ಬೆಂಗಳೂರು: ಸಂಚಾರ ಪೊಲೀಸರಿಂದ “ಡ್ರಂಕ್ ಆಂಡ್ ಡ್ರೈವ್’ ತಪಾಸಣೆಗೆ ಒಳಗಾಗಲು ನಿರಾಕರಿಸಿದ ಸ್ಕೂಟರ್ ಸವಾರನೊಬ್ಬ ಪೊಲೀಸ್ ಠಾಣೆ ಎದುರು ನಿಂತು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದ್ದು, ವ್ಯಕ್ತಿಯ ಅರ್ಧ ದೇಹ ಬೆಂದುಹೋಗಿದೆ!
ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ನಿವಾಸಿ ಮಣಿಕಂಠ (35) ಕೃತ್ಯವೆಸಗಿದ ವ್ಯಕ್ತಿ. ಶನಿವಾರ ತಡರಾತ್ರಿ 2.30ರ ಸುಮಾರಿಗೆ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣೆ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಆತನ ಮೈಮೇಲೆ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಈ ವೇಳೆ ಪೇದೆ ರಾಮಕೃಷ್ಣ ಎಂಬುವರಿಗೂ ಬೆಂಕಿ ತಾಗಿ ಸಣ್ಣ ಗಾಯಗಳಾಗಿವೆ.
ಕೂಡಲೇ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಮಣಿಕಂಠಗೆ ಶೇ.50ರಷ್ಟು ಸುಟ್ಟಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಮೈಕೋಲೇಔಟ್ ಸಂಚಾರ ಪೊಲೀಸರು, ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಣಿ ವಿರುದ್ಧ ಆತ್ಮಹತ್ಯೆ ಯತ್ನ ಸಂಬಂಧ ದೂರು ದಾಖಲಿಸಿದ್ದು. ಎಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ತಡರಾತ್ರಿ ನಡೆದ ಹೈಡ್ರಾಮಾ: ಮಣಿಕಂಠ ಹಾಗೂ ಆತನ ಸ್ನೇಹಿತ ಸುಕುಮಾರನ್ ಬನ್ನೇರುಘಟ್ಟದಲ್ಲಿ ಶನಿವಾರ ಸಂಬಂಧಿಕರೊಬ್ಬರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸಾಗುತ್ತಿದ್ದರು. ರಾತ್ರಿ 12ಗಂಟೆ ಸುಮಾರಿಗೆ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಸಂಚಾರ ಪೊಲೀಸರು “ಡ್ರಂಕ್ ಅಂಡ್ ಡ್ರೈವ್’ ಕಾರ್ಯಾಚರಣೆ ನಡೆಸುತ್ತಿದ್ದು, ಮಣಿಕಂಠ ಓಡಿಸುತ್ತಿದ್ದ ಸ್ಕೂಟರ್ ನಿಲ್ಲಿಸಿ, ಆಲ್ಕೋಮೀಟರ್ನಲ್ಲಿ ಊದುವಂತೆ ತಿಳಿಸಿದ್ದಾರೆ.
ಇದಕ್ಕೆ ನಿರಾಕರಿಸಿದ ಮಣಿಕಂಠ, ನಾನು ಕುಡಿದಿಲ್ಲ ಎಂದು ತಗಾದೆ ತೆಗೆದು, ತಪಾಸಣೆ ನಡೆಸಲು ಅವಕಾಶ ನೀಡದೆ ಸ್ಕೂಟರನ್ನು ಅಲ್ಲೇ ಬೀಳಿಸಿ ಹೊರಟುಹೋಗಿದ್ದ. ಅರ್ಧ ಗಂಟೆ ಬಳಿಕ ವಾಪಸ್ ಬಂದ ಮಣಿಕಂಠ, ನಾನು ಕುಡಿದಿಲ್ಲ ಸ್ಕೂಟರ್ ಕೊಡಿ ಎಂದು ಕೇಳಿದ್ದಾನೆ. ಈ ವೇಳೆ ಆತ ಮದ್ಯ ಸೇವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ತಪಾಸಣೆಗೊಳಗಾಗಿ ಮದ್ಯ ಸೇವಿಸಿಲ್ಲ ಎಂಬುದು ಸಾಬೀತಾದರೆ ಸ್ಕೂಟರ್ ತೆಗೆದುಕೊಂಡು ಹೋಗುವಂತೆ ಪೊಲೀಸರು ಸೂಚಿಸಿದರು.
ಇದಕ್ಕೂ ಒಪ್ಪದ ಮಣಿಕಂಠ ಜಗಳವಾಡಿ, ಮತ್ತೆ ಅಲ್ಲಿಂದ ಹೊರಟು ಹೋಗಿದ್ದ. ಬಳಿಕ ರಾತ್ರಿ 2.15ರ ಸುಮಾರಿಗೆ ಮೈಕೋ ಲೇಔಟ್ ಠಾಣೆ ಬಳಿ ಬಂದ ಮಣಿಕಂಠ, ಸ್ಕೂಟರ್ ನೀಡುವಂತೆ ಕೇಳಿದ್ದಾನೆ. ಈತನ ಮೊಂಡು ವಾದಕ್ಕೆ ತಲೆ ಕೆಡಿಸಿಕೊಳ್ಳದ ಪೊಲೀಸರು ದಂಡ ಕಟ್ಟಿ ಸ್ಕೂಟರ್ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ತಾನು ತಂದಿದ್ದ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಮಣಿಕಂಠ ಬೆಂಕಿ ಹಚ್ಚಿಕೊಂಡಿದ್ದಾನೆ.
ಘಟನೆ ಸಂಬಂಧ ಮೈಕೋಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ತನಿಖಾ ವರದಿ ಬಂದ ಬಳಿಕ ಘಟನೆಯ ಬಗ್ಗೆ ಮತ್ತಷ್ಟು ಖಚಿತತೆ ಸಿಗಲಿದೆ.
-ಅಭಿಷೇಕ್ ಘೋಯಲ್, ಡಿಸಿಪಿ ಪೂರ್ವ ಸಂಚಾರ ವಿಭಾಗ