Advertisement

ನಾಗನಿಗೇಕೆ ಪೂಜೆ? ಭಾವ ಬಂಧ ಬೆಸೆಯುವ ನಾಗರಪಂಚಮಿ

06:05 AM Jul 26, 2017 | Harsha Rao |

ನಾಳೆ ನಾಗರ ಪಂಚಮಿಯ ಸಡಗರ. ಹಾವುಗಳು ಅಂಕುಡೊಂಕಾಗಿ ಸಾಗುವಂತೆ ಮಹಿಳೆಯ ಮನಸ್ಸು ಕೂಡ ಹಾಗೆಯೇ ಚಲಿಸುವಂಥದ್ದು. ಅದಕ್ಕೇ ಸ್ತ್ರೀಗೆ ನಾಗನ ಮೇಲೆ ವಿಶೇಷ ಭಕ್ತಿ… 

Advertisement

ಆಷಾಡ ಮಾಸ ಕಳೆದು ಶ್ರಾವಣ ಬಂತೆಂದರೆ ಹಬ್ಬಗಳದ್ದೇ ಸಾಲು  ಸಾಲು. ಅದರಲ್ಲಿ ಆರಂಭದ ಸಂಭ್ರಮವೇ “ನಾಗರಪಂಚಮಿ’ಯದ್ದು. ಕುಟುಂಬದ ನೆಮ್ಮದಿ, ಆರೋಗ್ಯ, ಸಂತಾನ ಲಾಭ ಮೊದಲಾದ ಉದ್ದೇಶದಿಂದ ನಾಗರಪಂಚಮಿಗೆ ಸ್ತ್ರೀಯರು ಹೆಚ್ಚು ಆದ್ಯತೆ ನೀಡುತ್ತಾರೆ. ವರ್ಷ ಋತುವಿನ ಶ್ರಾವಣ ಮಾಸದ ತುಂತುರು ಹನಿಯಿಂದ ಭೂಮಿ ತಾಯಿಯು ತನ್ನ  ದಾಹವನ್ನು ತೀರಿಸಿಕೊಂಡು, ಮೈ ತುಂಬಾ ಹಸಿರನ್ನುಟ್ಟ ಸುಂದರಿಯಂತೆ ಈ  ಹಬ್ಬಕ್ಕೆ ಸಿಂಗಾರಗೊಂಡಿರುತ್ತದೆ.

ಹಾವುಗಳು ಅಂಕುಡೊಂಕಾಗಿ ಸಾಗುವಂತೆ ಮಹಿಳೆಯ ಮನಸ್ಸು ಕೂಡ ಹಾಗೆಯೇ ಚಲಿಸುವಂಥದ್ದು. ಅದಕ್ಕೇ ಆಕೆಗೆ ನಾಗನ ಮೇಲೆ ಭಕ್ತಿಯೂ ಅಧಿಕ. ಅಂದು ನಾಗನ ಆರಾಧನೆಗೆ ಹುತ್ತದ ಮಣ್ಣು, ಹುಲಿಕಡ್ಡಿ, ಹುಣಸೆಕಾಯಿ, ಅರಳು, ತಂಬಿಟ್ಟು, ಅಕ್ಕಿಹಿಟ್ಟು, ಎಳ್ಳುಂಡೆ ಮುಂತಾದುವುಗಳ ತಯಾರಿ ಜೋರಾಗಿಯೇ ಸಾಗುತ್ತದೆ. ಹುಲಿಕಡ್ಡಿಯಿಂದ ಚಿಕ್ಕದಾಗಿ ಚಪ್ಪರವನ್ನು ನಿರ್ಮಿಸಿ, ಅದರಡಿಯಲ್ಲಿ ಹುತ್ತದ ಮಣ್ಣಿನಿಂದ ತಯಾರಿಸಿದಂಥ ನಾಗನನ್ನು ಪ್ರತಿಷ್ಠಾಪಿಸಿ, ಹಸಿ ಅಕ್ಕಿಹಿಟ್ಟಿನಿಂದ ಸಿದ್ಧಪಡಿಸಿದ ತೊಟ್ಟಿಲಿನಂಥ ಬಟ್ಟಲನ್ನು ಇಟ್ಟು ಅರಿಶಿನದಲ್ಲಿ ನೆನೆಸಿ ತೆಗೆದಂಥ ಹಳದಿ ಗೆಜ್ಜೆ ವಸ್ತ್ರಗಳನ್ನು ನಾಗಪ್ಪನಿಗೆ ಅರ್ಪಿಸುವುದು ವಾಡಿಕೆ. ಇದನ್ನು ಚಾಚೂ ತಪ್ಪದೇ ಮಾಡುವ ಕಾಯಕ ಮನೆಯೊಡತಿಯದ್ದು. 

