Advertisement

ವಿದ್ಯಾಭ್ಯಾಸಕ್ಕೆಂದು ಪ್ರತಿದಿನ ಆರು ಕಿ.ಮೀ. ನಡೆಯುತ್ತಿದ್ದ ವೀರ ಸೇನಾನಿ

05:44 PM Jun 26, 2020 | mahesh |

ಭಾರತೀಯ ಸೈನಿಕರ ತ್ಯಾಗ, ಬಲಿದಾನ ಎಂದೆಂದಿಗೂ ಸದಾ ಅಮರ. ಸಾಹಸಮಯ ಬದುಕಿನಿಂದ ದೇಶಕ್ಕಾಗಿ ಹುತಾತ್ಮರಾದವರ ಸೇವೆ ಅನನ್ಯ. ಇಂತಹ ವೀರ ಸೈನಿಕರ ಸಾಲಿಗೆ ಕರ್ನಾಟಕದ ವೀರ ಯೋಧ ಹನುಮಂತಪ್ಪ ಕೊಪ್ಪದ ಅವರು ಕೂಡ ಸೇರುತ್ತಾರೆ. ಇವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿ. ಅವರ ಬದುಕಿನ ಕಥೆಗಳನ್ನು ಒಂದೊಂದಾಗಿ ಕೇಳುತ್ತಾ ಹೋದರೆ ನಮ್ಮಲ್ಲೊಂದು ಶಕ್ತಿ ಎಚ್ಚರಗೊಳ್ಳುತ್ತದೆ.

Advertisement

ಲ್ಯಾನ್ಸ್‌ ನಾಯ್ಕ ಹನುಮಂತಪ್ಪ ಕೊಪ್ಪದ ಭೂಮಿಯ ಮೇಲಿನ ಅತೀ ಕಠಿನ ಯುದ್ಧ ಭೂಮಿಯಾದ ಸಿಯಾಚಿನ್‌ ಕಣಿವೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಪ್ರದೇಶದಲ್ಲಿ ಸುಮಾರು ಮೈನಸ್‌ 55 ಡಿಗ್ರಿ ಸೆಲ್ಸಿಯಸ್‌ನಲ್ಲಿ ವಾತಾವರಣ ಇದ್ದು, ಸದಾ ಹಿಮದ ಮಳೆ ಸುರಿಯುತ್ತಿರುತ್ತದೆ. ಹಿಮಗಡ್ಡೆಗಳು ಒಮ್ಮೊಮ್ಮೆ ಕರಗಿ ನೀರಾಗುತ್ತವೆ. ಮೈಗೆ ಹೊದ್ದ ಬಟ್ಟೆಗಳಿಂದ ಕೈಯನ್ನು ಹೊರಹಾಕಿದರೆ ಹೆಪ್ಪುಗಟ್ಟುವಷ್ಟು ಚಳಿ ಇರುತ್ತದೆ. ಇಂತಹ ಭಯಂಕರ, ಅಪಾಯಕಾರಿ ಯುದ್ಧಭೂಮಿಯಲ್ಲಿ ಕರ್ತವ್ಯ ನಿಷ್ಠೆಯಿಂದ ತಾಯಿ ಭಾರತಾಂಬೆಯ ಸೇವೆ ಮಾಡುತ್ತಿದ್ದರು ಹನುಮಂತಪ್ಪ ಕೊಪ್ಪದ.

ವಿಧಿವಶಾತ್‌ ಆ ಒಂದು ದಿನ!
ಸಿಯಾಚಿನ್‌ನ ಸುಮಾರು 35 ಅಡಿಗಳಷ್ಟು ಹಿಮದ ಕೆಳಗೆ ಹನುಮಂತಪ್ಪ ಕೊಪ್ಪದ ಸಹಿತ ಎಂಟು ವೀರ ಯೋಧರು ಸಿಲುಕಿಕೊಂಡುಬಿಟ್ಟಿದ್ದರು. ವಾರದ ಬಳಿಕ ಸೇನೆಗೆ ಈ ವಿಷಯ ತಿಳಿಯಿತು. ಸೇನೆಯ ಅಧಿಕಾರಿಗಳು 30 ಅಡಿ ಹಿಮದಿಂದ ತೆಗೆದು ಅವರನ್ನು ಆಸ್ಪತ್ರೆಗೆ ಸೇರಿಸಿದರು. ಹಿಮದಲ್ಲಿ ವಾರಗಳ ಕಾಲ ಬದುಕಿದ್ದ ಹನುಮಂತಪ್ಪ ಕೊಪ್ಪದ ಅವರ ಸುದ್ದಿ ತಿಳಿದ ತತ್‌ಕ್ಷಣವೇ ಇಡೀ ದೇಶವೇ ಮೂಗಿನ ಮೇಲೆ ಬೆರಳಿಟ್ಟಿತ್ತು. ಅವರ ಜೀವ ಉಳಿವಿಗೆ ಇಡೀ ದೇಶವೇ ಪ್ರಾರ್ಥಿಸಿತು. ದೇವಸ್ಥಾನಗಳಲ್ಲಿ ಪೂಜೆ, ಹೋಮ ಹವನಗಳು ನಡೆದವು, ಚರ್ಚ್‌, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಕೈಗೊಂಡರು. ಆದರೆ ವೀರಯೋಧ ವಾರದ ಬಳಿಕ ಜೀವನ್ಮರಣದ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದರು. ಆಗ ಇಡೀ ದೇಶವೇ ಕಂಬನಿ ಮಿಡಿದಿತ್ತು.

