Advertisement

ಜಲಪಾನಕ್ಕೊಂದು ಕೈಗನ್ನಡಿ ಆಯುರ್ವೇದದ ಸರಳ ಸೂತ್ರ 

12:30 AM Nov 04, 2018 | Karthik A |

ಪ್ರತಿಯೊಬ್ಬ ಮನುಷ್ಯನು ದಿನಕ್ಕಿಂತಿಷ್ಟು ನೀರು ಕುಡಿಯಲೇಬೇಕು ಎಂದು ಯಾವುದೇ ನಿಯಮವಿಲ್ಲ. 
ಪ್ರತಿ ಯೊಬ್ಬ ಮನುಷ್ಯನ ದೇಹ ಪ್ರಕೃತಿ ಹಾಗೂ ಸದ್ಯದ ದೇಹದ ಸ್ಥಿತಿಗೆ ಅನುಗುಣವಾಗಿ ನೀರಿನ ಅವಶ್ಯಕತೆ ವಿಭಿನ್ನವಾಗಿರುತ್ತದೆ. 

Advertisement

ಜೀವನಂ ತರ್ಪಣಂ ಹೃದ್ಯಂ ಹ್ಲಾದಿ ಬುದ್ಧಿ ಪ್ರಬೋಧನಮ…| ತನ್ವವ್ಯಕ್ತರಸಂ ಮೃಷ್ಟಂ ಶೀತಂ ಲಘÌಮೃತೋ ಪಮಮ…|| 
(ಅಷ್ಟಾಂಗ ಹೃದಯ ಸೂತ್ರ 5)
ಜಲ, ಅಂಬು, ಉದಕ ಆದಿಗಳು ಸಂಸ್ಕೃತದಲ್ಲಿ ನೀರಿಗೆ ಇರುವ ಹೆಸರು. ನೀರು ನಮ್ಮ ದಿನನಿತ್ಯ ಜೀವನದ ಒಂದು ಅವಿಭಾಜ್ಯ ಅಂಗ. ನೀರು ಸ್ನಾನ ಸಂಧ್ಯಾದಿ ಕರ್ಮಗಳಿಗಾಗಲಿ, ಬಟ್ಟೆ ಪಾತ್ರೆಗಳ ಶುಚಿಗಾಗಲಿ ಬೇಕೆ ಬೇಕು. ನಮ್ಮ ದೇಹಪಾಲನೆಗಂತೂ ನೀರು ಅತ್ಯಾವಶ್ಯಕ. ನಾವು ಆಹಾರವಿಲ್ಲದೆ ಒಂದೆರಡು ದಿನ ಬದುಕ ಬಲ್ಲೆವೇನೋ ಆದರೆ ನೀರಿಲ್ಲದೆ ಬದುಕುವುದು ಕಷ್ಟಸಾಧ್ಯ. ಮನುಷ್ಯನಿಗೆ ಮಾತ್ರವಲ್ಲ ನೀರು ಪ್ರಾಣಿಪಕ್ಷಿಗಳ, ಗಿಡಮರಗಳ ಉಳಿವಿಗೂ ಬೇಕಾದದ್ದು. ಆದ್ದರಿಂದ ಆಯುರ್ವೇದ ಗ್ರಂಥಗಳಲ್ಲಿ ಜಲವು ಅಮೃತ ತುಲ್ಯವಾದದ್ದು ಎಂದು ಉಲ್ಲೇಖೀಸಲಾಗಿದೆ.