ನಾಗರಪಂಚಮಿ ಬಾಂಧವ್ಯವನ್ನೂ ಬೆಸೆಯುವ ಹಬ್ಬ. ಪ್ರೀತಿಯ ತಂಗಿಗೆ ಅಣ್ಣನು ಉಡುಗೊರೆ ನೀಡಲು ಇದೊಂದು ಸುಸಂದರ್ಭ. ಅಣ್ಣ ತನ್ನ ಕೈಯಲ್ಲಾದ ಉಡುಗೊರೆಯನ್ನು ಕೊಟ್ಟು, ತಂಗಿಯ ಮೊಗದ ಖುಷಿಯಲ್ಲಿ ಕಂಡು ಹಿಗ್ಗುತ್ತಾನೆ. ಇಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗುವುದು ಈ ಉಡುಗೊರೆಯ ವಿಶೇಷ.

ಸರ್ಪರಾಜನೇ ಸಂಜೀವಿನಿ ತಂದ!
ಹಿಂದೆ ಪಾಂಡ್ಯ ದೇಶದಲ್ಲಿ ವೇದಶರ್ಮನೆಂಬ ಬ್ರಾಹ್ಮಣನಿದ್ದನು. ಆತನಿಗೆ ಎಂಟು ಗಂಡುಮಕ್ಕಳು ಹಾಗೂ ಒಬ್ಬಳೇ ಮಗಳು. ಅವಳ ಹೆಸರು ಸುಶೀಲೆ. ಒಮ್ಮೆ ಗರುಡ ರಾಜನಿಗೆ ಹೆದರಿ ನಾಗರ ಹಾವೊಂದು ಸುಶೀಲೆಯ ಮನೆಯನ್ನು ಹೊಕ್ಕಿತು. ಸದ್ಗುಣೆಯಾದ ಸುಶೀಲೆ ಆ ಹಾವನ್ನು ಸಲಹಿದಳು. ಸಂತುಷ್ಟಗೊಂಡ ಹಾವು ಪ್ರತಿದಿನ ಒಂದು ತೂಕ ಚಿನ್ನ ತಂದುಕೊಡುತ್ತಿತ್ತು. ಇದರಿಂದ ಮನೆಯ ಬಡತನ ನಿರ್ಮೂಲವಾಯಿತು. ದುರದೃಷ್ಟವಶಾತ್‌ ಸುಶೀಲೆಯ ಅಣ್ಣಂದಿರಿಗೆ ಹಾವಿನ ವಿಚಾರ ತಿಳಿದು, ಅದನ್ನು ಕೊಲ್ಲಲು ಮುಂದಾಗುತ್ತಾರೆ. ರೋಷಗೊಂಡ ಹಾವು ಎಲ್ಲರನ್ನೂ ಕಚ್ಚಿಬಿಡುತ್ತದೆ.

Advertisement

ಇದರಿಂದ ನೊಂದ ಸುಶೀಲೆ, ಶ್ರೀಮನ್ನಾರಾಯಣನ ಮೊರೆ ಹೋಗುತ್ತಾಳೆ. “ಸರ್ಪರಾಜನೇ, ಸಂಜೀವಿನಿ ರಸ ತಂದು ಬ್ರಾಹ್ಮಣನ ಮಕ್ಕಳನ್ನು ಬದುಕಿಸು’ ಎಂದು ನಾರಾಯಣನ ಸೂಚನೆ ಮೇರೆಗೆ ನಾಗರಾಜನು ಬ್ರಾಹ್ಮಣನ ಪುತ್ರರನ್ನು ಬದುಕಿಸಿ, ಆ ಕನ್ಯೆಗೆ ಅಪರಿಮಿತ ಸಂಪತ್ತು ಕೊಟ್ಟನಂತೆ. ಅಂದಿನಿಂದಲೂ ನಾಗಪೂಜೆಗೆ ವಿಶೇಷ ಮಹತ್ವ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿವಸ ನಾಗ ಪೂಜೆ ಮಾಡಿದರೆ ಸರ್ವಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

– ಭಾಗ್ಯ ನಂಜುಂಡಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next