ವೀರಯೋಧ ಹನುಮಂತಪ್ಪ ಕೊಪ್ಪದ ಅವರು ಸಿಯಾಚಿನ್‌ನಲ್ಲಿ ಮಾತ್ರ ಹೋರಾಟ ಮಾಡಿದವರಲ್ಲ, ಜತೆಗೆ ಬದುಕು ಎಂಬ ಯುದ್ಧರಂಗದಲ್ಲಿ ಕೂಡ ಹೋರಾಡಿದ‌ವರು. ಬಡತನ ಎಂಬ ಯಜ್ಞದಲ್ಲಿ ಬೆಂದವರು. ಹಸಿವು, ನೋವುಗಳನ್ನು ಉಂಡವರು. ಇವುಗಳ ಮಧ್ಯೆ ಅವರಲ್ಲಿದ್ದ ದೇಶಸೇವೆಯ ಉತ್ಸಾಹ ಎಂದಿಗೂ ಬತ್ತಿರಲಿಲ್ಲ.

ಆರು ಕಿ.ಮೀ. ಶಾಲೆಗೆ ನಡೆದೇ ಹೋಗುತ್ತಿದ್ದ ಬಾಲಕ
ಹನುಮಂತಪ್ಪ ಕೊಪ್ಪದ ಕರ್ನಾಟಕದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟ್ಟದೂರಿನವರು. ತಮ್ಮ ಆರು ಕಿ.ಮೀ. ದೂರದಲ್ಲಿರುವ ಅರಳಿಕಟ್ಟಿ ಎಂಬಲ್ಲಿದ್ದ ಪ್ರಾಥಮಿಕ ಶಾಲೆಗೆ ಪ್ರತಿದಿನವೂ ಬರಿಗಾಲಿನಲ್ಲಿ ನಡದೇ ಹೋಗುತ್ತಿದ್ದರು.ಇವರ ಜ್ಞಾನ ಹಸವಿನ
ತುಡಿತಕ್ಕೆ ಇದೇ ಸಾಕ್ಷಿ.

Advertisement

ಕೃಷಿಗೂ ಎತ್ತಿದ ಕೈ
ಹನುಮಂತಪ್ಪ ಕೊಪ್ಪದ ಅವರದು ಕೃಷಿಕ ಕುಟುಂಬ. ಜೀವನಾಧಾರಕ್ಕೆ ಮೂರು ಎಕ್ರೆ ಜಮೀನಿನಲ್ಲಿ ಬೇಸಾಯವನ್ನೇ ಅಲವಂಬಿಸಿದ್ದರು. ಹನುಮಂತಪ್ಪ ಅವರು ತಮ್ಮ ರಜೆಯ ದಿನಗಳಲ್ಲಿ ಊರಿಗೆ ಬಂದಾಗ ಅವರು ಕೂಡ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ದೇಶಸೇವೆಗೂ ಸಿದ್ಧ, ಭೂ ತಾಯಿಯ ಸೇವೆಗೂ ಬದ್ಧರಂತೆ ಸಿಯಾಚಿನ್‌ ಸೇನಾನಿ ಬದುಕಿದ್ದರು.

ನೇಮಕಾತಿಯಲ್ಲಿ ಮೂರು ಬಾರಿ ತಿರಸ್ಕೃತ
ಹನುಮಂತ ಕೊಪ್ಪದ ಅವರು ಸೇನೆಗೆ ಸೇರುವುದು ಜೀವಮಾನದ ಸಾಧನೆಯಾಗಿತ್ತು. ಅದಕ್ಕೆ ಅವರು ನಿರಂತರ ಪರಿಶ್ರಮಪಟ್ಟಿದ್ದರು. ಆದರೆ ಮೂರು ಬಾರಿ ಸೇನಾ ನೇಮಕಾತಿಯಲ್ಲಿ ತಿರಸ್ಕೃತರಾಗಿದ್ದರು. ಬೆಳಗಾವಿ, ಧಾರವಾಡ ಮತ್ತು ಗದಗದಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಭಾಗವಹಿಸಿದ್ದ ಕೊಪ್ಪದ ಅವರು ತಿರಸ್ಕೃತರಾಗಿದ್ದರೂ ಅಚಲ ನಿಷ್ಠೆ, ದೃಢ ನಿಶ್ಚಯದಿಂದ ಮತ್ತೂಮ್ಮೆ ಪ್ರಯತ್ನಿಸಿದ ಅವರು 2002ರಲ್ಲಿ ನಡೆದ ಮದ್ರಾಸ್‌ನ 19ನೇ ರೆಜಿಮೆಂಟ್‌ಗೆ
ಸೇರ್ಪಡೆಯಾದರು. ಇವರ ಈ ಅಚಲ ಗುರಿ ಒಂದೇ ಸೋಲಿಗೆ ಕಂಗೆಡುವ ನಮಗೆ ಸ್ಫೂರ್ತಿಯಾಗಬಲ್ಲದು.

