Advertisement

ಸರಣಿ ದುರಂತಗಳ ಕತ್ತಲ ಹೆದ್ದಾರಿ: ಯಮಪುರಕ್ಕೆ ಇದೇ ರಹದಾರಿ

04:05 PM Apr 11, 2017 | Harsha Rao |

ತೆಕ್ಕಟ್ಟೆ: ಕುಂದಾಪುರ – ಸುರತ್ಕಲ್‌ ಚತುಷ್ಪಥ ಕಾಮಗಾರಿಯ  ಸಂದರ್ಭದಲ್ಲಿ  ಕರಾವಳಿ ಜಿಲ್ಲೆಗಳ ರಾ.ಹೆ. 66ರ ಬಳಿಯಲ್ಲಿರುವ ಹೆಚ್ಚಿನ ಹಳೆಯ ಕಟ್ಟಡಗಳು ತೆರವಾದರೂ ಕೂಡಾ ತೆಕ್ಕಟ್ಟೆ ಗ್ರಾಮದಲ್ಲಿರುವ ಹಳೆಯ ಕಟ್ಟಡಗಳು ಮಾತ್ರ ಹಾಗೆಯೇ  ಉಳಿದಿರುವ ಹಿನ್ನೆಲೆಯಲ್ಲಿ  ರಸ್ತೆಯ ಬದಿಯಲ್ಲಿ  ಸ್ಥಳೀಯ ಗ್ರಾಮೀಣ ಭಾಗದ ಜನರು  ಅಪಾಯದ ನಡುವೆ ರಸ್ತೆಯ ಮೇಲೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ  ಹೆದ್ದಾರಿ  ಚತುಷ್ಪಥ ಕಾಮಗಾರಿಯ  ಸಂದರ್ಭದಲ್ಲಿ   ಕುಂಭಾಶಿ – ಮಣೂರು ಗ್ರಾಮಗಳಿಗೆ ಮಾತ್ರ  ದಾರಿದೀಪವನ್ನು ಅಳವಡಿಸಿ  ತೆಕ್ಕಟ್ಟೆ ಗ್ರಾಮವನ್ನು  ಮಾತ್ರ ಕತ್ತಲಾಗಿಸಿ ಪ್ರಾಧಿಕಾರ ಇಬ್ಬಗೆಯ ನೀತಿ ಅನುಸರಿಸಿರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಎಡಮಾಡಿಕೊಟ್ಟಿದೆ.

Advertisement

ಘನ ವಾಹನಗಳ ನಿಲುಗಡೆ
ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಎದುರುನಲ್ಲಿ  ದಿನ ನಿತ್ಯ ರಾತ್ರಿ ವೇಳೆಯಲ್ಲಿ  ಘನವಾಹನಗಳು ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ  ಲಾರಿ ಚಾಲಕರು ಹೊಟೇಲ್‌ಗ‌ಳಿಗೆ ಊಟಕ್ಕೆ ತೆರಳುವುದಲ್ಲದೆ ಪಾನಮತ್ತರಾಗಿ ಎರ್ರಾಬಿರ್ರಿಯಾಗಿ ಲಾರಿಯನ್ನು ಹಿಂದೆ ಮುಂದೆ ಚಲಿಸುತ್ತಿದ್ದು  ಸ್ಥಳೀಯ ಗ್ರಾಮೀಣ ಭಾಗದ ಜನರು   ರಸ್ತೆ ದಾಟಲು ತೀವ್ರ ಗೊಂದಲ ಏರ್ಪಟ್ಟು  ಈಗಾಗಲೇ ಹಲವು ಅವಘಡಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ವಂತೆ  ಸ್ಥಳೀಯರು ಆಗ್ರಹಿಸಿದ್ದಾರೆ.

ರಾತ್ರಿ ವೇಳೆಯಲ್ಲೇ ದುರಂತ
8 ಕನ್ನುಕರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಮೀಪ ರಾ.ಹೆ. 66ರಲ್ಲಿ  ವೇಗವಾಗಿ  ಬಂದ ವ್ಯಾಗನರ್‌ ಕಾರೊಂದು ಡಿವೈಡರ್‌ ಏರಿ ವಿರುದ್ಧ ದಿಕ್ಕಿಗೆ  ಬಂದ ಪರಿಣಾಮ ಚಲಿಸುತ್ತಿದ್ದ  ಫಾಚೂÂìನರ್‌ ಕಾರಿಗೆ  ನೇರವಾಗಿ ಬಂದು ಢಿಕ್ಕಿ ಹೊಡೆದು   ಓರ್ವ  ದಾರುಣವಾಗಿ ಸಾವಿಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜ. 8ರಂದು ತಡರಾತ್ರಿ 11.45ರ ಸುಮಾರಿಗೆ ಸಂಭವಿಸಿದೆ.