ನೀರಿನ ಸೇವನೆಯ ಕ್ರಮದ ಬಗ್ಗೆ ತಿಳಿಯುವು ದಾದರೆ ಆಯುರ್ವೇದ ಹೇಳುವುದೇನು ನೋಡೋಣ. ನಮ್ಮ ದೇಹದ ಶೇ.65 ಭಾಗವು ನೀರಿನಿಂದ ಕೂಡಿದೆ ಎಂದು ಆಧುನಿಕ ವಿಜ್ಞಾನ ತಿಳಿಸುತ್ತದೆ. ಈ ಪ್ರಮಾಣವನ್ನು ಸಮತೋಲಿಸಿ ಅವಶ್ಯ ಕತೆಗೆ ಅನುಗುಣವಾಗಿ ಯಾರು, ಎಷ್ಟು, ಯಾವಾಗ ಜಲಪಾನ ಮಾಡಬೇಕೆಂದು ಆರೋಗ್ಯಾರ್ಥಿಗಳಿಗೆ ಸದಾ ಕಾಡುವ ಪ್ರಶ್ನೆ. ಅದಕ್ಕೆ ನಾವು ಅತಿಮುಖ್ಯವಾಗಿ ತಿಳಿದುಕೊಳ್ಳಬೇಕಾದ ಸಂಗತಿ ಏನೆಂದರೆ ಎಲ್ಲರ ತಲೆಗೆ ಒಂದೇ ಮಂತ್ರ ಸಲ್ಲ ಎಂಬುದು. ಅಂದರೆ ಪ್ರತಿಯೊಬ್ಬ ಮನುಷ್ಯನು ದಿನಕ್ಕಿಂತಿಷ್ಟು ನೀರು ಕುಡಿಯಲೇಬೇಕು ಎಂದು ಯಾವುದೇ ನಿಯಮವಿಲ್ಲ. ಇದಕ್ಕೆ ತರ್ಕ ಇಷ್ಟೆ- ಒಬ್ಬ ಎ.ಸಿ. ರೂಮಿನಲ್ಲಿ ಕುಳಿತು ಕಂಪ್ಯೂಟರ್‌ ಮೇಲೆ ಕೆಲಸ ಮಾಡುವ ವ್ಯಕ್ತಿಗೂ, ಬಿಸಿಲಿನಲ್ಲಿ ಬೆವರು ಸುರಿಸಿ ದುಡಿಯುವ ವ್ಯಕ್ತಿಗೂ, ನಿರಂತರ ಮಾತನಾಡುವ ಅಧ್ಯಾಪಕನಿಗೂ, ಬಿಸಿಲ ನಾಡು(ಬಯಲು ಸೀಮೆ), ಮಲೆನಾಡು, ಕರಾವಳಿ ವಾಸಿಗಳಿಗೂ, ಬೇಸಿಗೆ ಯಲ್ಲೂ, ಮಳೆಗಾಲದಲ್ಲೂ, ಚಳಿಗಾಲದಲ್ಲೂ, ಪ್ರತಿ ಯೊಬ್ಬ ಮನುಷ್ಯನ ದೇಹ ಪ್ರಕೃತಿ ಹಾಗೂ ಸದ್ಯದ ದೇಹದ ಸ್ಥಿತಿಗೆ ಅನುಗುಣವಾಗಿ ನೀರಿನ ಅವಶ್ಯಕತೆ ವಿಭಿನ್ನವಾಗಿರುತ್ತದೆ. ಇಷ್ಟೆಲ್ಲಾ ಪ್ರಮಾಣವನ್ನು ಇಟ್ಟು ಕೊಂಡು ಲೆಕ್ಕಹಾಕಿ ನೀರು ಕುಡಿಯಬೇಕಾ ಎಂದು ಚಿಂತಿಸುವುದು ಬೇಡ. ಅದಕ್ಕೂ ಆಯುರ್ವೇದ ಸುಲಭ ಸೂತ್ರ ನೀಡಿದೆ. ಅದು ಇಷ್ಟೆ- 

ನೀರು ಯಾವಾಗ ಕುಡಿಯ ಬೇಕು?- ನೀರಡಿಕೆಯಾದಾಗ. ಎಷ್ಟು ಕುಡಿಯಬೇಕು?- ಆ ನೀರಡಿಕೆ ನೀಗಿಸಲು ಎಷ್ಟು ಬೇಕೋ ಅಷ್ಟೆ. ಅತಿ ಸರಳವಲ್ಲವೇ! ಸರ್ವೇ ರೋಗಾ ಪಿ ಜಾಯಂತೆ ವೇಗೋದೀರಣ ಧಾರಣೈಃ| (ಅಷ್ಟಾಂಗ ಹೃದಯ ಸೂತ್ರ 4) 13 ಅಧಾರಣೀಯ ವೇಗಗಳು (ಹಸಿವೆ, ನಿದ್ರೆ, ಬಾಯಾರಿಕೆ, ಮಲ, ಮೂತ್ರದ ಕರೆ, ಶ್ರಮ ಶ್ವಾಸ, ಕೆಮ್ಮು, ಕಣ್ಣೀರು, ವಾಂತಿ, ಶುಕ್ರ, ಬಿಕ್ಕಳಿಕೆ, ಸೀನು, ಅಪಾನ ವಾಯು) ಶರೀರವು ನಮ್ಮೆದುರು ತನ್ನ ಬೇಕು ಬೇಡವನ್ನು ವ್ಯಕ್ತಪಡಿಸುವ ರೀತಿ. ಈ ಸೂಕ್ಷ್ಮ ಸಂಕೇತವನ್ನು ನಾವು ಅಥೆìçಸಿಕೊಂಡು ಸಕಾಲದಲ್ಲಿ ಕಾರ್ಯಶೀಲರಾಗಬೇಕು. ಈ ಮೇಲಿನ ಯಾವುದೇ ವೇಗವನ್ನು ಧಾರಣೆ (Suppress) ಅಥವಾ ಉದೀರಣ(Voluntary forceful initiation)ಮಾಡತಕ್ಕದ್ದಲ್ಲ. ಹಾಗೆ ಮಾಡಿದಲ್ಲಿ ರೋಗ ಪ್ರಕ್ರಿಯೆಗೆ ನಾಂದಿ ಬಿದ್ದಂತೆ. ಈ ಅಧಾರಣೀಯ ವೇಗದ ಸಾಲಿನಲ್ಲಿ “ತೃಷ್ಣಾ’ ಬಾಯಾರಿಕೆ ಕೂಡ ಒಂದು. ಆದ್ದರಿಂದ ನೀರನ್ನು ಅತಿಯಾಗಿ ಸೇವಿಸಿದರೆ ಅಗ್ನಿಮಾಂದ್ಯಾದಿ (Digestive/metabolic disorders) ಆಗುವ ಸಾಧ್ಯತೆ ಇರುತ್ತದೆ ಹಾಗೂ ಅತಿ ಕಡಿಮೆ ಸೇವಿಸಿದರೂ ವಾತವ್ಯಾಧಿ, ಅಶ್ಮರಿ ಗಳಂತಹ (Kidney stone) ವ್ಯಾಧಿಗಳಾಗುವ ಸಂಭಾವನೆ ಇರುತ್ತದೆ. 

