ್ಟ್‌ ಸಂಗ್ರಹಕ್ಕೆ ಮುಂದಾಗಿದೆ. ಹೀಗೆ ಸಂಗ್ರಹವಾದ ಇ-ವೇಸ್ಟ್‌ಗಳನ್ನು ಪಾಲಿಕೆಯು ಪಡೆದು ಕೈಗಾರಿಕ ಸಂಸ್ಥೆಗಳಿಗೆ ನೀಡಿ ಮರು ಬಳಕೆಗೆ ಆದ್ಯತೆ ನೀಡಲಿದೆ.

‘ಇ-ಬಿನ್‌’ ವ್ಯವಸ್ಥೆ
ಹಸಿ ಹಾಗೂ ಒಣ ಕಸವನ್ನು ವಿಂಗಡಿಸಿ ತ್ಯಾಜ್ಯ ಸಂಗ್ರಹಿಸುವವರಿಗೆ ನೀಡಲು ಪಾಲಿಕೆ ವ್ಯವಸ್ಥೆ ಕಲ್ಪಿಸಿದೆ. ಆದರೆ ಇ ವೇಸ್ಟ್‌ ನಿರ್ವಹಣೆ ಮಹಾನಗರ ಸಹಿತ ಬೆಳೆಯುತ್ತಿರುವ ಎಲ್ಲ ನಗರಗಳಲ್ಲಿ ಬೃಹತ್‌ ಸಮಸ್ಯೆಯಾಗಿದೆ. ಬಳಕೆ ಮಾಡದ ಎಲೆಕ್ಟ್ರಾನಿಕ್ಸ್‌ನಂತಹ ಸಣ್ಣ ವಸ್ತುಗಳನ್ನು ಗುಜರಿ ವ್ಯಾಪಾರಿಗಳು ಪಡೆಯುವುದು ಕಡಿಮೆ. ಪರಿಣಾಮ ಇ ವೇಸ್ಟ್‌ ಕೂಡ ಕಸದ ತೊಟ್ಟಿ ಸೇರಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ. 

ಇದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಇ-ಬಿನ್‌’ ವ್ಯವಸ್ಥೆಯನ್ನು ಪಾಲಿಕೆ ಆರಂಭಿಸಿತ್ತು. ಇ-ವೇಸ್ಟ್‌ ಗಳು ಇದ್ದರೆ ಜನರು ಪಾಲಿಕೆಯ ಬಿನ್‌ನಲ್ಲಿ ಹಾಕಲು ಅವಕಾಶವಿದೆ. ಆದರೆ, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆದಿರಲಿಲ್ಲ. ಜತೆಗೆ ಎಲೆಕ್ಟ್ರಾನಿಕ್ಸ್‌ ಅಂಗಡಿಗಳಲ್ಲಿರುವ ಇ-ವೇಸ್ಟ್‌ಗಳನ್ನು ಸಂಗ್ರಹಿಸುವ ಪ್ರಾಮಾಣಿಕ ಪ್ರಯತ್ನವೂ ಆಗಿರಲಿಲ್ಲ. ಇದನ್ನು ಮನಗಂಡ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ಇ-ವೇಸ್ಟ್‌ಗಳನ್ನು ಸಂಗ್ರಹಿಸಲು ಅಂಗಡಿಗಳಿಗೆ ಇದೀಗ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ಇದೇ ತಂಡ ನಗರದ ಬೀದಿಯಲ್ಲಿ ಬಡ ವೃದ್ಧೆಯೋರ್ವರಿಗೆ ನೆರವಾಗಿತ್ತು.