8 ರಾ.ಹೆ. 66 ತೆಕ್ಕಟ್ಟೆ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಬಳಿ ಮಾರುತಿ ಆಮ್ನಿ  ಮಹಿಳೆಗೆ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಜ. 21ರಂದು ಶನಿವಾರ ರಾತ್ರಿ ಗಂಟೆ 8 ಕ್ಕೆ ಸಂಭವಿಸಿದೆ.
8 ರಾ.ಹೆ. 66  ತೆಕ್ಕಟ್ಟೆ ಸರ್ಕಲ್‌ನಲ್ಲಿ  ಚಲಿಸುತ್ತಿದ್ದ  ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆ ವಿಭಾಜಕದ ಮೇಲೇರಿದ ಘಟನೆ ಮಾ. 14ರ ರಾತ್ರಿ 10.25ರ ಸುಮಾರಿಗೆ ಸಂಭವಿಸಿದೆ.

8 ಇಲ್ಲಿನ ರಾ.ಹೆ. 66 ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಹೋಂಡಾ ಆ್ಯಕ್ಟಿವಾ ಹಾಗೂ ಯಮಹಾ ಎಫ್‌ಝಡ್‌  ದ್ವಿಚಕ್ರ ವಾಹನಗಳು ಮುಖಾಮುಖೀ ಢಿಕ್ಕಿಯಾದ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಾ. 26ರಂದು ಸಂಜೆ ಗಂಟೆ 4ರ ಸುಮಾರಿಗೆ  ಸಂಭವಿಸಿದೆ.

Advertisement

8 ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ  66 ತೆಕ್ಕಟ್ಟೆ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಸಮೀಪ ಪಾದಚಾರಿಗೆ ಆ್ಯಂಬುಲೆನ್ಸ್‌ ಢಿಕ್ಕಿಯಾಗಿ ಸ್ಥಳದಲ್ಲಿಯೇ ಧಾರುಣವಾಗಿ ಸಾವಿಗೀಡಾದ ಘಟನೆ ಎ. 1ರಂದು  ರಾತ್ರಿ ಗಂಟೆ 7.20 ರ ಸುಮಾರಿಗೆ ಸಂಭವಿಸಿದೆ.

ಇದಲ್ಲದೆ ಈತನ್ಮಧ್ಯದಲ್ಲಿ  ದ್ವಿಚಕ್ರ ಹಾಗೂ ಪಾದಚಾರಿಗಳು ಗಾಯಗೊಂಡ ಘಟನೆ ಸಂಭವಿಸಿದರೂ  ಕೂಡಾ ಯಾವುದೇ ಪ್ರಕರಣಗಳು ದಾಖಲಾಗಲಿಲ್ಲ.

ಕಟ್ಟಡ ಹಾಗೂ ದಾರಿದೀಪಗಳಿಗೆ ಸಂಭವಿಸಿದ ವಿಚಾರಗಳ ಬಗ್ಗೆ ಸಂಬಂಧಪಟ್ಟ ಸ್ಥಳೀಯಾಡಳಿತದ ಗಮನಕ್ಕೆ ತರ ಬೇಕು. ಇಲಾಖೆಯಿಂದ ಸುಗಮ ಸಂಚಾರಕ್ಕಾಗಿ ಸಂಬಂಧಪಟ್ಟ  ವೃತ್ತ ನಿರೀಕ್ಷಕರು, ಪೊಲೀಸ್‌ ಠಾಣಾಧಿಕಾರಿಗಳ ಗಮನಕ್ಕೆ ತರುತ್ತೇನೆ.
– ಕೆ.ಟಿ. ಬಾಲಕೃಷ್ಣ , ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಡುಪಿ

