Advertisement

ತನು-ಮನ ಸೆಳೆಯುವ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ

01:51 PM Mar 21, 2021 | ಗಣೇಶ್ ಹಿರೇಮಠ |

ಅದು‌  2018. ಹೈದರಾಬಾದ್ ನಲ್ಲಿದ್ದ ನಾನು ಸಹದ್ಯೋಗಿಯ ಮದುವೆಗೆಂದು ಧಾರವಾಡ ಜಿಲ್ಲೆಯ‌ ಪುಟ್ಟ ಹಳ್ಳಿಯೊಂದಕ್ಕೆ ಆಗಮಿಸಿದ್ದೆ. ಮದುವೆ ಸಂಭ್ರಮದಲ್ಲಿ ಸಮಯ ಕಳೆದು ಹೋಗಿದ್ದೆ ಗೊತ್ತಾಗಿರಲಿಲ್ಲ. ಬಹು ದಿನಗಳ ನಂತರ ಮದುವೆ ನೆಪದಲ್ಲಿ‌ ಸೇರಿದ ಸ್ನೇಹಿತರೆಲ್ಲರು ಕಾಲೇಜಿನ ದಿನಗಳು, ಕ್ಲಾಸ್ ರೂಮಿನ ತರಲೆ- ತುಂಟಾಟಗಳನ್ನ ಮೆಲುಕು ಹಾಕಿದೇವು.

Advertisement

ಹೈದರಾಬಾದ್ ಗೆ ವಾಪಸ್ ತೆರಳಲು  ರಾತ್ರಿ 10 ಗಂಟೆಗೆ ಬಸ್ ಟಿಕೆಟ್ ಬುಕ್ ಕಾಯ್ದಿರಿಸಲಾಗಿತ್ತು.ಕೈಯಲ್ಲಿ ಇನ್ನೂ ನಾಲ್ಕೈದು ಗಂಟೆ ಸಮಯ ಉಳಿದಿತ್ತು. ಆಗ ನೆನಪಾಗಿದ್ದೆ ಅಣ್ಣಿಗೇರಿ. ಸ್ನೇಹಿತರೆಲ್ಲ ಸೇರಿ ಅರ್ಧ ಗಂಟೆಯಲ್ಲಿ ಅಣ್ಣಿಗೇರಿ ಊರಿನಲ್ಲಿ ಪ್ರತ್ಯಕ್ಷರಾಗಿದ್ದೇವು.

ಗದಗ ಹಾಗೂ ಹುಬ್ಬಳ್ಳಿ ಮಾರ್ಗ ಮಧ್ಯೆದಲ್ಲಿರುವ ಈ ಊರು ಐತಿಹಾಸಿಕವಾಗಿ ತುಂಬಾ ಮಹತ್ವ ಪಡೆದಿದೆ. ಹಿಂದೊಮ್ಮೆ 638 ವರ್ಷಗಳ ಹಿಂದಿನ ರಾಶಿಗಟ್ಟಲೆ ತಲೆ ಬುರುಡೆಗಳು ಪತ್ತೆಯಾಗಿ ಅಣ್ಣಿಗೇರಿ ಹೆಸರು ರಾಜ್ಯಾದ್ಯಂತ ಪ್ರಚಾರವಾಗಿತ್ತು. ಇತಿಹಾಸಕ್ಕೂ ಈ ಊರಿಗೆ ನಂಟು ಇರುವುದು ನನಗೆ ಗೊತ್ತಾಗಿದ್ದೆ ಆವಾಗಲೆ.

ಬಸ್ ನಿಲ್ದಾಣದಿಂದ ನೇರವಾಗಿ ನಾವು ತೆರಳಿದ್ದು ಅಣ್ಣಿಗೇರಿಯಲ್ಲಿರುವ ಪ್ರಾಚೀನ ಕಾಲದ ಅಮೃತೇಶ್ವರ ದೇವಸ್ಥಾನಕ್ಕೆ. ನಾವು ಅಲ್ಲಿ ಭೇಟಿ ನೀಡಿ ಮೂರು ವರ್ಷಗಳ ಕಳೆದಿದ್ದರೂ ಇಂದಿಗೂ ಆ ದೇವಾಲದಯ ಸುಂದರ ನೋಟ ಇಂದಿಗೂ ಕಣ್ಣಿಗೆ ಕಟ್ಟಿಂದತಿದೆ.

Advertisement

ಅಮೃತೇಶ್ವರ ದೇವಸ್ಥಾನವು ಕಲ್ಯಾಣದ ಚಾಲುಕ್ಯರು ನಿರ್ಮಿಸಿದ ಸುಂದರ ಕಪ್ಪು ಕಲ್ಲಿನ ದೇವಾಲಯವಾಗಿದೆ. ಈ ದೇವಸ್ಥಾನದ ಮುಖ್ಯ ದೇವರು ಶಿವ. ಅಣ್ಣಿಗೇರಿ ಪಶ್ಚಿಮ ಚಾಲುಕ್ಯರ ಸಾಮ್ರಾಜ್ಯದ ಪ್ರಮುಖ ಭಾಗದ ಐತಿಹಾಸಿಕ ಪಟ್ಟಣವಾಗಿತ್ತು, ಹೊಯ್ಸಳರು, ಯಾದವರು ಆಳ್ವಿಕೆ ನಡೆಸಿದ ಕುರುಹುಗಳು ಇಲ್ಲಿವೆ.