ಪ್ರಮಾಣಪತ್ರ
ಮನಪಾ ಪರಿಸರ ಅಭಿಯಂತರ ಮಧು ಅವರ ಅನುಮತಿಯೊಂದಿಗೆ ಕೆನರಾ ಕಾಲೇಜಿನ ಉಪನ್ಯಾಸಕಿ ಪುಷ್ಪಲತಾ ಪ್ರಭು ಅವರ ಸಹಕಾರದೊಂದಿಗೆ ನಗರದ ವಿವಿಧ ಮಾಲ್‌ ಹಾಗೂ ಪ್ರಮುಖ ಎಲೆಕ್ಟ್ರಾನಿಕ್‌ ಅಂಗಡಿಗಳಿಗೆ ವಿದ್ಯಾರ್ಥಿಗಳ ತಂಡ ಭೇಟಿ ನೀಡುತ್ತಿದೆ. ಎಲೆಕ್ಟ್ರಾನಿಕ್‌ ತ್ಯಾಜ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಅದರ ಸಮರ್ಪಕ ವಿಲೇವಾರಿಯ ವಿಧಾನಗಳನ್ನು ಅವರು ತಿಳಿಸುತ್ತಿದ್ದಾರೆ. ಇದಕ್ಕೆ ಕೈ ಜೋಡಿಸುವ ಅಂಗಡಿ ಮಾಲಕರಿಗೆ ಮನಪಾ ಹಾಗೂ ಕೆನರಾ ಕಾಲೇಜು ಸಹಯೋಗದ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ.

Advertisement

ಅಂಗಡಿಗಳಿಗೆ ಭೇಟಿ ನೀಡಿ ಅರಿವು
ಮನೆಯಲ್ಲಿ ಹಾಗೂ ಎಲೆಕ್ಟ್ರಾನಿಕ್‌ ಅಂಗಡಿಗಳಲ್ಲಿ ಹಾಳಾದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಯಾವುದೋ ವಿಶೇಷ ವಿಲೇವಾರಿ ಘಟಕಕ್ಕೆ ತಲುಪಿಸುತ್ತಿಲ್ಲ. ಇದರಿಂದಾಗಿ ಪರಿಸರದ ಮೇಲೆ ಗಂಭೀರ ಪರಿಣಾಮ ಎದುರಾಗುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ನೆಲೆಯಲ್ಲಿ ಕೆನರಾ ಕಾಲೇಜಿನ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಅಂಗಡಿಗಳಿಗೆ ಭೇಟಿ ನೀಡಿ ಇ-ವೇಸ್ಟ್‌ ಸಂಗ್ರಹಿಸಿ ಪಾಲಿಕೆಗೆ ನೀಡುತ್ತಿದೆ.
– ದಿಶಾ ಶೆಟ್ಟಿ ಕಟ್ಲ,ಇ-ವೇಸ್ಟ್‌
ಸಂಗ್ರಹ ಅರಿವು ತಂಡದ ಸಂಘಟಕಿ

ಮನಪಾ ಜತೆಗೆ ವಿದ್ಯಾರ್ಥಿಗಳ ಸಾಥ್‌
ಇ-ವೇಸ್ಟ್‌ ಕುರಿತಂತೆ ಮಂಗಳೂರು ಪಾಲಿಕೆಯು ಜಾಗೃತಿ ಮೂಡಿಸುವ ಕೆಲಸ ನಡೆಸುತ್ತಾ ಬಂದಿದೆ. ಇದಕ್ಕೆ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ಇದೀಗ ಕೈಜೋಡಿಸಿದ್ದಾರೆ. ಅವರೇ ಅಂಗಡಿಗಳಿಗೆ ತೆರಳಿ ಇ-ವೇಸ್ಟ್‌ ಸಂಗ್ರಹಿಸಿ ಪಾಲಿಕೆಗೆ ನೀಡುತ್ತಾರೆ. ಅದನ್ನು ನಾವು ಮರು ಬಳಕೆ ಕುರಿತಂತೆ ಮುಂದಿನ ಹಂತಕ್ಕೆ ತಲುಪಿಸುತ್ತೇವೆ.
– ಮಧು, ಪರಿಸರ
ಅಭಿಯಂತರರು ಮನಪಾ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next