ತೆಕ್ಕಟ್ಟೆ ಪ್ರಮುಖ ಸರ್ಕಲ್‌ಗ‌ಳಲ್ಲಿ  ಈಗಾಗಲೇ ಅಪಘಾತಗಳು ಸಂಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ.  ಆದ್ದರಿಂದ ರಸ್ತೆ  ಹೆದ್ದಾರಿ ಪ್ರಾಧಿಕಾರದವರು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
– ಕೃಷ್ಣಮೂರ್ತಿ ಕೊಠಾರಿ  ತೆಕ್ಕಟ್ಟೆ, ಸ್ಥಳೀಯರು

ಜಿಲ್ಲಾಧಿಕಾರಿಗಳೇ ಕ್ರಮ ಕೈಗೊಳ್ಳಲಿ
ತೆಕ್ಕಟ್ಟೆ ಪ್ರಮುಖ ಭಾಗದಲ್ಲಿರುವ ಹಳೆಯ ಕಟ್ಟಡಗಳು ತೆರವಾಗದಿರುವ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು  ಕಟ್ಟಡಕ್ಕೆ ಸಂಬಂಧಿಸಿದ ವಿಚಾರ ನ್ಯಾಯಾಲಯದಲ್ಲಿದೆ ಎಂದು ಸಾರ್ವಜನಿಕರನ್ನು ದಾರಿತಪ್ಪಿಸುವುದು  ಸರಿಯಲ್ಲ. ಉಡುಪಿ ಜಿಲ್ಲೆಯ  ರಾ.ಹೆ. 66ರಲ್ಲಿ ರುವ ಎಲ್ಲ ಹಳೆಯ ಕಟ್ಟಡಗಳು ತೆರವಾದರೂ ಕೂಡಾ  ತೆಕ್ಕಟ್ಟೆಯಲ್ಲಿ ಮಾತ್ರ ಯಾರೋ ಒಬ್ಬರಿಗಾಗಿ  ಕಟ್ಟಡ  ಹಾಗೆ ಇರಿಸಿಕೊಂಡು ಸಮಷ್ಟಿಗೆ ತೊಂದರೆ ಕೊಡುವುದು ಸರಿಯಲ್ಲ. ಸಣ್ಣ ಪುಟ್ಟ ಗೂಡಂಗಡಿಗಳ ತೆರವಿಗೆ ಮುಂದಾಗುವ  ಇಲಾಖೆಯವರು ಇಂತಹ ಕಟ್ಟಡಗಳ ತೆರವಿಗೆ  ಮೀನಾಮೇಷ ಎಣಿಸುವುದು ಸರಿಯಲ್ಲ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು.
– ತೆಕ್ಕಟ್ಟೆಯ ಸಾರ್ವಜನಿಕರು

ಅಮಾಯಕರ ಜೀವಹರಣ
ಕುಂದಾಪುರ -ಸುರತ್ಕಲ್‌ ಚತುಷ್ಪಥ ಕಾಮಗಾರಿಯ  ಸಂದರ್ಭದಲ್ಲಿ  ಇಲ್ಲಿನ ತೆಕ್ಕಟ್ಟೆ  ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಾ.ಹೆ. 66ರಲ್ಲಿ  ಪ್ರಮುಖ ಭಾಗದಲ್ಲಿ ಸಮರ್ಪಕವಾದ ದಾರಿದೀಪಗಳನ್ನು ಅಳವಡಿಸದ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ವಾಹನ ಚಾಲಕರು ಕತ್ತಲಲ್ಲಿಯೇ ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ  ರಾತ್ರಿ ವೇಳೆಯಲ್ಲಿ ತೆಕ್ಕಟ್ಟೆ ಪ್ರಮುಖ ಭಾಗದಲ್ಲಿ ರಾ.ಹೆ. 66ರ ಇಕ್ಕೆಲದಲ್ಲಿ  ಅವೈಜ್ಞಾನಿಕವಾಗಿ ಸಾಲುಗಟ್ಟಿ ನಿಲ್ಲುವ ಲಾರಿಗಳು ಮರಣ ಮೃದಂಗ ವನ್ನು ಬಾರಿಸುತ್ತಿದ್ದು,  ಈಗಾಗಲೇ ಅದೆಷ್ಟೋ ಅಮಾಯಕರ ಜೀವವನ್ನು ತೆಗೆದುಕೊಂಡಿರುವುದು ಮಾತ್ರ ವಾಸ್ತವ.

– ಟಿ. ಲೋಕೇಶ್‌ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next