ಕಠಿನ ಪ್ರದೇಶದಲ್ಲಿಯೇ ಕರ್ತವ್ಯ
2002ರಲ್ಲಿ 19ನೇ ಮದ್ರಾಸ್‌ ರೆಜಿಮೆಂಟ್‌ನಿಗೆ ಸೇರಿದ ಹನುಮಂತಪ್ಪ ಕೊಪ್ಪದ ಅವರು ಮೊದಲಿನಿಂದಲೂ ಯುದ್ಧಭೂಮಿಯ ಕಠಿನ ಪ್ರದೇಶಗಳಲ್ಲಿಯೇ ಸೇವೆ ಸಲ್ಲಿಸಿದವರು. ಜಮ್ಮು ಮತ್ತು ಕಾಶ್ಮೀರದ ಮಹೋರ್‌ನಲ್ಲಿ ಮೂರು ವರ್ಷ, 54 ರಾಷ್ಟ್ರೀಯ ರೈಫ‌ಲ್ಸ್‌ನಲ್ಲಿ ಮೂರು ವರ್ಷ, ಎನ್‌ಡಿಫ್ಡಿ, ಯುಎಲ್‌ಎಫ್ಎ ಸಹಿತವಾಗಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಕರ್ತವ್ಯ ನಿರ್ವಹಿಸಿದ ಬಹುತೇಕ ಪ್ರದೇಶಗಳು ಕಠಿನ ಮತ್ತು ಅಪಾಯ, ಸೂಕ್ಷ್ಮ ಪ್ರದೇಶಗಳಾಗಿದ್ದವು. ಎಂತಹ ಕಠಿನ ಪ್ರದೇಶವಾದರೂ ದೇಶಸೇವೆಗೆ ಸದಾಸಿದ್ಧರಾಗಿದ್ದರು.

ದೈವಬಲವೇ ಸಾಕ್ಷಿ !
ವೀರ ಸೇನಾನಿ ವಾರಗಳ ಕಾಲ ಸಿಯಾಚಿನ್‌ನ ಹಿಮದ ಅಡಿಯಲ್ಲಿ ಸಿಲುಕಿ ಬದುಕಿದ್ದರು. ಇದು ಎಲ್ಲರಿಗೂ ವಿಸ್ಮಯವಾಗಿತ್ತು. ಅವರ ಈ ಇಚ್ಛಾಶಕ್ತಿಗೆ ಅವರ ಹೆಸರಿನ ದೈವಬಲವೇ ಸಾಕ್ಷಿ ಎಂದು ಅವರ ತಂದೆ ಹೇಳಿದರೆ, ಅವರು ಯೋಗದಲ್ಲಿ ಪರಿಣಿತರಿದ್ದರು ಎಂದು ಅಧಿಕಾರಿಗಳು ತಿಳಿಸುತ್ತಾರೆ. ಇವೆರಡೂ ಅವರನ್ನು ವಾರಗಳ ಕಾಲ ಬದುಕಿಸಿತ್ತು. ಇವರ ಜತೆಗಿನ ಎಂಟು ಯೋಧರು ಹಿಮದ ಅಡಿಯಲ್ಲಿ ಸಿಲುಕಿ ಹುತಾತ್ಮರಾಗಿದ್ದರೂ ಹನುಮಂತಪ್ಪ ನವರು ಮಾತ್ರ ಅಲ್ಲಿ ಬದುಕುಳಿದಿದ್ದರು.

ಸೇನಾ ಪದಕ ನೀಡಿ ಗೌರವ
ಹನುಮಂತಪ್ಪ ಕೊಪ್ಪದ ಅವರ ಬಲಿದಾನವನ್ನು ಪರಿಗಣಿಸಿ ಸರಕಾರವೂ ಅವರಿಗೆ ಮರಣೋತ್ತರ ಸೇನಾ ಪದಕವನ್ನು ನೀಡಿ ಗೌರವಿಸಿದೆ. ಹೊಸದಿಲ್ಲಿಯಲ್ಲಿ ನಡೆದ ಸೇನಾ ದಿನಾಚರಣೆಯಲ್ಲಿ ಹನುಮಂತಪ್ಪ ಪತ್ನಿ ಮಹಾದೇವಿ ಅವರಿಗೆ ಆಗಿನ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಸೇನಾ ಪದಕ ನೀಡಿ ಗೌರವಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next