“ಋತೆ ಶರನ್ನಿದಾಗಾಭ್ಯಾಂ ಪಿಬೇತ್‌ ಸ್ವಸೊ§à ಪಿ ಚ ಅಲ್ಪಶ:’| (ಅಷ್ಟಾಂಗ ಹೃದಯ ಸೂತ್ರ 8) 
ಗ್ರೀಷ್ಮ (ಬೇಸಿಗೆ) ಹಾಗೂ ಶರದ್‌(ಮಳೆಗಾಲದ ನಂತರದ ಎರಡು ತಿಂಗಳು) ಋತುಗಳಲ್ಲಿ ಸಹಜವಾಗಿಯೇ ನೀರಡಿಕೆ ಜಾಸ್ತಿ. ಈ ಎರಡು ಋತುಗಳನ್ನು ಹೊರತುಪಡಿಸಿ ಸ್ವಸ್ಥನಿಗೆ ನೀರಿನ ಅವಶ್ಯಕತೆ ಪ್ರಾಕೃತಿಕವಾಗಿಯೇ ಕಡಿಮೆ ಇರುತ್ತದೆ. 

Advertisement

 ಇನ್ನು ಜನರಲ್ಲಿ ಸಾಮಾನ್ಯವಾಗಿ ಮೂಡುವ ಕೆಲವು ಪ್ರಶ್ನೆಗಳು:

1) ಆಹಾರದೊಂದಿಗೆ ನೀರು ಸೇವಿಸುವುದು ಸೂಕ್ತವೇ? 
ಆಹಾರದ ಮುನ್ನ ನೀರು ಕುಡಿದರೆ ಅಗ್ನಿಮಾಂದ್ಯವಾಗಿ ದೇಹ ಕೃಶವಾಗಬಹುದು. ಅದೇ ಆಹಾರದ ನಂತರ ಸೇವಿಸಿದರೆ ಬೊಜ್ಜಿನ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯವಂತನು ಆಹಾರದೊಂದಿಗೆ ಸ್ವಲ್ಪ ಸ್ವಲ್ಪ ಉಗುರು ಬೆಚ್ಚಗಿನ ನೀರು ಕುಡಿಯುವುದು ಸೂಕ್ತ. 

2) ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಒಳಿತೆ? 
ಬೆಳಗ್ಗೆ ಎದ್ದಾಕ್ಷಣ ನೀರಡಿಕೆಯಾದರೆ ಮಾತ್ರ ನೀರು ಕುಡಿಯಿರಿ. ಕುಡಿಯಲೇಬೇಕೆಂದು ಅನಾವಶ್ಯಕವಾಗಿ ಕುಡಿದರೆ ಅತಿಯಾಗಿ ಹೇರಿದ ನೀರು ಮೂತ್ರಾಂಗಗಳಿಗೆ ತೊಂದರೆಯಾದೀತು ಜೋಕೆ. ನಿಯಮ ಬದ್ಧವಾಗಿ ಉಷಃಪಾನ ಮಾಡಬಹುದು ಆದರೆ ಅದನ್ನು ನುರಿತ ಆಯುರ್ವೇದ ವೈದ್ಯರಲ್ಲಿ ಕೇಳಿ ತಿಳಿಯಿರಿ. 

3) ಈ ಮೇಲೆ ಹೇಳಿದ ಕ್ರಮ ಸರ್ವರಿಗೂ ಅನ್ವಯವೇ? 
 ಬಹಳಷ್ಟು ಮಟ್ಟಿಗೆ ಹೌದು! ಆದರೆ ಜಲೋದರ(Ascites), ಮೂತ್ರಾಂಗದ ವ್ಯಾಧಿ(Kidney disease), ಶೋಥ (oedema/swelling) ಇನ್ನಿತರ ವ್ಯಾಧಿತಾವಸ್ಥೆಯಲ್ಲಿ ವೈದ್ಯಕೀಯ ಸಲಹೆ ಪಡೆದು ಜಲಪಾನದ ಕ್ರಮ ತಿಳಿದುಕೊಳ್ಳತಕ್ಕದ್ದು. 
ನೀರು ಅಮೃತ ತುಲ್ಯವಾದದ್ದು, ಹಿತವಾಗಿ ಸೇವಿಸೋಣ ಮಿತವಾಗಿ ಬಳಸೋಣ.

ಡಾ| ಚಿನ್ಮಯ ಫ‌ಡಕೆ ಎಂ.ಡಿ.

Advertisement

Udayavani is now on Telegram. Click here to join our channel and stay updated with the latest news.

Next