1050 ರಲ್ಲಿ ಕಟ್ಟಲಾದ ಅಮೃತೇಶ್ವರ ದೇವಾಲಯ ಕಲ್ಯಾಣದ ಚಾಲುಕ್ಯರ ವಾಸ್ತುಶಿಲ್ಪದ ಉತ್ತಮ ಉದಾಹರಣೆಯಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಸ್ಥಾನವು 76 ಕಂಬಗಳನ್ನು ಹೊಂದಿದೆ. ದೇವಾಲಯದ ಗೋಡೆಗಳು ಪೌರಾಣಿಕ ಚಿತ್ರಣಗಳ ಕೆತ್ತನೆಗಳನ್ನು ಒಳಗೊಂಡಿದೆ. ಈ ದೇವಾಲಯವು ಇಟಗಿಯಲ್ಲಿರುವ ಮಹಾದೇವ ದೇವಸ್ಥಾನದ ನಂತರದ ರಚನೆಗಳಿಗೆ ಮಾದರಿಯಾಗಿದೆ.

ಅಮರಶಿಲ್ಪಿ ಜಕಣಾಚಾರಿಯವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ.  ಬೇಲೂರು ಹಾಗೂ ಹಳೇಬೀಡು, ಲಕ್ಷ್ಮೇಶ್ವರದ ಸೋಮೇಶ್ವರ ಸೇರಿದಂತೆ ಮುಂತಾದ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಅವರ ಉಳಿ ಏಟಿನಲ್ಲಿ ಸುಂದರವಾಗಿ ರೂಪಗೊಂಡಿರುವ ದೇವಸ್ಥಾನಗಳ ಪೈಕಿ ಅಣ್ಣಿಗೇರಿ ಅಮೃತಲಿಂಗೇಶ್ವರ ದೇವಾಲಯವೂ ಒಂದು.

ಕಲಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು.

1157ರಲ್ಲಿ ಕಲಚೂರಿ ವಂಶದ 2ನೇ ಬಿಜ್ಜಳನು ಬಸವಕಲ್ಯಾಣವನ್ನು ವಶಪಡಿಸಿಕೊಂಡಾಗ ಚಾಲುಕ್ಯರು ಅಲ್ಲಿಂದ ಅಣ್ಣಿಗೇರಿಗೆ ತಮ್ಮ ರಾಜಧಾನಿಯನ್ನು ಬದಲಿಸಿದರು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ.

ಸುಮಾರು ಎರಡು ಗಂಟೆಗಳ ಕಾಲ‌ ದೇವಸ್ಥಾನ ‌ಸುತ್ತಾಡಿದೇವು.‌ ಕಪ್ಪು ಶಿಲೆಯಲ್ಲಿ ಕೊರೆದ ಶಿಲ್ಪ ‌ಕಲೆಗಳು ನಮ್ಮನ್ನ ಮೂಕ ವಿಸ್ಮೀತರನ್ನಾಗಿಸಿದವು. ದೇವಸ್ಥಾನದಿಂದ‌ ಹೊರಬಂದು ಹೈದರಾಬಾದ್ ಬಸ್ ನಲ್ಲಿ ಕುಳಿತಾಗಲೂ ನನ್ನ ಮನಸ್ಸು ಅಮೃತೇಶ್ವರ ದೇವಸ್ಥಾನದಲ್ಲಿಯೇ ಅಲೆಯುತ್ತಿತ್ತು.

ತಲುಪುದು ಹೇಗೆ ?

ಅಣ್ಣಿಗೇರಿ ಹುಬ್ಬಳ್ಳಿಗೆ ತುಂಬಾ ಹತ್ತಿರದಲ್ಲಿದೆ. ಹುಬ್ಬಳ್ಳಿ ಕರ್ನಾಟಕದ ಪ್ರಮುಖ ನಗರವಾಗಿದ್ದು, ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ ಹೊಂದಿದೆ. ಹುಬ್ಬಳ್ಳಿಯಿಂದ 35 ಕಿ.ಮೀ ದೂರದಲ್ಲಿರುವ ಅಣ್ಣಿಗೇರಿಗೆ ಸಾಕಷ್ಟು ಬಸ್ ಸೌಲಭ್ಯ ಕೂಡ ಇದೆ. ಇತ್ತ ಗದಗನಿಂದಲೂ ಅಣ್ಣಿಗೇರಿಗೆ ತಲುಪಬಹುದು.

Advertisement

Udayavani is now on Telegram. Click here to join our channel and stay updated with the latest news.

Next